ಕಾಂಗ್ರೆಸ್ ನಾಯಕರ ಹೇಳಿಕೆ ಕೇಳಿ ಆಶ್ಚರ್ಯವಾಗುತ್ತಿದೆ!
ಬೆಂಗಳೂರು, ಅ. 05: ಆರ್ಆರ್ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ತಯಾರಿಯಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಸಿಬಿಐ ಶಾಕ್ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆಯ ಮೇಲೆ ಸಿಬಿಐ ದಾಳಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕ ಮೇಲೆ ಹರಿಹಾಯ್ದಿದ್ದಾರೆ.
ಇದೇ ವಿಚಾರ ಕುರಿತಂತೆ ಬಿಜೆಪಿ ನಾಯಕರು ತಮ್ಮ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಹಿಂದೆಯೂ ಸಿಬಿಐ ದಾಳಿಯಾಗಿತ್ತು. ಇದೇ ಮೊದಲ ಬಾರಿ ಅವರ ಮೇಲೆ ದಾಳಿಯಾಗಿಲ್ಲ ಎಂದಿದ್ದಾರೆ. ಜೊತೆಗೆ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆ ಮೇಲೆ ದಾಳಿಯಾದಾಗ ಕಾಂಗ್ರೆಸ್ ನಾಯಕರು ಏನೆಂದು ಮಾತನಾಡಿದ್ದರು, ಅದನ್ನು ನೆಪಿಸಿಕೊಳ್ಳಲಿ ಎಂದಿದ್ದಾರೆ. ಹಾಗಾದ್ರೆ ಯಡಿಯೂರಪ್ಪ ನಿವಾಸದ ಮೇಲೆ ಸಿಬಿಐ ದಾಳಿ ನಡೆದಾಗ ಕಾಂಗ್ರೆಸ್ ನಾಯಕರು ಏನು ಹೇಳಿದ್ದರು? ಈಗ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ!
ಇದೆ ಮೊದಲಲ್ಲ ಬಿಡಿ!
ಗ್ರಾಮೀಣಾಭಿವೃದ್ಧಿ ಸಚಿವ ಸಚಿವ ಕೆ.ಎಸ್. ಈಶ್ವರಪ್ಪ ಅವರು ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಹಿಂದೆ ಸಹ ದಾಳಿ ಆಗಿದೆ, ಇದು ಹೊಸದಲ್ಲ ಎಂದಿದ್ದಾರೆ.
ಸಿದ್ದರಾಮಯ್ಯಗಿಂತ ಡಿಕೆಶಿ ಪ್ರಭಾವಿಯೇ?: ಸಚಿವ ಸುಧಾಕರ್
ಹವಾಲಾ ಹಣ ಸಿಕ್ಕಿರುವ ಬಗ್ಗೆ ಹಿಂದಿನ ದಾಳಿಯಲ್ಲಿ ಗೊತ್ತಾಗಿತ್ತು. ಇವತ್ತಿನ ದಾಳಿಯಲ್ಲಿ ಏನು ಬರಲಿದೆಯೊ ನೋಡಬೇಕು. ಅವರ ಮೇಲೆ ಸಿಬಿಐ ದಾಳಿ ರಾಜಕೀಯ ಉದ್ದೇಶದಿಂದ ಕೂಡಿಲ್ಲ. ಇಂತಹ ಆರೋಪ ಮಾಡುವ ಕಾಂಗ್ರೆಸ್ ನಾಯಕರ ಹೇಳಿಕೆ ಕೇಳಿ ಆಶ್ಚರ್ಯವಾಗುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಮೇಲೂ ಸಹ ದಾಳಿ ಆಗಿತ್ತು.
ಸೀತೆಯಂತೆ ಪವಿತ್ರವಾಗಿ ಬರಲಿ
ಆಗ ಕಾಂಗ್ರೆಸ್ ನಾಯಕರು ಏನೆಂದು ಹೇಳಿಕೆ ಕೊಟ್ಟಿದ್ದರು ಎಂಬುದನ್ನು ನೆಪಿಸಿಕೊಳ್ಳಲಿ. ಉಪ್ಪು ತಿಂದೋನೋ ನೀರು ಕುಡಿಯಲೇಬೇಕು ಎಂದು ಆಗ ಕಾಂಗ್ರೆಸ್ ನಾಯಕರು ಹೇಳಿಕೆ ಕೊಟ್ಟಿದ್ದರು. ಕಾಂಗ್ರೆಸ್ ನಾಯಕರಿಗೆ ಬೇರೆ ಕಾನೂನು ಬೇರೆ ಇದೆಯಾ? ಡಿ.ಕೆ. ಶಿವಕುಮಾರ್ ತನಿಖೆಗೆ ಒಳಗಾಗಲಿ, ಸೀತೆಯಂತೆ ಪವಿತ್ರರಾಗಿ ಹೊರಗೆ ಬರಲಿ ಎಂದು ಈಶ್ವರಪ್ಪ ಅವರು ಶುಭ ಹಾರೈಸಿದ್ದಾರೆ.
ರಾಜಕೀಯ ಬಣ್ಣ ಬೇಡ
ಇನ್ನು ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಾ. ಸಿ.ಎನ್. ಅಶ್ವಥ್ನಾರಾಯಣ ಅವರೂ ಈಶ್ವರಪ್ಪ ಅವರು ಹೇಳಿದ್ದನ್ನೆ ಪುನರುಚ್ಚರಿಸಿದ್ದಾರೆ. ಈಗಾಗಲೇ ಡಿ.ಕೆ. ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ಹಾಗೂ ಇಡಿ ದಾಳಿ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಸಿಬಿಐ ದಾಳಿ ನಡೆದಿರಬಹುದು. ಹೀಗಾಗಿ ಇದಕ್ಕೆ ರಾಜಕೀಯ ಬಣ್ಣ ಬಳಿಯುವುದು ಬೇಡ ಎಂದರು.
Recommended Video
ಸತ್ಯ ಏನೆಂದು ಹೊರಬರಲಿ
ಸಮಾಜದಲ್ಲಿ ವ್ಯಕ್ತಿಗಿಂತ ವ್ಯವಸ್ಥೆಯೇ ದೊಡ್ಡದು. ಇದರಲ್ಲಿ ನಂಬಿಕೆ ಹೆಚ್ಚುವ ರೀತಿಯಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ. ಸತ್ಯ ಏನೆಂದು ಹೊರಬರಲಿ. ಇನ್ನು ತನಿಖೆಗೆ ಸಹಕಾರ ನೀಡುವುದಾಗಿ ಸ್ವತಃ ಡಿಕೆಶಿ ಹೇಳಿದ್ದಾರೆ. ಅದರಂತೆ ಅವರು ಸಹಕಾರ ನೀಡಲಿ. ತಮ್ಮ ಪ್ರಾಮಾಣಿಕತೆಯನ್ನು ಸಾಬೀತು ಮಾಡಲು ಇದೊಂದು ಅವಕಾಶ. ಸಿಕ್ಕಿದ ಅವಕಾಶವನ್ನು ಅವರು ಸದ್ಬಳಕೆ ಮಾಡಿಕೊಳ್ಳಲಿ ಎಂದು ಡಿಸಿಎಂ ಹೇಳಿದರು.
ಇಂಥ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ. ಇದೊಂದು ರಾಜಕೀಯ ಪ್ರೇರಿತ ಎಂದು ಹೇಳುವ ಮೂಲಕ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಉಪ ಚುನಾವಣೆಗೂ ಈ ದಾಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.