ಜಾರಕಿಹೊಳಿ ಪ್ರಕರಣ: ಯುವತಿಯಿಂದ ಮಾಹಿತಿ ಪಡೆದು ಮುಂದಿನ ಕ್ರಮ
ಬೆಂಗಳೂರು, ಮಾರ್ಚ್ 2: ರಾಸಲೀಲೆ ಸಿ.ಡಿ ವಿಚಾರದಲ್ಲಿ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ದೂರನ್ನು ಸ್ವೀಕರಿಸಲಾಗಿದೆ. ಸಂತ್ರಸ್ತೆಯಿಂದಲೇ ಮಾಹಿತಿ ಪಡೆದುಕೊಂಡ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ವಿರುದ್ಧ ಯುವತಿಯ ಕುಟುಂಬದವರ ಪರವಾಗಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸಲ್ಲಿಸಿರುವ ದೂರಿನ ಬಗ್ಗೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ದೂರಿನ ಬಗ್ಗೆ ಮೊದಲು ಮಾಹಿತಿ ಪಡೆದುಕೊಳ್ಳುತ್ತೇವೆ. ಇಂತಹ ಪ್ರಕರಣಗಳ ತನಿಖೆಗೆ ಬೇರೆಯದೇ ನಿಯಮಾವಳಿಗಳಿವೆ. ದೂರು ನೀಡಿದ್ದವರ ಬಳಿಯಿರುವ ಮಾಹಿತಿ ಪಡೆದಿದ್ದೇವೆ. ಮುಂದಿನ ಕ್ರಮ ಏನೆಂದು ನಿರ್ಧರಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ; ಸಿಎಂ ಭೇಟಿಯಾದ ಗೃಹ ಸಚಿವರು
ದೂರು ನೀಡಿರುವ ದಿನೇಶ್ ಅವರು ಆ ಕುಟುಂಬಸ್ಥರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಸಂತ್ರಸ್ತೆ ಕುಟುಂಬದವರ ಬಗ್ಗೆ ವಿವರ ಪಡೆದು ಅವರನ್ನು ಸಂಪರ್ಕಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಸಂತ್ರಸ್ತೆಯ ಕುಟುಂದದವರೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಆಕೆಯ ಕುಟುಂಬದವರು ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ರಾಸಲೀಲೆ ಪ್ರಕರಣ: ಸಚಿವ ರಮೇಶ್ ಜಾರಕಿಹೊಳಿ ತಲೆದಂಡ ಕೇಳಲಿದೆಯಾ ಬಿಜೆಪಿ?
Recommended Video
ನಮಗೆ ಜೀವ ಬೆದರಿಕೆ ಇದೆ. ಹೀಗಾಗಿ ದೂರು ನೀಡಲು ಮುಂದೆ ಬಂದಿಲ್ಲ ಎಂದು ಯುವತಿಯ ಕುಟುಂಬದವರು ಹೇಳಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ದಿನೇಶ್ ಅವರು ಈ ಪ್ರಕರಣಕ್ಕೆ ಸಂಬಂಧಿಸದ ವ್ಯಕ್ತಿಯಾಗಿರುವುದರಿಂದ ಸಂತ್ರಸ್ತೆ ಅಥವಾ ಆಕೆಯ ಕುಟುಂಬದವರ ಹೇಳಿಕೆ ಅಗತ್ಯವಾಗಿದೆ. ಹೀಗಾಗಿ ಯುವತಿಯನ್ನು ಠಾಣೆಗೆ ಕರೆಯಿಸಿ ಹೇಳಿಕೆ ಪಡೆಯುವ ಸಾಧ್ಯತೆ ಇದೆ. ಅದರ ಬಳಿಕವಷ್ಟೇ ಎಫ್ಐಆರ್ ದಾಖಲಿಸಲಾಗುತ್ತದೆ.