ಕೊಡಗು ಪ್ರವಾಸಿಗರಿಗೆ ಸ್ವರ್ಗ, ವೈದ್ಯರಿಗೆ ಮಾತ್ರ ನರಕ!
ಮಡಿಕೇರಿ, ಜೂನ್ 08 : ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಪ್ರವಾಸಿಗರಿಗೆ ಸ್ವರ್ಗತಾಣ. ಹಲವಾರು ಪ್ರವಾಸಿಗರಂತೆ ವೈದ್ಯರು ಕೂಡ ಹೆಂಡತಿ ಮಕ್ಕಳು ಸಮೇತರಾಗಿ ಬಂದು ಮಜಾ ಮಾಡಿ ಹೋಗುತ್ತಾರೆ. ಆದರೆ, ಇಲ್ಲಿ ಬಂದು ರೋಗಿಗಳ ಶುಶ್ರೂಷೆ ಮಾಡಿ ಅಂತ ಹೇಳಿದಾಗ 'ನೋ ಚಾನ್ಸ್' ಅನ್ನುತ್ತಿದ್ದಾರೆ!
ಯಾಕೆ ಹೀಗೆ? ಕೊಡಗಿನ ಗ್ರಾಮೀಣ ಪ್ರದೇಶ ಮಾತ್ರವಲ್ಲ ನಗರ ಪ್ರದೇಶಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳು ಕೂಡ ವೈದ್ಯರಿಲ್ಲದೆ ಭಣಗುಟ್ಟುತ್ತಿವೆ. ನಿಸರ್ಗ ಸೌಂದರ್ಯ ಹೊಂದಿರುವ ಇಲ್ಲಿಗೆ ಯಾವತ್ತೋ ಬಂದು ಒಂದೆರಡು ದಿನವಿದ್ದು ಹೋಗುವವರಿಗೆ ಸ್ವರ್ಗದಂತೆ ಕಂಡರೂ ಕಾಣಬಹುದು. ಆದರೆ ಇಲಿಯೇ ಕೆಲಸ ಮಾಡಲು ಬರುವವರಿಗೆ ಮಾತ್ರ ಕೊಡಗೆಂದರೆ ನರಕ.
ಜಿಲ್ಲೆಯ ಹೊರಗಿನಿಂದ ಬರುವ ನೌಕರರು ಆದಷ್ಟು ಬೇಗ ಇಲ್ಲಿಂದ ಹೊರ ಹೋಗಲು ಹಾತೊರೆಯುತ್ತಾರೆ. ಬಹಳಷ್ಟು ಜನ ಮೈಸೂರಿನಿಂದ ಹೋಗಿ ಕೆಲಸ ಮಾಡಿ ಹಿಂತಿರುಗುತ್ತಾರೆ. ಇದರ ಹೊಡೆತ ಬೇರೆ ಯಾವ ಇಲಾಖೆಗೆ ತಟ್ಟದಿದ್ದರೂ ಆರೋಗ್ಯ ಇಲಾಖೆಯನ್ನು ಇನ್ನಿಲ್ಲದಂತೆ ಕಾಡುತ್ತಿದೆ. [ಖಾಸಗಿ ಆಸ್ಪತ್ರೆಗಳ ಈ ವಿಚಾರ ತಿಳಿದರೆ ನಿಜಕ್ಕೂ ಬೆಚ್ಚಿ ಬೀಳುತ್ತೀರಿ!]
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ವೈದ್ಯರಾಗಿ ಬರುವ ವೈದ್ಯರು, ಸರ್ಕಾರ ನೀಡುವ ವೇತನಕ್ಕಾಗಿ ಕಾಡು ಕೊಂಪೆಗಳಲ್ಲಿ ಕೆಲಸ ಮಾಡಲು ತಯಾರಿಲ್ಲ. ಒಂದು ವೇಳೆ ಇಷ್ಟಪಟ್ಟು ಬಂದರೂ ಅವರ ಹೆತ್ತವರು ಅದಕ್ಕೆ ಆಸ್ಪದ ನೀಡುವುದಿಲ್ಲ.
