ಸಾಹುಕಾರ ಜಾರಕಿಹೊಳಿಯ ಬೆತ್ತಲಾದ ಸಿಡಿ: ಅಲ್ಲಿಗೆ ಬಿಎಸ್ವೈ ಸರಕಾರದ ಪತನದ ಮುನ್ಸೂಚನೆ!
ನೈತಿಕತೆಗೆ ಬೆನ್ನು ತೋರದೇ ರಾಜ್ಯ ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತಾರಾ ಎನ್ನುವುದು ಒಂದು ಕಡೆ, ಇನ್ನೊಂದು ಕಡೆ ನಮ್ಮದು ಶಿಸ್ತಿನ ಪಕ್ಷ ಎನ್ನುವ ತಮ್ಮ ನಿಲುವಿಗೆ ಬಿಜೆಪಿ ನಿಂತು ಅವರ ರಾಜೀನಾಮೆಯನ್ನು ಪಡೆದುಕೊಳ್ಳುತ್ತಾ ಎನ್ನುವುದು ಇನ್ನೊಂದು ಕಡೆ.
ಕೆಪಿಟಿಸಿಎಲ್ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಉತ್ತರ ಕರ್ನಾಟಕ ಮೂಲದ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿರುವ ಸೆಕ್ಸ್ ಸಿಡಿಯೊಂದು, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸುತ್ತಿದೆ.
ರಾಜ್ಯ ರಾಜಕೀಯದಲ್ಲಿ ಸಿಡಿ ಸ್ಫೋಟ; ರಮೇಶ್ ಜಾರಕಿಹೊಳಿ ವಿರುದ್ಧ ದೂರು
ಬೆಳಗಾವಿ ಭಾಗದಲ್ಲಿ ಸಾಹುಕಾರ ಎಂದೇ ಕರೆಯಲ್ಪಡುವ ಬಿಜೆಪಿಯ ಪ್ರಭಾವಿ ನಾಯಕ ರಮೇಶ್ ಜಾರಕಿಹೊಳಿ ವಿರುದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಬೆಂಗಳೂರು ಪೊಲೀಸರಿಗೆ ದೂರು ನೀಡಿದ ನಂತರ, ರಾಜ್ಯ ಬಿಜೆಪಿಯ ಅಳಿಲು ಉಳಿವಿನ ಪ್ರಶ್ನೆ ಇನ್ನೊಂದು ಮುಗ್ಗಲಿಗೆ ಉರುಳುವ ಸಾಧ್ಯತೆಯಿದೆ.
ತಪ್ಪು ಮಾಡಿದರೆ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹೇಳಿದ ನಂತರ, ಹೈಕಮಾಂಡ್ ಜಾರಕಿಹೊಳಿಯ ರಾಜೀನಾಮೆಯನ್ನು ಪಡೆಯಲಿದೆಯಾ ಎನ್ನುವುದು ಸದ್ಯಕ್ಕೆ ಎದುರಿರುವ ಪ್ರಶ್ನೆ. ಒಂದು ವೇಳೆ, ಅವರು ರಾಜೀನಾಮೆ ನೀಡಿದ್ದೇ ಆದಲ್ಲಿ, ಯಡಿಯೂರಪ್ಪ ಸರಕಾರ ನಲುಗಾಡುವ ಸಾಧ್ಯತೆ ದಟ್ಟವಾಗುತ್ತದೆ. ಅದಕ್ಕೆ ಕಾರಣ ಇಲ್ಲದಿಲ್ಲ..
ರಾಸಲೀಲೆ ಪ್ರಕರಣ: ಸಚಿವ ರಮೇಶ್ ಜಾರಕಿಹೊಳಿ ತಲೆದಂಡ ಕೇಳಲಿದೆಯಾ ಬಿಜೆಪಿ?
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗ
ಸುಮಾರು ಮೂರು ವರ್ಷ ಹಿಂದಕ್ಕೆ ಫ್ಲ್ಯಾಷ್ ಬ್ಯಾಕ್ ವಿಚಾರಕ್ಕೆ ಹೋಗುವುದಾದರೆ, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂತು. ಆ ಸರಕಾರದಲ್ಲಿ ರಮೇಶ್ ಜಾರಕಿಹೊಳಿ ಸಚಿವರೂ ಆಗಿದ್ದರು. ಆದರೆ, ಸರಕಾರದ ಮೊದಲ ದಿನದಿಂದಲೇ ಅದನ್ನು ಉರುಳಿಸುವುದು ಹೇಗೆ ಎನ್ನುವುದರ ಬಗ್ಗೆಯೇ ಗಮನ ಹರಿಸಿದ್ದ ಸಾಹುಕಾರ, ಅದರಲ್ಲಿ ಯಶಸ್ವಿಯೂ ಆದರು. ಮಿತ್ರ ಮಂಡಳಿ ಎಂದು ಏನು ಇಂದು ಕರೆಯುತ್ತಿದ್ದೆವೇಯೋ ಅದರ ನೇತೃತ್ವವನ್ನು ವಹಿಸಿಕೊಂಡವರು ಇದೇ ಜಾರಕಿಹೊಳಿ.
