ಬೆಂಗಳೂರಿನಿಂದ ಪರಾರಿಯಾಗಿದ್ದ ದಾವೂದ್ ಗ್ಯಾಂಗಿನ ರಶೀದ್ ಮಲಬಾರಿ ಬಂಧನ
ನವದೆಹಲಿ, ಜುಲೈ 2: ಭೂಗತ ಲೋಕವನ್ನೇ ಬೆಚ್ಚಿ ಬೀಳಿಸುವ ಸುದ್ದಿಯೊಂದು ಈಗ ಹೊರಬಿದ್ದಿದೆ. ಡಿ ಕಂಪೆನಿಯ ಕುಖ್ಯಾತ ಶಾರ್ಪ್ ಶೂಟರ್ ರಶೀದ್ ಮಲಬಾರಿ ಅಲಿಯಾಸ್ ಅಬ್ದುಲ್ ರಶೀದ್ ಹುಸೇನ್ ಅಬುಧಾಬಿಯಲ್ಲಿ ಬಂಧನವಾಗಿದ್ದಾನೆ.
2014ರಲ್ಲಿ ಬೆಂಗಳೂರಿನಿಂದ ತಪ್ಪಿಸಿಕೊಂಡಿದ್ದ ರಶೀದ್ ಮಲಬಾರಿಯನ್ನು ಸತತ ನಾಲ್ಕು ವರ್ಷಗಳ ನಿರಂತರ ಪ್ರಯತ್ನದ ನಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಖ್ಯಾತ ಶಾರ್ಪ್ ಶೂಟರ್ ರಶೀದ್ ಮಲಬಾರಿ ಅಬುದಾಬಿಯಲ್ಲಿ ಬಂಧನ?
ಅತ್ಯಂತ ಅಪಾಯಕಾರಿ ಡಿ ಕಂಪೆನಿಯ ಪಂಟರ್ ಅಂತಾನೆ ಗುರುತಿಸಿಕೊಂಡಿರುವ ರಶೀದ್ ಮಲಬಾರಿ ಈ ಹಿಂದೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಸಂಸದ ವರುಣ್ ಗಾಂಧಿ ಹತ್ಯೆಗೆ ಸ್ಕೆಚ್ ರೂಪಿಸಿದ್ದ.
ಇದೇ ಕಾರಣಕ್ಕೆ ಮುಂಬಯಿ ಅಂಡರ್ ವರ್ಲ್ಡ್ ಕಂಡ ಕುಖ್ಯಾತ ಶಾರ್ಪ್ ಶೂಟರ್ ಕರ್ನಾಟಕದಲ್ಲಿ 2009ರಲ್ಲಿ ಬಂಧಿತನಾಗಿದ್ದ. ಹಲವಾರು ಶೂಟೌಟ್, ಕೊಲೆ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರಶೀದ್ ಮಲಬಾರಿ ಹೆಂಡತಿಯನ್ನು ನೋಡಬೇಕು ಎಂದು 2014, ಜುಲೈ 21 ರಂದು ಮಂಗಳೂರು ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದಿದ್ದ.
ಮೊದಲಿಗೆ ಮಂಗಳೂರು, ನಂತರ ಭದ್ರತಾ ಕಾರಣಗಳಿಗಾಗಿ ಬಳ್ಳಾರಿ ಮತ್ತು ಬೆಂಗಳೂರು ಜೈಲುಗಳಿಗೆ ಆತನ ನೆಲೆ ಬದಲಿಸಲಾಗಿತ್ತು. ಬೇಲ್ ಸಿಕ್ಕಿದ್ದೇ ತಡ ಬೆಂಗಳೂರು ಜೈಲಿನಲ್ಲಿದ್ದವ ಕಾರಾಗೃಹದಿಂದ ಮರುದಿನವೇ ಹೊರ ಬಿದ್ದಿದ್ದ.