ಹೀಗಾಗಿ ವೈದ್ಯರು ಕೊಡಗಿನತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮವಾಗಿಯೇ ಇಲ್ಲಿನ ನಗರ ಆಸ್ಪತ್ರೆಗಳು ಸೇರಿದಂತೆ ಪಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದೆ. [ಚಿನ್ನದ ಹುಡುಗಿ ನಿಶಾಗೆ ಗ್ರಾಮೀಣ ವೈದ್ಯೆಯಾಗುವಾಸೆ]
ಇನ್ನು ಜಿಲ್ಲೆಯಲ್ಲಿ ಆರೋಗ್ಯ ಸೇವೆ ನೀಡಬಲ್ಲ ಸರ್ಕಾರಿ ಮಾತ್ರವಲ್ಲ, ಖಾಸಗಿ ಆಸ್ಪತ್ರೆಯಿದ್ದರೂ, ಅಲ್ಲಿಗೆ ಮೈಸೂರಿನಿಂದಲೋ, ಮಂಗಳೂರಿನಿಂದಲೋ ವೈದ್ಯರು ಬರಬೇಕಾಗಿದೆ. ಹೀಗಾಗಿ ಏನೇ ಆರೋಗ್ಯದ ಸಮಸ್ಯೆ ಕಂಡು ಬಂದರೂ ಮೈಸೂರಿಗೋ, ಮಂಗಳೂರಿಗೋ ಹೋಗುವುದನ್ನು ಹೆಚ್ಚಿನ ಜನ ರೂಢಿ ಮಾಡಿಕೊಂಡಿದ್ದಾರೆ. ಶ್ರೀಮಂತರು ಹೊರಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬಹುದು ಆದರೆ ಬಡಪಾಯಿಗಳಾದ ಕೂಲಿ ಕಾರ್ಮಿಕರು, ಬಡವರು ಏನು ತಾನೆ ಮಾಡಿಯಾರು?
ಅವರು ಹತ್ತಿರದಲ್ಲಿರುವ ಆಸ್ಪತ್ರೆಗೆ ಹೋದರೆ ವೈದ್ಯರಿಲ್ಲ ಎಂಬ ಉತ್ತರ ಬರುತ್ತದೆ. ವೈದ್ಯರು ಇರುವ ಕೆಲವು ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿರುವ ಕಾರಣ ಒತ್ತಡವೂ ಜಾಸ್ತಿ. ಇದೆಲ್ಲವನ್ನು ನೋಡಿದ ಹೆಚ್ಚಿನ ವೈದ್ಯರು ಕೊಡಗಿನಿಂದ ಹೊರಹೋಗಲು ಹಾತೊರೆಯುತ್ತಾರೆ. ಮುಂದಿನ ದಿನಗಳಲ್ಲಿ ಕೊಡಗಿನ ಸರಕಾರಿ ಆಸ್ಪತ್ರೆಗಳು ಮುಚ್ಚಿ ಹೋದರೂ ಆಶ್ಚರ್ಯಪಡಬೇಕಾಗಿಲ್ಲ.
ಅಂಕಿಅಂಶಗಳನ್ನಿಟ್ಟುಕೊಂಡು ನೋಡಿದರೆ ಕೊಡಗು ಜಿಲ್ಲೆಯಲ್ಲಿ ಅಂದಾಜು 29 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 11 ಕೇಂದ್ರಗಳಲ್ಲಿ ಒಬ್ಬನೇ ಒಬ್ಬ ವೈದ್ಯನಿಲ್ಲ. ಕುಶಾಲನಗರ ಆಸ್ಪತ್ರೆಗೆ 6 ವೈದ್ಯರ ಅಗತ್ಯವಿದೆ. ಆದರೆ ಇಲ್ಲಿ ಕೂಡ ಎಲ್ಲ ವೈದ್ಯರ ಹುದ್ದೆ ಖಾಲಿ ಇದ್ದು ಆಕಸ್ಮಾತ್ ಬಂದರೂ ಕೆಲವೇ ದಿನಗಳಲ್ಲಿ ಇಲ್ಲಿಂದ ಹೊರಟು ಹೋಗುತ್ತಾರೆ.
ಕೆಲಸ ನಿರ್ವಹಿಸಲು ವೈದ್ಯರೇ ಬಾರದಿದ್ದಾಗ ಜಿಲ್ಲಾಡಳಿತವಾದರೂ ಏನು ಮಾಡಲು ಸಾಧ್ಯ? ವಾಸ್ತವ ಜನತೆಗೆ ತಿಳಿಯುತ್ತಿಲ್ಲ. ಹೀಗಾಗಿ ವೈದ್ಯರನ್ನು ನೇಮಕ ಮಾಡುತ್ತಿಲ್ಲ ಎಂದು ಸಿಡಿದೆದ್ದು ಅಧಿಕಾರಿಗಳಿಗೆ ದಿಗ್ಭಂದನ ಹಾಕುತ್ತಿದ್ದಾರೆ. ಕೆಲವರು ಆಸಕ್ತಿಯಿಂದ ಬಂದರೂ ಇಲ್ಲಿನ ಸ್ಥಿತಿ ನೋಡಿ ಜಾಗ ಜಾಗ ಖಾಲಿ ಮಾಡುತ್ತಿದ್ದಾರೆ. ಆರೋಗ್ಯ ಸಚಿವರಾಜ ಯುಟಿ ಖಾದರ್ ಸಾಹೇಬರು ಇನ್ನಾದರೂ ಇತ್ತ ಗಮನ ಹರಿಸುವರೆ? [ಸುಂದರ ರಿಸೆಪ್ಶನಿಸ್ಟ್ ಒಬ್ಬಳೇ ಕುಳಿತಿದ್ದಾಳೆ!]