ಇಡೀ ರಾಜ್ಯ ರಾಜಕಾರಣದ ಚಿತ್ರಣವನ್ನೇ ಬದಲಾಯಿಸಲಿದೆಯಾ 'ಸಿಡಿ' ಬಿಡುಗಡೆ ಪ್ರಕರಣ?
ಬೆಂಗಳೂರು, ಮಾ. 14: ರಾಜ್ಯದಲ್ಲಿನ ರಾಜಕೀಯ ಸೌಹಾರ್ಧತೆಗೆ 'ಸಿಡಿ' ಬಿಡುಗಡೆ ಪ್ರಕರಣ ಕೊಡಲಿ ಏಟು ಕೊಡುತ್ತದೆಯಾ? ಹೌದು ಎನ್ನುತ್ತಿವೆ ಇತ್ತೀಚಿನ ಬೆಳವಣಿಗೆಗಳು. ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದ ರಾಜಕೀಯ ಇತಿಹಾಸ ಸೌಹಾರ್ಧಯುತವಾಗಿರುವುದು ಕಂಡು ಬರುತ್ತದೆ. ನಮ್ಮ ರಾಜ್ಯದ ರಾಜಕಾರಣಿಗಳ ವರ್ತನೆ ಇಡೀ ದೇಶದ ರಾಜಕಾರಣಿಗಳಿಗೆ ಮಾದರಿ ಎನ್ನುವಂತಿದೆ. ಆದರೆ ಇದೀಗ ಇಡೀ ರಾಜ್ಯದ ರಾಜಕೀಯ ವ್ಯಕ್ತಿಗಳ ನಡುವಣ ಸಂಬಂಧಗಳು ಹಳ್ಳ ಹಿಡಿಯುವ ಲಕ್ಷಣಗಳು ಕಂಡು ಬರುತ್ತಿವೆ. ಅದಕ್ಕೆ ಕಾರಣ ಈ 'ಸಿಡಿ' ಬಿಡುಗಡೆ ರಾಜಕೀಯ.
ಸಂತ್ರಸ್ತ ಯುವತಿಯೇ, ಈ ಪ್ರಕರಣದ ಹಿಂದೆ ಯಾರೂ ಇಲ್ಲ. ಯಾವುದೇ ರಾಜಕೀಯ ಬೆಂಬಲವೂ ಇಲ್ಲ. ಇದು ಹೇಗಾಗಿದೆ ಎಂಬುದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಒಂದೊಮ್ಮೆ ಆ ಸಂತ್ರಸ್ತೆ ಹೇಳಿದಂತೆಯೆ ಎಲ್ಲವೂ ಆದಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ ಅದನ್ನು ಹೊರತು ಪಡಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳುವಂತೆ ಇದು ರಾಜಕೀಯ ಷಡ್ಯಂತ್ರವೇ ಆಗಿದ್ದರೆ ಅದು ರಾಜಕೀಯ ವ್ಯಕ್ತಿಗಳ ಮಧ್ಯದ ಸೌಹಾರ್ಧಯುತ ಸಂಬಂಧಕ್ಕೆ ಕೊಡಲಿ ಏಟು ಕೊಡಲಿದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂಬ ಆಫ್ ದಿ ರೆಕಾರ್ಡ್ ಮಾತುಗಳು ರಾಜ್ಯದ ಹಿರಿಯ ರಾಜಕಾರಣಿಗಳಿಂದಲೇ ಕೇಳಿ ಬರುತ್ತಿವೆ! ಹಾಗಾದರೆ, 'ಸಿಡಿ' ಬಿಡುಗಡೆ ಪ್ರಕರಣದಿಂದ ಮುಂದಿನ ದಿನಗಳಲ್ಲಿ ರಾಜ್ಯದ ರಾಜಕೀಯ ಚಿತ್ರಣ ಹೇಗಿರಲಿದೆ?
ಇಡೀ ದೇಶಕ್ಕೆ ಮಾದರಿ ನಮ್ಮ ರಾಜಕೀಯ ನಾಯಕರು
ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ದೇಶದ ಇತರ ರಾಜ್ಯಗಳ ರಾಜಕಾರಣಿಗಳ ಮಧ್ಯದ ವೈಮನಸ್ಸು ಗಮನಿಸಿದರೆ, ನಮ್ಮ ರಾಜಕೀಯ ನಾಯಕರು ಪ್ರಬುದ್ಧರು. ನಮ್ಮ ರಾಜ್ಯದಲ್ಲಿರುವುದು ಚುನಾವಣಾ ರಾಜಕೀಯ ಮಾತ್ರ. ನಂತರ ಯಾವುದೇ ಧ್ವೇಷದ ರಾಜಕಾರಣ ನಡೆಯುತ್ತಿರಲಿಲ್ಲ. ಸಂದರ್ಭ ಬಂದಾಗ ಸುಖ-ದುಃಖಗಳಿಗೆ ಒಬ್ಬರಿಗೊಬ್ಬರು ಸ್ಪಂದಿಸುತ್ತಿದ್ದರು. ಆದರೆ ಇದೀಗ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಈ ಸೌಹಾರ್ಧ ರಾಜಕೀಯ ಮುಂದುವರೆಯುವ ಲಕ್ಷಣಗಳಿಲ್ಲ.
