ರನ್ನ ಕುಸ್ತಿ : ಗೋಪಾಲ ಕೋಳಿ, ಆತ್ಮಶ್ರೀಗೆ ಪ್ರಶಸ್ತಿ
ಮುಧೋಳ (ಬಾಗಲಕೋಟೆ), ಡಿ. 24: ಪಟ್ಟಣದ ವೀರ ಸಾವರಕರ ಪ್ರತಿಷ್ಠಾನವು ರಾಷ್ಟ್ರಮಟ್ಟದ ಪುರುಷರ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿ 'ರನ್ನ ಕುಸ್ತಿ 2014' ಹಾಗೂ ರಾಜ್ಯಮಟ್ಟದ ಮಹಿಳೆಯರ 'ವೀರರಾಣಿ ಕಿತ್ತೂರು ಚನ್ನಮ್ಮ ಕುಸ್ತಿ ಪಂದ್ಯಾವಳಿ' ಏರ್ಪಡಿಸಿತ್ತು.
ಪುರುಷರ ವಿಭಾಗದಲ್ಲಿ ಬೆಂಗಳೂರಿನ ಗೋಪಾಲ ಕೋಳಿ ಹಾಗೂ ಮಹಿಳೆಯರ ವಿಭಾಗದಲ್ಲಿ ಮೂಡಬಿದರೆಯ ಆಶ್ವಾಸ್ ಮಹಾವಿದ್ಯಾಲಯದ ಆತ್ಮಶ್ರೀ ವಿಜಯದ ಮಾಲೆ ಧರಿಸಿದರು. ದ್ವಿತೀಯ ಸ್ಥಾನವನ್ನು ಸತೀಶ ಪಡತಾರೆ, ಮೂರನೇ ಸ್ಥಾನವನ್ನು ರಾಜೇಂದ್ರ ಮಠಪತಿ ಹಾಗೂ ನಾಲ್ಕನೇ ಸ್ಥಾನವನ್ನು ರಿಯಾಜ್ ಮುಲ್ಲಾ ಗಳಿಸಿದ್ದಾರೆ.
ಅವರಿಗೆ ಶಾಸಕ ಗೋವಿಂದ ಕಾರಜೋಳ, ಸಚಿವ ಎಸ್.ಆರ್. ಪಾಟೀಲ, ಶಾಸಕ ಜಿ.ಎಸ್. ನ್ಯಾಮಗೌಡ ಹಾಗೂ ಗವಿಮಠದ ಮೃತ್ಯುಂಜಯ ಸ್ವಾಮೀಜಿ ಪ್ರಸಸ್ತಿ ಪತ್ರ ನೀಡಿ ಗೌರವಿಸಿದರು.
ಸ್ಥಳೀಯ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ನಿರ್ಮಿಸಿದ್ದ ಆಖಾಡಕ್ಕೆ ಕುಸ್ತಿಪಟುಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. 300ಕ್ಕೂ ಹೆಚ್ಚು ಪುರುಷ ಕುಸ್ತಿ ಪಟುಗಳು ಹಾಗೂ 100ಕ್ಕೂ ಹೆಚ್ಚು ಮಹಿಳಾ ರಾಷ್ಟ್ರೀಯ ಅಂತಾರಾಷ್ಟ್ರೀಯ ಕುಸ್ತಿಪಟುಗಳು ಭಾಗವಹಿಸಿದ್ದರು.
ಬೆಳಗ್ಗೆಯಿಂದಲೇ ವಿವಿಧ ವಯೋಮಟ್ಟದ ಕುಸ್ತಿ ಆರಂಭವಾಗಿತ್ತು. ಸಂಜೆ ಜಂಗಿ ನಿಖಾಲಿ ಕುಸ್ತಿ ಆರಂಭವಾಗಿ ಮಧ್ಯರಾತ್ರಿಯವರೆಗೂ ನಡೆಯಿತು.
ಪರಿಶ್ರಮದಿಂದ ಸಾಮರ್ಥ್ಯ ವೃದ್ಧಿ : ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಶಾಸಕ ಗೋವಿಂದ ಕಾರಜೋಳ ಮಾತನಾಡಿ, "ಪರಿಶ್ರಮದಿಂದ ಸಾಮರ್ಥ್ಯ ವೃದ್ಧಿಯಾಗುತ್ತದೆ. ಪರಿಶ್ರಮಿಗಳು ಶರಣಾಗಲು ಒಪ್ಪುವುದಿಲ್ಲ" ಎಂದು ಹೇಳಿದರು.
ಮುಧೋಳದ ಸಂಸ್ಥಾನದ ಘೋರ್ಪಡೆ ಮಹಾರಾಜರು ಕುಸ್ತಿಯನ್ನು ಅಪಾರ ಪ್ರೀತಿಸುತಿದ್ದರು. ಅಂದು ಮನೆ ಮನೆಗಳಲ್ಲಿ ಕುಸ್ತಿ ಕಲಿಗಳು ಸಿಗುತ್ತಿದ್ದರು. ಮುಧೋಳದ ಕುಸ್ತಿ ಪಟುಗಳು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ನಿರಂತರ ಸಾಧನೆ ಮಾಡುತ್ತಿದ್ದಾರೆ. ಸಾರ್ವಜನಿಕರು ಮುಕ್ತ ಹಸ್ತದಿಂದ ಸಹಾಯ ನೀಡುತ್ತಿರುವ ಕಾರಣ ಇಂತಹ ರಾಷ್ಟ್ರಮಟ್ಟದ ಪಂದ್ಯಾವಳಿ ಆಯೋಜಿಸಲು ಸಾಧ್ಯವಾಗಿದೆ ಎಂದರು.
ಮಹಿಳಾ ಕುಸ್ತಿ ಹೆಮ್ಮೆಯ ವಿಷಯ : ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಮೀನಾ ಚಂದಾವರಕರ ಮಾತನಾಡಿ, ಮಹಿಳೆಯರು ಪುರಷರಿಗೆ ಸರಿಸಮಾನವಾಗಿ ನಿಂತು ಎಲ್ಲ ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕ್ರಿಕೆಟ್, ಕುಸ್ತಿ ಹಾಗೂ ಬಾಕ್ಸಿಂಗ್ನಂತಹ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಮಹಿಳೆಯರು ತಾವು ಯಾರಿಗೂ ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಕಸಬಾ ಜಂಬಗಿ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, "ಶಕ್ತಿ ಹಾಗೂ ಯುಕ್ತಿ ಸಮನಾಗಿ ಅಗತ್ಯವಾದ ಕುಸ್ತಿ ಕ್ರೀಡೆಗೆ ಸರ್ಕಾರ ಪ್ರೋತ್ಸಾಹ ನೀಡಬೇಕು" ಎಂದರು.
ಶಾಸಕ ಗೋವಿಂದ ಕಾರಜೋಳ, ಸಚಿವ ಎಸ್.ಆರ್. ಪಾಟೀಲ, ಜಿ.ಎಸ್. ನ್ಯಾಮಗೌಡ ಹಾಗೂ ಗವಿಮಠದ ಮೃತ್ಯುಂಜಯ ಸ್ವಾಮೀಜಿ ಪ್ರಸಸ್ತಿ ಪತ್ರ ನೀಡಿ ಗೌರವಿಸಿದರು.