ಸಿಎಂ ಯಡಿಯೂರಪ್ಪ ಬದಲಾವಣೆಗೆ ಕರ್ನಾಟಕದಲ್ಲಿ ಯುದ್ಧ ನಡೆಯುತ್ತಿದೆ!
ಬೆಂಗಳೂರು, ಅ. 21: ಬಿಜೆಪಿ ಹಿರಿಯ ಶಾಸಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಮಾತು ದೆಹಲಿ ಮಟ್ಟದಲ್ಲಿಯೂ ಚರ್ಚೆಗೆ ಕಾರಣವಾಗಿದೆ. ಶಾಸಕ ಯತ್ನಾಳ್ ಅವರ ಹೇಳಿಕೆ ಪ್ರಸ್ತಾಪಿಸಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಕನ್ನಡದಲ್ಲಿಯೇ ಟ್ವೀಟ್ ಮಾಡಿರುವ ಸುರ್ಜೆವಾಲಾ ಅವರು, ದೆಹಲಿ (ಬಿಜೆಪಿ ಹೈಕಮಾಂಡ್ ಎಂಬ ಅರ್ಥದಲ್ಲಿ)ಯ ನೆರವಿನೊಂದಿಗೆ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ತೆಗೆದುಹಾಕಲು ಕರ್ನಾಟಕದಲ್ಲಿ ಯುದ್ಧವೇ ನಡೆಯುತ್ತಿದೆ ಎಂದಿದ್ದಾರೆ.
ಕರ್ನಾಟಕದ ಬಿಜೆಪಿ ನಾಯಕರರಿಗೆ ಅಧಿಕಾರದ ಹಪಾಹಪಿ. ಹೀಗಾಗಿ ಅಧಿಕಾರ ಲಾಲಸೆಯ ದೊಂಬರಾಟದಲ್ಲಿ ಯಾವುದೇ ಬೆಲೆ ತೆತ್ತಾದರೂ ಮಂತ್ರಿಗಿರಿ ಪಡೆಯುವ ಚಟ ಬಿಜೆಪಿ ನಾಯಕರ ಮೈಮೇಲೆರಿದೆ. ಆದರೆ ಪ್ರವಾಹ, ಅತಿವೃಷ್ಠಿ, ಕೊರೊನಾ ಸಂಕಷ್ಟ ಮುಂತಾದವು ಬಿಜೆಪಿ ನಾಯಕರಿಗೆ ಕೇಳುತ್ತಿಲ್ಲ. ಸಂತ್ರಸ್ತ ಕನ್ನಡಿಗರ ಕಷ್ಟ ಇವರಿಗೆ ಕೇಳದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕೇಂದ್ರದ ನಾಯಕರಿಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಕಾಗಿದ್ದಾರೆ. ಇನ್ನೇನು ಹೆಚ್ಚುದಿನ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯುವುದಿಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್ಲಿ ಬಹಿರಂಗ ಹೇಳಿಕೆ ಕೊಟ್ಟಿದ್ದರು. ಅದಾದ ಬಳಿಕ ಅದನ್ನು ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಅಸ್ತ್ರದಂತೆ ಬಳಸುತ್ತಿದ್ದಾರೆ.
Recommended Video
ಒಟ್ಟಾರೆ ಉಪ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಲ್ಲಿ ಆಂತರಿಕ ಅಸಮಾಧಾನವೂ ಸ್ಪೋಟವಾಗಿದ್ದು, ಅದು ಉಪ ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯೆತೆಯಿದೆ.