'ಕೈ'ಗೆ ಸಿಗದ ರಮೇಶ್ ಜಾರಕಿಹೊಳಿ ಬಿಜೆಪಿ ತೆಕ್ಕೆಗೆ ಜಾರಿದರಾ?
ಬೆಂಗಳೂರು, ಡಿಸೆಂಬರ್ 27: ಸಚಿವ ಸ್ಥಾನದಿಂದ ವಜಾಗೊಂಡು ಕಾಂಗ್ರೆಸ್ ಮೇಲೆ ತೀವ್ರ ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ ಅವರು ಯಾವ ಕಾಂಗ್ರೆಸ್ ನಾಯಕರ ಕೈಗೂ ಸಿಗುತ್ತಿಲ್ಲ.
ರಮೇಶ್ ಜಾರಕಿಹೊಳಿ ಅವರು ಮಹಾರಾಷ್ಟ್ರ ಹಾದಿ ಹಿಡಿದಿದ್ದಾರೆ ಎನ್ನಲಾಗಿದ್ದು, ಅಲ್ಲಿನ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಪಡ್ಣವೀಸ್ ಅವರ ಸಂಪರ್ಕದಲ್ಲಿದ್ದಾರೆ ಎನ್ನುವ ಊಹಾಪೋಹ ಹರಿದಾಡುತ್ತಿದೆ. ಈ ಹಿಂದೆ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಶಾಸಕರ ಜೊತೆ ಔತಣಕೂಟದಲ್ಲಿ ಪಾಲ್ಗೊಂಡಿದ್ದರು, ಆ ಘಟನೆ ಈಗಿನ ಸುದ್ದಿಗೆ ಪುಷ್ಠಿ ನೀಡಿದೆ.
ರಮೇಶ್ ಜಾರಕಿಹೊಳಿ ಅಪ್ಪಟ ಕಾಂಗ್ರೆಸ್ಸಿಗ: ಸಿದ್ದರಾಮಯ್ಯ
ಮೂಲಗಳ ಪ್ರಕಾರ ಔತಣಕೂಟದಲ್ಲಿ ಯಡಿಯೂರಪ್ಪ ಅವರ ಜೊತೆ ರಮೇಶ್ ಜಾರಕಿಹೊಳಿ ಅವರು ಮಾತನಾಡಿದ್ದರು, ಈ ಇಬ್ಬರ ನಡುವಿನ ಚರ್ಚೆಗೆ ಉಮೇಶ್ ಕತ್ತಿ ಸಾಥ್ ನೀಡಿದ್ದರು ಎನ್ನಲಾಗಿತ್ತು.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತುಕತೆ ಆಹ್ವಾನವನ್ನು ರಮೇಶ್ ಜಾರಕಿಹೊಳಿ ನಿರಾಕರಿಸಿದ್ದಾರೆ ಎನ್ನಲಾಗಿದ್ದು, ರಮೇಶ್ ಅವರನ್ನು ಸಮಾಧಾನಗೊಳಿಸುವ ಜವಾಬ್ದಾರಿ ಹೊತ್ತಿದ್ದ ನೂತನ ಸಚಿವ ಸತೀಶ್ ಜಾರಕಿಹೊಳಿ ಸಂಪರ್ಕಕ್ಕೂ ಅವರು ಲಭ್ಯವಾಗುತ್ತಿಲ್ಲ.
ರಮೇಶ್ ಜಾರಕಿಹೊಳಿ ಅಸಮಾಧಾನ : ಸತೀಶ್ ಜಾರಕಿಹೊಳಿ ಹೇಳಿದ್ದೇನು?
ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡುವುದು ಪಕ್ಕಾ ಎನ್ನಲಾಗುತ್ತಿದ್ದು, ತಮ್ಮ ಶಾಸಕ ಸ್ಥಾನಕ್ಕೂ ಅವರು ರಾಜೀನಾಮೆ ನೀಡುತ್ತಾರೆ ಎನ್ನಲಾಗಿದೆ.
ಇಂದು ರಮೇಶ್ ಜಾರಕಿಹೊಳಿ ಅವರು ದೇವೇಂದ್ರ ಪಡ್ಣವೀಸ್ ಅವರನ್ನು ಭೇಟಿ ಆಗಲಿದ್ದಾರೆ ಎಂಬ ಮಾತುಗಳು ಬೆಳಗಾವಿಯಲ್ಲಿ ದಟ್ಟವಾಗಿ ಕೇಳಿಬರುತ್ತಿವೆ. ಇಂದು ಬೆಳಿಗ್ಗೆ ರಮೇಶ್ ಅವರು ಗೋಖಾಕ್ ನಲ್ಲಿ ಕಾಣಿಸಿಕೊಂಡಿದ್ದರು, ನಂತರ ಅವರು ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದರು ಎನ್ನಲಾಗಿದೆ.
ರಮೇಶ ಜಾರಕಿಹೊಳಿ ಯಾವುದೇ ಬೇಡಿಕೆ ಇಟ್ಟಿಲ್ಲ: ಸತೀಶ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಅವರು, ರಾಜ್ಯ ಕಾಂಗ್ರೆಸ್ ನಾಯಕರ ಎಲ್ಲಾ ಮಾತುಕತೆ ಆಹ್ವಾನಗಳನ್ನು ಈಗಾಗಲೇ ಧಿಕ್ಕರಿಸಿದ್ದಾರೆ. ಪಢ್ಣವೀಸ್ ಅವರನ್ನು ಭೇಟಿ ಆಗುವ ಮಾಹಿತಿ ಅಧಿಕೃತವಾಗಿಲ್ಲವಾದರೂ, ಬೆಳಗಾವಿ ರಾಜಕೀಯ ವಲಯದಲ್ಲಿ ಈ ಸುದ್ದಿ ಜೋರಾಗಿ ಹರಿದಾಡುತ್ತಿದೆ.