ರವಿ ಬೆಳಗೆರೆ ಬರಹ ಎಷ್ಟು ಪವರ್ಫುಲ್ ಎಂದರೆ ಪಾಖಂಡಿಗಳನ್ನೂ ಹೀರೋ ಆಗಿಸುವಷ್ಟು
ಬಳ್ಳಾರಿಯಲ್ಲಿ ಹುಟ್ಟಿದ ಹುಡುಗ ಕರ್ನಾಟಕದ ಮನೆ ಮಾತಾಗುವುದಕ್ಕೆ ಮುಂಚೆ ಬಳ್ಳಾರಿಯಲ್ಲಿ ಹಿಸ್ಟ್ರಿ ಮೇಷ್ಟ್ರಾಗಿ ಕೆಲಸ ಮಾಡುತ್ತಿರುತ್ತಾರೆ. 1984ರಲ್ಲಿ ಬೆಂಗಳೂರಿಗೆ ಬಂದಾಗ ಇಲ್ಲಿ ಅವರನ್ನ ಅಪ್ಪಿ ಆಶ್ರಯ ನೀಡುವರಾರೂ ಇರಲಿಲ್ಲ. ಹೀಗಾಗಿ ಬಳ್ಳಾರಿ ದಿನಗಳಲ್ಲಿ ರೂಮ್ ಬಾಯ್ , ರೆಸೆಪ್ಟಿವ್ನಿಸ್ಟ್ , ಪೇಪರ್ ಬಾಯ್ , ಮಿಲ್ಕ್ ಸೆಲ್ಲರ್ , ಮೆಡಿಕಲ್ ರೆಪ್ , ಗೇಟ್ ಕೀಪರ್ ಹೀಗೆ ಹತ್ತಾರು ಕಡಿಮೆ ಹಣವನ್ನ ನೀಡುವ ಕೆಲಸವನ್ನ ಮಾಡುತ್ತಾರೆ.
ನಿಧಾನವಾಗಿ ಪ್ರಿಂಟಿಂಗ್ ಪ್ರೆಸ್ ತೆಗೆಯುತ್ತಾರೆ. ಬರವಣಿಗೆ ಕೈ ಹಿಡಿಯುತ್ತೆ .ಹಾಯ್ ಬೆಂಗಳೂರು ಎನ್ನುವ ಪತ್ರಿಕೆಯನ್ನ ಕೂಡ ತೆರೆಯುತ್ತಾರೆ. ಅದು ಹಲವಾರು ವರ್ಷ ಅತಿ ಹೆಚ್ಚು ಮಾರಾಟವಾದ ಪತ್ರಿಕೆ ಎನ್ನುವ ಹೆಗ್ಗಳಿಕೆ ಕೂಡ ಗಳಿಸಿಕೊಳ್ಳುತ್ತದೆ ಟಿವಿ , ಸಿನಿಮಾ ಕ್ಷೇತ್ರಗಳಲ್ಲೂ ಕೈ ಆಡಿಸಿ ಸೈ ಎನ್ನಿಸಿಕೊಳ್ಳುತ್ತಾರೆ.
ಪತ್ರಕರ್ತ- ಸಾಹಿತಿ ರವಿ ಬೆಳಗೆರೆ ನಿಧನ- 1958ರಿಂದ 2020ರ ಹಾದಿ
ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ಪ್ರಾರ್ಥನ ಎನ್ನುವ ಶಾಲೆ ತೆರೆಯುತ್ತಾರೆ , ಅದು ಕೂಡ ಪ್ರಸಿದ್ಧವಾಗಿದೆ. ಇಂತಹ ರವಿ ಇವತ್ತು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 62 ಖಂಡಿತ ಸಾಯುವ ವಯಸ್ಸಲ್ಲ . ಹುಟ್ಟು ಸಾವು ಎರಡೂ ನಮ್ಮ ಕೈಯಲಿಲ್ಲ. ಮಧ್ಯದಲ್ಲಿನ ಒಂದಷ್ಟು ದಿನ ಹೇಗೆ ಬದುಕಬೇಕು , ಯಾವುದು ಸರಿ , ಯಾವುದು ತಪ್ಪು ಎನ್ನುವ ಸಣ್ಣ ವಿವೇಚನೆಯಷ್ಟೇ ನಮ್ಮ ಕೈಲಿರುವುದು.
ಹೀಗಾಗಿ ನೆನಪಿಡಿ ನಾವು ಮಾಡುವ ತಪ್ಪುಗಳನ್ನ ದೇವರು, ಜನ, ಎಲ್ಲರೂ ಕ್ಷಮಿಸಿ ಬಿಡಬಹದು. ಆದರೆ, ನಮ್ಮ ನರಮಂಡಳವಿದೆಯಲ್ಲ ಅದು ಮಾತ್ರ ಎಂದೂ ಕ್ಷಮಿಸುವುದಿಲ್ಲ. ಇರಲಿ ಅದು ನನ್ನ ಹೈಸ್ಕೂಲ್ ದಿನಗಳು , ಪ್ರಥಮ ಬಾರಿಗೆ ರವಿ ಬೆಳೆಗೆರೆಯವರ ಪುಸ್ತಕ 'ಪಾಪಿಗಳ ಲೋಕದಲ್ಲಿ' ಸಿಕ್ಕಿತ್ತು. ಓದಿದೆ.
