ಎರಡು ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಸ್ಪರ್ಧೆಯ ಹಿಂದಿನ ಗುಟ್ಟೇನು?
Recommended Video
ಮೈಸೂರು, ಮಾರ್ಚ್ 27: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಈ ಬಾರಿ ರಾಮನಗರ ಮತ್ತು ಚನ್ನಪಟ್ಟಣದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಕೇಳಿ ಬಂದಿದೆ. ಅವರ ಈ ನಿರ್ಧಾರಕ್ಕೆ ಕಾರ್ಯಕರ್ತರಲ್ಲಿ ವಿರೋಧ ವ್ಯಕ್ತವಾಗಿದೆ. ಜತೆಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾರಣವೇನು ಎಂಬುದು ಕೂಡ ಬಯಲಾಗಿದೆ.
ಒಂದು ಕಡೆ ರಾಮನಗರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ಕಾರ್ಯಕರ್ತರು ಹೇಳುತ್ತಿದ್ದರೆ ಮತ್ತೊಂದೆಡೆ ಚನ್ನಪಟ್ಟಣದಿಂದ ಸ್ಪರ್ಧಿಸಿ, ಸಿ.ಪಿ.ಯೋಗೇಶ್ವರ್ ಗೆ ಟಾಂಗ್ ನೀಡಿ ಎಂಬ ಒತ್ತಾಯಗಳು ಕೇಳಿ ಬಂದಿವೆ. ಹೀಗಾಗಿ ಎರಡು ಕಡೆಯಿಂದ ಸ್ಪರ್ಧಿಸುವ ತೀರ್ಮಾನವನ್ನು ಕುಮಾರಸ್ವಾಮಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಚನ್ನಪಟ್ಟಣ, ರಾಮನಗರದಲ್ಲಿ ಸ್ಪರ್ಧೆ : ಕುಮಾರಸ್ವಾಮಿ ಘೋಷಣೆ
ಆದರೆ ಈ ನಿರ್ಧಾರ ರಾಜಕೀಯ ವಲಯದಲ್ಲಿ ಬೇರೆಯದ್ದೇ ಆದ ಟೀಕೆಗೆ ಗುರಿಯಾಗಿದೆ. ಸೋಲಿನ ಭೀತಿಯಿಂದ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಲೇವಡಿಗೂ ಕಾರಣವಾಗಿದೆ.
ಕುಮಾರಸ್ವಾಮಿ ನೀಡುತ್ತಿರುವ ಕಾರಣ ಏನು?
ಎರಡು ಕಡೆ ಸ್ಪರ್ಧಿಸುವುದಕ್ಕೆ ಕುಮಾರಸ್ವಾಮಿ ಅವರು ನೀಡುತ್ತಿರುವ ಕಾರಣ ಏನೆಂದರೆ ಚನ್ನಪಟ್ಟಣದಲ್ಲಿ ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕಿಳಿಸುವುದು ದೇವೇಗೌಡರು ಮತ್ತು ಅವರ ನಿಲುವಾಗಿಯಂತೆ. ಆದರೆ, ಅಲ್ಲಿನ ಕಾರ್ಯಕರ್ತರು ಪತ್ನಿ ಅನಿತಾರನ್ನು ಕಣಕ್ಕಿಳಿಸಲು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ದೇವೇಗೌಡರ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡಿರುವುದರಿಂದ ಚನ್ನಪಟ್ಟಣದ ಮುಖಂಡರು ಕುಮಾರಸ್ವಾಮಿ ಅವರನ್ನೇ ಸ್ಪರ್ಧಿಸುವಂತೆ ಪಟ್ಟು ಹಿಡಿದಿದ್ದಾರಂತೆ. ಹೀಗಾಗಿಯೇ ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀರ್ಮಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಎರಡು ಕಡೆ ಸ್ಪರ್ಧೆಗೆ ವಿರೋಧ
ಆದರೆ ಕುಮಾರಸ್ವಾಮಿಯವ ಈ ನಿಲುವಿಗೆ ರಾಮನಗರದ ಕಾರ್ಯಕರ್ತರಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಇತ್ತೀಚೆಗೆ ರಾಮನಗರದ ಮಂಜುನಾಥ ಕನ್ವೆಷನ್ ಹಾಲ್ ಆವರಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ರಾಮನಗರದಲ್ಲಿ ಮಾತ್ರ ಸ್ಪರ್ಧಿಸಿ ಎಂಬ ಒತ್ತಾಯವನ್ನು ಕಾರ್ಯಕರ್ತರು ಮಾಡಿದ್ದಾರೆ.
ಇದೆಲ್ಲದರ ನಡುವೆ ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಮತ್ತೊಂದು ಕಾರಣವೂ ಇದೆಯಂತೆ. ಅದೇನೆಂದರೆ ಈಗಾಗಲೇ ಚನ್ನಪಟ್ಟಣದಲ್ಲಿ ಗಾಸಿಪ್ವೊಂದು ಹರಿದಾಡುತ್ತಿದೆ. ಅದರ ಪ್ರಕಾರ ಚನ್ನಪಟ್ಟಣದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಂದ ಜೆಡಿಎಸ್ ವರಿಷ್ಠರು ಮೂವತ್ತು ಕೋಟಿ ರೂ. ಪಡೆದು ಅಲ್ಲಿ ನೆಪಮಾತ್ರಕ್ಕೆ ಅಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದಾರೆ ಎಂಬುದು.
ಚಿತ್ರಗಳು : ವಿಕಾಸ ಪರ್ವ ಯಾತ್ರೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ
ಗಾಸಿಪ್ ಸುಳ್ಳು ಮಾಡಲು ಸ್ಪರ್ಧೆ
ಈ ಗಾಸಿಪ್ ಸುಳ್ಳು ಎಂಬುದು ಸಾಬೀತು ಮಾಡಬೇಕಾದರೆ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವುದು ಅನಿವಾರ್ಯವಾಗಿದೆ.
ರಾಮನಗರದ ಕಾರ್ಯಕರ್ತರು ಮಾತ್ರ ಕುಮಾರಸ್ವಾಮಿ ಅವರು ರಾಮನಗರ ವಿಧಾನಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಯಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಹೀಗಾಗಿ ಒಂದಷ್ಟು ಗೊಂದಲವಾಗುತ್ತಿರುವುದಂತು ಸತ್ಯ.
ಕಳೆದ ಬಾರಿಯ 2014ರ ಲೋಕಸಭಾ ಚುನಾವಣೆಯಲ್ಲಿ ರಾಮನಗರವನ್ನು ತ್ಯಜಿಸಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕುಮಾರಸ್ವಾಮಿ ಅವರು ಸೋಲುಕಂಡಿದ್ದರು. ಇದಕ್ಕೆ ರಾಮನಗರವನ್ನು ಕಡೆಗಣಿಸಿದ್ದೇ ಕಾರಣ ಎಂಬಂತಹ ಮಾತುಗಳು ಕೇಳಿ ಬಂದಿದ್ದವು.
ಮನವೊಲಿಕೆ ಯತ್ನ
ಹೀಗಾಗಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕಾದರೆ ಪ್ರತಿ ಕ್ಷೇತ್ರವೂ ಮುಖ್ಯ. ರಾಮನಗರವನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಆದರೂ ಕಾರ್ಯಕರ್ತರು ಮಾತ್ರ ಚನ್ನಪಟ್ಟಣದಿಂದ ಸ್ಪರ್ಧಿಸುವುದನ್ನು ತೀವ್ರವಾಗಿ ವಿರೋಧಿಸಿದ್ದರು.
ಆಗ ಕುಮಾರಸ್ವಾಮಿಯವರು, "ರಾಮನಗರ ತಮ್ಮ ಕರ್ಮಭೂಮಿ. ಈ ಕ್ಷೇತ್ರದೊಂದಿಗೆ ತಾಯಿ ಮಗನ ಸಂಬಂಧ ಇದೆ. ತಾವು ಮಣ್ಣಾಗುವುದು ಸಹ ರಾಮನಗರದ ಮಣ್ಣಿನಲ್ಲೇ," ಎಂಬಿತ್ಯಾದಿ ಮಾತು ಆರಂಭಿಸಿದ ಕುಮಾರಸ್ವಾಮಿ, ಕಾರ್ಯಕರ್ತರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸ್ಪರ್ಧಿಸಲು ಅವಕಾಶ ಕೇಳಿದ ಕುಮಾರಸ್ವಾಮಿ
ಪಕ್ಷದ ಹಿತದೃಷ್ಟಿಯಿಂದ ತಾವು ಎರಡೂ ಕಡೆ ಸ್ಪರ್ಧಿಸಲು ಅವಕಾಶ ಮಾಡಿಕೊಡಿ. ಕಾರ್ಯಕರ್ತರಿಗೆ ಎಂದಿಗೂ ದ್ರೋಹ ಬಗೆಯುವ ಹಾಗೂ ವಿಷ ಉಣಿಸುವ ಕೆಲಸ ಮಾಡುವುದಿಲ್ಲ. ನನ್ನ ಕೊನೆ ಉಸಿರು ಇರುವವರೆಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಪರಿಪರಿಯಾಗಿ ಕೇಳಿಕೊಳ್ಳುವ ಮೂಲಕ ಕಾರ್ಯಕರ್ತರನ್ನು ಒಲಿಸುವ ಯತ್ನ ಮಾಡಿದಾಗ ಕಾರ್ಯಕರ್ತರು ಅವರಿದ್ದ ವೇದಿಕೆ ಬಳಿಗೆ ಧಾವಿಸಿ ಬಂದು ಬೇಡ, ಬೇಡ ನೀವು ರಾಮನಗರ ಬಿಟ್ಟು ಎಲ್ಲಿಯೂ ಸ್ಪರ್ಧಿಸಬಾರದು ಎಂದು ಏರುಧ್ವನಿಯಲ್ಲಿ ಕೂಗಾಡಿದ್ದಾರೆ. ಕೊನೆಗೂ ಕಾರ್ಯಕರ್ತರನ್ನು ಸಮಾಧಾನಪಡಿಸಿದ ಕುಮಾರಸ್ವಾಮಿ ಈ ಬಗ್ಗೆ ಒಂದು ತೀರ್ಮಾನಕ್ಕೆ ಬರುವುದಾಗಿ ಹೇಳಿದ್ದಾರಂತೆ.
ಮುಂದುವರೆದ ಬೆಳವಣಿಗೆಯಲ್ಲಿ ಚನ್ನಪಟ್ಟಣದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿರುವ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು, ಜೆಡಿಎಸ್ಗೆ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಒಟ್ಟಾರೆ ಕುಮಾರಸ್ವಾಮಿ ಅವರ ನಡೆ ಕುತೂಹಲ ಕೆರಳಿಸಿರುವುದಂತೂ ಸತ್ಯ.