ಯಡಿಯೂರಪ್ಪರಿಗೆ ಆರೋಗ್ಯ ಸರಿ ಇಲ್ಲ; ವಜಾಗೊಳಿಸಿ: ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಏನಿದೆ?
ಬೆಂಗಳೂರು, ನ. 20: ಸಂಪುಟ ಸಂಕಟದ ಬೆನ್ನಲ್ಲಿಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಬಾರಿ ರಾಜಕೀಯ ಸಂಕಷ್ಟದ ಬದಲಿಗೆ ಕಾನೂನಾತ್ಮಕ ಸಮಸ್ಯೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎದುರಿಸುತ್ತಿದ್ದಾರೆ.
ಆರ್.ಆರ್. ನಗರ ಹಾಗೂ ಶಿರಾ ಉಪ ಚುನಾವಣೆಯಲ್ಲಿ ಭರ್ಜರಿ ಜಯದ ಬಳಿಕ ಯಡಿಯೂರಪ್ಪ ಅವರ ಸಿಎಂ ಸ್ಥಾನ ಉಳಿದ ಮೂರು ವರ್ಷಗಳ ಅವಧಿಗೆ ಗಟ್ಟಿಯಾಯ್ತು ಎನ್ನಲಾಗಿತ್ತು. ಉಪ ಚುನಾವಣೆಯ ಫಲಿತಾಂಶ ಪಕ್ಷದಲ್ಲಿನ ವಿರೋಧಿಗಳ ಬಾಯನ್ನೂ ಕೂಡ ಮುಚ್ಚಿಸಿದೆ ಎನ್ನಲಾಗಿತ್ತು. ಇದೇ ಆತ್ಮವಿಶ್ವಾಸದಲ್ಲಿ ಯಡಿಯೂರಪ್ಪ ಅವರು ಹೈಕಮಾಂಡ್ ಭೇಟಿಗೆ ತೆರಳಿದ್ದರು. ಆದರೆ ಎರಡೇರಡು ಬಾರಿ ಹೈಕಮಾಂಡ್ ಭೇಟಿಯ ಬಳಿಕವೂ ಬಲಿಗೈಲಿ ವಾಪಾಸದಾಗಿದ್ದಾರೆ.
ಅವರಿಗೆ ಮಂತ್ರಿ ಸ್ಥಾನ ಕೊಟ್ರೆ ನಾನಂತೂ ಸುಮ್ಮನಿರಲ್ಲ: ಶಾಸಕ ರೇಣುಕಾಚಾರ್ಯ!
ಇನ್ನೇನೂ ಯಡಿಯೂರಪ್ಪ ಅವರ ಎಲ್ಲ ಸಮಸ್ಯೆಗಳು ಮುಗಿದವು ಎನ್ನುವಾಗಲೇ ಈ ಹೊಸ ಸಂಕಷ್ಟ ಅವರಿಗೆ ಎದುರಾಗಿದೆ. ಕಳೆದ 2011ರಲ್ಲಿ ಎದುರಾಗಿದ್ದ ಸ್ಥಿತಿ ಮತ್ತೆ ಯಡಿಯೂರಪ್ಪ ಅವರನ್ನು ಕಾಡಲಿದೆಯಾ? ಏನದು ಸಮಸ್ಯೆ? ಇಲ್ಲಿದೆ ಸಂಪೂರ್ಣ ವಿವರ.