ಸಂಪುಟ ವಿಸ್ತರಣೆಯಲ್ಲೂ ತಮ್ಮ ಶಕ್ತಿ ಪ್ರದರ್ಶಿಸಿದ ಜಾರಕಿಹೊಳಿ
ಅಲ್ಲಿಗೇ ಮುಗಿದಿಲ್ಲ.. ತಮ್ಮ ಹಿಂಬಾಗಿಲಿನ ಪ್ರಯತ್ನದ ಮೂಲಕ ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದ ನಂತರ ಪ್ರಭಾವಿ ಖಾತೆಯನ್ನೇ ಜಾರಕಿಹೊಳಿ ತಮ್ಮದಾಗಿಸಿಕೊಂಡರು. ಇನ್ನು ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆಯಲ್ಲೂ ಸಿ.ಪಿ.ಯೋಗೇಶ್ವರ್ ಅವರು ಸಚಿವರಾಗಿದ್ದಾರೆ ಎಂದರೆ ಅದು ಸಾಹುಕಾರನ ಕೃಪಾಕಟಾಕ್ಷ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ರಮೇಶ್ ಜಾರಕಿಹೊಳಿಯ ಭವಿಷ್ಯ ಈಗ ಅಮಿತ್ ಶಾ ಕೈಯಲ್ಲಿ
ನಾನು ಮನಸ್ಸು ಮಾಡಿದರೆ 24 ಗಂಟೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕರೆತರಬಲ್ಲೆ ಎಂದು ಹೇಳುತ್ತಿದ್ದ ಸಾಹುಕಾರ, ಈಗ ತಮ್ಮದೇ ಬುಡವನ್ನು ಲೈಂಗಿಕ ತೃಷೆಗಾಗಿ (ಎಂದು ಹೇಳಲಾಗುತ್ತಿರುವ) ತೋಡಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ನಾನೇ ರಾಜಕುಮಾರ ಎಂದು ಬೀಗುತ್ತಿದ್ದ ರಮೇಶ್ ಜಾರಕಿಹೊಳಿಯ ಭವಿಷ್ಯ ಈಗ ಅಮಿತ್ ಶಾ ಕೈಯಲ್ಲಿದೆ.
ಪರಿಸ್ಥಿತಿ ತಿಳಿಯಾದ ನಂತರ ಸರ್ಕಾರ ಉರುಳಿಸುವ ಪ್ಲ್ಯಾನ್
ಐದು ರಾಜ್ಯಗಳ ಉಪಚುನಾವಣೆಯ ಈ ಹೊತ್ತಿನಲ್ಲಿ ಬಿಜೆಪಿಗೆ ಇಂತಹ ಮುಜುಗರದ ವಿದ್ಯಮಾನಗಳು ಬೇಕಾಗಿಲ್ಲ. ಒಂದು ವೇಳೆ ಜಾರಕಿಹೊಳಿ ರಾಜೀನಾಮೆ ನೀಡಿದರೆ, ಬಿಎಸ್ವೈ ಸರಕಾರದ ಪತನಕ್ಕೂ ಇದು ಅಡಿಪಾಯ ಆಗಬಲ್ಲದು. ಯಾಕೆಂದರೆ, ಇವರ ಜೊತೆಗೆ ಬಂದ ಇತರ ಮುಖಂಡರಿಗೂ ಇದು ತಲೆತಗ್ಗಿಸುವ ವಿಚಾರ. ತನಗಿಲ್ಲದ ಸಚಿವ ಸ್ಥಾನ, ತಾನಿಲ್ಲದ ಸರಕಾರವನ್ನು ಜಾರಕಿಹೊಳಿ ಪರಿಸ್ಥಿತಿ ತಿಳಿಯಾದ ನಂತರ ಉರುಳಿಸುವ ಪ್ಲ್ಯಾನ್ ಹಾಕಿಕೊಳ್ಳಬಹುದು. ಒಟ್ಟಿನಲ್ಲಿ ಬಿಜೆಪಿಗೆ ಇದು ಪರೀಕ್ಷೆಯ ಸಮಯ.