ಆಯುಧಪೂಜೆಯ ದಿನದಂದು ಹೊರಬಿದ್ದ ಮೈಲಾರಲಿಂಗೇಶ್ವರ ಭವಿಷ್ಯವಾಣಿ
ಆಯುಧಪೂಜೆಯ ದಿನದಂದು ಹೊರಬಿದ್ದ ಮೈಲಾರಲಿಂಗೇಶ್ವರ ಭವಿಷ್ಯವಾಣಿ
ಕಳೆದ ಬಾರಿ ಅಂದರೆ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಹೂವಿನಹಡಗಲಿಯಲ್ಲಿ, ಗೊರವಯ್ಯ ನುಡಿದ ಭವಿಷ್ಯ ಅಸ್ಪಷ್ಟತೆಯಿಂದ ಕೂಡಿತ್ತು ಎಂದು ಧ್ವನಿಮುದ್ರಿಕೆಯನ್ನು ಬೆಂಗಳೂರಿನ ಸ್ಟುಡಿಯೋಗೆ ಕಳುಹಿಸಿ ಸ್ಪಷ್ಟೀಕರಣ ಪಡೆಯಲಾಗಿತ್ತು.
ಪ್ರತೀ ವರ್ಷ ಆಯುಧಪೂಜೆಯ ದಿನದಂದು ಹಾವೇರಿ ಜಿಲ್ಲೆಯ ಮೈಲಾರಲಿಂಗೇಶ್ವರ ಸನ್ನಿಧಾನದಲ್ಲಿ ಕಾರ್ಣಿಕ ನುಡಿಸುವ ಪದ್ದತಿಯಿದೆ. ಅಂತೆಯೇ, ಗುರುವಾರ (ಅ 18) ನುಡಿಯಲಾದ ಭವಿಷ್ಯದಲ್ಲಿ ಯಾವುದೇ ಗೊಂದಲವಿಲ್ಲದೇ ಇದ್ದದ್ದು ವಿಶೇಷ. (ಮೈಲಾರ ಲಿಂಗೇಶ್ವರ ಕಾರ್ಣಿಕ ದೈವವಾಣಿ)
ಈ ಭಾಗದಲ್ಲಿ ಬಹುವಾಗಿ ನಂಬುವ ಈ ಭವಿಷ್ಯವನ್ನು ವೀಕ್ಷಿಸಲು ಅಸಂಖ್ಯಾತ ಭಕ್ತಸಮೂಹ ಸೇರಿರುತ್ತದೆ. ಒಗಟಿನ ರೂಪದಲ್ಲಿ ಮತ್ತು ಒಂದು ವಾಕ್ಯದಲ್ಲಿ ಹೇಳುವ ಈ ಭವಿಷ್ಯವನ್ನು ಜನರು ತಮಗೆ ಬೇಕಾದಂತೆ ಅರ್ಥೈಸಿಕೊಂಡ ಉದಾಹರಣೆಗಳೂ ಇದೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಮೈಲಾರಲಿಂಗೇಶ್ವ ದೇವಾಲಯದ ಈ ಕಾರ್ಣಿಕವನ್ನು, ಹೆಚ್ಚಾಗಿ ಮಳೆಬೆಳೆ, ನಾಡಿನ ಕ್ಷೇಮದ ವಿಚಾರದಲ್ಲಿ ಜನರು ಬಹುಪಾಲು ನಂಬಿಕೊಂಡು ಬರುತ್ತಿದ್ದಾರೆ. ವರ್ಷದ ಭವಿಷ್ಯವಾಣಿ ಎಂದು ರೈತರು ಇದನ್ನು ಅವಲಂಬಿತರಾಗುವುದೂ ಉಂಟು. (ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ)
ಗುರುವಾರ ನಡೆಯಲಾದ ಭವಿಷ್ಯದಲ್ಲಿ, ನಾಡಿನ ಜನತೆ ಭಯ ಪಡುವ ಯಾವುದೇ ಅಂಶಗಳಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಗೊರವಯ್ಯ ನುಡಿದ, ಒಂದು ವಾಖ್ಯದ ಭವಿಷ್ಯವಾಣಿ ಏನು, ಮುಂದೆ ಓದಿ..
ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರ
ಫೆಬ್ರವರಿ ತಿಂಗಳಲ್ಲಿ, ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ ನುಡಿ ಹೊರಬಿದ್ದಿತ್ತು. 'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್' ಎಂದು ಗೊರವಪ್ಪ ಕಾರ್ಣಿಕ ನುಡಿದಿದ್ದರು. ಆರಂಭದಲ್ಲಿ ಕಾರ್ಣಿಕವನ್ನು 'ಆಕಾಶಕ್ಕೆ ಸಿಡಿಲು ಬಡಿತಲೇ ಪರಾಕ್' ಎಂದು ವಿಶ್ಲೇಷಿಸಲಾಗಿತ್ತು. ಮೈಕ್ ಸಮಸ್ಯೆಯಿಂದ ಈ ರೀತಿಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಮೈಲಾರ ಜಾತ್ರಾ ಮಂಡಳಿ ಮತ್ತು ಮುಜರಾಯಿ ಇಲಾಖೆ ಈ ಕುರಿತಂತೆ ಸ್ಪಷ್ಟನೆ ನೀಡಿತ್ತು.