ಆ 'ಮಹಾನ್ ನಾಯಕ' ಇದ್ದಾನೆ ಎಂದ ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಅವರು ಇಡೀ 'ಸಿಡಿ' ಷಡ್ಯಂತ್ರದ ಹಿಂದೆ 'ಮಹಾನ್ ನಾಯಕ'ನಿದ್ದಾನೆ. ಅವನು ಇಡೀ ಪ್ರಕರಣದ ಡೈರೆಕ್ಟರ್. ಈಗ ಸಿಕ್ಕಿಬಿದ್ದವು ಕೇವಲ ಆ್ಯಕ್ಟರ್ಗಳು ಎಂದಿದ್ದಾರೆ. ಜೊತೆಗೆ ಆ ಮಹಾನ್ ನಾಯಕ ಯಾರು? ಎಂಬುದನ್ನು ಎಲ್ಲರಿಗೂ ಅರ್ಥವಾಗುವಂತೆ ಆರೋಪಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಇಡೀ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನು ರಾಜ್ಯದ ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ನನ್ನನ್ನು ಸಿಕ್ಕಿಸಲು ಸಂಚು ನಡೆದಿದೆ ಎಂದು ಡಿಕೆಶಿ!
ಇದೇ ಸಂದರ್ಭದಲ್ಲಿ ಮತ್ತೊಂದೆಡೆ 'ಸಿಡಿ' ಬಿಡುಗಡೆ ಪ್ರಕರಣದಲ್ಲಿ ನನ್ನನ್ನು ಸಿಕ್ಕಿಸಲು ಸಂಚು ನಡೆದಿವೆ ಎಂದು ನೇರವಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಯಾರಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ ನನ್ನನ್ನು ಸಿಕ್ಕಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಡಿಕೆಶಿ ಹೇಳಿದ್ದಾರೆ.
ಆದ್ರೆ ನಾನು ಇಡೀ ಪ್ರಕರಣದ ಬಗ್ಗೆ ನಾನೇ ಸಮಯ ಬಂದಾಗ ಮಾತನಾಡುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ. ಹೀಗಾಗಿ ಇಡೀ ಪ್ರಕರಣ ಗಂಭೀರತೆ ಪಡೆದುಕೊಂಡಿದೆ.
Recommended Video
ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದ ರಾಜಕಾರಣಿಗಳು
ಪಕ್ಷ ಹಾಗೂ ಸಿದ್ದಾಂತ ಬೇಧ ಬಿಟ್ಟು ಕಷ್ಟ-ಸುಖಕ್ಕೆ ನಮ್ಮ ರಾಜ್ಯದ ರಾಜಕಾರಣಿಗಳು ಆಗುತ್ತಿದ್ದರು. ಅದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಅಕಾಲಿಕ ನಿಧನಕ್ಕೆ ತುತ್ತಾದಾಗ ಇಡೀ ರಾಜ್ಯದ ಜನತೆ ಗಮನಿಸಿದೆ. ಪಕ್ಷ ಬೇಧ ಬಿಟ್ಟು ಹಿರಿಯ ರಾಜಕಾರಣಿಗಳು ಸಿದ್ದರಾಮಯ್ಯ ಅವರಿಗೆ ಧೈರ್ಯ ತುಂಬಿದ್ದರು. ಜೊತೆಗೆ ಸಿದ್ದರಾಮಯ್ಯ ಅವರು ಅನಾರೋಗ್ಯಕ್ಕೆ ಈಡಾದಾಗಲೂ ಸಹ ಎಲ್ಲರೂ ಭೇಟಿ ಮಾಡಿದ್ದರು.
ಅದೇ ರೀತಿ ಪಕ್ಷ ರಾಜಕೀಯ ಬಿಟ್ಟು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭುನಂದನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಯಡಿಯೂರಪ್ಪ ಅವರನ್ನು ಸಿದ್ದರಾಮಯ್ಯ ಕೊಂಡಾದಿದ್ದರು. ಜೊತೆಗೆ ಕಷ್ಟದ ಸಂದರ್ಭಗಳು ಬಂದಾಗ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕಾರಣಿಗಳಿಗೆ ಸಹಾಯ ಮಾಡಿದ್ದು ಇದೆ.
ಆದರೆ ಇದೀಗ ನಡೆದಿರುವ 'ಸಿಡಿ' ಪ್ರಕರಣ ಧ್ವೇಷದ ರಾಜಕೀಯಕ್ಕಿಂತ ಕಡೆಯಾಗಿದೆ ಎಂಬ ಮಾತುಗಳು ರಾಜಕೀಯ ವಲಯದಿಂದಲೇ ಕೇಳಿ ಬರುತ್ತಿವೆ. ಹೀಗಾಗಿ 'ಸಿಡಿ' ಕುರಿತು ಆರೋಪ ಹಾಗೂ ಪ್ರತ್ಯಾರೋಪಗಳು ನಿಜವಾದಲ್ಲಿ ಹಿಂದಿನ ಸೌಹಾರ್ಧತೆ ನಮ್ಮ ರಾಜ್ಯದ ರಾಜಕಾರಣಿಗಳಲ್ಲಿಯೂ ಉಳಿಯುವುದಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.