ಶರಾವತಿ ನದಿ ತೀರದಲ್ಲಿ ಗಜಪೃಷ್ಟಾಕೃತಿಯ ಚಂದ್ರಮೌಳೀಶ್ವರ ದೇವಾಲಯ
ಹೊಸನಗರ, ಮೇ 2: ನಮ್ಮ ಧರ್ಮ ಸಂಸ್ಕೃತಿ ಇನ್ನೂ ಉಳಿದಿರುವುದು ದೇವಾಲಯಗಳಿಂದ ಮಾತ್ರ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದಂಗಳವರು ಹೇಳಿದ್ದಾರೆ. ಮಂಗಳವಾರ ( ಮೇ 1) ಹೊಸನಗರದ ರಾಮಚಂದ್ರಾಪುರ ಮಠದ ಪುಣ್ಯ ಭೂಮಿಯ ಶರಾವತಿ ನದಿ ತೀರದಲ್ಲಿ ಶ್ರೀಚಂದ್ರಮೌಳೀಶ್ವರ ದೇವಾಲಯದ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವದ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಎಲ್ಲ ಕಡೆಗಳಲ್ಲಿಯೂ ದೇವರಿದ್ದಾನೆ ಎನ್ನುವ ನಮಗೆ ದೇವಾಲಯ ಏಕೆ ಬೇಕು ಎನ್ನುವ ಪ್ರಶ್ನೆ ಸಹಜವಾಗಿ ಮೂಡಬಹುದು ಆದರೆ ಭಗವಂತ ಪ್ರಕಟವಾಗಲು ಇರುವ ತಾಣ ದೇವಾಲಯ, ದೇವಾಲಯವಿದ್ದರೆ ಅಲ್ಲಿ ಭಗವಂತನ ಸಾಕ್ಷಾತ್ಕಾರ.
ಬೆಂಗಳೂರಿನಲ್ಲಿ ಹವ್ಯಕರ ಗುರುಗಳಿಂದ ಆಶೀರ್ವಚನ
ಮಾತ್ರವಲ್ಲ ಜನರಲ್ಲಿಯೂ ಭಕ್ತ ಶ್ರದ್ದೆ ಮೂಡುವುದು ದೇವ ತಾಣದಲ್ಲಿಯೇ ಹೊರತು ಬೇರೆಲ್ಲಿಯೂ ಅಲ್ಲ ಹಾಗಾಗಿಯೇ ನಮ್ಮ ಧರ್ಮದಲ್ಲಿ ದೇವಾಲಯಕ್ಕೆ ವಿಶೇಷ ಸ್ಥಾನವಿದೆ ಅದರಲ್ಲಿಯೂ ಹಿಂದೂ ಧರ್ಮದ ಭದ್ರಕೋಟೆ ಎಂದರೆ ಅದು ದೇವಾಲಯ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ, ಜಗತ್ತಿನ ಎಲ್ಲ ಯತಿಗಳನ್ನು ಸಮಾನವಾಗಿ ಕಾಣುವ ಇತಿಹಾಸ ಹೊಂದಿರುವ ಮಠ ನಮ್ಮ ರಾಮಚಂದ್ರಾಪುರಮಠ. ಇಲ್ಲಿ ಮೇಲೆ ಕೆಳಗೆ ಎನ್ನುವ ತಾರತಮ್ಯ ಯಾವ ಯತಿಗಳಿಗೂ ಇಲ್ಲ ಎಂದು ರಾಘವೇಶ್ವರಭಾರತೀ ಶ್ರೀಗಳು ಹೇಳಿದ್ದಾರೆ.
ಯುಗಕ್ಕೊಂದು ಜಗಕ್ಕೊಂದು ಆಗುವ ಮಹಾ ಕಾರ್ಯಕ್ಕೆ ನಾವೆಲ್ಲ ನಿಮಿತ್ತರು ಮಾತ್ರ ಅದರ ಸೃಷ್ಟಿಯನ್ನು ದೈವಶಕ್ತಿಯೇ ಮಾಡಿಕೊಳ್ಳುತ್ತದೆ. ಜಗತ್ತಿನಲ್ಲಿ ಮಂಗಲ ಕಾರ್ಯವಾಗುವುದಕ್ಕೂ ದೈವ ಸಂಕಲ್ಪಬೇಕು ಮತ್ತು ಅಮಂಗಲ ಕಾರ್ಯ ಘಟಿಸದಿರುವಂತೆ ನಿಯಂತ್ರಿಸುವುದೂ ಕೂಡ ದೈವ ಸಂಕಲ್ಪವೆ.
