ಆರ್.ಶಂಕರ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಅನರ್ಹತೆಗೆ ಕಾರಣ
ಬೆಂಗಳೂರು, ಜುಲೈ 25: ದೀರ್ಘವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು, ಎಲ್ಲ ಸಾಕ್ಷ್ಯಗಳನ್ನು ಉಲ್ಲೇಖಿಸಿ ಶಾಸಕರಾದ ಆರ್.ಶಂಕರ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಅವರುಗಳನ್ನು ವಿಧಾನಸಭೆ ಸದಸ್ಯತ್ವ ಸ್ಥಾನದಿಂದ ಅನರ್ಹ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಸ್ಪೀಕರ್ ಅವರು, ರಾಣೆಬೆನ್ನೂರು ಶಾಸಕ ಆರ್.ಶಂಕರ್, ಗೋಖಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರುಗಳನ್ನು 15ನೇ ವಿಧಾನಸಭೆಯ ಸದಸ್ಯತ್ವ ಸ್ಥಾನಕ್ಕೆ ಅನರ್ಹ ಗೊಳಿಸಿ ಆದೇಶ ಹೊರಡಿಸಿದ್ದಾರೆ.
BREAKING: 2023ರ ತನಕ ಶಾಸಕ ಸ್ಥಾನದಿಂದ ಆರ್ ಶಂಕರ್ ಅನರ್ಹ
ಈ ಮೂವರನ್ನು ಯಾವ ಕಾರಣದಿಂದ ಅನರ್ಹಗೊಳಿಸುವ ನಿರ್ಧಾರಕ್ಕೆ ಬಂದೆ ಎಂಬುದನ್ನು ಸಾಕ್ಷ್ಯಗಳ ಮೂಲಕ, ಹಳೆಯ ಪ್ರಕರಣಗಳ ಉಲ್ಲೇಖಗಳ ಮೂಲಕ, ಸಂವಿಧಾನದ ಪರಿಚ್ಛೇಧನಗಳ ಉಲ್ಲೇಖಗಳ ಮೂಲಕ ವಿವರಿಸಿದ ರಮೇಶ್ ಕುಮಾರ್ ಅವರು ಈ ಮೂವರೂ ಶಾಸಕರು 15 ನೇ ವಿಧಾನಸಭೆ ಅಸ್ಥಿತ್ವದಲ್ಲಿ ಇರುವ ವರೆಗೂ ಯಾವುದೇ ಕಾರಣಕ್ಕೂ ಇವರುಗಳು ಸದನವನ್ನು ಪ್ರವೇಶಿಸುವಂತಿಲ್ಲ ಎಂದು ಹೇಳಿದರು.
ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿದ್ದ ಆರ್.ಶಂಕರ್
ಕೆಪಿಜೆಪಿ ಪಕ್ಷದಿಂದ ರಾಣೆಬೆನ್ನೂರು ಕ್ಷೇತ್ರದಿಂದ ಗೆದ್ದಿದ್ದ ಆರ್.ಶಂಕರ್ ಮೈತ್ರಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದರು. ನಂತರ ಜೂನ್ 14 ರಂದು ತಮ್ಮ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿದ್ದರು. ಜೂನ್ 25 ರಂದು ವಿಲೀನ ಕಾರ್ಯ ಮುಗಿಸಿದ್ದರು. ಹಾಗಾಗಿ ಆರ್.ಶಂಕರ್ ಅವರು ಕಾಂಗ್ರೆಸ್ನ ಸದಸ್ಯರೆಂದೇ ಅಧಿಕೃತವಾಗಿ ಗುರುತಿಸಲ್ಪಡುತ್ತಿದ್ದರು.
ತಮಿಳುನಾಡು ಪ್ರಕರಣ ಉಲ್ಲೇಖ ಮಾಡಿದ ಸ್ಪೀಕರ್
ಆದರೆ ಅವರು ಜೂನ್ 7 ರಂದು ರಾಜ್ಯಪಾಲರಿಗೆ ಪತ್ರ ನೀಡಿ, ತಾವು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯುತ್ತಿರುವುದಾಗಿ ಹೇಳಿದ್ದರು. ಇದು ಪಕ್ಷ ವಿರೋಧಿ ನಡೆ ಎಂದು ಗುರುತಿಸಲಾಗಿದೆ ಎಂದ ಸ್ಪೀಕರ್ ಅವರು, ತಮಿಳುನಾಡು ಪ್ರಕರಣವನ್ನು ಉಲ್ಲೇಖಿಸಿ ಆರ್.ಶಂಕರ್ ಅವರನ್ನು 15 ನೇ ವಿಧಾನಸಭೆ ಸದಸ್ಯ ಸ್ಥಾನದಿಂದ ಉಚ್ಛಾಟನೆ ಮಾಡುವುದಾಗಿ ಹೇಳಿದರು.
