ಜಾಮೀನು ರಹಿತ ಬಂಧನ ವಾರಂಟ್: ರಕ್ಷಿತ್ ಶೆಟ್ಟಿ ಹೇಳಿದ್ದೇನು?
ಬೆಂಗಳೂರು, ಫೆಬ್ರವರಿ 26: ಹಾಡೊಂದರ ಕೃತಿಚೌರ್ಯ ಪ್ರಕರಣದಲ್ಲಿ ತಮ್ಮ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ ಎಂಬ ಸುದ್ದಿಗೆ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಸ್ಪಷ್ಟೀಕರಣ ನೀಡಿದ್ದಾರೆ.
Recommended Video
ತಮ್ಮ ಬಂಧನ ಭೀತಿ ಕುರಿತಂತೆ ಹರಡುತ್ತಿರುವ ವರದಿಗಳು ಸತ್ಯಕ್ಕೆ ದೂರ. ಈ ಪ್ರಕರಣ ಈ ಹಿಂದೆಯೇ ಇತ್ಯರ್ಥವಾಗಿದೆ. ಈಗಾಗಲೇ ಈ ಪ್ರಕರಣವನ್ನು ನ್ಯಾಯಾಲಯದಲ್ಲಿ ನಾವು ಗೆದ್ದಿದ್ದೇವೆ. ಹೀಗಿರುವಾಗ ಇದೇ ವಿವಾದದಲ್ಲಿ ಮತ್ತೊಂದು ಪ್ರಕರಣ ದಾಖಲಿಸುವ ಔಚಿತ್ಯವೇನಿದೆ? ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.
ನಟ ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರೆಂಟ್, ಬಂಧನ ಸಾಧ್ಯತೆ
ರವಿಚಂದ್ರನ್ ಅವರ 'ಶಾಂತಿ ಕ್ರಾಂತಿ' ಚಿತ್ರದ 'ಮಧ್ಯರಾತ್ರಿಲಿ ಹೈವೇ ರಸ್ತೇಲಿ' ಹಾಡನ್ನು ನಕಲು ಮಾಡಿ 'ಹೇ ಹೂ ಆರ್ಯೂ' ಹಾಡನ್ನು ತಯಾರಿಸಲಾಗಿದೆ ಎಂದು ಲಹರಿ ಆಡಿಯೋ ಸಂಸ್ಥೆಯ ಲಹರಿ ವೇಲು ದೂರು ನೀಡಿದ್ದರು. ಸಮನ್ಸ್ಗಳನ್ನು ನೀಡಿದ್ದರೂ ಪ್ರಕರಣದ ವಿಚಾರಣೆಗೆ ಹಾಜರಾಗದೆ ಗೈರಾದ ಪರಮ್ವಾಹ್ ಸ್ಟುಡಿಯೋಸ್ನ ರಕ್ಷಿತ್ ಶೆಟ್ಟಿ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ ಎಂದು ವರದಿಯಾಗಿತ್ತು.
ವರ್ಷದ ಹಿಂದೆಯೇ ಕೇಸು ಗೆದ್ದಿದ್ದೇವೆ
'ನಾವು ಮೂವರ ಕುರಿತೂ ನಾನು ಮಾತನಾಡುತ್ತಿದ್ದೇನೆ. ನಾವು ಒಂದು ವರ್ಷದ ಹಿಂದೆಯೇ ಈ ಪ್ರಕರಣವನ್ನು ಗೆದ್ದಿದ್ದೇವೆ. ನ್ಯಾಯಾಲಯದಿಂದ ನಮ್ಮ ಭದ್ರತಾ ಠೇವಣಿಯಾದ 10 ಲಕ್ಷ ರೂಪಾಯಿಯನ್ನೂ ಮರಳಿ ಪಡೆದಿದ್ದೇವೆ. ಒಳ್ಳೆಯ ಕಾರಣಗಳಿಗಾಗಿ ನಾವು ಇದನ್ನು ಸುದ್ದಿ ಮಾಡಿರಲಿಲ್ಲ' ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ನಮಗೆ ಮಾಹಿತಿಯನ್ನೇ ನೀಡಿಲ್ಲ
