ರಾಮನಗರ: ರಾಸುಗಳ ಮುಂದೆ ರಾಜಕೀಯ ದೊಂಬರಾಟ
ರಾಮನಗರ, ಅಕ್ಟೋಬರ್ 9: ಮೂಕ ಪ್ರಾಣಿಗಳು ಕಾಲು-ಬಾಯಿ ಜ್ವರ ಹಾಗೂ ಗಳಲೇ ರೋಗದಿಂದ ಬಳಲುತ್ತಿದ್ದು, ಜಿಲ್ಲೆಯ ರೈತರು ತಮ್ಮ ರಾಸುಗಳನ್ನು ಉಳಿಸಿಕೊಳ್ಳಲು ಪರಿತಪಿಸುತ್ತಿರುವಾಗ ಇಲ್ಲಿನ ನಾಯಕರಿಗೆ ರಾಜಕೀಯ ತೀಟೆ ಜ್ವರ ಆರಂಭವಾಗಿದೆ.
ರೈತನ ಮನೆವರೆಗೂ ಪಾದ ಬೆಳೆಸುವ ಈ ನಾಯಕರುಗಳು ಸಾಧ್ಯವಾದರೇ, ರಾಸುಗಳನ್ನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು. ಇಲ್ಲವೇ, ಒಂದಿಷ್ಟು ಸಾಂತ್ವನ ಹೇಳಿ ಹೋಗಬೇಕು. ಆದರೆ, ತಮ್ಮ ರಾಜಕೀಯ ಶ್ರೇಯೋಭಿವೃದ್ಧಿಗಾಗಿ ಪರಸ್ಪರ ಕೆಸರು ಎರಚಿಕೊಳ್ಳುವುದು ಢಾಳಾಗಿ ಕಂಡುಬರುತ್ತಿದೆ. ರಾಸುಗಳ ಮಾಲೀಕರು ಮಾತ್ರ ಸತ್ತ ರಾಸುಗಳ ಮುಂದೆ ರಾಜಕಾರಣಿಗಳ ದೊಂಬರಾಟವನ್ನು ನೋಡಿ ಮತ್ತಷ್ಟು ಖಿನ್ನರಾಗಿದ್ದಾರೆ.
ಸಂಸದ ಡಿಕೆ ಸುರೇಶ್ ಹಾಗೂ ಪಶುಸಂಗೋಪನ ಸಚಿವ ಟಿಬಿ ಜಯಚಂದ್ರ ರೈತರ ಮನೆಗಳಿಗೆ ಭೇಟಿ ನೀಡಿ, ಸರಕಾರದ ಜತೆ ಮಾತನಾಡಿ, ಪರಿಹಾರ ನೀಡುವ ಭರವಸೆ ನೀಡಿ ಹೋದ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ರಾಸು ಕಳೆದುಕೊಂಡ ರೈತರಿಗೆ ಪಕ್ಷದ ವತಿಯಿಂದ ಪರಿಹಾರ ನೀಡುವುದಾಗಿ ಘೋಷಿಸಿ, ಅಲ್ಲಲ್ಲಿ ಪರಿಹಾರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇಷ್ಟಿದ್ದರೇ ಸಾಕಿತ್ತು.
ಆದರೆ, ಕೆಲವರು ರಾಜಕೀಯ ಗಿಮಿಕ್ ಮಾಡಲು ಬಂದು ಹೋಗಿದ್ದಾರೆ. ಅವರಿಗೆ ರೈತರ ಮೇಲೆ ಕಾಳಜಿ ಇಲ್ಲ ಎಂದು ಸಂಸದ ಡಿಕೆ ಸುರೇಶ್ ಅವರನ್ನು ಗುರಿಯಾಗಿಸಿಕೊಂಡು ಕುಮಾಸ್ವಾಮಿ ಮಾತನಾಡಿದ್ದಾರೆ. ಜತೆಗೆ ರಾಜ್ಯ ಸರಕಾರ ತಕ್ಷಣವೇ ಮೃತ ರಾಸುಗಳಿಗೆ ತಲಾ 30 ಸಾವಿರ ರೂ. ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಪಾದಯಾತ್ರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಕುಮಾರಸ್ವಾಮಿ ಮಾತಿಗೆ ಪ್ರತ್ಯುತ್ತರ ನೀಡಿರುವ ಕೆಎಂಎಫ್ ನಿರ್ದೇಶಕ ಪಿ ನಾಗರಾಜು ಹಾಗೂ ಕಾಂಗ್ರೆಸ್ ಮುಖಂಡ ಮರಿದೇವರು ಕಾಲು-ಬಾಯಿ ಜ್ವರದ ಹೆಸರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶ್ರೀರಂಗಪಟ್ಟಣದಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲು ಹೊರಟಿರುವುದು ರಾಜಕೀಯ ಗಿಮಿಕ್ ಎಂದು ಕಾಂಗ್ರೆಸ್ ಮುಖಂಡರು ಟೀಕಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಇನ್ನೆರಡು ದಿನದಲ್ಲಿ ಸಂತ್ರಸ್ತ ರೈತರಿಗೆ ಪರಿಹಾರ ಘೋಷಿಸಲು ನಿರ್ಧಾರ ಮಾಡಿದ್ದಾರೆ. ಈ ಹಂತದಲ್ಲಿ ಕುಮಾರಸ್ವಾಮಿ ಪಾದಯಾತ್ರೆ ಬೆದರಿಕೆ ಮೂಲಕ ರಾಜಕೀಯ ಲಾಭಕ್ಕೆ ಹೊರಟಿದ್ದಾರೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಸಂಸದ ಡಿಕೆ ಸುರೇಶ್ ನೇತೃತ್ವದಲ್ಲಿ ರಾಮನಗರ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪರಿಹಾರ ವಿತರಣೆಗೆ ಮನವೊಲಿಸಿದ್ದೇವೆ. ಪರಿಹಾರ ಘೋಷಿಸುವ ಹಂತದಲ್ಲಿ ರಾಜಕಾರಣ ಬೆರೆಸುವ ಕೆಲಸಕ್ಕೆ ಕುಮಾರಸ್ವಾಮಿ ಇಳಿದಿದ್ದಾರೆ. ಅವರು ಸಂತ್ರಸ್ತರಿಗೆ ತಲಾ 5 ಸಾವಿರ ರೂ ಪರಿಹಾರ ನೀಡುತ್ತಿದ್ದಾರೆ. ಅದು ಅವರ ವೈಯಕ್ತಿಕ ಕಾರ್ಯಕ್ರಮ. 5 ಅಲ್ಲದಿದ್ದರೆ 10 ಸಾವಿರವನ್ನು ಬೇಕಾದರೂ ನೀಡಲಿ. ನಮ್ಮದೇನೂ ಅಭ್ಯಂತರವಿಲ್ಲ ಎಂದು ಮರಿದೇವರು ಮತ್ತು ನಾಗರಾಜು ಸ್ಪಷ್ಟನೆ ನೀಡುತ್ತಾರೆ.
ಸತ್ತ ಹಸುಗಳ ಮುಂದೆ ನಿಂತು ಸಂಸದ ಸುರೇಶ್ ಫೋಟೋ ತೆಗೆಸಿಕೊಂಡು ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಸುರೇಶ್ ಅವರು ಭೇಟಿ ನೀಡಿದ್ದರ ಪರಿಣಾಮವಾಗಿಯೇ ಜಿಲ್ಲಾಡಳಿತ ಮತ್ತು ಪಶು ವೈದ್ಯ ಇಲಾಖೆ ಎಚ್ಚೆತ್ತಿದೆ. ಇದರಿಂದ ಈಗಾಗೇ 80 ಸಾವಿರ ಹಸುಗಳಿಗೆ ಲಸಿಕೆ ಹಾಕಿಸಲಾಗಿದೆ. 14 ಟ್ರ್ಯಾಕ್ಟರ್ ಮೂಲಕ 120 ಹಳ್ಳಿಗಳಿಗೆ ವಾಷಿಂಗ್ ಸೋಡಾ ಮಿಶ್ರಣವನ್ನು ಸಿಂಪಡಿಸಿ, ರೋಗ ನಿಯಂತ್ರಣಕ್ಕೆ ಸಮರೋಪಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಡೀ ರಾಜ್ಯದಲ್ಲಿ ಇಂತಹ ಕೆಲಸ ಬೇರೆಲ್ಲೂ ಆಗಿಲ್ಲ ಎಂದು ವಿವರಿಸುತ್ತಾರೆ.
ಕುಮಾರಸ್ವಾಮಿ ನಡೆಸಲಿರುವ ಪಾದಯಾತ್ರೆಯು ರೈತ ಕಾಳಜಿಯಿಂದೇನೂ ಅಲ್ಲ. ತಮ್ಮ ಆರೋಗ್ಯ ಸುಧಾರಿಸಿಕೊಳ್ಳಲೋ ಎಂಬಂತೆ ಅವರು ಪಾದಯಾತ್ರೆ ಮಾಡಲಿದ್ದಾರೆ ಎಂದೂ ಕಾಂಗ್ರೆಸ್ ನಾಯಕರು ಮೂದಲಿಸುತ್ತಾರೆ.
ಈ ಮಧ್ಯೆ, ರಾಸುಗಳ ಮಾಲೀಕರು ಸತ್ತ ರಾಸುಗಳ ಮುಂದೆ ರಾಜಕಾರಣಿಗಳ ದೊಂಬರಾಟವನ್ನು ನೋಡಿ ಮತ್ತಷ್ಟು ಖಿನ್ನರಾಗಿದ್ದಾರೆ.