ಹಾಗೆ ಹೊರ ಬಿದ್ದವ ಮತ್ತೆಂದೂ ಪೊಲೀಸರ ಕೈಗೂ ಸಿಕ್ಕಿರಲಿಲ್ಲ. ನ್ಯಾಯಾಲಯಕ್ಕೂ ಹಾಜರಾಗಿರಲಿಲ್ಲ. ಅಂದಿನಿಂದ ಆರಂಭವಾಗಿ ಕಳೆದ 4 ವರ್ಷಗಳಿಂದ ಮಲಬಾರಿಗಾಗಿ ರಾಜ್ಯ ಪೊಲೀಸರು ಹುಡುಕಾಡುತ್ತಿದ್ದರು.
ಮಾಹಿತಿಗಳ ಪ್ರಕಾರ ರಶೀದ್ ಬೆಂಗಳೂರಿನಿಂದ ಪಶ್ಚಿಮ ಬಂಗಾಳ ತಲುಪಿದ್ದ. ಅಲ್ಲಿಂದ ರಸ್ತೆ ಮಾರ್ಗವಾಗಿ ಬಾಂಗ್ಲಾದೇಶ ತಲುಪಿದ್ದ. ಅಲ್ಲಿಂದ ಛೋಟಾ ಶಕೀಲ್ ಸಹಾಯದಿಂದ ದುಬೈಗೆ ಪರಾರಿಯಾಗಿದ್ದ ಬಗ್ಗೆ ಮಾಹಿತಿ ಇತ್ತು. ಇದೀಗ ಆತನ ಬಂಧನದೊಂದಿಗೆ ರಾಜ್ಯದ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಆತನ ಬಳಿಯಲ್ಲಿ ಬಾಂಗ್ಲಾದೇಶದ ಪಾಸ್ಪೋರ್ಟ್ ಇತ್ತು. ನಾವು ಬಂಧಿಸಿದ ವ್ಯಕ್ತಿ ರಶೀದ್ ಮಲಬಾರಿ ಎಂದು ಕರ್ನಾಟಕದಲ್ಲಿರುವ ಆತನ ಸಹೋದರ ಪತ್ತೆ ಹಚ್ಚಿದ್ದಾನೆ ಎಂದು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಹೇಳಿದ್ದಾರೆ.
ಯಾರು ಈ ಮಲಬಾರಿ?
ಕೇರಳ ಮೂಲದ ಮಲಬಾರಿಯನ್ನು ಶೂಟೌಟ್ ಗಳಿಗೆ ಹಚ್ಚಿದವನು ದಾವೂದ್ ಇಬ್ರಾಹಿಂ ಬಲಗೈ ಬಂಟ ಛೋಟಾ ಶಕೀಲ್. ಹಿಂದೂ ಸಂಘಟನೆ ಪ್ರಮುಖರನ್ನು ಕೊಂದು ಸಮಾಜದಲ್ಲಿ ಗಲಭೆ ಎಬ್ಬಿಸುವ ಉದ್ದೇಶದೊಂದಿಗೆ ಇವನ ಕೈಗೆ ಛೋಟಾ ಬಂದೂಕು ಕೊಟ್ಟು ಪಾಕಿಸ್ತಾನದಿಂದ ಭಾರತಕ್ಕೆ ಕಳುಹಿಸಿದ್ದ.
2009ರ ಚುನಾವಣೆ ಸಮಯದಲ್ಲೇ ತಾನು ಹಿಂದೂ ನಾಯಕರ ಕೊಲೆಗಳಿಗೆ ಯೋಜನೆ ರೂಪಿಸಿದ್ದೆ ಎಂಬುದಾಗಿ ಮಂಗಳೂರು ಪೊಲೀಸರ ವಿಚಾರಣೆ ವೇಳೆ ಮಲಬಾರಿ ಬಾಯಿ ಬಿಟ್ಟಿದ್ದ.
ಗುಪ್ತಚರ ಮೂಲಗಳ ಪ್ರಕಾರ ಈತ ಛೋಟಾ ಶಕೀಲ್ ಗ್ಯಾಂಗ್ ನ ಪ್ರಮುಖ ವ್ಯಕ್ತಿ. ಛೋಟಾ ರಾಜನ್ ಮೇಲೆ ಬ್ಯಾಂಕಾಕ್ ನಲ್ಲಿ ದಾಳಿ ನಡೆದಾಗ ಮೊದಲ ಬಾರಿಗೆ ಈತನ ಹೆಸರು ಕೇಳಿ ಬಂದಿತ್ತು. ಬಳಿಕ ಬ್ಯಾಂಕಾಕ್ ನಲ್ಲೇ ದೀರ್ಘ ಕಾಲ ತಲೆ ಮರೆಸಿಕೊಂಡಿದ್ದ ಮಲಬಾರಿ ನಂತರ ಪಾಕಿಸ್ತಾನಕ್ಕೆ ಓಡಿ ಹೋಗಿದ್ದ. ಅಷ್ಟರಲ್ಲಾಗಲೇ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಮಲಬಾರಿ ವಿರುದ್ಧ ಜಾರಿಯಾಗಿತ್ತು.
ಆರಂಭದಲ್ಲಿ ಪಾಕಿಸ್ತಾನ ಮತ್ತು ದುಬೈನಲ್ಲಿ ತನ್ನ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದ ಮಲಬಾರಿ ನಂತರ ನಿಧಾನಕ್ಕೆ ಭಾರತಕ್ಕೆ ಬಂದ. ಹಾಗೆ ಬಂದವನು ಉತ್ತರ ಪ್ರದೇಶ ಮತ್ತು ಮಂಗಳೂರಿನಲ್ಲಿ ತನ್ನ ಭದ್ರ ನೆಲೆಗಳನ್ನು ಕಟ್ಟಿಕೊಂಡ.
ಈತನ ಕುಟುಂಬವೂ ಭೂಗತ ಲೋಕದಲ್ಲಿ ತೊಡಗಿಸಿಕೊಂಡಿದೆ. ಈತನ ತಮ್ಮ ಇಸ್ಮಾಯಿಲ್ ಕೂಡ ಡಿ ಗ್ಯಾಂಗ್ ನ ಪ್ರಮುಖ ವ್ಯಕ್ತಿಯಾಗದ್ದ. 2000ನೇ ಇಸವಿಯಲ್ಲಿ ನಡೆದ ಎನ್ಕೌಂಟರ್ ಒಂದರಲ್ಲಿ ಈತನ ಕತೆ ಮುಗಿಸಿದ್ದರು ಮುಂಬೈ ಪೊಲೀಸರು.
ಇವತ್ತಿಗೂ ರಶೀದ್ ಮಲಬಾರಿ ಮೇಲೆ ಮಂಗಳೂರಿನಲ್ಲಿ 9 ಮತ್ತು ಬೆಂಗಳೂರಿನಲ್ಲಿ 1 ಕ್ರಿಮಿನಲ್ ಪ್ರಕರಣ ಇದೆ. ಮುಂಬೈನಲ್ಲೂ ಈತವ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆ. ಈತ ಎಷ್ಟರ ಮಟ್ಟಿಗೆ ಕ್ರಿಮಿನಲ್ ಆಗಿದ್ದ ಎಂದರೆ ಜೈಲಿನಿಂದ ಹೊರ ಬಂದ ಮೇಲೆಯೂ ಕರ್ನಾಟಕದಲ್ಲಿ ಮೂರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ.
ಇದೀಗ ಮಲಬಾರಿ ಬಂಧನವಾಗಿರುವುದರಿಂದ ಈತನನ್ನು ತಮ್ಮ ವಶಕ್ಕೆ ಪಡೆಯಲು ಕರ್ನಾಟಕ ಪೊಲೀಸರು ಪ್ರಯತ್ನ ನಡೆಸುವ ಸಾಧ್ಯತೆ ಇದೆ.