ಮತ್ತೊಂದು ಸುತ್ತು ರಾಜಕೀಯ ಅಲ್ಲೋಲ ಕಲ್ಲೋಲ ನಡೆಸಲು ಹೊರಟ ಜಾರಕಿಹೂಳಿ?
ದಸರಾ, ದೀಪಾವಳಿ, ಸಂಕ್ರಾಂತಿ, ಯುಗಾದಿ.. ಹೀಗೆ ಬಿಜೆಪಿಯವರು ಮಹೂರ್ತ ಫಿಕ್ಸ್ ಮಾಡುತ್ತಲೇ ಬರುತ್ತಾರೆ, ಆದರೆ ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹಲವು ಬಾರಿ ವ್ಯಂಗ್ಯವಾಡಿದ್ದುಂಟು.
ಈಗ, ಅದೇ ರೀತಿ ಇನ್ನೊಂದು ದಿನಾಂಕ ನಿಗದಿಯಾಗಿದೆ. ಅದು ಇದೇ ಭಾನುವಾರ, ಜೂನ್ ಒಂಬತ್ತರಂದು. ಅತೃಪ್ತರ ಬಣದಲ್ಲಿ ಕಳೆದ ಒಂದು ವರ್ಷದಿಂದ ಗುರುತಿಸಿಕೊಂಡು ಬರುತ್ತಿರುವ ರಮೇಶ್ ಜಾರಕಿಹೊಳಿ, ಸಮ್ಮಿಶ್ರ ಸರಕಾರ ಅಲುಗಾಡಿಸುವ ಇನ್ನೊಂದು ಪ್ರಯತ್ನಕ್ಕೆ ಕೈಹಾಕಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸ್ವಾಮೀಜಿ ಹೇಳಿದ ಬುದ್ದಿಮಾತೇನು?
ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಹೇಗಾದರೂ ಮಾಡಿ ಸರಕಾರವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ಸಿಗೆ, ಯಾಕೆಂದರೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲೇ ಪಕ್ಷ ಅತಿ ಹೀನಾಯ ಸೋಲನ್ನು ಅನುಭವಿಸಿದ್ದಾಗಿದೆ.
ಅತೃಪ್ತರೊಂದಿಗೆ ರಮೇಶ್ ಜಾರಕಿಹೊಳಿ ಭೇಟಿ: ಸರ್ಕಾರದ ಭವಿಷ್ಯ ನಿರ್ಧಾರ?
ಮುಖ್ಯಮಂತ್ರಿ ಎನ್ನುವ ಪದವಿಯನ್ನು ಬಿಟ್ಟರೆ, ಜೆಡಿಎಸ್ ಗಿಂತ ಜಾಸ್ತಿ, ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರ ಉಳಿಯಬೇಕಾಗಿರುವುದು ಕಾಂಗ್ರೆಸ್ಸಿಗೆ. ತೆಲಂಗಾಣದಲ್ಲಿ ಹನ್ನೆರಡು ಕಾಂಗ್ರೆಸ್ ಶಾಸಕರು, ಕೆಸಿಆರ್ ಗೆ ಬೆಂಬಲ ಸೂಚಿಸಿ ರಾಜ್ಯಪಾಲರನ್ನು ಭೇಟಿಯಾಗಿದ್ದು ಕಾಂಗ್ರೆಸ್ಸಿಗಾದ ಭಾರೀ ಹಿನ್ನಡೆ. ಇದೇ ರೀತಿಯ ವಿದ್ಯಮಾನ ಕರ್ನಾಟಕದಲ್ಲಿ ನಡೆಯಬಾರದು ಎನ್ನುವುದು ಹೈಕಮಾಂಡಿನ ಸೂಚನೆ. ಆದರೆ..
ಸರಕಾರದ ಪಾಲಿಗೆ ರೆಬೆಲ್ ಆಗಿಯೇ ಗುರುತಿಸಿಕೊಂಡಿರುವ ರಮೇಶ್ ಜಾರಕಿಹೊಳಿ
ಹಿಂದಿನ ಕಾಂಗ್ರೆಸ್ ಹೈಕಮಾಂಡ್ ಬೇರೆ, ಈಗಿನ ರಾಹುಲ್ ಗಾಂಧಿಯೇ ಬೇರೆ. ಸೋನಿಯಾ ಗಾಂಧಿ ಮಾತಿಗೆ ತುಟಿಕ್ ಪಿಟಿಕ್ ಅನ್ನದ ಮುಖಂಡರು ಈಗ ಮಾತನಾಡುತ್ತಿದ್ದಾರೆ. ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಸರಕಾರದ ಪಾಲಿಗೆ ರೆಬೆಲ್ ಆಗಿಯೇ ಗುರುತಿಸಿಕೊಂಡಿರುವ ರಮೇಶ್ ಜಾರಕಿಹೊಳಿ, ಇನ್ನೊಂದು ಸುತ್ತಿನ 'ರಾಜಕೀಯ ಆಟ' ಆಡಲು ಮುಂದಾಗಿದ್ದಾರೆ ಎನ್ನುವ ಮಾಹಿತಿಯಿದೆ.