ಶ್ರೀಗಳ ಮೇಲೆ ಹವ್ಯಕ ಸಮಾಜಕ್ಕಿರುವ ಗೌರವ: 'ಬದ್ಧತಾ ಸಮಾವೇಶ'
ಒಂದು ಮಠ ಕೂಡ ಇದಕ್ಕೆ ಹೊರತಲ್ಲ. ಅದರ ಎಲ್ಲ ಒಳಿತು ಕಾರ್ಯಕ್ಕೆ ದೈವಶಕ್ತಿಯ ಪ್ರೇರಣೆ ಬೇಕು ಎಂದ ಅವರು ಮಹಾ ಕಾರ್ಯಗಳು ಕಾರ್ಯಾನುಷ್ಠಾನಗೊಳ್ಳುವಾಗ ಅವಿಸ್ಮರಣೀಯವಾದ ಹಲವು ಘಟನೆ ನಡೆಯುತ್ತದೆ ಆದರೆ ಅದನ್ನು ನೋಡುವ ಕಣ್ಣು ಮಾತ್ರ ಇದ್ದರೆ ಸಾಲದು ಅದರ ಜತೆಗೆ ಗಮನಿಸುವ ಮನಸ್ಸು ಕೂಡ ಇರಬೇಕು ಎಂದು ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.
ಉಡುಪಿ ಬಾಳೆಕುದ್ರು ನೃಸಿಂಹಾಶ್ರಮ ಸ್ವಾಮೀಜಿ ಮಾತನಾಡಿ, ಸಾತ್ವಿಕತನವನ್ನು ಮೈಗೂಡಿಸಿಕೊಂಡಿರುವ ಭಾರತೀಯರು ಇಂದು ಎಚ್ಚೆತ್ತುಕೊಳ್ಳುವ ಅಗತ್ಯವೂ ಇದೆ. ನಮ್ಮ ಆಡಳಿತ ನೀಡುವ ಸಾತ್ವಿಕರನ್ನು ಆಯ್ಕೆ ಮಾಡುವ ಜವಾಬ್ದಾರಿ ಕೂಡ ನಮ್ಮ ಮೇಲಿದೆ. ಮತದಾನದ ಕುರಿತು ನಿರ್ಲಕ್ಷವೂ, ಉದ್ದಟತನವೂ ಎರಡೂ ಬೇಡ. ಅದು ನಮ್ಮ ಹೊಣೆ ಮುಂದಿನ ಒಳಿತು ಎಲ್ಲವನ್ನೂ ಒಳಗೊಂಡಿದೆ ಎಂದರು.
ಉತ್ತರ ಕಾಶಿಯ ಗೋತೀರ್ಥ ಕಪಿಲಾಶ್ರಮದ ರಾಮಚಂದ್ರ ಗುರೂಜಿ, ಮಾತನಾಡಿ, ಮಂದಿರ ಕಟ್ಟುವುದು ಸುಲಭ ಆದರೆ ಭಕ್ತಿ ಕಟ್ಟುವುದು ಸುಲಭವಲ್ಲ ಅದು ಅತ್ಯಂತ ಕಠಿಣ. ಅದು ಹೃದಯ ಮಂದಿರದಲ್ಲಿ ಕಟ್ಟಬೇಕಿದೆ ಆಗ ಮಾತ್ರ ಭಗವಂತನ ಅನುಗ್ರಹ ಸಾಧ್ಯ ಎಂದ ಅವರು, ಇಂದು ಸಂಸ್ಕೃತಿ, ಸಂಸ್ಕಾರ ಮತ್ತು ಸಂಸ್ಕೃತ ಮರೆತಿರುವ ಕಾರಣ ವಿಶ್ವ ಗುರುವಾಗಿದ್ದ ಭಾರತ ದೇಶ ಮತ್ತೆ ಹಿಂದುಳಿದಿದೆ ಎಂದಿದ್ದಾರೆ.
ಇದಕ್ಕೂ ಮುನ್ನ ಬೆಳಗ್ಗಿನ ಜಾವ 2.50 ಕ್ಕೆ ಸರಿಯಾಗಿ ಶರಾವತಿ ನದಿ ತೀರದಲ್ಲಿ ನೂತನವಾಗಿ ಪುನರ್ ನಿರ್ಮಿಸಿರುವ ವಿಶಿಷ್ಟ ಗಜಪೃಷ್ಟಾಕೃತಿಯ ದೇವಾಲಯದಲ್ಲಿ ಶ್ರೀ ಚಂದ್ರಮೌಳೀಶ್ವರ ಪ್ರತಿಷ್ಠಾಪನೆ ನೆರವೇರಿತು. ಸಿಮೆಂಟ್ - ಕಬ್ಬಿಣ ಇತ್ಯಾದಿಗಳನ್ನು ಬಳಸದೇ ಪಾರಂಪರಿಕ ಪದ್ಧತಿಯಲ್ಲಿ ನಿರ್ಮಿಸಿರುವುದು ಈ ದೇವಾಲಯದ ವಿಶೇಷತೆಯಾಗಿದ್ದು, ದೇವಾಲಯದ ಸುತ್ತಲೂ ಸರೋವರ ಹಾಗೂ ಪಕ್ಕದಲ್ಲೇ ಶರಾವತಿ ನದಿ ದೇವಾಲಯದ ಮೆರುಗನ್ನು ಹೆಚ್ಚಿಸಲಿದೆ.