ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ ದೂರಿನಲ್ಲಿ ಏನಿದೆ? ಸಂಪೂರ್ಣ ವಿವರ ಇಲ್ಲಿದೆ
ಬೆಂಗಳೂರು, ಮಾರ್ಚ್ 2: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ರಾಸಲೀಲೆ ವಿಡಿಯೋ ಬಿರುಗಾಳಿ ಎಬ್ಬಿಸಿದೆ. 'ಸಾಹುಕಾರ್' ಎಂದೇ ಕರೆಸಿಕೊಳ್ಳುತ್ತಿದ್ದ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಯುವತಿಗೆ ಕೆಲಸ ಕೊಡಿಸುವುದಾಗಿ ವಂಚಿಸಿ ಆಕೆಯ ಜತೆ ರಾಸಲೀಲೆ ನಡೆಸಿದ ಆರೋಪ ತೀವ್ರ ಸಂಚಲನ ಮೂಡಿಸಿದೆ. ಆರೋಪದ ಜತೆಗೆ ರಮೇಶ್ ಜಾರಕಿಹೊಳಿ ಅವರ ವಿಡಿಯೋ ಕೂಡ ಬಹಿರಂಗವಾಗಿದೆ.
ರಾಮನಗರ ಜಿಲ್ಲೆಯ ಕನಕಪುರ ಮೂಲದ ನಾಗರಿಕ ಹಕ್ಕು ಹೋರಾಟ ಸಮಿತಿಯ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಮಂಗಳವಾರ ಪೊಲೀಸ್ ಆಯುಕ್ತರಿಗೆ ರಮೇಶ್ ಜಾರಕಿಹೊಳಿ ವಿರುದ್ಧ ಯುವತಿಯ ಕುಟುಂಬಸ್ಥರ ಪರವಾಗಿ ದೂರು ಸಲ್ಲಿಸಿದ್ದಾರೆ. ಈ ದೂರಿನೊಂದಿಗೆ ಅವರು ರಾಸಲೀಲೆಯ ಆಡಿಯೋ, ವಿಡಿಯೋ ಸಿಡಿಯನ್ನು ಅಡಕ ಮಾಡಿದ್ದಾಗಿ ತಿಳಿಸಿದ್ದಾರೆ.
ಇದು ಅದೇ "ಸಿಡಿ'ನಾ ಅಥವಾ ಆ "ಸಿಡಿ' ಬೇರೆ ಇದೆಯಾ?
ಯುವತಿಯ ಕುಟುಂಬದವರಿಗೆ ಜೀವ ಬೆದರಿಕೆ ಇರುವ ಕಾರಣ ಅವರು ಸ್ವತಃ ಠಾಣೆಗೆ ಬಂದು ದೂರು ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ದಿನೇಶ್ ಕಲ್ಲಹಳ್ಳಿ ಅವರ ಮೂಲಕ ದೂರು ಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ. ತಾವು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಠಾಣೆಗೆ ಬಂದು ಹೇಳಿಕೆ ದಾಖಲಿಸುತ್ತೇವೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಆಮಿಷ ಒಡ್ಡಿ, ಬೆದರಿಕೆ
ರಾಜ್ಯದ ಹಾಲಿ ಬೃಹತ್ ನೀರಾವರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಉದ್ಯೋಗದ ಆಮಿಷ ಒಡ್ಡಿ, ಜೀವ ಬೆದರಿಕೆ ಹಾಕುತ್ತಿರುವ ಬಗ್ಗೆ ದೂರು ನೀಡಲು ಬಯಸುತ್ತೇನೆ ಎಂದು ದಿನೇಶ್ ಕಲ್ಲಹಳ್ಳಿ ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ; ಕಾಂಗ್ರೆಸ್ ಸರಣಿ ಟ್ವೀಟ್
