ಸ್ವಲ್ಪ ದಿನದಲ್ಲೇ ಒಳ್ಳೆಯ ಸುದ್ದಿ ಕೊಡ್ತೀನಿ ಎಂದ ರಮೇಶ್ ಜಾರಕಿಹೊಳಿ
ಬೆಳಗಾವಿ, ಏಪ್ರಿಲ್ 24: ಕಾಂಗ್ರೆಸ್ ಹೊಸ್ತಿಲು ದಾಟಿ ಒಂದು ಕಾಲು ಹೊರಗಿಟ್ಟಿರುವ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ, ತಮ್ಮೊಟ್ಟಿಗೆ ಇನ್ನಷ್ಟು ಮುಖಂಡರನ್ನು ಕರೆದೊಯ್ಯುವ ಸೂಚನೆ ನೀಡಿದ್ದಾರೆ.
ಸಹೋದರ ಸತೀಶ್ ಜಾರಕಿಹೊಳಿ ಜತೆ ಜಟಾಪಟಿ ನಡೆಸಿರುವ ರಮೇಶ್ ಜಾರಕಿಹೊಳಿ, ಅವರ ವಿರುದ್ಧ ಮತ್ತೆ ವಾಕ್ಸಮರ ನಡೆಸಿದ್ದಾರೆ.
ಬೆಳಗಾವಿಯಿಂದ ಬೆಂಗಳೂರಿಗೆ ತಲುಪಿರುವ ರಮೇಶ್, ಗುರುವಾರ ಅತೃಪ್ತ ಶಾಸಕರ ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ ಅದಷ್ಟು ಬೇಗನೆ ಒಳ್ಳೆಯ ಸುದ್ದಿ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ. ರಮೇಶ್ ಅವರೊಂದಿಗೆ ಕಾಂಗ್ರೆಸ್ನ ಕೆಲವು ಅತೃಪ್ತ ಶಾಸಕರು ಕೂಡ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.
ಸಹೋದರರ ಆರೋಪ-ಪ್ರತ್ಯಾರೋಪ: ಇಂದೇ ರಮೇಶ್ ಜಾರಕಿಹೊಳಿ ರಾಜೀನಾಮೆ?
ಸತೀಶ್ ಮತ್ತು ರಮೇಶ್ ನಡುವಿನ ಭಿನ್ನಮತ ಪರಿಹರಿಸಲು ಮಧ್ಯಸ್ಥಿಕೆ ವಹಿಸಲು ಮತ್ತು ಅವರೊಂದಿಗೆ ಮಾತನಾಡಲು ತಾವು ಸಿದ್ಧ ಎಂದಿರುವ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದ ರಮೇಶ್, ಡಿ.ಕೆ. ಶಿವಕುಮಾರ್ ಜತೆ ಮಾತುಕತೆ ಆಡುವುದಿಲ್ಲ. ಆತ ನನ್ನ ಲೆವೆಲ್ ಅಲ್ಲ ಎಂದು ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಾನು ಸಚಿವನಾಗಿ ಸಿದ್ದರಾಮಯ್ಯ ಅವರೊಂದಿಗೆ ಚೆನ್ನಾಗಿಯೇ ಇದ್ದೆ. ನನ್ನ ಮನೆಗೆ ಬಂದು ಕಣ್ಣೀರು ಹಾಕಿದ ಸತೀಶ್, ಬಳಿಕ ನನಗೇ ಮೋಸ ಮಾಡಿದ. ಈಗ ನಿಷ್ಠಾವಂತ ಕಾಂಗ್ರೆಸ್ಸಿಗ ಎಂದು ಬಿಂಬಿಸಿಕೊಳ್ಳುತ್ತಿದ್ದಾನೆ ಎಂದು ಕಿಡಿಕಾರಿದರು.
ಸಾಮೂಹಿಕ ರಾಜೀನಾಮೆ
'ನಾನು ರಾಜೀನಾಮೆ ನೀಡಲು ಈಗಲೇ ಸಂಕಲ್ಪ ಮಾಡಿದ್ದೇನೆ. ಅದಕ್ಕೆ ನಾನು ಅಚಲ. ಒಬ್ಬನೇ ರಾಜೀನಾಮೆ ನೀಡಲು ಸಿದ್ಧನಿದ್ದೆ. ಸಾಮೂಹಿಕ ರಾಜೀನಾಮೆ ನೀಡುವಂತೆ ಹಿತೈಷಿಗಳು ಸಲಹೆ ನೀಡಿದರು. ಎಲ್ಲರೂ ರಾಜೀನಾಮೆ ನೀಡುವುದು ಒಳ್ಳೆಯದು ಎಂದರು. ನಮ್ಮ ರಾಜೀನಾಮೆ ಬೆದರಿಕೆಯನ್ನು 'ತೋಳ ಬಂತು ತೋಳ' ಎಂಬುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಲೇವಡಿ ಮಾಡಿದ್ದರು. ಅವರು ಹೇಳಿದ್ದು ಸರಿ ಇದೆ. ಅದಕ್ಕೆ ಒಬ್ಬನೇ ರಾಜೀನಾಮೆ ನೀಡುವುದು ಬೇಡ ಎಂದು ತೀರ್ಮಾನಿಸಿದೆ' ಎಂದು ರಮೇಶ್ ತಿಳಿಸಿದರು.