'ನಾವು ಸಿವಿಲ್ ಕೋರ್ಟ್ ಮತ್ತು ಹೈಕೋರ್ಟ್ ಎರಡರಲ್ಲಿಯೂ ನಾವು ಕೇಸನ್ನು ಜಯಿಸಿದ್ದೇವೆ. ಹೀಗಿರುವಾಗ ಇದೇ ವಿವಾದದಲ್ಲಿ ಮತ್ತೊಂದು ಪ್ರಕರಣ ದಾಖಲಿಸುವುದರ ಅರ್ಥವೇನಿದೆ? ಅಲ್ಲದೆ ಎರಡನೆಯ ಪ್ರಕರಣವನ್ನು ಆರು ತಿಂಗಳ ಹಿಂದಷ್ಟೇ ದಾಖಲಿಸಲಾಗಿದ್ದು, ನಮ್ಮ ವಕೀಲರು ಸೇರಿದಂತೆ ನಮಗೆ ಯಾರಿಗೂ ಇದರೆ ಬಗ್ಗೆ ಮಾಹಿತಿ ನೀಡಿಲ್ಲ. ಏಕೆ? ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮರಳಿ ಹೋರಾಟ ಮಾಡುತ್ತೇವೆ
'ನಾವು ಏನನ್ನು ನಂಬಿದ್ದೇವೆಯೋ ಅದು ಸತ್ಯವಾಗಿರುವುದರಿಂದ ಮರಳಿ ಹೋರಾಟ ನಡೆಸಲು ನಿರ್ಧರಿಸಿದ್ದೇವೆಯೇ ಹೊರತು ಇದಕ್ಕೆ ಬಗ್ಗುವುದಿಲ್ಲ. ಸಂಕಷ್ಟದ ನಡುವೆಯೇ ನಮ್ಮ ಸಿನಿಮಾ ಬಿಡುಗಡೆಯಾಗಿತ್ತು. ನಾವು ನಮ್ಮ ನಿಲುವಿಗೆ ಬದ್ಧರಾಗಿದ್ದೆವು. ಅದೃಷ್ಟವಶಾತ್ ಕೊನೆಯ ಕ್ಷಣದಲ್ಲಿ ಈ ಹಾಡನ್ನು ಕತ್ತರಿಸಿ ಸಿನಿಮಾ ಬಿಡುಗಡೆ ಮಾಡಲು ನಮಗೆ ಸಾಧ್ಯವಾಯಿತು. ನ್ಯಾಯಾಲಯದ ಅನುಮತಿ ಮೇರೆಗೆ ಎರಡನೆಯ ವಾರದಲ್ಲಿ ಹಾಡನ್ನು ಮತ್ತೆ ಸೇರಿಸಿದ್ದೆವು' ಎಂದು ವಿವರಿಸಿದ್ದಾರೆ.
ಹಿಂದಿನ ದಿನವಷ್ಟೇ ಆದೇಶ ಪ್ರತಿ
'ಕಳೆದ ಬಾರಿ ಅವರು ನಮ್ಮ ವಿರುದ್ಧ ಪ್ರಕರಣ ದಾಖಲಿಸಿದಾಗ (ಹಾಡು ಬಿಡುಗಡೆಯಾಗಿ ಒಂದು ತಿಂಗಳಾದರೂ, ಪ್ರೀಮಿಯರ್ ಷೋದ ಹಿಂದಿನ ದಿನವಷ್ಟೇ) ಅವರ ವಕೀಲ ನಮ್ಮನ್ನು ಸಂಪರ್ಕಿಸಿ ಚಿತ್ರ ಬಿಡುಗಡೆಗೆ ತಡೆಯಾಜ್ಞೆಯ ಆದೇಶ ಪ್ರತಿ ನೀಡಿದ್ದರು. ಪ್ರತಿಯೊಬ್ಬರಿಂದಲೂ ಅದಕ್ಕೆ ಸ್ವೀಕೃತಿ ಪತ್ರವನ್ನು ವೈಯಕ್ತಿಕವಾಗಿ ಪಡೆದುಕೊಂಡಿದ್ದರು' ಎಂದು ತಿಳಿಸಿದ್ದಾರೆ.
ಇದರ ಮೂಲ ಯಾವುದು ಗೊತ್ತಾಗಿದೆ...
'ವಾಟ್ಸಾಪ್ ಗ್ರೂಪ್ಗಳಲ್ಲಿ ಎರಡು ಚಿತ್ರಗಳು ಹರಿದಾಡುತ್ತಿದ್ದಂತೆಯೇ ಈ ಎಲ್ಲ ಆನ್ಲೈನ್ ಲೇಖನಗಳು ಓಡಾಡತೊಡಿವೆ. ಇದನ್ನು ಶುರುಮಾಡಿದ್ದು ಯಾರು? ಇದನ್ನು ಯಾರೇ ಮಾಡಿರಲಿ, ಕ್ಷಮಿಸಿ ನೀವು ಬುದ್ಧಿವಂತಿಕೆಯ ಕೆಲಸವನ್ನೇನೂ ಮಾಡಿಲ್ಲ. ಇದು ಆರಂಭವಾದ ಮೂಲ ಗುಂಪಿನಿಂದಲೇ ಇದನ್ನು ನಾನು ಪಡೆದುಕೊಂಡಿದ್ದೇನೆ. ಸಹೋದರ, ನೀವು ನಿಮ್ಮ ಹೆಜ್ಜೆ ಗುರುತನ್ನು ಅಲ್ಲಿಯೇ ಉಳಿಸಿದ್ದೀರಿ. ಅದು ತುಂಬಾ ದೊಡ್ಡದು' ಎಂದು ಸ್ಮೈಲಿ ಎಮೋಜಿ ಬಳಸಿ ರಕ್ಷಿತ್ ಹೇಳಿದ್ದಾರೆ.
