ಬಿಎಸ್ ವೈ ಕಟ್ಟಿಹಾಕಲು ಸೃಷ್ಟಿಯಾಗಿದ್ದೇ ಬಿಜೆಪಿ ಬಿಕ್ಕಟ್ಟು!
ಬಿಎಸ್ ಯಡಿಯೂರಪ್ಪ ಅವರದು ಪ್ರವಾಹದಂಥ ಶಕ್ತಿ. ಅದನ್ನು ಅನುಕೂಲಕ್ಕೆ ಬಳಸಿಕೊಳ್ಳುವುದಕ್ಕೂ ಹದ್ದು ಮೀರದಂತೆ ಸಂಭಾಳಿಸುವುದಕ್ಕೂ ಏನು ಮಾಡಬಹುದೋ ಅದನ್ನೇ ಈಗ ಬಿಜೆಪಿ ಬಿಕ್ಕಟ್ಟಿನ ಹೆಸರಿನಲ್ಲಿ ಬಿಜೆಪಿ ಹೈಕಮಾಂಡ್ ಮಾಡುತ್ತಿದೆಯಾ?
ಬೆಂಗಳೂರು, ಮೇ 4: ಪಟ್ಟು-ಸಿಟ್ಟು ಎರಡೂ ಯಡಿಯೂರಪ್ಪನವರಿಗೆ ಶಕ್ತಿ ಹೇಗೋ, ಆ ಕಾರಣದಿಂದಲೇ ಅವರನ್ನು ಭರಿಸುವುದು-ಸಹಿಸುವುದು ಸಹ ಅಸಾಧ್ಯ ಎಂಬ ಮಾತು ಈಗಾಗಲೇ ರುಜುವಾತಾಗಿದೆ. ನಾಯಕತ್ವದ ಕಿರೀಟ ಇರುವಾಗಲೇ ಸಟಕ್ಕನೆ ಸಿಟ್ಟು ಮಾಡಿಕೊಂಡು, ತೊಟ್ಟ ಕಿರೀಟವನ್ನೇ ಬಿಸಾಡುವಂಥ ಗುಣ ಅವರದು.
ಈಗಿನ ರಾಜ್ಯ ರಾಜಕೀಯ ಬೆಳವಣಿಗೆಯನ್ನೇ ಗಮನಿಸಿ, ಕಳೆದ ಆರೇಳು ತಿಂಗಳಿಂದ ಒಂದೇ ಸಮನೆ ಬಿಜೆಪಿಯೊಳಗೆ ಕದನಗಳು ನಡೆಯುತ್ತಲೇ ಇವೆ. ಈಶ್ವರಪ್ಪ ಹಾಗೂ ಯಡಿಯೂರಪ್ಪನವರದೊಂದು ಬಣವಾಗಿ, ಒಬ್ಬರ ಮೇಲೊಬ್ಬರು ಕಿಡಿ ಕಾರುತ್ತಲೇ ಇದ್ದಾರೆ. ಅದರಲ್ಲೂ ಯಡಿಯೂರಪ್ಪನವರು ಪಕ್ಷದಲ್ಲಿ ಹಿಡಿತ ಕಳೆದುಕೊಂಡರಾ ಎಂಬ ಅನುಮಾನ ಮೂಡುವ ವಾತಾವರಣವೇ ಸೃಷ್ಟಿಯಾಗಿದೆ.[ಯೋಗಿಯಾಗಲು ಬಿಎಲ್ ಸಂತೋಷ್ಗೆ ಏಕೆ ಸಾಧ್ಯವಿಲ್ಲ?]
