ಅಂಬಿ ಅಂತ್ಯಕ್ರಿಯೆಗೆ ರಮ್ಯಾ ಗೈರಾಗಲು ನಿಜಕ್ಕೂ ಇದೇ ಕಾರಣವೇ?
Recommended Video
ಬೆಂಗಳೂರು, ನವೆಂಬರ್ 27: ನಟಿ ರಮ್ಯಾ ಅವರಿಗೆ ಚಿತ್ರರಂಗದಲ್ಲಿ ಗಾಡ್ಫಾದರ್ನಂತೆ ಜತೆಗಿದ್ದ ಅಂಬರೀಶ್, ಮಂಡ್ಯ ನೆಲದಲ್ಲಿ ರಾಜಕೀಯದ ಹೆಜ್ಜೆ ಗುರುತು ಮೂಡಿಸುವಲ್ಲಿಯೂ ನೆರವಾದವರು. 'ಅಂಬರೀಶ್ ಅಂಕಲ್' ಎಂದೇ ಕರೆಯುತ್ತಿದ್ದ ರಮ್ಯಾ, ಅಂಬರೀಶ್ ನಿಧನದ ಮೂರು ದಿನವೂ ಎಲ್ಲಿಯೂ ಸುಳಿಯಲಿಲ್ಲ.
ಎಲ್ಲರ ಹುಟ್ಟು ಸಾವುಗಳಿಗೆ ಪ್ರತಿಕ್ರಿಯಿಸುವಂತೆ ಒಂದು ಟ್ವೀಟ್ ಮಾಡಿ ಸುಮ್ಮನಾಗಿದ್ದು ಬಿಟ್ಟರೆ, ಅಂಬರೀಶ್ ಅವರಿಗೆ ವಿದಾಯ ಹೇಳುವ ಕ್ಷಣಗಳಲ್ಲಿ ತಮ್ಮ ಉಪಸ್ಥಿತಿ ಇರಬೇಕು ಎಂಬ ಕಾಳಜಿ ಮತ್ತು ಹೊಣೆಗಾರಿಕೆ ರಮ್ಯಾ ಅವರಲ್ಲಿ ಇರಲಿಲ್ಲವೇ? ರಮ್ಯಾ ವಿರುದ್ಧ ಇಂತಹ ಹಲವು ಪ್ರಶ್ನೆಗಳನ್ನು ಇಟ್ಟುಕೊಂಡು ಅಂಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ತಲೆದೋರಿದ್ದ ರಾಜಕೀಯ ಮನಸ್ತಾಪಗಳೇನೇ ಇದ್ದರೂ ಅಂಬರೀಶ್ ಅವರಂತಹ ವ್ಯಕ್ತಿಯೊಂದಿಗೆ ವೈಷಮ್ಯ ಕಟ್ಟಿಕೊಳ್ಳುವುದೇನೂ ಇರಲಿಲ್ಲ. ಅದರಲ್ಲಿಯೂ ಅಂಬರೀಶ್ ಅಂತಿಮ ಯಾತ್ರೆಯಲ್ಲಿ ಮುಂಚೂಣಿಯಲ್ಲಿ ಇರಬೇಕಾಗಿದ್ದು ಅವರ ಕರ್ತವ್ಯವೂ ಹೌದು ಎನ್ನುವುದು ಅಭಿಮಾನಿಗಳ ಅಭಿಪ್ರಾಯ.
ರಮ್ಯಾ ವಿರುದ್ಧ ಆಕ್ರೋಶಗೊಂಡ ಅಂಬರೀಶ್ ಅಭಿಮಾನಿಗಳು
ಅಂಬರೀಶ್ ಜತೆ ಉಂಟಾಗಿದ್ದ ರಾಜಕೀಯ ಭಿನ್ನಾಭಿಪ್ರಾಯವೇ ರಮ್ಯಾ ಗೈರು ಹಾಜರಾಗಲು ಕಾರಣವೇ? ಅಲ್ಲ ಎನ್ನುತ್ತಾರೆ ರಮ್ಯಾ ಅಭಿಮಾನಿಗಳು. ಅವರ ಪ್ರಕಾರ, ರಮ್ಯಾ ಅನಾರೋಗ್ಯದ ಕಾರಣದಿಂದ ಬರಲು ಸಾಧ್ಯವಾಗಿಲ್ಲ.
