ಆಪರೇಷನ್ ಕಮಲ ಕುರಿತು ಶ್ರೀನಿವಾಸ ಗೌಡ ಹೇಳಿಕೆ : ಎಸಿಬಿಗೆ ಪ್ರಶ್ನೆಗಳು
ಬೆಂಗಳೂರು, ಮಾರ್ಚ್ 22 : 'ಶಾಸಕ ಸ್ಥಾನಕ್ಕೆ ನನ್ನಿಂದ ರಾಜೀನಾಮೆ ಕೊಡಿಸಲು ಬಿಜೆಪಿ ಶಾಸಕರಾದ ಅಶ್ವತ್ಥ ನಾರಾಯಣ, ಎಸ್.ಆರ್.ವಿಶ್ವನಾಥ, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ ಅವರು 5 ಕೋಟಿ ರೂ. ಮುಂಗಡ ನೀಡಿದ್ದರು' ಕೋಲಾರ ಶಾಸಕ ಶ್ರೀನಿವಾಸ ಗೌಡ ಅವರ ಈ ಹೇಳಿಕೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
ಈ ಹೇಳಿಕೆ ಆಧರಿಸಿ ಸಾಮಾಜಿ ಕಾರ್ಯಕರ್ತ ಹನುಮೇಗೌಡ, ಪ್ರಶಾಂತ್, ಭ್ರಷ್ಟಾಚಾರ ಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಕುರಿತು ಎಸಿಬಿ ತನಿಖೆ ನಡೆಯುತ್ತಿದೆ.
ಬಿಜೆಪಿ 30 ಕೋಟಿ ರೂ. ಆಮಿಷವೊಡ್ಡಿದ್ದ ಆರೋಪ ಸುಳ್ಳೆಂದು ಒಪ್ಪಿಕೊಂಡ ಜೆಡಿಎಸ್ ಶಾಸಕ
ಎಸಿಬಿ ವಿಚಾರಣೆಗೆ ಹಾಜರಾದ ಶ್ರೀನಿವಾಸ ಗೌಡ ಅವರು, 'ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಬಿಜೆಪಿ ನಾಯಕರು ನನಗೆ 5 ಕೋಟಿ ಮುಂಗಡ ನೀಡಿರಲಿಲ್ಲ. ಆಪರೇಷನ್ ಕಮಲ ಪ್ರಯತ್ನವನ್ನು ವಿಫಲಗೊಳಿಸಲು ಸುಳ್ಳು ಹೇಳಿದೆ' ಎಂದು ಉಲ್ಟಾ ಹೊಡೆದಿದ್ದಾರೆ.
ಯಡಿಯೂರಪ್ಪಗೆ ಸಂಕಷ್ಟ: ಆಪರೇಷನ್ ಕಮಲ ವಿರುದ್ಧ ಎಸಿಬಿಗೆ ದೂರು
ಈ ಕುರಿತು ಪ್ರತಿಕ್ರಿಯೆ ನೀಡಿರುವ ರವಿಕೃಷ್ಣ ರೆಡ್ಡಿ ಅವರು, ಲಂಚದ ಪ್ರಕರಣ ಎಸಿಬಿ ವಿಚಾರಣೆಯಲ್ಲಿ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ ಎಂದು ಆರೋಪಿಸಿದ್ದಾರೆ ಮತ್ತು ಎಸಿಬಿಯ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಎಸಿಬಿಗೆ ಪ್ರಶ್ನೆಗಳು
* ಸಾಂದರ್ಭಿಕ ಸಾಕ್ಷಗಳನ್ನು ಗಮನಿಸಿದಾಗ ಶಾಸಕ ಗೌಡರು ಒಂದೂವರೆ ತಿಂಗಳ ಹಿಂದೆ ಮಾಡಿದ ನೇರ ಆಪಾದನೆಗೆ ಇಲ್ಲಿಯವರೆಗೂ ಬಿಜೆಪಿಯ ಮೂವರೂ ನಾಯಕರು (ಶಾಸಕರಾದ ಅಶ್ವತ್ಥ ನಾರಾಯಣ, ಎಸ್.ಆರ್.ವಿಶ್ವನಾಥ್ ಮತ್ತು ಮಾಜಿ ಶಾಸಕ ಸಿ.ಪಿ.ಯೋಗೇಶ್ವರ ಪ್ರತಿಕ್ರಿಯಿಸಿಲ್ಲ. ಆರೋಪವನ್ನು ನಿರಾಕರಿಸಿಲ್ಲ.
* ಇಷ್ಟೇ ಸಾಕು ಅವರಿಗೂ ಈ ಪ್ರಕರಣ ಎಲ್ಲಿಗೆ ಬೇಕಾದರೂ ಹೋಗಬಹುದು ಎಂಬ ಭಯ ಹುಟ್ಟಿದೆ ಎಂದು ಭಾವಿಸಲು. ಹಾಗಾಗಿ ಅವರನ್ನು ಇಲ್ಲಿಯವರೆಗೂ ಪ್ರತ್ಯೇಕವಾಗಿ ಯಾಕೆ ನೀವು ವಿಚಾರಣೆಗೆ ಕರೆದಿಲ್ಲ?
* ಶಾಸಕ ಶ್ರೀನಿವಾಸಗೌಡ ಮತ್ತು ಇತರ ಮೂವರು ಬಿಜೆಪಿ ನಾಯಕರ ಮಧ್ಯೆ ನಡೆದಿರಬಹುದಾದ ಫೋನ್ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೀರಾ?
ಮಾಹಿತಿ ಲಭ್ಯವಾಗಿದೆಯೇ?
* ಈ ಸದರಿ ಮೂವರು ಬಿಜೆಪಿ ನಾಯಕರುಗಳು ಮತ್ತು ಶಾಸಕ ಶ್ರೀನಿವಾಸ ಗೌಡರ ಫೋನ್ ಕರೆಗಳ ಮಾಹಿತಿಯನ್ನು ಸಂಗ್ರಹಿಸಿ, ಅದನ್ನು ಪರಿಶೀಲಿಸಿದಾಗ ನಿಮಗೆ ನಾಲ್ಕು ಜನ ಒಂದೇ ಕಡೆ ಏಕಕಾಲದಲ್ಲಿ ಇರುವ ಮಾಹಿತಿ ಲಭ್ಯವಾಗಿದೆಯೇ, ಇಲ್ಲವೇ?
* ಶಾಸಕ ಶ್ರೀನಿವಾಸ ಗೌಡರ ಮನೆಯ ಸುತ್ತಮುತ್ತ ಇರಬಹುದಾದ ಸಿಸಿಟಿವಿ ಸಾಕ್ಷ್ಯಗಳನ್ನು ಸಂಗ್ರಹಿಸಿ ಪರಿಶೀಲಿಸಿದ್ದೀರಾ?
ಮಂಪರು ಪರೀಕ್ಷೆ
* ಈ ಪ್ರಕರಣದಲ್ಲಿ ಶ್ರೀನಿವಾಸ ಗೌಡರನ್ನು ಮಂಪರು/ ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲು ಯಾವ ಕ್ರಮ ಕೈಗೊಂಡಿದ್ದೀರಿ?
* ಹಣ ನೀಡಿದ್ದರು ಎನ್ನಲಾದ ಬಿಜೆಪಿ ನಾಯಕರುಗಳ ಈ ಅವಧಿಯ ಬ್ಯಾಂಕ್ ಖಾತೆ ಮತ್ತು/ಅಥವಾ ಇತರೆ ಹಣಕಾಸು ವಹಿವಾಟು ವಿವರಗಳನ್ನು ಪರಿಶೀಲಿಸಿದ್ದೀರಾ?
ತನಿಖೆಯನ್ನು ಮಾಡಿ
ಇಂತಹ ಗಂಭೀರ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮಾಡಬೇಕಾದ ಪ್ರಾಥಮಿಕ ತನಿಖಾ ಕೆಲಸಗಳು. ಹಾಗಾಗಿ ತಾವುಗಳು ಇಲ್ಲಿಯವರೆಗೂ ಇದನ್ನು ಮಾಡದೇ ಇದ್ದಲ್ಲಿ ದಯವಿಟ್ಟು ಈ ನಿಟ್ಟಿನಲ್ಲಿ ತನಿಖೆ ಮಾಡಿ ಎಂದು ಕೋರುತ್ತೇನೆ. ಆ ಮೂಲಕ, ಭ್ರಷ್ಟಾಚಾರ ನಿಗ್ರಹ ದಳವು ಒಂದು ಸ್ವತಂತ್ರ ತನಿಖಾ ಸಂಸ್ಥೆ ಮತ್ತು ಯಾವುದೇ ಪಟ್ಟಭದ್ರರ ಪ್ರಭಾವಕ್ಕೆ ಮಣಿಯುವುದಿಲ್ಲ ಎಂಬುದನ್ನು ನಿರೂಪಿಸಿ.