ಆ ಪುಸ್ತಕ ಓದಿ ಅವರ ಬರಹದ ಶೈಲಿಯ ಅಭಿಮಾನಿ ಆಗಿದ್ದೆ. ರವಿಯಂತವರ ಬರಹ ಎಷ್ಟು ಪವರ್ಫುಲ್ ಎಂದರೆ ಆ ಪಾಖಂಡಿಗಳನ್ನ ಕೂಡ ಹೀರೋ ಆಗಿಸುವಷ್ಟು. ಅದು ಅವರ ಬರಹದ ತಾಕತ್ತು. ಓದಿದ ನಂತರ ಬೇರೆ ಆಯಾಮದಲ್ಲಿ ಚಿಂತಿಸದೆ' ಸರಿ ತಪ್ಪುಗಳ ಹುಡುಕಲು ಹೋಗದ ಓದುಗರು ಹೌದೌದು ಎಂದು ತಲೆ ಆಡಿಸುವಷ್ಟು ಪ್ರಬಲ. ಇಂತಹ ವಿಶೇಷ ಬರಹದ ಶಕ್ತಿಯ ಬಳೆಕೆ ಬದುಕನ್ನ ಭದ್ರವಾಗಿ ಕಟ್ಟಿಕೊಳ್ಳುವುದಕ್ಕೆ ಬಳಸಿದರು.
ಇವತ್ತು ಕೂಡ ನಮ್ಮ ಕನ್ನಡ ಪತ್ರಿಕಾವಲಯದಲ್ಲಿ ಒಂದಷ್ಟು ಜನ ಅಳತೆಗೆ ಮೀರಿದ ಹಣದ ಒಡೆಯರಾಗಿದ್ದಾರೆ. ಅಕ್ಷರದ ಬಳಕೆ ಅಡ್ಡಾದಿಡ್ಡಿಯಾದಾಗ ಅದು ಸಂಪತ್ತನ್ನ ಕೂಡ ಸೃಷ್ಟಿಸಬಲ್ಲದು. ಸತ್ತ ನಂತರ ನಮ್ಮ ಸಮಾಜಕ್ಕೆ ಎಲ್ಲರೂ ಸಂತರು. ವ್ಯಕ್ತಿಯೇ ಇಲ್ಲದ ಮೇಲೆ ಅವರ ಬಗ್ಗೆ ಕೆಟ್ಟ ಮಾತನಾಡಬಾರದು ಎನ್ನುತ್ತಾರೆ.
ಅಕ್ಷರ ಗಾರುಡಿಗ, ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನ
ಹೌದು , ನನಗೂ ರವಿಯವರ ಬಗ್ಗೆ ಯಾವುದೇ ಕೆಟ್ಟ ಅಭಿಪ್ರಾಯವಿಲ್ಲ. ಸಮಾಜಕ್ಕೆ ಆದರ್ಶವಾಗಿ ನಿಲ್ಲಬಹುದಾದ ಒಂದು ಸುಂದರ ಅವಕಾಶವನ್ನ ಕಳೆದುಕೊಂಡರಲ್ಲ ಎನ್ನುವ ನೋವಿದೆ ಅಷ್ಟೇ. ಒಂದು ಕಾಲದಲ್ಲಿ ಅವರ ಬರಹದ ಅಭಿಮಾನಿಯಾಗಿದ್ದೆ. ಈ ವ್ಯಕ್ತಿಯ ಬದುಕು -ಬವಣೆ- ಸಾಧನೆ ಇಗ್ನೋರ್ ಮಾಡುವಂತಹದು ಅಲ್ಲವೇ ಅಲ್ಲ. ಹೀಗಾಗಿ ವ್ಯಕ್ತಿ ವಿಶೇಷದಲ್ಲಿ ಇಂದು ಅವರೇ ಇದ್ದಾರೆ.
Recommended Video
ನಿನ್ನೆ ಬೇರೊಬ್ಬ ವಿಶೇಷ ವ್ಯಕ್ತಿಯ ಬಗ್ಗೆ ತಯಾರಿ ಮಾಡಿಕೊಂಡಿದ್ದೆ . ಆದರೇನು ಬದುಕು ಅಂದರೆ ಇಷ್ಟೇ ಅಲ್ವಾ ? ಯಾವಾಗ ಬೇಕಾದರೂ ಬದಲಾಗುತ್ತೆ. 'ಇದ್ದಾರೆ' ಎನ್ನುವುದು ಕ್ಷಣ ಮಾತ್ರದಲ್ಲಿ 'ಇದ್ದ ' ಅಥವಾ 'ಇದ್ದರು' ಎಂದು ಬದಲಾಗಿ ಹೋಗುತ್ತದೆ.
ಇದ್ದಾಗ ನಾವು ಸಾಧಿಸುವ ಹಗೆ , ಕೋಪತಾಪಗಳು ಅವಶ್ಯಕವೇ? ಎನ್ನುವ ಪ್ರಶ್ನೆ ಪ್ರತಿಯೊಂದು ಸಾವು ಕೂಡ ನನ್ನಲ್ಲಿ ಹುಟ್ಟುಹಾಕುತ್ತದೆ. ರವಿಯವರ ಸಾವು ಕೂಡ ಅದೇ ಪ್ರಶ್ನೆಯನ್ನ ಪುರಾವರ್ತಿಸಿದೆ. ರವಿಯರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. ಓಂ ಶಾಂತಿ.