ಎಸಿಬಿಯೇ ಭ್ರಷ್ಟಾಚಾರದ ಕೂಪ- ಕರ್ನಾಟಕ ಹೈಕೋರ್ಟ್ ಕಿಡಿ
ಬೆಂಗಳೂರು,ಜೂ.29: ಭ್ರಷ್ಟಾಚಾರ ನಿಗ್ರಹ ದಳವೇ ಅತಿದೊಡ್ಡ ಭ್ರಷ್ಟರ ಕೂಪವಾಗಿದೆ, ಅದರ ಮುಖ್ಯಸ್ಥ ಎಡಿಜಿಪಿಯೇ ಕಳಂಕಿತ ಅಧಿಕಾರಿ ಎಂದು ಹೈಕೋರ್ಟ್ ಬುಧವಾರ ಕಿಡಿ ಕಾರಿದೆ.
''ಎಸಿಬಿ ಕಚೇರಿಗಳೆಲ್ಲಾ ಕಲೆಕ್ಷನ್ ಸೆಂಟರ್ಗಳಾಗಿವೆ ಎಂದು ಖಾರವಾಗಿ ಹೇಳಿದ ನ್ಯಾಯಪೀಠ ಹಿರಿಯ ಎಎಸ್, ಐಪಿಎಸ್ ಅಧಿಕಾರಿಗಳನ್ನು ಹಿಡಿಯೋದು ಬಿಟ್ಟು ಸಣ್ಣಪುಟ್ಟ ಬಾಲಂಗೋಚಿಗಳನ್ನು ಹಿಡಿಯುತ್ತೀರಿ, ನಿಮಗೆ ನಾಚಿಗೆ ಆಗಲ್ವೇ'' ಎಂದು ಕೇಳಿದೆ.
ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್. ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್, ಎಸಿಬಿ ಕಾರ್ಯವೈಖರಿಯನ್ನು ಹಿಗ್ಗಾಮುಗ್ಗಾ ಜಾಡಿಸಿದರು.
''ಎಸಿಬಿ ಏಕೆ ರಚನೆಯಾಗಿದೆ ನಿಮಗೆ ಗೊತ್ತಾ, ಎಸಿಬಿಯೇ ಭ್ರಷ್ಟಾಚಾರದ ದಂಧೆ ನಡೆಸುತ್ತಿದೆ. ಸರ್ಕಾರ ಉದ್ದೇಶಪೂರ್ವಕವಾಗಿ ಕಳಂಕಿತರನ್ನುಅಲ್ಲಿಗೆ ಕಳುಹಿಸುತ್ತದೆ. ಕಂದಾಯ ಅಧಿಕಾರಿಗಳ ಬಳಿ ಹೋಗಿ ಅಲ್ಲಿ ಏನೇನೆಲ್ಲಾ ಆಗುತ್ತದೆ ಎಂದು ನಿಮಗೆ ತಿಳಿಯುತ್ತದೆ. ಸಮಾಜಕ್ಕೆ ಅಂಟಿರುವ ಭ್ರಷ್ಟಾಚಾರದ ಈ ಕ್ಯಾನ್ಸರ್ನಲ್ಲಿ ಮೇಲ್ಮಟ್ಟದ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡದೇ ಕೆಳ ಹಂತದ ಅಧಿಕಾರಿಗಳನ್ನು ಮಾತ್ರ ಆರೋಪಿಗಳನ್ನಾಗಿ ಮಾಡಲಾಗುತ್ತಿದೆ'' ಎಂದು ಪ್ರಶ್ನಿಸಿದರು.
ನಿವೃತ್ತ ಸಿಎಸ್ ತಾಯಿ ಹೆಸರಲ್ಲಿ ಭೂ ಕಬಳಿಕೆ: ಸರ್ಕಾರಕ್ಕೆ 1 ಲಕ್ಷ ದಂಡ
ಮಾಜಿ ಮುಖ್ಯ ಕಾರ್ಯದರ್ಶಿ ಜಾಧವ್ ಪ್ರಕರಣದಲ್ಲಿ ನೀವು ಏನೆಲ್ಲಾ ಮಾಡಿದಿರಿ ಎಂಬುದು ಗೊತ್ತಿದೆ. ಆ ಪ್ರಕರಣದಲ್ಲಿ ನಿಮ್ಮ ತನಿಖಾಧಿಕಾರಿಗಳು ಎಡಿಜಿಪಿಯ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರಲ್ಲವೇ ಎಂದೂ ನ್ಯಾಯಪೀಠ ಹೇಳಿತು.
ಯಾವ ಯಾವ ಪ್ರಕರಣಗಳಲ್ಲಿ ಎಷ್ಟು ಜನ ಹಿರಿಯ ಅಧಿಕಾರಿಗಳ ವಿರುದ್ಧ ಬಿ ರಿಪೋರ್ಟ್ ಸಲ್ಲಿಸಿದ್ದೀರಿ ಮತ್ತು 2016ರಿಂದ ಇಲ್ಲೀತನಕ ಬಿ ರಿಪೋರ್ಟ್ ಹಾಕಿರುವ ಪ್ರಕರಣಗಳೆಷ್ಟು ಎಂಬುದರ ವಸ್ತುಸ್ಥಿತಿಯ ವರದಿ ನೀಡುವಂತೆ ಎಸಿಬಿಗೆ ನಿರ್ದೇಶನ ನೀಡಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಜುಲೈ 3ಕ್ಕೆ ಮುಂದೂಡಿದರು.
ಆನೇಕಲ್ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಅನುಕೂಲಕರ ಆದೇಶ ನೀಡಲು ಬೇಗೂರು ನಿವಾಸಿ ಅಜಂ ಪಾಷಾ ಎಂಬುವರಿಂದ 5 ಲಕ್ಷ ರೂ. ಲಂಚ ಪಡೆಯಲಾಗಿದೆ ಎಂಬ ಪ್ರಕರಣದಲ್ಲಿ ಅರ್ಜಿದಾರ ಮಹೇಶ್ ಆರೋಪಿಯಾಗಿದ್ದಾರೆ.
ಮಾಜಿ ಸಿಎಸ್ ಜಾಧವ್ ಪ್ರಕರಣ: ಆನೇಕಲ್ ತಾಲೂಕಿನ ರಾಮನಾಯಕನಹಳ್ಳಿ ಗ್ರಾಮದ ಸರ್ವೇ 96ರ 66 ಸರ್ಕಾರಿ ಜಮೀನನ್ನು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ ಜಾದವ್ ಅವರ ತಾಯಿ ಒತ್ತುವರಿ ಮಾಡಿದ್ದರು. ಅರವಿಂದ ಜಾದವ್ ಅವರು ಕೆಲ ಸರ್ಕಾರಿ ಅಧಿಕಾರಿಗಳೊಂದಿಗೆ ಸೇರಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಆ ಸರ್ಕಾರಿ ಜಮೀನಿಗೆ ಸಂಬಂಧಿಸಿದ ಕಂದಾಯ ದಾಖಲೆಗಳಲ್ಲಿ ತಮ್ಮ ತಾಯಿ ಹೆಸರು ನಮೂದಿಸಿದ್ದಾರೆ ಎಂದು ಆರೋಪಿಸಿ 2018ರ ಆ.23ರಂದು ಎಸ್.ಭಾಸ್ಕರನ್ ಎಂಬಾತ ಎಸಿಬಿಗೆ ದೂರು ನೀಡಿದ್ದರು.
ತನಿಖೆಯಲ್ಲಿ ಅರ್ಜಿದಾರ ಡಿ.ಬಿ.ಗಂಗಯ್ಯ ಪಾತ್ರ ಕಂಡು ಬಂದ ಹಿನ್ನೆಲೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದ ಎಸಿಬಿ 2018ರ ಸೆ.15ರಂದು ಎಫ್ಐಆರ್ ದಾಖಲಿಸಿದ್ದರು. ಇದರಿಂದ ತಮ್ಮ ವಿರುದ್ಧದ ಎಫ್ಐಆರ್ ರದ್ದುಪಡಿಸಲು ಕೋರಿ ಡಿ.ಬಿ. ಗಂಗಯ್ಯ ಹೈಕೋರ್ಟ್ಗೆ 2020ರಲ್ಲಿ ಅರ್ಜಿ ಸಲ್ಲಿಸಿದ್ದರು.
ಸರ್ಕಾರಿ ಜಮೀನು ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣದಲ್ಲಿ ಹೈಕೋರ್ಟ್ ಸರ್ಕಾರಕ್ಕೆ ಒಂದು ಲಕ್ಷ ರೂ. ದಂಡ ವಿಧಿಸಿದೆ. ಅಲ್ಲದೆ, ರಾಜ್ಯ ಸರ್ಕಾರವು ಒಂದು ವಾರದಲ್ಲಿ ದಂಡ ಮೊತ್ತವನ್ನು ಠೇವಣಿ ಇಡಬೇಕು. ಆ ಹಣವನ್ನು ಆರೋಪಿ ವಿರುದ್ಧ ಪ್ರಾಸಿಕ್ಯೂಷನ್ಗಾಗಿ ಪೂರ್ವಾನುಮತಿ ಪಡೆಯಲು ದಾಖಲೆಗಳನ್ನು ಕೇಂದ್ರ ರಾಜ್ಯ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯಕ್ಕೆ ರವಾನಿಸದ ಅಧಿಕಾರಿಗಳಿಂದ ವಸೂಲಿ ಮಾಡಬೇಕು ಎಂದು ಆದೇಶ ನೀಡಿತ್ತು.