ಮುತ್ತಿನ ರಾಶಿ ಭೂಮಂಡಲಕ್ಕೆ ತೂಗಿತಲೇ ಪರಾಕ್
ಕಳೆದ ವರ್ಷದ ದಸರಾ ವೇಳೆ ನುಡಿಯಲಾಗಿದ್ದ ಕಾರ್ಣಿಕ ನುಡಿಯಂತೆ, 'ನಂದಿ ಗಾಬತಲೆ ಪರಾಕ್' ಎನ್ನುವ ಭವಿಷ್ಯವಾಣಿ ಹೊರಬಿದ್ದಿತ್ತು. ಅದೇ ಸಮಯದಲ್ಲಿ, ಹಾನಗಲ್ ತಾಲೂಕಿನ ಆಡೂರು ಗ್ರಾಮದ ಮಾಲತೇಶ ದೇವಸ್ಥಾನದಲ್ಲಿ 'ಮುತ್ತಿನ ರಾಶಿ ಭೂಮಂಡಲಕ್ಕೆ ತೂಗಿತಲೇ ಪರಾಕ್' ಎಂದು ಕಾರ್ಣಿಕ ನುಡಿಯಲಾಗಿತ್ತು.
ಸರ್ವರು ಸಂಪಲೆ ನಾಡೆಲ್ಲ ತಂಪಲೆ ಪರಾಕ್
ಈ ಬಾರಿ ನುಡಿಯಲಾದ ಒಂದು ವಾಕ್ಯದ ಕಾರ್ಣಿಕ ಹೀಗಿದೆ, ' ಸರ್ವರು ಸಂಪಲೆ ನಾಡೆಲ್ಲ ತಂಪಲೆ ಪರಾಕ್'. ಇದರರ್ಥ, ನಾಡಿನಲ್ಲಿ ಮಳೆಬೆಳೆ ಚೆನ್ನಾಗಿ ಇರಲಿದೆ, ಎಲ್ಲರೂ ಕ್ಷೇಮವಾಗಿ, ನೆಮ್ಮದಿಯಿಂದ ಬದುಕುತ್ತಾರೆ ಎಂದು ಅರ್ಥೈಸಲಾಗಿದೆ. ಹಾವೇರಿ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಗೊರವಯ್ಯ ನುಡಿದ ಭವಿಷ್ಯ ಇದಾಗಿದೆ. ಗೊರವಯ್ಯ ಇಪ್ಪತ್ತು ಅಡಿ ಎತ್ತರದ ಬಿಲ್ಲನೇರಿ ಕಾರ್ಣಿಕ ನುಡಿಯುತ್ತಾರೆ.
ಮಲ್ಲಯ್ಯ, ಮಲ್ಲಾರಿ, ಮೈಲಾರ, ಮಾರ್ತಾಂಡ, ಖಂಡೋಬ, ಖಂಡೇರಾಯ
ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನ, ಮೈಲಾರಲಿಂಗೇಶ್ವರ ದೇವಸ್ಥಾನ, ದೇವರಗುಡ್ಡ - ಏಳು ಕೋಟಿಗೋ...ಚಾಂಗ್ಮಲೋ ಎಂದು ಹೆಸರುವಾಸಿ. ಗುಡ್ಡ ಗುಡ್ಡಾಪುರ ಎಂಬ ಹೆಸರು ಬರಲು ಕಾರಣವೇನೆಂದರೆ ಗುಡ್ಡಗಳ ನಡುವೆ ಈ ಊರು ಇರುವುದರಿಂದ. ಇಲ್ಲಿನ ದೇವರನ್ನು ಮಲ್ಲಯ್ಯ, ಮಲ್ಲಾರಿ, ಮೈಲಾರ, ಮಾರ್ತಾಂಡ, ಖಂಡೋಬ, ಖಂಡೇರಾಯ ಎಂದೂ ಕರೆಯುವುದುಂಟು.
ಉತ್ತರ ಕರ್ನಾಟಕದ ಪ್ರಸಿದ್ದ ದೇವಸ್ಥಾನ
ಉತ್ತರ ಕರ್ನಾಟಕದ ಪ್ರಸಿದ್ದ ದೇವಸ್ಥಾನ ಇದಾಗಿದ್ದು, ಪ್ರತಿ ರವಿವಾರ ಹಾಗೂ ಎಲ್ಲಾ ಹುಣ್ಣಿಮೆಗಳಂದು ಭಾರೀ ಜನಸಮೂಹದೊಂದಿಗೆ ಪಲ್ಲಕ್ಕಿ ಉತ್ಸವ ಇಲ್ಲಿ ಜರುಗುತ್ತದೆ. ಭರತ ಹುಣ್ಣಿಮೆ ದಿನದಂದು ದೇವಸ್ಥಾನದ ಆವರಣದಲ್ಲಿರುವ ದ್ಯಾಮವ್ವನ ಕಟ್ಟಿ ಬಳಿ ಮೂರು ಆಳೆತ್ತರದ ಬಿಲ್ಲಿನ ಮೇಲೆ ನಿಂತು ಕಾರ್ಣಿಕ ಹೇಳುವ ಬಗ್ಗಯ್ಯನ/ಗೊರವಯ್ಯನ ಸಂದೇಶ ಕೇಳಲು ರಾಜ್ಯದ ಮೂಲೆ ಮೂಲೆಗಳಿಂದಲೂ ಲಕ್ಷಾಂತರ ಜನ ಬಂದು ಸೇರುತ್ತಾರೆ. ದಸರಾ ಸಮಯದಲ್ಲಿ ಒಂದು ತಿಂಗಳ ಕಾಲ ನಡೆಯುವ ಜಾತ್ರೆಗೆ ರಾಜ್ಯದ ಹಾಗೂ ಇತರ ರಾಜ್ಯಗಳಿಂದ ಐದು ಸಾವಿರದಿಂದ, ಇಪ್ಪತ್ತು ಸಾವಿರದವರೆಗೆ ಜಾನುವಾರುಗಳು ಬಂದು ಸೇರುತ್ತವೆ.