ಸಿದ್ದು ಸ್ಕೀಮುಗಳ ವಿರುದ್ಧ ರಮ್ಯಾ-ಪೂಜಾರಿ ಗುಡುಗು
ರಾಜ್ಯ ಸರಕಾರದ ಶಾದಿ ಭಾಗ್ಯ ರಾಜ್ಯದ ಎಲ್ಲ ಬಡ ಕುಟುಂಬಗಳಿಗೂ ದಕ್ಕಬೇಕು ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಬಳಿಯ ಗಾಂಧಿ ಚಿತಾಭಸ್ಮ ವಿಸರ್ಜನೆ ಸ್ಥಳದ ಬಳಿ 1 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಸ್ಥಳೀಯ ಸಂಸದೆ/ ಖ್ಯಾತ ನಟಿ ರಮ್ಯಾ ಅವರು ಸರಕಾರದ ಯೋಜನೆಗಳು ಕೇವಲ ಒಂದು ಪಂಗಡಕ್ಕೆ/ ವರ್ಗಕ್ಕೆ ಸೀಮಿತವಾಗುವುದು ಸರ್ವತಾ ಸಾಧುವಲ್ಲ ಎಂದು ಪ್ರಬುದ್ಧತೆ ಪ್ರದರ್ಶಿಸಿದ್ದಾರೆ.
ಇನ್ನು, ಕೆಪಿಸಿಸಿ ಮಾಜಿ ಅಧ್ಯಕ್ಷ ಬಿ ಜನಾರ್ದನ ಪೂಜಾರಿ ಅವರು ಮತ್ತೊಮ್ಮೆ 'ಸಿದ್ದು ಸ್ಕೀಮು'ಗಳ ವಿರುದ್ಧ ಗುಡುಗಿದ್ದಾರೆ. ಮಕ್ಕಳಲ್ಲಿ ಜಾತಿ ಭೇದಭಾವ ಮಾಡುವುದು ಸರಿಯಲ್ಲ. ಎಲ್ಲ ಮಕ್ಕಳು ಒಂದೇ. ಅಹಿಂದ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಸರ್ಕಾರ ಪ್ರವಾಸಭಾಗ್ಯ ನೀಡುವುದು ಸರಿ ಅಲ್ಲ ಎಂದು ಆಕ್ಷೇಪ ಎತ್ತಿದ್ದಾರೆ.
ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಶಾದಿ ಭಾಗ್ಯ ಯೋಜನೆಯನ್ನೂ ವಿರೋಧಿಸಿದ್ದೆ. ಎಲ್ಲ ಜಾತಿಯಲ್ಲೂ ಬಡವರಿದ್ದಾರೆ. ಎಲ್ಲರಿಗೂ ಯೋಜನೆ ಸಲ್ಲಲಿ. ಬ್ರಾಹ್ಮಣರಿಗೂ ಮೀಸಲು ಸೌಲಭ್ಯ ನೀಡಿ. ಇದರಿಂದ ನಿಮಗೆ ಆಶೀರ್ವಾದ ಲಭಿಸುತ್ತದೆ' ಎಂದು ತಿಳಿಯ ಹೇಳಿದ್ದೆ.
ಹಾಗೆಯೇ, ಮೂಢನಂಬಿಕೆ ಪ್ರತಿಬಂಧಕ ಕಾನೂನು ಜಾರಿ ಮಾಡುವುದೂ ಅಗತ್ಯವಿಲ್ಲ. ಇರುವ ಕಾನೂನನ್ನೇ ಸಮರ್ಪಕವಾಗಿ ಜಾರಿಗೆ ತಂದರೆ ಸಾಕು. ನರ ಬಲಿ ನಡೆಸಿದರೆ ಐಪಿಸಿ ಸೆಕ್ಷನ್ 302ರ ಅಡಿ ಮರಣದಂಡನೆ ವಿಧಿಸಬಹುದು. ಮಹಿಳೆಯರನ್ನು ಅರಬೆತ್ತಲೆಗೊಳಿಸಿದರೆ ಸೆಕ್ಷನ್ 354ರ ಅಡಿ ಶಿಕ್ಷಿಸಬಹುದು. ನಾನೂ ಒಬ್ಬ ವಕೀಲನಾಗಿದ್ದು ಈ ಮಾತನ್ನು ಹೇಳುತ್ತಿದ್ದೇನೆ. ಇದಕ್ಕಾಗಿ ಪ್ರತ್ಯೇಕ ಕಾನೂನು ರಚಿಸುವ ಅಗತ್ಯವಿಲ್ಲ' ಎಂದು ಪ್ರತಿಪಾದಿಸಿದ್ದೆ ಎಂದು ಪೂಜಾರಿ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಇಷ್ಟೆಲ್ಲಾ ವಿರೋಧ ವ್ಯಕ್ತವಾಗುತ್ತಿರುವಾಗ ಸ್ವತಃ ಕಾನೂನು ಓದಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯ ಪಾಲಿಸುತ್ತಾರಾ? ಎಂದು ನಾಡಿನ ಪ್ರಜ್ಞಾವಂತ ಜನ ಪ್ರಶ್ನಿಸುತ್ತಿದ್ದಾರೆ.