ಬಿಜೆಪಿಯಲ್ಲಿ 17 ವಲಸಿಗರ ಒಗ್ಗಟ್ಟು ಮುರಿದರಾ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್?
ಬೆಂಗಳೂರು, ನ. 30: ಸಂಪುಟ ವಿಸ್ತರಣೆ ಕುರಿತು ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನ ಮುಂದುವರೆದಿದೆ. ಸಂಪುಟ ಸೇರಲು ತುದಿಗಾಲಲ್ಲಿ ನಿಂತಿರುವ ಶಾಸಕರ ಪಡೆಯೆ ಬಿಜೆಪಿಯಲ್ಲಿದೆ. ಅದರಲ್ಲಿಯೂ ಶಾಸಕಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹರಾಗಿ ಮತ್ತೆ ಶಾಸಕರಾಗಿರುವ ಎಲ್ಲ 17 ಜನರೂ ಮಂತ್ರಿಗಳಾಗಬೇಕು ಎಂಬ ಪ್ರಯತ್ನ ಜೋರಾಗಿದೆ. ಅವರೊಂದಿಗೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲೇಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ ಅವರ ಈ ಪ್ರಯತ್ನವೇ ಒಗ್ಗಟ್ಟಾಗಿದ್ದ ಎಲ್ಲ 17 ನಾಯಕರ ಒಗ್ಗಟ್ಟು ಮುರಿಯಲು ಕಾರಣವಾಗಿದೆ ಎನ್ನಲಾಗುತ್ತಿದೆ. ಅದಕ್ಕೆ ಮುನ್ನುಡಿ ಎಂಬಂತೆ ಇತ್ತೀಚೆಗೆ ಸಚಿವ ಎಸ್.ಟಿ. ಸೋಮಶೇಖರ್ ಅವರ ನೇತೃತ್ವದಲ್ಲಿ ಸಭೆಯೂ ನಡೆದಿದೆ. ಬೆಂಗಳೂರಿನ ಖಾಸಗಿ ಹೊಟೆಲ್ನಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಸೇರಿರುವ ಮೂವರನ್ನು ಹೊರತು ಪಡಿಸಿ, ಬಹುತೇಕ ಎಲ್ಲ ವಲಸಿಗ ನಾಯಕರು ಭಾಗವಹಿಸಿದ್ದರು. ಜೊತೆಗೆ ಈ ಸಭೆ ನಡೆದಿದ್ದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಎಂಬುದು ಹೊಸ ಬೆಳವಣಿಗೆ.
ರಮೇಶ್ ಜಾರಕಿಹೊಳಿ ಮೇಲೆ ಅಸಮಾಧಾನ
ಮೈತ್ರಿ ಸರ್ಕಾರ ಪತನವಾಗುವಾಗ ಅತೃಪ್ತ ಶಾಸಕರ ನೇತೃತ್ವದ ವಹಿಸಿದ್ದ, ಈಗಿನ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧವೇ ಉಳಿದ ವಲಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯೆ ಇದಕ್ಕೆ ಸಾಕ್ಷಿ. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೂಲಕ ತಮ್ಮ ರಾಜಕೀಯ ಭವಿಷ್ಯವನ್ನೇ ಸವಾಲಿಗೆ ಒಡ್ಡಿರುವ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಸೇರಿದಂತೆ ಹಲವು ಶಾಸಕರು ಮಂತ್ರಿ ಮಂಡಲ ಸೇರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಆದರೆ ತಮ್ಮೊಂದಿಗೆ ಬಿಜೆಪಿ ಸೇರಿದವರನ್ನು ಬಿಟ್ಟು, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರನ್ನು ಮಂತ್ರಿ ಮಾಡಲು ಸಚಿವ ರಮೇಶ್ ಜಾರಕಿಹೊಳಿ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಇದು ಉಳಿದವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಸಚಿವ ಎಸ್.ಟಿ. ಸೋಮಶೇಖರ್ ಅವರೇ ಖುದ್ದಾಗಿ ಎಲ್ಲರಿಗೂ ದೂರವಾಣಿ ಕರೆ ಮಾಡಿ ಸಭೆಗೆ ಬರುವಂತೆ ಕರೆದಿದ್ದರು ಎನ್ನಲಾಗಿದೆ. ದೆಹಲಿಯಲ್ಲಿದ್ದ ರಮೇಶ್ ಜಾರಕಿಹೊಳಿ, ಬೆಳಗಾವಿಯಲ್ಲಿದ್ದ ಶ್ರೀಮಂತ ಪಾಟೀಲ್ ಹಾಗೂ ಮಹೇಶ್ ಕುಮಟಳ್ಳಿ ಅವರು ಸಭೆಗೆ ಬಂದಿರಲಿಲ್ಲ.