ರಮೇಶ್ ಜಾರಕಿಹೊಳಿ ರಾಜೀನಾಮೆ ಧಮ್ಕಿ: ಡಿಕೆಶಿ ಡೋಂಟ್ ಕೇರ್
ನಾನೇ ಸಚಿವ ಸ್ಥಾನ ಬಿಟ್ಟಿದ್ದು
'ರಮೇಶ್ ಏನೋ ವಸ್ತು ಕಳೆದುಕೊಂಡಿದ್ದಾನೆ. ಅದಕ್ಕೆ ಹೀಗೆಲ್ಲ ಆಡುತ್ತಿದ್ದಾನೆ' ಎಂಬ ಸತೀಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಮೇಶ್, ಸಚಿವ ಸ್ಥಾನಕ್ಕೆ ವಸ್ತು ಎಂದು ಹೇಳುತ್ತಿರುವುದು. ಸಚಿವ ಸ್ಥಾನವನ್ನು ನಾನು ಕಳೆದುಕೊಂಡಿಲ್ಲ. ನಾನೇ ಬೇಡ ಎಂದು ಬಿಟ್ಟಿರುವುದು. ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿಲ್ಲ. ನನಗೆ ಆತ ಎಷ್ಟು ಮೋಸ ಮಾಡಿದ್ದಾನೆ ಎನ್ನುವುದನ್ನು ನೀವೇ ನೋಡಿದ್ದೀರಿ ಎಂದು ಹೇಳಿದರು.
ಡಿಕೆ ಶಿವಕುಮಾರ್ ಏನೂ ಲೀಡರ್ ಅಲ್ಲ. ಅವನು ನಮ್ಮ ಲೆವೆಲ್ ಅಲ್ಲ. ನಮ್ಮ ಲೆವೆಲ್ಗೆ ರಾಹುಲ್ ಗಾಂಧಿ ಹತ್ತಿರ ಮಾತಾಡ್ತೀನಿ. ಇಂದು ಇಲ್ಲವೇ ನಾಳೆ ಎಲ್ಲರೂ ರಾಜೀನಾಮೆ ನೀಡುತ್ತೇವೆ ಎಂದರು.
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಡುವ ಕುರಿತು ಸಹೋದರ ಹೇಳಿದ್ದೇನು?
ಏನೋ ವಸ್ತು ಕಳೆದುಕೊಂಡಿದ್ದಾನೆ
ರಮೇಶ್ ಏನೋ ವಸ್ತು ಕಳೆದುಕೊಂಡಿದ್ದಾನೆ. ಆ ಹತಾಶೆಯಿಂದಾಗಿ ಅವನ ಸಂಕಟಗಳನ್ನು ತಡೆಯಲಾಗದೆ ನಮ್ಮನ್ನೆಲ್ಲ ಇಲ್ಲಿ ತಂದು ಎಳೆಯುತ್ತಿದ್ದಾನೆ. ಏನು ಕಳೆದುಕೊಂಡಿರಿ? ಹೇಗೆ ಎಂದು ಅವನನ್ನೇ ಕೇಳಿ ಎಂದು ಸತೀಶ್ ಜಾರಕಿಹೊಳಿ ವ್ಯಂಗ್ಯವಾಗಿ ಹೇಳಿದರು.
ನಾನು ಎಲ್ಲೂ ಹೋಗಿಲ್ಲ, ಕಾಂಗ್ರೆಸ್ ನಲ್ಲೇ ಇದ್ದೇನೆ: ಲಖನ್ ಜಾರಕಿಹೊಳಿ
ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ್ದಲ್ಲ
ಆರಂಭದಲ್ಲಿ ಅಸಮಾಧಾನಗೊಂಡಿದ್ದ ನಾವು ಭಿನ್ನಮತ ಚಟುವಟಿಕೆ, ಗುಂಪುಗಾರಿಕೆಯನ್ನು ನಿಲ್ಲಿಸಿದೆವು. ರಮೇಶ್ ಮುಂದುವರಿಸಿದರು. ಸಿದ್ದರಾಮಯ್ಯ ಅವರಿಗೂ ಇದಕ್ಕೂ ಸಂಬಂಧವಿಲ್ಲ. ಉಜಿರೆಗೆ ಎಂಟು ಜನ ಶಾಸಕರು ಹೋಗಿ ಸಿದ್ದರಾಮಯ್ಯ ಹೆಸರು ಕೆಡಿಸಲು ಪ್ರಯತ್ನಿಸಿದ್ದರು. ಪಕ್ಷದಲ್ಲಿ ತನಗಾದ ಸಮಸ್ಯೆ ಬಗ್ಗೆ ರಮೇಶ್ ಯಾರ ಜತೆಗೂ ಚರ್ಚಿಸಿಲ್ಲ. ಹೀಗಿರುವಾಗ ಆತನ ತೊಂದರೆ ಏನು ಎಂಬುದು ಯಾರಿಗೆ ತಾನೆ ಗೊತ್ತಾಗುತ್ತದೆ. ಸರ್ಕಾರ ಬೀಳಿಸುತ್ತೇನೆ, ಅವರು ಹೀಗೆ ಮಾಡಿದ್ದಾರೆ, ಅವರು ಹಾಗೆ ಮಾಡುತ್ತಾರೆ ಎಂದು ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಿಡಿಕಾರಿದರು.