ಉಪಚುನಾವಣೆ; ಕಾಂಗ್ರೆಸ್ ಜೆಡಿಎಸ್ ಸೋಲಿಗೆ ಅಸಲಿ ಕಾರಣವೇನು?
ಬೆಂಗಳೂರು, ಡಿಸೆಂಬರ್ 10: ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಬಿಜೆಪಿ ಪಾಳಯ ಭಾರೀ ಉತ್ಸಾಹದಲ್ಲಿದೆ. ಆದರೆ, ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಬಾಲ ಸುಟ್ಟ ಬೆಕ್ಕಿನಂತೆ ಮೂಲೆ ಸೇರಿಕೊಂಡಿವೆ.
ಹೌದು, ಉಪ ಚುನಾವಣೆ ಫಲಿತಾಂಶ ಹಳೆ ದೋಸ್ತಿಗಳಿಗೆ ದೊಡ್ಡ ಪೆಟ್ಟನ್ನೇ ನೀಡಿದೆ. ಉಪ ಚುನಾವಣೆ ಮುನ್ನ ಭಾರೀ ಉತ್ಸಾಹದಲ್ಲಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಲೆಕ್ಕಾಚಾರ ಚುನಾವಣೆ ಫಲಿತಾಂಶದ ನಂತರ ತಲೆಕೆಳಗಾಗಿದೆ. ಬಿಜೆಪಿಯ ಚುನಾವಣಾ ತಂತ್ರಗಳು ಬಿಜೆಪಿ ಗೆಲುವಿಗೆ ಹೇಗೆ ಕಾರಣವೋ, ಹಾಗೇ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮಾಡಿದ ಎಡವಟ್ಟುಗಳು ಕೂಡ ಬಿಜೆಪಿಯ ಬಹುದೊಡ್ಡ ಯಶಸ್ಸಿಗೆ ಕಾರಣ ಎಂದು ವಿಶ್ಲೇಷಿಲಾಗುತ್ತಿದೆ.
ಜನಕ್ಕೆ ಬೇಸರ ತರಿಸಿತ್ತು ಖಿಚಡಿ ಸರ್ಕಾರ
2018 ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದೇ ಇದ್ದಾಗ, ಅತಿಹೆಚ್ಚು ಸ್ಥಾನಗಳನ್ನು ಪಡೆದಿದ್ದ, ಬಿಜೆಪಿಯನ್ನು ಹೈಜಾಕ್ ಮಾಡಿ, ಜೆಡಿಎಸ್ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ್ದವು. ಆದರೆ, ಒಳ ಜಗಳಗಳಿಂದ ಸರ್ಕಾರವನ್ನು ಸರಿಯಾಗಿ ನಡಸದೇ ಜನತೆಗೆ ಬೇಸರವನ್ನುಂಟು ಮಾಡಿದವು. ಇದರ ಸದುಪಯೋಗ ಪಡಿಸಿಕೊಂಡ ಬಿಜೆಪಿ, ಅನರ್ಹಗೊಂಡಿದ್ದ 17 ಶಾಸಕರನ್ನು ತನ್ನತ್ತ ವಾಲಿಸಿಕೊಂಡು, 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಹುಮತದ ಸರ್ಕಾರವನ್ನು ರಚಿಸುವಲ್ಲಿ ಯಶಸ್ವಿಯಾಯಿತು.
ದುರಂತ ಸೋಲು; ಶತಕೋಟಿ ಒಡೆಯ ಎಂಟಿಬಿ ಹೇಳಿದ್ದೇನು?
ಕಾಂಗ್ರೆಸ್ ಜೆಡಿಎಸ್ ಮಾಡಿದ ಎಡವಟ್ಟು ಎಂತಹದು?
ಉಪ ಚುನಾವಣೆ ಘೋಷಣೆಯಾದ ನಂತರ ಮತ್ತೆ ಜೆಡಿಎಸ್ ಎದ್ದು ಕುಳಿತಿತು. ನನ್ನ ಬಿಟ್ಟು ಸರ್ಕಾರ ರಚನೆ ಮಾಡುವುದು ಕಷ್ಟ ಎಂದಿತು. ಅತ್ತ ಕಾಂಗ್ರೆಸ್ ಕೂಡ ಅನರ್ಹರನ್ನು ಸೋಲಿಸುತ್ತೇವೆ. ಮತ್ತೆ ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂಬ ರಾಗ ಹಾಡಿತು. ಚುನಾವಣೆ ಪ್ರಚಾರದಲ್ಲಿ ಉಪ ಚುನಾವಣೆ ಫಲಿತಾಂಶ ಬಿಜೆಪಿ ಪರ ಬರುವುದಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಮತ್ತೆ ಮೈತ್ರಿ ಮಾಡಿಕೊಳ್ಳುತ್ತೆ ಎಂಬ ಮಾತನ್ನು ಆ ಪಕ್ಷದ ನಾಯಕರು ಹರಿಬಿಟ್ಟರು. ಇದರಿಂದ ಮತ್ತಷ್ಟು ಕಂಗೆಟ್ಟ ಮತದಾರರು ನಮಗೆ ಖಿಚಡಿ ಸರ್ಕಾರಗಳ ಸಹವಾಸವೇ ಬೇಡ. ಬಹುಮತದ ಸನಿಹವಿರುವ ಬಿಜೆಪಿಗೆ ಮತ ನೀಡಿದರೆ, ರಾಜ್ಯದಲ್ಲಿ ಕನಿಷ್ಠ ಸ್ಥಿರ ಸರ್ಕಾರವಾದರೂ ಇರುತ್ತೆ ಎಂಬ ನಿರ್ಧಾರಕ್ಕೆ ಬಂದು ಬಿಜೆಪಿಗೆ ಉಪಚುನಾವಣೆಯಲ್ಲಿ ಮತದಾರ ಆಶಿರ್ವಾಧ ಮಾಡಿದ ಎನ್ನುವುದು ಒಂದು ದೃಷ್ಠಿಕೋನದ ವಿಶ್ಲೇಷಣೆಯಾಗಿದೆ.
ಪೂರ್ಣ ಕಳೆಗುಂದಿದ ಕಾಂಗ್ರೆಸ್ ಜೆಡಿಎಸ್
ಬಿಜೆಪಿಗೆ ನಾಲ್ಕೈದು ಸ್ಥಾನಗಳಿಗಿಂತ ಹೆಚ್ಚು ದೊರೆಯಬಾರದು ಎಂದು ಹಳೆ ದೋಸ್ತಿಗಳು ಉಪ ಕದನದಲ್ಲಿ ಸಾಕಷ್ಟು ಪ್ರಯತ್ನ ಮಾಡಿದವು. ಅನರ್ಹರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ವ್ಯಾಪಕ ಪ್ರಚಾರ ಮಾಡಿದರು. ಆದರೆ, ಉಪ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಪೂರ್ಣ ಕಳೆಗುಂದಿವೆ. ಫಲಿತಾಂಶ ನೋಡಿ ಬಿಜೆಪಿ ವಿರುದ್ಧ ಅಥವಾ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ಮಾತನಾಡುವ ಶಕ್ತಿಯನ್ನೇ ಕಳೆದುಕೊಂಡಿವೆ. ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ ನಾಯಕತ್ವದ ಕೊಂಡಿಗಳು ಕಳಚುತ್ತಿವೆ. ಹೀಗಾಗಿ ಸದ್ಯ ಗೂಳಿಯಂತಾಗಿರುವ ಬಿಜೆಪಿಯನ್ನು ಬಗ್ಗಿಸಲು ಸಾಧ್ಯವಿಲ್ಲವೆನ್ನುವಂತಾಗಿದೆ.
ಉಪಸಮರ ಫಲಿತಾಂಶದ ಬಳಿಕ ಕಾಂಗ್ರೆಸ್ ನಲ್ಲಿ ಎಲ್ಲವೂ 'ಹಸ್ತ'ವ್ಯಸ್ತ
ಸ್ಥಿರ ಸರ್ಕಾರ ನೀಡುತ್ತಾ ಬಿಜೆಪಿ?
ಉಪ ಚುನಾವಣೆಯಲ್ಲಿ ಬಿಜೆಪಿ ಗೆ 12 ಸ್ಥಾನಗಳು ದೊರಕಿವೆ. ಇದರಿಂದ ಒಟ್ಟು ವಿಧಾನಸಭೆಯಲ್ಲಿ 117 ಸ್ಥಾನಗಳನ್ನು ಹೊಂದಿದಂತಾಗಿದೆ. ಸ್ಥಿರ ಸರ್ಕಾರ ಇರಬೇಕು ಎಂದು ಜನತಾ ನ್ಯಾಯಾಲಯ ಬಯಸಿದ ಫಲಿತಾಂಶ ಇದಾಗಿದೆ. ಆದರೆ, ಘಟನಾನುಘಟಿ ನಾಯಕರಿರುವ ಬಿಜೆಪಿಯಲ್ಲಿ, ಒಳಬೇಗುದಿಗಳು ಇಲ್ಲದಲ್ಲ. ಯಡಿಯೂರಪ್ಪ ಅವರನ್ನು ಸೈಡಲೈನ್ ಮಾಡಬೇಕು ಎಂದು ಬಿಜೆಪಿಯಲ್ಲಿನ ಒಂದು ಬಣ ನಿರಂತರ ಪ್ರಯತ್ನ ಮಾಡುತ್ತಲೇ ಬರುತ್ತಿದೆ. ಅವರು ಸುಮ್ಮನೇ ಕೂರುವವರಲ್ಲ. ಯಡಿಯೂರಪ್ಪ ಹಾಗೂ ಅವರ ಮಕ್ಕಳನ್ನು ಹತ್ತಿಕ್ಕಲು ಸೂಕ್ತ ಸಮಯಕ್ಕೆ ಕಾಯುತ್ತಿದ್ದಾರಷ್ಟೆ. ಇನ್ನೊಂದು ಕಡೆ ಕಾಂಗ್ರೆಸ್ ನಿಂದ ಬಂದು ಯಡಿಯೂರಪ್ಪ ಅವರಿಗೆ ಅಂಟಿಕೊಂಡಿರುವ 12 ಹೊಸ ಶಾಸಕರನ್ನು ಹಾಗೂ ಎಂಟಿಬಿ ನಾಗರಾಜ, ಎಚ್ ವಿಶ್ವನಾಥ್ ಅಂತವರನ್ನು ಸಂಬಾಳಿಸುವ ಸವಾಲು ಕೂಡ ಯಡಿಯೂರಪ್ಪ ಅವರ ತಲೆ ಮೇಲಿದೆ. ಇದನ್ನೆಲ್ಲ ಸಹಿಸಿಕೊಂಡು ಯಡಿಯೂರಪ್ಪ ಸ್ಥಿರ ಸರ್ಕಾರ ನೀಡುತ್ತಾರಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.