ಇದಕ್ಕೆ ಪೂರಕವಾಗಿ ರಮ್ಯಾ ಅವರು ಒಂದೂವರೆ ತಿಂಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದ ಪೋಸ್ಟ್ ಈಗ ವೈರಲ್ ಆಗಿದೆ. ಕಾಲಿಗೆ ಉಂಟಾದ ಸಮಸ್ಯೆ ಬಗ್ಗೆ ರಮ್ಯಾ ಆಗ ಮಾಹಿತಿ ಹಂಚಿಕೊಂಡಿದ್ದರು. ಈಗಲೂ ಅವರು ಗೈರಾಗಲು ಅದೇ ಕಾರಣವೇ?
|
ರಮ್ಯಾ ಇನ್ಸ್ಟಾ ಪೋಸ್ಟ್
'ನನ್ನ ಕಾಲು ಈಗ ಗೆಡ್ಡೆ ಮತ್ತು ಕ್ಯಾನ್ಸರ್ ಮುಕ್ತವಾಗಿದೆ. ಆದರೆ, ಕೆಲವು ವಾರಗಳವರೆಗೆ ವಿಶ್ರಾಂತಿ ಪಡೆದುಕೊಳ್ಳಬೇಕಿದೆ. ಮತ್ತೆ ಪರೀಕ್ಷೆಗೆ ಒಳಪಡಬೇಕಿದೆ. ನಿಮಗೆ ಯಾರಿಗಾದರೂ ನೋವಿನ ಅನುಭವ ಆದಾಗ ಅದನ್ನು ನಿರ್ಲಕ್ಷಿಸದೆಯೇ ವೈದ್ಯರನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದ್ದರು.
ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಸಮಸ್ಯೆ ಬೆಳೆದುಬಿಟ್ಟರೆ ಭಾರಿ ತೊಂದರೆಯಾಗುತ್ತದೆ. ಮೊದಲೇ ಅದನ್ನು ಪತ್ತೆಹಚ್ಚಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಉತ್ತಮ ಎಂದು ರಮ್ಯಾ ವಿವರಿಸಿದ್ದರು. ಈ ಪೋಸ್ಟ್ ಒಂದೂವರೆ ತಿಂಗಳ ಬಳಿಕ ಈಗ ಎಲ್ಲೆಡೆ ಹರಿದಾಡುತ್ತಿದೆ.
ಪತ್ನಿ ಸುಮಲತಾ ನಂಬರ್ ಅನ್ನು ಏನೆಂದು ಸೇವ್ ಮಾಡಿದ್ದರು ಅಂಬರೀಶ್?
|
ಆಸ್ಟಿಯೋಕ್ಲ್ಯಾಟೋಮಾ ಕಾಯಿಲೆ!
ನಟಿ ರಮ್ಯಾ ಅವರು ಆಸ್ಟಿಯೋಕ್ಲ್ಯಾಟೋಮಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣದಿಂದಲೇ ಅಂಬರೀಶ್ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿಲ್ಲ ಎಂದು ಖಾಸಗಿ ವಾಹಿನಿಯೊಂದರ ವರದಿ ಆಧರಿಸಿ ದಿವ್ಯ ಸ್ಪಂದನ/ರಮ್ಯಾ ಅಭಿಮಾನಿಗಳ ಕ್ಲಬ್ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಪಂಚಭೂತಗಳಲ್ಲಿ ಅಂಬಿ ಲೀನ: ಶಾಂತಿ ಕದಡದಂತೆ ನೋಡಿ ಕೊಂಡ ಬೆಂಗಳೂರು ಪೊಲೀಸರಿಗೆ ಧನ್ಯವಾದ
ಬರಲಾಗದಷ್ಟು ಸಮಸ್ಯೆ ಇತ್ತೇ?
ರಮ್ಯಾ ಅವರ ಆರೋಗ್ಯ ಅಷ್ಟೊಂದು ಹದಗೆಟ್ಟಿತ್ತೇ? ಒಂದೂವರೆ ತಿಂಗಳಲ್ಲಿ ಅವರ ಕಾಲಿನ ಗಾಯ ಸಾಕಷ್ಟು ಮಾಗಿರುತ್ತದೆ. ಅಂತಿಮ ನಮನ ಸಲ್ಲಿಸಲು ಬರಲಾಗದಷ್ಟು ಸಮಸ್ಯೆ ಖಂಡಿತಾ ಇರಲಾರದು ಎನ್ನುತ್ತಿದ್ದಾರೆ ಅಭಿಮಾನಿಗಳು.
ತಮಿಳುನಾಡು, ಆಂಧ್ರದಿಂದ ರಜನಿಕಾಂತ್, ಚಿರಂಜೀವಿ ಅವರಂತಹವರು ಬಂದಿದ್ದರು, ದೂರದ ಸ್ವೀಡನ್ನಲ್ಲಿ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ದರ್ಶನ್, ನೇರ ವಿಮಾನ ಸಿಗದಿದ್ದರೂ ಹೇಗೋ ಕಷ್ಟಪಟ್ಟು ಬಂದರು. ಮೈಲುಗಟ್ಟಲೆ ದೂರದಿಂದ ವಯಸ್ಸಾದವರು, ಮಕ್ಕಳು ಬಸ್, ರೈಲುಗಳಲ್ಲಿ ಧಾವಿಸಿದರು. ಜನಜಂಗುಳಿ, ತಳ್ಳಾಟಗಳ ನಡುವೆ ಬಂದು ಅದೆಷ್ಟೋ ಮಂದಿ ಅಂಗವಿಕಲರು ಕೂಡ ಅಂಬಿಗೆ ಅಂತಿಮ ನಮನ ಸಲ್ಲಿಸಿದ್ದನ್ನು ಅಭಿಮಾನಿಗಳೇ ಕಂಡಿದ್ದಾರೆ.
ಹೀಗಿರುವಾಗ ಗಣ್ಯರ ಸಾಲಿನಲ್ಲಿ ರಮ್ಯಾ ಕಡೇಪಕ್ಷ ಒಂದು ಗಳಿಗೆಯಾದರೂ ಬಂದು ಹೋಗುವುದು ಕಷ್ಟವಾಗುತ್ತಿರಲಿಲ್ಲ ಎನ್ನುವುದು ಅನೇಕರ ಆಕ್ರೋಶವಾಗಿದೆ.
|
ಅದನ್ನೂ ಹೇಳಬೇಕಿತ್ತಲ್ಲವೇ?
ಇನ್ನೂ ಗಾಯ ಮಾಗದೆ ಇದ್ದರೂ, ಅದರ ಮಾಹಿತಿಯೊಂದಿಗೆ ಇಷ್ಟು ದಿನಗಳಲ್ಲಿ ಒಮ್ಮೆಯಾದರೂ ನೋವನ್ನು ರಮ್ಯಾ ಹಂಚಿಕೊಳ್ಳಬಹುದಾಗಿತ್ತು. ಕಾಲಿಗೆ ಶಸ್ತ್ರಚಿಕಿತ್ಸೆ ಆಗಿರುವ ಕಾರಣದಿಂದ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂದಿದ್ದರೂ ಅಭಿಮಾನಿಗಳ ಸಿಟ್ಟು ತಣಿಯುತ್ತಿತ್ತೇನೋ.
ಆದರೆ, ನೆಪಮಾತ್ರಕ್ಕೆ ಎಂಬಂತೆ 'ಅಂಬರೀಶ್ ಅಂಕಲ್ ಅವರು ನಿಧನರಾಗಿದ್ದನ್ನು ಕೇಳಿ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಅವರನ್ನು ಸದಾ ನೆನಪಿಸಿಕೊಳ್ಳುತ್ತೇನೆ' ಎಂಬ ಟ್ವೀಟ್ ಮಾಡಿದ್ದರು ರಮ್ಯಾ.
ಅದರ ಹೊರತಾಗಿ ರಾಹುಲ್ ಗಾಂಧಿ ಅವರು ಅಂಬರೀಶ್ಗೆ ಶ್ರದ್ಧಾಂಜಲಿ ಸಲ್ಲಿಸುವ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಷ್ಟೇ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಲ್ಲಿಸಿದ ಗೌರವ. ರಮ್ಯಾ ಮಾಡಿದ ಟ್ವೀಟ್ಗಿಂತಲೂ ರಾಹುಲ್ ಗಾಂಧಿ ಅವರ ಟ್ವೀಟ್ ಹೆಚ್ಚು ಭಾವಪೂರ್ಣವಾಗಿತ್ತು.
|
ಕ್ರೂರತ್ವದ ಮಗ್ಗಲು ಪ್ರಕಟಿಸಿದ ಮಹನೀಯರು
ಒಂದೆಡೆ ಅಭಿಮಾನಿಗಳು ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, 'ನೀರ್ ದೋಸೆ' ಸಿನಿಮಾ ವಿವಾದದ ಬಳಿಕ ರಮ್ಯಾ ಬಗ್ಗೆ ನಿರಂತರವಾಗಿ ಕಿಡಿಕಾರುತ್ತಿರುವ ನಟ ಜಗ್ಗೇಶ್ ಮತ್ತೊಮ್ಮೆ ಚಾಟಿ ಬೀಸಿದ್ದಾರೆ.
ಸಾವಿನಲ್ಲಿ ಗೌರವಿಸದವರು ಮನುರೂಪದ ರಾಕ್ಷಸ ಗುಣದವರು..! ಕ್ರೂರತ್ವದ ಮಗ್ಗಲು ಪ್ರಕಟಿಸಿದ ಮಹನೀಯರು.! ದೇವನೊಬ್ಬ ಇರುವ ಅವ ಎಲ್ಲ ನೋಡುತಿರುವ! ದೋಸೆ ಮೊಗಚಿ ತಳಸೀಯುತ್ತದೆ ತಪ್ಪದೆ ಒಂದು ದಿನ! ಯತಃಮನಃತಥಃಜೀವನ! ಎಂದು ಜಗ್ಗೇಶ್ ಪರೋಕ್ಷವಾಗಿ ರಮ್ಯಾ ವಿರುದ್ಧ ಹರಿಹಾಯ್ದಿದ್ದಾರೆ.