ಇನ್ನೇನು ಒಂದು ವರ್ಷಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ ಎದುರಾಗುತ್ತದೆ. ಸದ್ಯದ ವಾತಾವರಣವನ್ನು ಗಮನಿಸಿದರೆ, ಬಿಜೆಪಿಗೆ ಸ್ವಲ್ಪ ಮಟ್ಟಿಗೆ, ಹೌದು ಖಂಡಿತವಾಗಿಯೂ ಸ್ವಲ್ಪ ಮಟ್ಟಿಗಷ್ಟೇ ಅನುಕೂಲಕರ ಅಂಶಗಳು ಗೋಚರಿಸುತ್ತಿವೆ. ಇಂಥ ಹೊತ್ತಲ್ಲಿ. ರಸ್ತೆ ರಸ್ತೇಲಿ ಗುಂಪುಗಳಾಗಿ ಕಚ್ಚಾಡುತ್ತಿದ್ದರೂ ಬಿಜೆಪಿ ಹೈಕಮಾಂಡ್ ಸುಮ್ಮನಿರೋದು ಏಕೆ? ಕಾರಣ ತಿಳಿಯುವುದಕ್ಕೆ ಮುಂದೆ ಓದಿ.
ಕಚ್ಚಾಟ ಏಕೆ ತಡೆಯುತ್ತಿಲ್ಲ
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯಾವುದೇ ಪಕ್ಷ ರಾಜ್ಯ ಮಟ್ಟದಲ್ಲೂ ಪ್ರಬಲವಾಗಿಯೇ ಇರುತ್ತದೆ. ಅಂಥದ್ದರಲ್ಲಿ ಅದ್ಭುತ ಬಹುಮತ ಗಳಿಸಿ, ಮೋದಿ-ಶಾರಂಥ ಜೋಡಿ ಪಕ್ಷದಲ್ಲಿ ಶಕ್ತಿಯುತವಾಗಿರುವಾಗ ಈ ರೀತಿ ಕಚ್ಚಾಟ ನಡೆಯುತ್ತಿದೆ ಅಂದರೆ ಮಧ್ಯಪ್ರವೇಶಿಸಿ, ಭಿನ್ನಮತ ಶಮನ ಮಾಡುವುದು ಎಷ್ಟರ ಕೆಲಸ? ಅದರೆ ಅಸಮಾಧಾನ ಹೆಚ್ಚಾಗುವುದನ್ನೇ ಕಾಯುತ್ತಿದೆ ವರಿಷ್ಠರ ತಂಡ. ಇದೇ ಮಾತನ್ನು ಪಕ್ಷದ ಆಂತರಿಕ ಮೂಲಗಳು ಹೇಳುತ್ತವೆ.
ಕಾಂಗ್ರೆಸ್ ನ ಬಯ್ಯೋದಿಕ್ಕೆ-ಬಿಜೆಪಿ ಕಟ್ಟೋದಿಕ್ಕೆ ಬಿಎಸ್ ವೈ ಬೇಕು
ಕರ್ನಾಟಕದ ಮಟ್ಟಿಗೆ ಬಿಜೆಪಿಗೆ ಯಡಿಯೂರಪ್ಪ ಅವರ ಜಾತಿ ಹಿನ್ನೆಲೆ ಬೇಕು, ಅವರು ಮುಂಚೂಣಿಯಲ್ಲಿರಬೇಕು. ರಾಜ್ಯವಿಡೀ ಸುತ್ತಾಡಿ ಸಿದ್ದರಾಮಯ್ಯ-ಕಾಂಗ್ರೆಸ್ ಪಕ್ಷವನ್ನು ಎಗಾದಿಗಾ ತರಾಟೆಗೆ ತೆಗೆದುಕೊಳ್ಳಬೇಕು. ಆದರೆ ಆರೆಸ್ಸೆಸ್ ನ ಹಿಡಿತದಲ್ಲಿರಬೇಕು. ಹಾಕಿದ ಗೆರೆಯನ್ನು ದಾಟಬಾರದು.[ಬ್ರಹ್ಮಚಾರಿ, ಉಗ್ರ ಹಿಂದುತ್ವವಾದಿ ಬಿಎಲ್ ಸಂತೋಷ್ ಜೀ ವ್ಯಕ್ತಿಚಿತ್ರ]
ಬೇಲಿ ಹಾರದಿರಲು ಕಟ್ಟಿದ ಕಟ್ಟಿಗೆ
ಆದರೆ, ಯಡಿಯೂರಪ್ಪನವರು ಹತೋಟಿಯಲ್ಲಿರುವ ಪೈಕಿ ಅಲ್ಲ. ತುಂಬ ಚೇಷ್ಟೆ ಮಾಡುವ ಹಸುವಿಗೆ ಕಾಲಿಗೆ ಕಟ್ಟಿಗೆ ಕಟ್ಟುತ್ತಾರೆ. ಅಗ ಅದು ಬೇಲಿ ಹಾರುವುದು ಕಷ್ಟ. ಅದೇ ರೀತಿ ಯಡಿಯೂರಪ್ಪನವರ ಕಾಲಿಗೆ ಈಶ್ವರಪ್ಪ ಎಂಬ ಕಟ್ಟಿಗೆ ಕಟ್ಟಿ ಬಿಟ್ಟಿದೆ ಹೈಕಮಾಂಡ್. ಇಲ್ಲದಿದ್ದರೆ ಈಶ್ವರಪ್ಪನವರನ್ನು ಸುಮ್ಮನಾಗಿಸೋದು ಅಥವಾ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ವಿರುದ್ಧ ಎತ್ತಿದ ಧ್ವನಿಯ ದಮನ ಮಾಡೋದು ಎಷ್ಟರ ಮಾತು?