ಶಾಸಕರು, ಸಚಿವರ ಸಭೆ
ಅವರನ್ನು ಹೊರತು ಪಡಿಸಿದರೆ, ಬೈರತಿ ಬಸವರಾಜು, ಎಂ.ಟಿ.ಬಿ. ನಾಗರಾಜ್, ಶಿವರಾಂ ಹೆಬ್ಬಾರ್, ಆನಂದ್ ಸಿಂಗ್, ಆರ್. ಶಂಕರ್, ಕೆ. ಗೋಪಾಲಯ್ಯ, ಕೆ.ಸಿ. ನಾರಾಯಣಗೌಡ ಸೇರಿದಂತೆ ಉಳಿದವರು ಸಭೆಯಲ್ಲಿ ಭಾಗವಹಿಸಿದ್ದರು. ತಮ್ಮ ತಮ್ಮ ಕ್ಷೇತ್ರಗಳಿಗೆ ಅನುದಾನ ಪಡೆಯುವ ನಿಟ್ಟಿನಲ್ಲಿ ಚರ್ಚಿಸಲು ಸಭೆ ಸೇರಿದ್ದಾಗ ಹೇಳಿದ್ದರು. ಆದರೆ ಅದಕ್ಕಿಂತ ಹೆಚ್ಚಾಗಿ ನಡೆದಿದ್ದು ಮಂತ್ರಿ ಮಂಡಲ ಸೇರುವ ಕಸರತ್ತಿನ ಚರ್ಚೆ.
ಎಲ್ಲರೂ ಮಂತ್ರಿಗಳಾಗ ಬೇಕು
ಸಭೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ನಡೆಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗಿದೆ. ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಅವರಿಗೆ ಮಂತ್ರಿ ಪದವಿ ಕೊಡಿಸಲು ಬೆಂಗಳೂರು ಹಾಗೂ ದೆಹಲಿಯಲ್ಲಿ ರಮೇಶ್ ಜಾರಕಿಹೊಳಿ ಅವರು ಲಾಬಿ ಮಾಡುತ್ತಿರುವುದು ಸರಿಯಲ್ಲ. ಬಿಜೆಪಿ ಸೇರಿರುವ 17 ಜನರಿಗೆ ಮಂತ್ರಿಸ್ಥಾನ ಪಡೆಯುವುದು ಮಾತ್ರ ನಮ್ಮ ಗುರಿಯಾಗಿರಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ. ಜೊತೆಗೆ ರಮೇಶ್ ಜಾರಕಿಹೊಳಿ ಅವರಿಗೆ ಇದನ್ನೇ ಸ್ಪಷ್ಟವಾಗಿ ತಿಳಿಸಲು ಸಭೆ ನಡೆಸಿರುವುದು ಗೊತ್ತಾಗಲಿ ಎಂದೂ ಚರ್ಚೆ ಆಗಿದೆ ಎನ್ನಲಾಗಿದೆ.
ಒಗ್ಗಟ್ಟು ಮುರಿದ ಸಿ.ಪಿ. ಯೋಗೇಶ್ವರ್?
ಸಚಿವ ರಮೇಶ್ ಜಾರಕಿಹೊಳಿ ಅವರ ನಡೆಗೆ ವಿರೋಧ ವ್ಯಕ್ತಪಡಿಸಿದ್ದು ಅಲ್ಲದೆ, ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಹೇಳಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ಜೊತೆಗೆ ವಲಸಿಗರೊಂದಿಗೆ 105 ಬಿಜೆಪಿಯ ಶಾಸಕರೂ ಈ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣ ಎಂಬ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಹೇಳಿಕೆಯ ಬಗ್ಗೆಯೂ ಚರ್ಚೆ ಆಗಿದೆ ಎನ್ನಲಾಗಿದೆ.
ಇಂತಹ ಹೇಳಿಕೆಗಳಿಂದ ನಮಗೆ ನೋವಾಗಿದ್ದು, ಈ ಬಗ್ಗೆ ಗಮನ ಹರಿಸಬೇಕು. ಹಾಗೂ ತಕ್ಷಣ ಸಂಪುಟ ವಿಸ್ತರಣೆ ಮಾಡುವ ಮೂಲಕ ಎಲ್ಲ 16 ಜನರಿಗೂ ಮಂತ್ರಿಸ್ಥಾನ ಕೊಡಬೇಕು ಎಂಬ ಬೇಡಿಕೆಗಳೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಒಟ್ಟಾರೆ ನಾವೆಲ್ಲ 17 ಜನರೂ ಒಗ್ಗಟ್ಟಾಗಿದ್ದೇವೆ ಎಂದು ಆಗಾಗ ಹೇಳಿಕೆ ಕೊಡುತ್ತಿದ್ದ ಬಿಜೆಪಿ ಸೇರಿದ್ದ ನಾಯಕರ ಒಗ್ಗಟ್ಟು ಮುರಿಯಲು ಪರೋಕ್ಷವಾಗಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರೇ ಕಾರಣವಾಗಿದ್ದಾರೆ ಎಂಬ ಚರ್ಚೆಗಳು ಬಿಜೆಪಿಯಲ್ಲಿ ನಡೆದಿದೆ.