ಅನರ್ಹಗೊಂಡ ಶಾಸಕರಿಂದ ಸುಪ್ರೀಂಕೋರ್ಟ್ಗೆ ಮೊರೆ
ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮೇಲೆ ಮುಂಚೆಯೇ ದೂರು
ಇನ್ನು ಮಹೇಶ್ ಕುಮಟಳ್ಳಿ, ರಮೇಶ್ ಜಾರಕಿಹೊಳಿ ಅವರ ಅನರ್ಹತೆ ಬಗ್ಗೆ ಸುದೀರ್ಘ ಕಾರಣ ನೀಡಿದ ರಮೇಶ್ ಕುಮಾರ್ ಅವರು. ಹಿಂದೆ ಫೆಬ್ರವರಿ ತಿಂಗಳಿನಲ್ಲಿಯೇ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ, ಉಮೇಶ್ ಜಾಧವ್ ಅವರುಗಳ ವಿರುದ್ಧ ದೂರು ನೀಡಿದ್ದರು. ಅದರಲ್ಲಿ ಜಾಧವ್ ಮತ್ತು ನಾಗೇಂದ್ರ ಅವರ ವಿರುದ್ಧ ನೀಡಿದ್ದ ದೂರು ಹಿಂಪಡೆದರು. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಅವರ ಮೇಲಿನ ದೂರು ಚಾಲ್ತಿಯಲ್ಲಿತ್ತು.
ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಅನರ್ಹ
ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಅವರುಗಳು ವಿಚಾರಣೆಗೆ ಹಾಜರಾಗಲಿಲ್ಲ, ಅಲ್ಲದೆ, ಅವರು ಪಕ್ಷಾಂತರ ಚಟುವಟಿಕೆ ನಡೆಸಿದ್ದು ಸಹ ಸ್ಪಷ್ಟವಾಗಿ ಗೋಚರ ಆಗುತ್ತಿತ್ತು. ಹಾಗಾಗಿ ಅವರನ್ನು 15 ನೇ ವಿಧಾನಸಭೆಯ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಲಾಗುತ್ತಿದೆ ಎಂದು ರಮೇಶ್ ಕುಮಾರ್ ಹೇಳಿದರು.
ಉಳಿದ ಶಾಸಕರ ವಿರುದ್ಧ ದೂರು ಇತ್ಯರ್ಥ ಕೆಲವು ದಿನಗಳಲ್ಲಿ
ಇನ್ನುಳಿದ ಅತೃಪ್ತ ಶಾಸಕರ ವಿರುದ್ಧ ಸಲ್ಲಿಸಿರುವ ದೂರುಗಳನ್ನು ವಿಲೇವಾರಿ ಮಾಡಲು ಇನ್ನಷ್ಟು ಸಮಯ ಬೇಕು ಎಂದು ರಮೇಶ್ ಕುಮಾರ್ ಅವರು ಹೇಳಿದ್ದು. 'ನಾನು ಯಾವುದೇ ನಿರ್ಣಯ ನೀಡುವ ಮೊದಲು ಅದಕ್ಕೆ ಸೂಕ್ತ ಸಾಕ್ಷ್ಯಗಳು, ದಾಖಲೆಗಳು ಇರಬೇಕು ಆತುರವಾಗಿ ತೀರ್ಪು ನೀಡಲು ಸಾಧ್ಯವಾಗುವುದಿಲ್ಲ ಹಾಗಾಗಿ ನಾನು ಕೆಲವು ಅಧ್ಯಯನಗಳನ್ನು ಮಾಡಿ, ನ್ಯಾಯವಾದಿಗಳ ಸಲಹೆ ಪಡೆದು ಶೀಘ್ರವಾಗಿಯೇ ಅವರ ರಾಜೀನಾಮೆ ಬಗ್ಗೆ ತೀರ್ಮಾನ ನೀಡುತ್ತೇನೆ' ಎಂದು ಹೇಳಿದರು.