ಟಿಕೆಟ್ ಹಂಚಿಕೆ ಜವಾಬ್ದಾರಿ ಹೈಕಮಾಂಡ್ ಗೆ
ಈ ಬಿಕ್ಕಟ್ಟು ದೊಡ್ಡದಾಗಲಿ ಎಂದು ಕಾದು, ಆ ನಂತರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆಗೆ ಬಣ ರಾಜಕೀಯದ ನೆಪ ತೋರಿಸಿ, ಟಿಕೆಟ್ ಹಂಚಿಕೆಯ ಜವಾಬ್ದಾರಿಯನ್ನು ಯಡಿಯೂರಪ್ಪ ಅವರಿಂದ ಕಸಿಯುವುದು ಹೈ ಕಮಾಂಡ್ ಉದ್ದೇಶ ಅನ್ನೋದು ರಾಜಕೀಯದ ಲೆಕ್ಕಾಚಾರ ತಿಳಿದವರ ಮಾತು.[ಯಾರೇನೇ ಅಂದ್ರೂ ಬ್ರಿಗೇಡ್ ಕೈಬಿಡಲ್ಲ: ಈಶ್ವರಪ್ಪ]
ಉತ್ತರಪ್ರದೇಶದ ಮಾದರಿ
ಈ ಬಾರಿ ಉತ್ತರಪ್ರದೇಶ ಚುನಾವಣೆ ವೇಳೆ ಅತ್ಯಧಿಕ ಸಂಖ್ಯೆಯಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸಿತ್ತು ಬಿಜೆಪಿ. ಮತ್ತು ಅಲ್ಲಿ ಗೆಲುವು ಸಾಧಿಸುವುದರಲ್ಲೂ ಯಶಸ್ವಿಯಾಯಿತು. ಅಮಿತ್ ಶಾ ನಿಜವಾದ ತಾಕತ್ತು ಇರುವುದು ಬೇರು ಮಟ್ಟದಿಂದ ಪಕ್ಷದ ಸ್ಥಿತಿಯನ್ನು ಅರ್ಥ ಮಾಡಿಕೊಂಡು, ಅದಕ್ಕೆ ತಕ್ಕ ವ್ಯೂಹ ರಚಿಸುವುದರಲ್ಲಿ. ಈಗ ಕರ್ನಾಟಕದಲ್ಲಿ ಹೆಣೆಯುತ್ತಿರುವುದು ಕೂಡ ಅಂಥದೇ ವ್ಯೂಹ.[ಈಶ್ವರಪ್ಪ ವಿಚಾರದಲ್ಲಿ ಅಮಿತ್ ಶಾ ತಲೆ ಕೆಟ್ಟು ಮೊಸರು ಗಡಿಗೆ]
ಹಿಂಬಾಗಿಲಿನಿಂದ ಬರುವ ಅಗತ್ಯವಿಲ್ಲ
ಪಕ್ಷದ ಮೂಲಗಳ ಪ್ರಕಾರ ಆರೆಸ್ಸೆಸ್ ನವರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಅಂದರೆ ರಾಜಕಾರಣ ಮಾಡಿ, ಹಿಂಬಾಗಿಲಿನಿಂದ ಒಳ ತೂರಿಸುವ ಅಗತ್ಯ ಇಲ್ಲ. ಆ ವ್ಯಕ್ತಿಗೆ ಜವಾಬ್ದಾರಿ ನೀಡಿ ಅಂದರೆ ಮುಗಿಯಿತು. ಸಂಬಂಧಪಟ್ಟ ವ್ಯಕ್ತಿ ದೂಸರಾ ಮಾತನಾಡದೆ ಒಪ್ಪಿಕೊಳ್ತಾರೆ, ಪಕ್ಷವೂ ಅದಕ್ಕೆ ತಕರಾರು ಮಾಡುವುದಿಲ್ಲ. ಆದರೆ ಅಂಥ ಯಾವ ಉದ್ದೇಶವೂ ಸದ್ಯಕ್ಕೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಬಿಎಲ್ ಸಂತೋಷ್ ಅವರಿಗಿಲ್ಲ.
ಕೊಂಡಿಯಂತೆ ಒಬ್ಬರು ಇರ್ತಾರೆ
ಬಿಜೆಪಿ ಹಾಗೂ ಆರೆಸ್ಸೆಸ್ ಮಧ್ಯೆ ಕೊಂಡಿಯಂತೆ ಒಬ್ಬರಿಗೆ ಕೆಲಸ ಮಾಡಲು ಸೂಚಿಸಿರುತ್ತಾರೆ. ಆ ವ್ಯಕ್ತಿ ಅಧಿಕಾರ ದಾರಿ ತಪ್ಪದ ಹಾಗೆ, ಸಿದ್ಧಾಂತಗಳಲ್ಲಿ ರಾಜಿಯಾಗದ ಹಾಗೆ ನೋಡಿಕೊಳ್ತಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಆರೆಸ್ಸೆಸ್ಸಿನಿಂದ ಕೊಂಡಿಯಂತೆ ಇದ್ದವರು ಸಂತೋಷ್ ಜೀ. ತುಂಬ ಕಠಿಣ ನಿಲುವಿನ ಅವರ ಮಾತುಗಳ ಬಗ್ಗೆ ಬಿಎಸ್ ವೈಗೆ ಆಗಿನಿಂದಲೂ ಸಿಟ್ಟಿತ್ತು. ಅದೀಗ ಹೊರಬಂದಿದೆ.[ಈಶ್ವರಪ್ಪಗೆ ಟಾಂಗ್, ಶ್ರೀನಿವಾಸ್ ಪ್ರಸಾದ್ ಗೆ ಉಪಾಧ್ಯಕ್ಷ ಪಟ್ಟ ಕಟ್ಟಿದ ಬಿಎಸ್ವೈ]
ಬಹಳ ಜನಕ್ಕೆ ಟಿಕೆಟ್ ಡೌಟ್
ಅದು ಯಾವುದೇ ಬಣ ಇರಬಹುದು, ಎಷ್ಟೇ ಪ್ರಭಾವಿ ಅಂತ ಇರಬಹುದು. ಆ ವ್ಯಕ್ತಿಗೆ ಟಿಕೆಟ್ ಬೇಡ ಎಂದು ಹೈಕಮಾಂಡ್ ನಿರ್ಧರಿಸಿದರೆ ಯಡಿಯೂರಪ್ಪನವರು ತಕರಾರು ಮಾಡಬಾರದು. ಈ ಬಾರಿ ಚುನಾವಣೆಯಲ್ಲಿ ಕೆಲವರಿಗೆ ಯಾವ ಕಾರಣಕ್ಕೂ ಟಿಕೆಟ್ ನೀಡಬಾರದು ಎಂಬ ಆಲೋಚನೆ ಇದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ. ಆ ಕಾರಣಕ್ಕೆ ಟಿಕೆಟ್ ಹಂಚಿಕೆ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುವುದಕ್ಕೆ ವೇದಿಕೆ ಸಿದ್ಧವಾಗುತ್ತಿದೆ.