ಸಹೋದ್ಯೋಗಿ ಪತ್ನಿ ಅತ್ಯಾಚಾರಗೈಯ್ದ 8 ಸಿಐಎಸ್ಎಫ್ ಪೇದೆ ವಜಾ ಕಾಯಂ
ಬೆಂಗಳೂರು, ಜೂ.22. ಸಹೋದ್ಯೋಗಿ ಪೇದೆಯ ಪತ್ನಿಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಎಂಟು ಕಾಮುಕ ಪೇದೆಗಳನ್ನು ಸೇವೆಯಿಂದ ವಜಾಗೊಳಿಸಿದ್ದ ಆದೇಶವನ್ನು ಹೈಕೋರ್ಟ್ ಕಾಯಂಗೊಳಿಸಿದೆ.
ವಿಚಾರಣೆ ನಡೆಸಿದ್ದ ನ್ಯಾಯಪೀಠ ಎಂಟು ಮಂದಿಯನ್ನು ವಜಾಗೊಳಿಸಿ ಶಿಸ್ತುಪಾಲನಾ ಸಮಿತಿಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.
ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಣ ಪ್ರೈವೇಟ್ ಲಿಮಿಟೆಡ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಕಾಸ್ ವರ್ಮಾ ಸೇರಿ ಎಂಟು ಆರೋಪಿ ಪೇದೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ. ಆರೋಪಿಗಳನ್ನು ಸೇವೆಯಿಂದ ವಜಾಗೊಳಿಸಿರುವ ಆದೇಶ ಸೂಕ್ತವಾಗಿದೆ, ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲವೆಂದು ತೀರ್ಪು ನೀಡಿದೆ.
ನ್ಯಾಯಪೀಠ "ಆರೋಪಿಗಳ ವಿರುದ್ಧದ ಆರೋಪ ಸಾಬೀತುಪಡಿಸಲು ಸಾಕಷ್ಟು ದಾಖಲೆಗಳಿವೆ. ಶಿಸ್ತುಪಾಲನೆ ಸಮಿತಿಯು ದಾಖಲೆ ಪರಿಗಣಿಸಿ ಸೇವೆಯಿಂದ ವಜಾ ಮಾಡಿದೆ. ಈ ಘಟನೆ ಅಪರೂಪದಲ್ಲಿ ಅಪರೂಪದ್ದಾಗಿದೆ ಹಾಗೂ ಸಿಐಎಸ್ಎಫ್ ಪಡೆಯ ಶಿಸ್ತು ಮತ್ತು ಸದಾಚಾರಕ್ಕೆ ಹೆಸರಾಗಿದೆ. ಆದ್ದರಿಂದ ಆರೋಪಿಗಳನ್ನು ವಜಾಗೊಳಿಸಿರುವ ಆದೇಶ ಸಮಂಜಸವಾಗಿದೆ'' ಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ:
ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಣ ಪ್ರೈವೇಟ್ ಲಿಮಿಟೆಡ್ನಲ್ಲಿ ಪ್ರಕರಣದ ಎಂಟು ಆರೋಪಿಗಳು ಮತ್ತು ಸಂತ್ರಸ್ತ ಮಹಿಳೆ ಪತಿ ಸಹೋದ್ಯೋಗಿಗಳಾಗಿದ್ದರು, ಅವರೆಲ್ಲಾ ಸರ್ಕಾರಿ ಕ್ವಾಟರ್ಸ್ನಲ್ಲಿ ನೆಲೆಸಿದ್ದರು.
ಸಂತ್ರಸ್ತೆಯ ಪತಿ 2015ರಲ್ಲಿ ಊರಿನಲ್ಲಿ ಇಲ್ಲದಿರುವುದನ್ನು ತಿಳಿದು ವಿಕಾಸ್ ವರ್ಮಾ ದೈಹಿಕ ಸಂಬಂಧ ಹೊಂದಲು ಬಯಸಿದ್ದನು. ಸಂತ್ರಸ್ತೆ ಮನೆಗೆ ಹೋಗಿದ್ದ ಆತ ಲೈಂಗಿಕ ಸಂಪರ್ಕ ಬೆಳೆಸದಿದ್ದರೆ ತಮ್ಮಿಬ್ಬರ ನಡುವಿನ ಮೊಬೈಲ್ ಮಾತುಕತೆ ಪತಿಗೆ ಕಳಿಸುವುದಾಗಿ ಬೆದರಿಕೆ ಹಾಕಿದ್ದ. ನಂತರ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ನಿರಂತರವಾಗಿ ಅತ್ಯಾಚಾರ ಎಸಗುತ್ತಲೇ ಇದ್ದನು.
ಆ ನಂತರ ವಿಕಾಸ್ ವರ್ಮಾ ಇತರೆ ಸಹೋದ್ಯೋಗಿಗಳಾದ ಅಂಕುಶ್ ಪಿನಿಯಾ, ಪಿಂಕು ಕುಮಾರ್, ವಿ.ಕೆ ತಿವಾರಿ, ಚಂದನ್ ಕುಮಾರ್, ರಾಹುಲ್ ದಿವಾಕರ್, ಜಿತೇಂದ್ರ ಸಿಂಗ್ ಸೇರಿದಂತೆ ಎಂಟು ಆರೋಪಿಗಳು ಸಂತ್ರಸ್ತೆಗೆ ಕರೆ ಮಾಡಿ ವಿಕಾಸ್ ವರ್ಮಾ ಜೊತೆಗಿನ ಅಕ್ರಮ ಸಂಬಂಧದ ವಿಚಾರ ನಮಗೆ ತಿಳಿದಿದೆ. ತಮ್ಮೊಂದಿಗೂ ಲೈಂಗಿಕ ಸಂಪರ್ಕ ಬೆಳೆಸದಿದ್ದರೆ ಎಲ್ಲಾ ವಿಚಾರವನ್ನು ಪತಿಗೆ ಹೇಳುವುದಾಗಿ ಬೆದರಿಕೆ ಹಾಕಿದ್ದರು.
ಬಳಿಕ ಒಬ್ಬರಾದ ಮೇಲೆ ಒಬ್ಬರು ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದರು. 2015ರ ಜೂ.16ರಂದು ಸಂತ್ರಸ್ತೆಯ ಪತಿಗೆ ಈ ವಿಚಾರ ತಿಳಿಯಿತು. ಇಡೀ ಘಟನೆ ಕುರಿತು ಜು.6ರಂದು ಸಂತ್ರಸ್ತೆ ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ಶಿಸ್ತುಪಾಲನಾ ಸಮಿತಿಯು ಮತ್ತು ಮೇಲ್ಮನವಿ ಪ್ರಾಧಿಕಾರವು ಎಂಟು ಪೇದೆಗಳನ್ನು ಸೇವೆಯಿಂದ ವಜಾಗೊಳಿಸಿ 2015ರ ಆ.3ರಂದು ಆದೇಶಿಸಿತ್ತು. ಆ ಆದೇಶ ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯಪೀಠ ವಜಾಗೊಳಿಸಿತ್ತು. ಆರೋಪಿಗಳು ಅದನ್ನು ಪ್ರಶ್ನಿಸಿ ವಿಭಾಗೀಯಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.