ಕಳೆದ ಎರಡು ಸರಕಾರ ಉರುಳಿಸುವ ಪ್ರಯತ್ನ ವಿಫಲ
ಕಳೆದ ಎರಡು ಸರಕಾರ ಉರುಳಿಸುವ ಪ್ರಯತ್ನ ವಿಫಲವಾಗಿದ್ದರಿಂದ, ರಮೇಶ್ ಈ ಬಾರಿ ಎಚ್ಚರಿಕೆಯ ಹೆಜ್ಜೆಯನ್ನು ಇಡಲು ನಿರ್ಧರಿಸಿದ್ದಾರೆ. ಮೊದಲು ಬಿಜೆಪಿಗೆ ನನ್ನಲ್ಲಿ ಸಂಖ್ಯಾಬಲವಿದೆ ಎಂದು ತೋರಿಸುವ ಅನಿವಾರ್ಯತೆಯಲ್ಲಿರುವ ಜಾರಕಿಹೊಳಿ, ತನ್ನ ಆಪ್ತ ಶಾಸಕರ ಸಭೆಯನ್ನು ಕರೆದಿದ್ದಾರೆ. ಆ ಮೂಲಕ, ಮುಂದಿನ ಹೆಜ್ಜೆಯನ್ನು ಇಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜಕೀಯವಾಗಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಲೇ ಬೇಕಾದ ರಮೇಶ್
ಬಿಜೆಪಿ ಮತ್ತು ಕಾಂಗ್ರೆಸ್ ಇಬ್ಬರೂ ತನ್ನನ್ನು ನಂಬುವ ಸ್ಥಿತಿಯಲ್ಲಿ ಇಲ್ಲ ಎನ್ನುವುದನ್ನು ಅರಿತಿರುವ ರಮೇಶ್ ಜಾರಕಿಹೊಳಿ, ರಾಜಕೀಯವಾಗಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಲೇ ಬೇಕಾಗಿದೆ. ಹಾಗಾಗಿ, ಬೆಂಗಳೂರಿನ ತಮ್ಮ ನಿವಾಸದಲ್ಲಿ ಶನಿವಾರ (ಜೂ 8) ಸಭೆಯನ್ನು ಕರೆದಿದ್ದು, ಐದು ಶಾಸಕರು ಭಾಗವಹಿಸಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಮಹೇಶ್ ಕುಮಠಳ್ಳಿ, ಬಿ ನಾಗೇಂದ್ರ, ಬಸವರಾಜ್ ದುದ್ದಲ್, ಪ್ರತಾಪಗೌಡ ಪಾಟೀಲ್, ಕಂಪ್ಲಿ ಗಣೇಶ್ ಅವರಿಗೆ ಬುಲಾವ್ ಹೋಗಿದೆ.
ಬಿಜೆಪಿ ಮುಖಂಡರಿಗೆ ರಮೇಶ್ ಜಾರಕಿಹೊಳಿ ಮನವರಿಕೆ ಮಾಡಬೇಕಾಗಿದೆ
ಒಂದು ವೇಳೆ ಎಲ್ಲಾ ಯೋಜನೆಯಂತೆ ನಡೆದರೆ, ನನಗೂ ಸಂಖ್ಯಾಬಲವಿದೆ ಎಂದು ಮೊದಲು ಬಿಜೆಪಿ ಮುಖಂಡರಿಗೆ ರಮೇಶ್ ಜಾರಕಿಹೊಳಿ ಮನವರಿಕೆ ಮಾಡಬೇಕಾಗಿದೆ. ಯಾಕೆಂದರೆ, ಅತ್ಯಂತ ಜಾಗರೂಕತೆಯಿಂದ ಮತ್ತು ನೂರಕ್ಕೆ ನೂರು ಯಶಸ್ಸು ಸಿಗುತ್ತದೆ ಎಂದರೆ ಮಾತ್ರ ಆಪರೇಶನ್ ಕಮಲಕ್ಕೆ ಕೈಹಾಕಬೇಕು ಎನ್ನುವ ಕಟ್ಟುನಿಟ್ಟಿನ ಫರ್ಮಾನು ಅಮಿತ್ ಶಾ ನೀಡಿರುವುದರಿಂದ, ಬಿಜೆಪಿ ರಿಸ್ಕ್ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ.
ಕನಿಷ್ಟ ಐದು ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸುವ ಯೋಜನೆ
ಈ ವಾರಾಂತ್ಯದಲ್ಲಿ ನಡೆಯುವ ರಮೇಶ್ ಜಾರಕಿಹೊಳಿ ಸಭೆ ಯಶಸ್ಸು ಪಡೆಯುತ್ತೋ, ಇಲ್ಲವೋ? ಆದರೆ, ಸಮ್ಮಿಶ್ರ ಸರಕಾರಕ್ಕೆ ಜಾರಕಿಹೊಳಿ ಯಾವತ್ತಿದ್ದರೂ ಮುಗ್ಗಲಮುಳ್ಳೇ. ತನ್ನ ರಾಜಕೀಯ ನಡೆಯನ್ನು ಇನ್ನೂ ನಿಗೂಢವಾಗಿ ಇಟ್ಟುಕೊಂಡಿರುವ ರಮೇಶ್ ಜಾರಕಿಹೊಳಿ ಈ ಬಾರಿಯಾದರೂ ಸಕ್ಸಸ್ ಆಗುತ್ತಾರಾ ಎಂದು ಕಾದು ನೋಡಬೇಕಿದೆ. ಸದ್ಯದ ಅವರ ಲೆಕ್ಕಾಚಾರ ಪ್ರಕಾರ, ಕನಿಷ್ಟ ಐದು ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸುವ ಯೋಜನೆ ಹಾಕಿಕೊಂಡಿದ್ದಾರೆ.