ಉದ್ಯೋಗ ನೀಡುವುದಾಗಿ ವಂಚನೆ
ಉತ್ತರ ಕರ್ನಾಟಕ ಮೂಲದ ಬಡಕುಟುಂಬದ ಯುವತಿಯೊಬ್ಬಳು ಬೆಂಗಳೂರಿನ ಆರ್ಟಿ ನಗರದ ವಸತಿ ನಿಲಯದಲ್ಲಿ ವಾಸ ಮಾಡುತ್ತಿದ್ದು, ಸದರಿ ಯುವತಿ ಕಿರುಚಿತ್ರ ನಿರ್ಮಾಣಕ್ಕೆಂದು ಸಚಿವ ರಮೇಶ್ ಜಾರಕಿಹೊಳಿ ಬಳಿ ಬಂದಾಗ ನಿನಗೆ ಕೆಪಿಟಿಸಿಎಲ್ನಲ್ಲಿ ಉದ್ಯೋಗ ನೀಡುವುದಾಗಿ ತಿಳಿಸಿ ಆಕೆಯನ್ನು ತಮ್ಮ ಕಾಮತೃಷೆಗಾಗಿ ಬಳಸಿಕೊಂಡರು. ನಂತರ ಉದ್ಯೋಗವನ್ನು ನೀಡದೆ ಆಕೆಗೆ ವಂಚಿಸಿರುತ್ತಾರೆ. ಸದರಿ ಯುವತಿ ಬಳಿ ತಮ್ಮ ಕಾಮದಾಟದ ವಿಡಿಯೋ ಇದೆ ಎಂದು ತಿಳಿಯುತ್ತಿದ್ದಂತೆ ಆಕೆ ಮತ್ತು ಆಕೆಯ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಒಡ್ಡಿರುತ್ತಾರೆ.
ಕ್ರಿಮಿನಲ್ ಮೊಕದ್ದಮೆ ಹಾಕಿ
ಸಾಮಾಜಿಕ ಹೋರಾಟದಲ್ಲಿ ಗುರುತಿಸಿಕೊಂಡಿರುವ ನನ್ನ ಬಳಿ ಕುಟುಂಬದ ಸದಸ್ಯರೊಬ್ಬರು ಬಂದು ಈ ವಿಷಯ ಮತ್ತು ಸಿ.ಡಿಯನ್ನು ತಲುಪಿಸಿ ಈ ವಿವರಗಳನ್ನು ನೀಡಿರುತ್ತಾರೆ. ತಾವು ದಯಮಾಡಿ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಸಂಬಂಧಪಟ್ಟ ಸಚಿವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಸಂತ್ರಸ್ತ ಯುವತಿಯ ರಕ್ಷಣೆಗೆ ಮುಂದಾಗುವಂತೆ ತಮ್ಮಲ್ಲಿ ಕೋರುತ್ತೇನೆ ಎಂದು ದಿನೇಶ್ ಕಲ್ಲಹಳ್ಳಿ ದೂರಿನ ಪತ್ರದಲ್ಲಿ ತಿಳಿಸಿದ್ದಾರೆ.
ರಾಜೀನಾಮೆಗೆ ಆಗ್ರಹ
ರಮೇಶ್ ಜಾರಕಿಹೊಳಿ ಅವರ ರಾಸಲೀಲೆಯ ವಿಡಿಯೋ ಬಹಿರಂಗವಾಗುತ್ತಿದ್ದಂತೆಯೇ ವಿರೋಧಪಕ್ಷಗಳು ವ್ಯಾಪಕ ಪ್ರತಿಭಟನೆಗಳನ್ನು ಆರಂಭಿಸಿದ್ದು, ಜಾರಕಿಹೊಳಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಈ ವಿಚಾರವಾಗಿ ಎಚ್ಚರಿಕೆಯ ಹೆಜ್ಜೆ ಇರಿಸಿದ್ದು, ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ಸಚಿವರು ಹಾಗೂ ಶಾಸಕರಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.