ಲೋಕಸಭಾ ಚುನಾವಣೇಲಿ ದೇವೇಗೌಡರು ಸೋತಿದ್ಯಾಕೆ? ಸಿದ್ದರಾಮಯ್ಯ ಹೇಳಿದ ಸತ್ಯ!
ಬೆಂಗಳೂರು, ಅ. 12: ಲೋಕಸಭಾ ಚುನಾವಣೆ ನಡೆದು ಬರೊಬ್ಬರಿ ಒಂದು ವರ್ಷದ ಬಳಿಕ ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರಣಗಳನ್ನು ವಿವರಿಸಿದ್ದಾರೆ. ಅದು ಉಪ ಚುನಾವಣೆಯ ಹೊಸ್ತಿಲಲ್ಲಿ ಸಿದ್ದರಾಮಯ್ಯ ಅವರು ಎಚ್ಡಿಡಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಸೋಲಿನ ಹಿಂದಿನ ಕಾರಣ ಹೇಳಿರುವುದು ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಎರಡು ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ರಂಗೇರುತ್ತಿದೆ. ಕಾಂಗ್ರೆಸ್ ಪಕ್ಷ ಆರ್. ಆರ್, ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸಲು ತಂತ್ರಗಾರಿಕೆ ಮಾಡುತ್ತಿದೆ. ಎಲ್ಲ ನಾಯಕರು ತಮ್ಮ ತಮ್ಮ ಅಸಮಾಧಾನ ಬದಿಗೊತ್ತಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಪ್ರಯತ್ನವನ್ನು ಆರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಕಾರಣಗಳನ್ನು ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ದೇವೇಗೌಡರ ಸೋಲಿನ ಬಗ್ಗೆ ಸಿದ್ದರಾಮಯ್ಯ ಅವರು ಹೇಳಿರುವುದು ಮಹತ್ವವನ್ನು ಪಡೆದುಕೊಂಡಿದೆ. ಯಾಕೆಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಹೀಗಾಗಿ ಎರಡೂ ಪಕ್ಷಗಳ ನಾಯಕರು ಒಟ್ಟಾಗಿ ಮೈತ್ರಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ವಿರೋಧ ಬಿಟ್ಟು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಹೀಗಾಗಿ ದೇವೇಗೌಡರು ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಸೋಲಿನ ಕುರಿತು ಸಿದ್ದರಾಮಯ್ಯ ಅವರ ಹೇಳಿಕೆ ಸಂಚಲನ ಮುಡಿಸಿದೆ.
ಕುಮಾರಸ್ವಾಮಿ ಆಟ ನಡೆಯಲ್ಲ!
ಬೆಂಗಳೂರಿನಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರು ಚುನಾವಣೆ ಬಂದಾಗ ಜಾತಿ ಕಾರ್ಡ್ ಪ್ಲೇ ಮಾಡುತ್ತಾರೆ, ಆದರೆ ಅದು ಉಪಯೋಗ ಆಗುವುದಿಲ್ಲ. ಯಾವುದೇ ಸಮುದಾಯ ಯಾರೋಬ್ಬರ ಒಬ್ಬರ ಹಿಂದೆಯೇ ಹೋಗುವುದಿಲ್ಲ. ಹೀಗಾಗಿ ಒಕ್ಕಗಲಿರು ಕೂಡ ಕೇವಲ ಕುಮಾರಸ್ವಾಮಿ ಅವರೊಬ್ಬರ ಹಿಂದೆಯೇ ಹೋಗುವುದಿಲ್ಲ ಎಂದಿದ್ದಾರೆ.
ನಿಖಿಲ್, ದೇವೇಗೌಡರ ಸೋಲಿಗೆ ಕಾರಣ
ಹಾಗೆ ಒಕ್ಕಲಿಗರೆಲ್ಲರೂ ಕುಮಾರಸ್ವಾಮಿ ಅವರನ್ನು ಬೆಂಬಲಿಸಿದ್ದರೆ ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು, ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಯಾಕೆ ಸೋಲಿಸಿದರು? ಈ ಜಾತಿ ಕಾರ್ಡ್ ಎಲ್ಲಾ ಉಪಯೋಗಕ್ಕೆ ಬರಲ್ಲ. ಹೀಗಾಗಿಯೇ ದೇವೇಗೌಡರು ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಸೋತಿದ್ದಾರೆ ಎಂದು ವಿವರಿಸಿದರು.
ಅಭ್ಯರ್ಥಿಗಳೇ ಇಲ್ಲ!
ಆರ್.ಆರ್. ನಗರ ಹಾಗೂ ಶಿರಾ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಭ್ಯರ್ಥಿಗಳೇ ಇಲ್ಲ. ಇನ್ನು ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರ ನಡುವೆ ಗುದ್ದಾಟ ಜೋರಾಗಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ಗಾಗಿ ಮೂಲ ಮತ್ತು ವಲಸಿಗರ ನಡುವೆ ಗುದ್ದಾಟ ನಡೆಯುತ್ತಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಒಪ್ಪಲು ಆಯಾ ಕ್ಷೇತ್ರದ ಸ್ಥಳೀಯ ಜನರಿಗೆ ಇಷ್ಟ ಇಲ್ಲ. ಹೀಗಾಗಿಯೇ ಬಿಜೆಪಿಯಲ್ಲಿ ಸಂಘರ್ಷ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಅವರು ವಿಶ್ಲೇಷಣೆ ಮಾಡಿದ್ದಾರೆ.
Recommended Video
ನಾಮಪತ್ರ ಸಲ್ಲಿಕೆ
ಅಕ್ಟೋಬರ್ 14ರಂದು ಆರ್.ಆರ್ ನಗರದಲ್ಲಿ ಕುಸುಮಾ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಹಾಕಲಿದ್ದಾರೆ. ಹಾಗೆ ಅಕ್ಟೋಬರ್ 15 ರಂದು ಶಿರಾದಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಎರಡು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸುವಾಗ ಹಾಗೂ ಮುಂದೆ ಪ್ರಚಾರಕ್ಕೆ ನಾನು ಹೋಗುತ್ತೇನೆ. ಆರ್.ಆರ್. ನಗರ ಹಾಗೂ ಶಿರಾದಲ್ಲಿ ಚುನಾವಣೆ ಗೆಲ್ಲಲು ಸಿದ್ಧತೆ ಮಾಡಿಕೊಂಡಿದ್ದೇವೆ. ಪ್ರತಿ ವಾರ್ಡ್ನಲ್ಲಿ ಒಂದೊಂದು ಸಮಿತಿ ರಚಿಸಲಾಗಿದೆ. ಪ್ರತಿ ಬೂತ್ ಜವಾಬ್ದಾರಿಯನ್ನು ಸಮಿತಿಗೆ ವಹಿಸಲಾಗಿದೆ. ಶಾಸಕರು, ಮಾಜಿ ಸಚಿವರು ಪ್ರತಿ ಸಮಿತಿಯಲ್ಲಿದ್ದಾರೆ ಎಂದು ವಿವರಿಸಿದರು.