ಬಿಡುಗಡೆಯನ್ನು ಸಂಭ್ರಮಿಸಲೂ ಆಗಿರಲಿಲ್ಲ
'ಒಂದು ವರ್ಷದ ಕಠಿಣ ಶ್ರಮದ ಬಳಿಕ ನಾವು 'ಕಿರಿಕ್ ಪಾರ್ಟಿ'ಯ ಬಿಡುಗಡೆ ಮತ್ತು ಯಶಸ್ಸನ್ನು ಸಂಭ್ರಮಿಸಬೇಕಿತ್ತು. ಆದರೆ ಸಿನಿಮಾ ಬಿಡುಗಡೆಯ ಹಿಂದಿನ ದಿನ ನಾವು ಕಾನೂನು ಸಮಸ್ಯೆಗಳನ್ನು ನಿಭಾಯಿಸುವ ವಿಚಾರವಾಗಿ ಓಡಾಡುತ್ತಿದ್ದೆವು. ಸಿನಿಮಾ ಬಿಡುಗಡೆಯಾದ ಕೆಲವು ದಿನಗಳ ಬಳಿಕವೂ ಇದು ಮುಂದುವರಿದಿತ್ತು. ಆ ಹಾಡನ್ನು ಮರಳಿ ಸಿನಿಮಾದೊಳಗೆ ಸೇರಿಸಿದ ಬಳಿಕವಷ್ಟೇ ನಾವು ಸಂಭ್ರಮಾಚರಣೆ ಮಾಡಿದ್ದು' ಎಂದು ನೋವು ಹಂಚಿಕೊಂಡಿದ್ದಾರೆ.
ಅವರಿಂದ ಸಾಕಷ್ಟು ಕಲಿತೆವು
'ವರ್ಷದ ಹಿಂದೆ ನಾವು ಪ್ರಕರಣವನ್ನು ಗೆದ್ದಾಗ ಇಡೀ ತಂಡ ಸಂಭ್ರಮಪಟ್ಟಿತ್ತು. ಆದರೆ ನಾವು ಅದನ್ನು ಸಾರ್ವಜನಿಕವಾಗಿ ಪ್ರಕಟಿಸಿರಲಿಲ್ಲ. ಏಕೆಂದರೆ ಸೋತ ದೂರುದಾರರನ್ನು ಯಾವ ಕಾರಣಕ್ಕೂ ಗುರಿಯಾಗಿರಿಸುವುದು ಬೇಡ ಎನ್ನುವುದು ನಮ್ಮ ಉದ್ದೇಶವಾಗಿತ್ತು. ಬದಲಾಗಿ ನಾವು ಅವರಿಗೆ ಕೃತಜ್ಞತೆ ಸಲ್ಲಿಸಿದ್ದೆವು. ಕೋರ್ಟ್, ಕಚೇರಿ ನಮಗೆ ಹೊಸ ಅನುಭವ. ಇದರಿಂದ ನಾವು ಹೊಸ ಸಂಗತಿಗಳನ್ನು ಕಲಿಯಲು ಸಾಧ್ಯವಾಯಿತು' ಎಂದು ತಿಳಿಸಿದ್ದಾರೆ.
ಇನ್ನು ಎಲ್ಲ ಮಾಹಿತಿ ಕೊಡುತ್ತೇನೆ
'ಒಳ್ಳೆಯ ಕಾರಣಗಳಿಗಾಗಿ ನಾನು ಅದರ ಬಗ್ಗೆ ಈ ಹಿಂದೆ ಮಾತನಾಡಿರಲಿಲ್ಲ. ಆದರೆ ಇನ್ನೂ ಅನೇಕ ಸುಂದರ ಅನುಭವಗಳು ಮತ್ತು ಹೊಸ ಕಲಿಕೆಗಳು ನಮ್ಮ ದಾರಿಯಲ್ಲಿ ಬರುವಂತೆ ಕಾಣಿಸುತ್ತಿವೆ. ಈ ಬಾರಿ ನಾನು ನಿಮಗೆ ಮಾಹಿತಿಗಳನ್ನು ನೀಡುತ್ತಿರುತ್ತೇನೆ. ಇದು ಮೋಜಿನದ್ದಾಗಿರಲಿದೆ' ಎಂದು ಹೇಳಿದ್ದಾರೆ.
ಕಿರಿಕ್ ಪಾರ್ಟಿ 2ಗೆ ಕಥೆ ಸಿಕ್ಕಿತು!
'ನನಗೆ 'ಕಿರಿಕ್ ಪಾರ್ಟಿ 2' ಮಾಡುವ ಯಾವುದೇ ಯೋಚನೆ ಇರಲಿಲ್ಲ. ಆದರೆ ಈಗ ಖಚಿತವಾಗಿಯೂ ಅದಕ್ಕೊಂದು ವಸ್ತು ಸಿಕ್ಕಿದೆ. ಕಿರಿಕ್ ಪಾರ್ಟಿಗಳು ಪರದೆ ಮೇಲೆ ಮರಳಿ ಬರಲಿವೆ ಹಾಗೂ ಇದು ಅಂತಹ ಹೋರಾಟ ಆಗಿರಲಿದೆ' ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.