ಸಂಪುಟ ವಿಸ್ತರಣೆ ಸಂಕಷ್ಟ
ಉಪ ಚುನಾವಣೆ ಬಳಿಕ ತಮ್ಮನ್ನು ನಂಬಿಕೊಂಡು ಬಿಜೆಪಿ ಸೇರಿದ್ದವರನ್ನು ಮಂತ್ರಿ ಮಾಡಲು ಯಡಿಯೂರಪ್ಪ ಅವರು ಮುಂದಾಗಿದ್ದರು. ಅದಕ್ಕಾಗಿ ಹೈಕಮಾಂಡ್ ಬಾಗಿಲನ್ನೂ ತಟ್ಟಿದ್ದರು. ಆದರೆ ಹೈಕಮಾಂಡ್ ಸಿಎಂ ಯಡಿಯೂರಪ್ಪ ಅವರ ಅಹವಾಲು ಸ್ವೀಕರಿಸಿ ಏನೂ ಹೇಳದೆ ಕಳುಹಿಸಿದೆ. ಇದು ಯಡಿಯೂರಪ್ಪ ಅವರಿಗೆ ಆಗಿರುವ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರವನ್ನು ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ ಸಲ್ಲಿಕೆಯಾಗಿದೆ. ಇಷ್ಟೇ ಅಲ್ಲ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಸಾವಿರಾರು ಕೋಟಿ ರೂ.ಗಳ ಭ್ರಷ್ಟಾಚಾರ ಮಾಡಿದ್ದಾರೆಂದು ಆರೋಪಿಸಲಾಗಿದೆ. ಸಿಎಂ ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ದೂರಿನ ಪ್ರತಿ 'ಒನ್ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿದೆ.
ಯಡಿಯೂರಪ್ಪ ಸರ್ಕಾರ ವಜಾ ಮಾಡಿ
ರಾಜ್ಯ ಸರ್ಕಾರದ ಭಷ್ಟಾಚಾರ, ಆಡಳಿತ ಕುಸಿತ ಹಾಗೂ ಸಿಎಂ ಯಡಿಯೂರಪ್ಪ ಅವರ ಆರೋಗ್ಯ ಸರಿಯಿಲ್ಲದ ಕಾರಣ ಅವರ ಕುಟುಂಬಸ್ಥರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಲಾಭ ಮಾಡಿಕೊಳ್ಳುತ್ತಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ಸಂಪುಟ ವಿಸ್ತರಣೆ: ಹಲವು ಗುಸುಗುಸು ಸುದ್ದಿಗೆ ಕಾರಣರಾದ ಪ್ರಲ್ಹಾದ್ ಜೋಶಿ, ಜಾರಕಿಹೊಳಿ
ಎಲ್ಲ ಕಾರಣಗಳಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಕೊಡಬೇಕು ಹಾಗೂ ಸಂವಿಧಾನದ ವಿಧಿ 356ರ ಅಡಿಯಲ್ಲಿ ರಾಜ್ಯಪಾಲರು ತಮ್ಮ ಅಧಿಕಾರ ಬಳಸಿ ಯಡಿಯೂರಪ್ಪ ಅವರ ಸರ್ಕಾರವನ್ನು ವಜಾಗೊಳಿಸಬೇಕೆಂದು ಲಿಖಿತ ಮನವಿ ಸಲ್ಲಿಸಿದ್ದಾರೆ.
ಕುಟುಂಬದವರು ಹಣ ಮಾಡಿಕೊಳ್ಳುತ್ತಿದ್ದಾರೆ
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಅವರ ಕುಟುಂಬಸ್ಥರು ಅದರಲ್ಲೂ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ರವಿಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಶಿವಾನಂದ ವೃತ್ತದಲ್ಲಿ ಆದರ್ಶ ಅಪಾರ್ಟ್ಮೆಂಟ್ನಲ್ಲಿ ಮನೆಯನ್ನು ಹೊಂದಿರುವ ವಿಜಯೇಂದ್ರ ಅವರು ಅಲ್ಲಿಂದಲೇ ವಿಧಾನಸೌಧದ ಕಾರ್ಯಗಳನ್ನು ಅನಧೀಕೃತವಾಗಿ ನಿರ್ವಹಿಸುತ್ತಿದ್ದಾರೆ. ಈ ವಿಚಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ತಿಳಿದಿದೆ. ಆಡಳಿತ ಯಂತ್ರ ದುರುಪಯೋಗ ಪಡಿಸಿಕೊಂಡು ವಿಜಯೇಂದ್ರ ಅವರು ಸುಮಾರು 15 ಸಾವಿರ ಕೋಟಿ ರೂಪಾಯಿ ಹಣ ಮಾಡಿಕೊಂಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳು
ವಿಜಯೇಂದ್ರ ಅವರು ಸೂಪರ್ ಸಿಎಂ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದರು. ಅದೇ ಆರೋಪವನ್ನು ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ತಮ್ಮ ಮನವಿಯಲ್ಲಿ ಮಾಡಿದ್ದಾರೆ. ರಾಜ್ಯದಲ್ಲಿ ಇಬ್ಬರು ಸಿಎಂಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸಿಎಂ ಕಚೇರಿ ನಿರ್ವಹಿಸಬೇಕಾದ ಕಡತಗಳನ್ನು ವಿಜಯೇಂದ್ರ ಅವರೇ ನಿರ್ವಹಿಸುತ್ತಿದ್ದಾರೆ.
ಅಭಿವೃದ್ಧಿ ಕಾರ್ಯಗಳ ಟೆಂಡರ್ಗಳನ್ನು ಅವರೇ ನಿರ್ವಹಿಸುತ್ತಿದ್ದಾರೆ. ಸ್ವತಃ ವಿಜಯೇಂದ್ರ ಅವುರು ಟೆಂಡರ್ಗಳಿಗೆ ಸಹಿ ಮಾಡುತ್ತಿದ್ದಾರೆ. ಜೊತೆಗೆ ಯಡಿಯೂರಪ್ಪ ಅವರ ಉಳಿದ ಮಕ್ಕಳು, ಮೊಮ್ಮಕ್ಕಳೂ ಕೂಡ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ.
ಯಡಿಯೂರಪ್ಪ ಆರೋಗ್ಯ ಕ್ಷೀಣಿಸುತ್ತಿದೆ
ಸಿಎಂ ಯಡಿಯೂರಪ್ಪ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇತ್ತೀವೆಗಂತೂ ಅವರಿಗೆ ಹೆಚ್ಚುಹೊತ್ತು ನಿಂತುಕೊಂಡು ಮಾತನಾಡಲೂ ಅವರಿಗೆ ಆಗುತ್ತಿಲ್ಲ. ಅನಾರೋಗ್ಯಕ್ಕೆ ಈಡಾಗಿರುವ ಸಿಎಂ ಯಡಿಯೂರಪ್ಪ ಅವರಿಗೆ ಆಡಳಿತ ನಡೆಸುವುದು ಕಷ್ಟವಾಗುತ್ತಿದೆ. ಇದೇ ಪರಿಸ್ಥಿತಿಯನ್ನು ಉಪಯೋಗಿಸಿಕೊಮಡು ಅವರ ಪುತ್ರ ವಿಜಯೇಂದ್ರ ಅವರು ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮನವಿಯಲ್ಲಿ ರವಿಕುಮಾರ್ ಅವರು ಆರೋಪಿಸಿದ್ದಾರೆ.
ಆಡಳಿತ ಯಂತ್ರ ಕುಸಿದಿರುವುದರಿಂದ ಸರ್ಕಾರದಲ್ಲಿನ ಇತರ ಸಚಿವರು, ಅವರ ಕುಟುಂಬಸ್ಥರು ಹಾಗೂ ಇತರೆ ಮುಖಂಡರೂ ಕೂಡ ಅಕ್ರಮವಾಗಿ ಹಣ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು ಗಲಭೆ ಪ್ರಕರಣದಲ್ಲಿ ಶಾಸಕರೊಬ್ಬರ ಮನೆಗೆ ಬೆಂಕಿ ಹಚ್ಚಿರುವುದು ಆಡಳಿತ ಕುಸಿತವನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಹೀಗಾಗಿ ಸಂವಿಧಾನದಲ್ಲಿ ಇರುವ ಅಧಿಕಾರ ಬಳಸಿಕೊಂಡು ರಾಜ್ಯ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ರವಿಕುಮಾರ್ ಕಂಚನಹಳ್ಳಿ ಅವರು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಹಿಂದೆ ಪ್ರಾಸಿಕ್ಯೂಶನ್ಗೆ ಅನುಮತಿ
2010ರ ಡಿ.31ರಂದು ವಕೀಲರಾದ ಸಿರಾಜಿನ್ ಭಾಷಾ ಮತ್ತು ಕೆ.ಎನ್. ಬಾಲರಾಜ್ ಅವರು ಆಗ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮ ಹಣ ಪಡೆದು ಭೂಮಿಯನ್ನು ಡಿನೋಟಿಫೈ ಮಾಡಿ ಅವ್ಯವಹಾರ ಎಸಗಿದ್ದಾರೆ. ಹಾಗಾಗಿ ಅವರನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಸೆಕ್ಷನ್ 19,ಸಬ್ ಸೆಕ್ಷನ್(1), ಸೆಕ್ಷನ್ 13(1)(ಡಿ), 13(1)(ಇ) ಹಾಗೂ ಅಪರಾಧ ದಂಡ ಸಂಹಿತೆ 1973ರ ಸೆಕ್ಷನ್ 197 ಅಡಿ ವಿಚಾರಣೆಗೊಳಪಡಿಸಲು ಅನುಮತಿ ನೀಡುವಂತೆ, ಆಗಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಮನವಿ ಸಲ್ಲಿಸಿದ್ದರು.
ಆ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕಡತವನ್ನು ತರಿಸಿಕೊಂಡಿದ್ದ ರಾಜ್ಯಪಾಲರು, ಸಚಿವ ಸಂಪುಟ ಮುಖ್ಯಮಂತ್ರಿಗಳ ವಿಚಾರಣೆಗೆ ಅನುಮತಿ ನೀಡಬಾರದು ಎಂದು ನಿರ್ಣಯ ಕೈಗೊಂಡಿದ್ದರೂ ಅದನ್ನೂ ಲೆಕ್ಕಿಸದೆ 2011ರ ಜ.21ರಂದು ಬಿಎಸ್ವೈ ವಿಚಾರಣೆಗೆ ಅನುಮತಿ ನೀಡಿದ್ದರು. ಮುಂದೆ ಸಿಎಂ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಜನಾದೇಶ ಪಡೆದು ಮುಖ್ಯಮಂತ್ರಿಯಾಗಿರುವುದು ಈಗ ಇತಿಹಾಸ.
Recommended Video
ಈಗ ಯಾವುದೇ ದಾಖಲೆ ಸಲ್ಲಿಸಿಲ್ಲ
ಕಳೆದ 2011ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಪೂರಕ ದಾಖಲೆಗಳನ್ನು ವಕೀಲರಾದ ಸಿರಾಜಿನ್ ಭಾಷಾ ಮತ್ತು ಕೆ.ಎನ್. ಬಾಲರಾಜ್ ಅವರು ಸಲ್ಲಿಸಿದ್ದರು. ಆದರೆ ಇದೀಗ ಯಡಿಯೂರಪ್ಪ ಅವರು ವಿರುದ್ಧ ಮನವಿ ಸಲ್ಲಿಸಿರುವ ರವಿಕುಮಾರ್ ಕಂಚನಹಳ್ಳಿ ಅವರು ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎನ್ನಲಾಗಿದೆ. ಹೀಗಾಗಿ ಇದೊಂದು ಕೇವಲ ಆರೋಪವಾಗಿದ್ದು, ರಾಜ್ಯಪಾಲರಾದ ವಜೂಭಾಯಿ ವಾಲಾ ಅವರು ಏನು ಕ್ರಮಕ್ಕೆ ಮುಂದಾಗುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.