ರಮೇಶ್ ಜಾರಕಿಹೊಳಿ 'ಸಿಡಿ' ಪ್ರಕರಣದ ಸಂತ್ರಸ್ತೆಯ ಮನೆಗೆ ನೋಟೀಸ್ ಅಂಟಿಸಿದ ಪೊಲೀಸರು!
ಬೆಂಗಳೂರು/ವಿಜಯಪುರ, ಮಾ 14: ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿರುವ ರಮೇಶ್ ಜಾರಕಿಹೊಳಿ 'ಸಿಡಿ' ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತ ಯುವತಿಗೆ ನೋಟಿಸ್ ಕೊಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಿಡಗುಂದಿ ಪಟ್ಟಣದಲ್ಲಿರುವ ಸಂತ್ರಸ್ತ ಯುವತಿಯ ಸಂಬಂಧಿಕರ ಮನೆಗೆ ಪೊಲೀಸ್ ನೋಟಿಸ್ ಅಂಟಿಸಲಾಗಿದೆ. ಸಂತ್ರಸ್ತೆಯ ತಾಯಿಯ ತವರು ಮನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿದೆ. ಇದೀಗ ಆ ಮನೆಗೆ ಪೊಲೀಸರು ನೋಟಿಸ್ ಅಂಟಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿ ಮನೆಯಲ್ಲಿ ಯಾರೂ ಇರದ ಕಾರಣ ಬೀಗ ಹಾಕಿರುವ ಮನೆಗೆ ನೋಟಿಸ್ ಅಂಟಿಸಿದ್ದಾರೆ.
ಸಂತ್ರಸ್ತ ಯುವತಿ ಮನೆಗೆ ನೋಟಿಸ್ ಅಂಟಿಸಿದ ಪೊಲೀಸರು
ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ವಿರೇಶನಗರದಲ್ಲಿ ಸಂತ್ರಸ್ತ ಯುವತಿಯ ತಾಯಿಯ ತವರು ಮನೆಯಿದೆ. ಸಂತ್ರಸ್ತ ಯುವತಿ ಇದೇ ಊರಿನಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಪೂರೈಸಿದ್ದರು ಎಂಬ ಮಾಹಿತಿಯಿದೆ. ವಿಡಿಯೋ ಬಿಡುಗಡೆ ಆಗುತ್ತಿದ್ದಂತೆಯೆ ಮಾರ್ಚ್ 2 ರಂದು ರಾತ್ರಿಯೇ ಸಂಬಂಧಿಕರು ಮನೆಯನ್ನು ಖಾಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಯುವತಿಯ ಮೂಲ ಪತ್ತೆ ಮಾಡಿರುವ ಪೊಲೀಸರು ನೋಟಿಸ್ ಕೊಟ್ಟು ಹೇಳಿಕೆ ನೀಡುವಂತೆ ಮನವಿ ಮಾಡಿದ್ದಾರೆ.
ಸಿಡಿ ಗರ್ಲ್ ಹೇಳಿಕೆ: ಪರದೆ ಹಿಂದಿನ ಅಸಲಿ ಸತ್ಯವೇನು?
ಪೊಲೀಸ್ ಕೊಟ್ಟಿರುವ ನೋಟಿಸ್ನಲ್ಲಿ ಏನಿದೆ?
ಈ ಮೇರೆಗೆ ತಮಗೆ ತಿಳಿಯಪಡಿಸುವುದೇನೆಂದರೆ, ದಿನಾಂಕ 02.03.2021 ರಂದು ದಿನೇಶ್ ಕಲ್ಲಹಳ್ಳಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಂಬಂಧ ಠಾಣಾ ಅರ್ಜಿ ಸಂಖ್ಯೆ Q1PS/PET/GNL/48/2021 ರಲ್ಲಿ ದೂರು ದಾಖಲಾಗಿ ವಿಚಾರಣೆಯಲ್ಲಿರುತ್ತದೆ.
ಈ ದೂರಿನ ಹೆಚ್ಚಿನ ವಿಚಾರಣೆಯ ಸಂಬಂಧ ಮುಂದಿನ ಕ್ರಮಕೈಗೊಳ್ಳಲು ತಮ್ಮ ಹೇಳಿಕೆಯನ್ನು ಪಡೆದುಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. ಆದರಿಂದ ನೋಟಿಸ್ ತಲುಪಿದ/ನೋಡಿದ ತಕ್ಷಣ ತುರ್ತಾಗಿ ಈ ಕೆಳಗೆ ಸಹಿ ಮಾಡಿರುವ ಅಧಿಕಾರಿಯವರ ಮೊಬೈಲ್ ನಂಬರ್ ಅಥವಾ ಈ ಮೇಲ್ ಅನ್ನು ಸಂಪರ್ಕಿಸುವುದು. ಮತ್ತು ತಾವು ನಿಗದಿಪಡಿಸಿದ ದಿನಾಂಕ/ಸಮಯ ಮತ್ತು ಸ್ಥಳಕ್ಕೆ ಬಂದು ತಮ್ಮ ಹೇಳಿಕೆಯನ್ನು ಪಡೆಯಲಾಗುವುದು. ಹಾಗೂ ತಮ್ಮ ಮನವಿಯ ಮೇರೆಗೆ ಸೂಕ್ತ ರಕ್ಷಣೆಯನ್ನು ಒದಗಿಸಲಾಗುವುದು ಎಂದು ಪೊಲೀಸ್ ನೋಟೀಸ್ನಲ್ಲಿ ತಿಳಿಸಲಾಗಿದೆ.
ದೂರು ದಾಖಲಾಗುತ್ತಿದ್ದಂತೆ ಅಳಲು ತೋಡಿಕೊಂಡಿದ್ದ ಸಂತ್ರಸ್ತೆ!
'ಸಿಡಿ' ಬಿಡುಗಡೆಯಾದ 12 ದಿನಗಳ ನಂತರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ದೂರು ಕೊಟ್ಟಿದ್ದರು. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ಆಪ್ತನ ಮೂಲಕ ರಮೇಶ್ ಜಾರಕಿಹೊಳಿ ಅವರು ದೂರು ಸಲ್ಲಿಸಿದ್ದರು ರಮೇಶ್ ಜಾರಕಿಹೊಳಿ ಅವರು ದೂರು ಸಲ್ಲಿಸುತ್ತಿದ್ದಂತೆಯೆ ಸಂತ್ರಸ್ತ ಯುವತಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಳಲು ತೋಡಿಕೊಂಡಿದ್ದರು, ಅದು ಕುತೂಹಲ ಮೂಡಿಸಿತ್ತು.
ಇಡೀ ರಾಜ್ಯ ರಾಜಕಾರಣದ ಚಿತ್ರಣವನ್ನೇ ಬದಲಾಯಿಸಲಿದೆಯಾ 'ಸಿಡಿ' ಬಿಡುಗಡೆ ಪ್ರಕರಣ?
Recommended Video
ಮಾನಹಾನಿ ಮಾಡಿದ್ದಾರೆಂದು ದೂರು ದಾಖಲು
ನನ್ನ ವಿರುದ್ಧ ತೇಜೋವಧೆ ಮಾಡಲು, ರಾಜಕೀಯವಾಗಿ ಮುಗಿಸಲು ಹಾಗೂ ಹಣ ವಸೂಲಿ ಮಾಡಲು ಷಡ್ಯಂತ್ರವನ್ನು ರೂಪಿಸಲಾಗಿದೆ. ಸುಮಾರು ಮೂರು ತಿಂಗಳುಗಳಿಂದ ಸದಾಶಿವನಗರದಲ್ಲಿ ನನ್ನ ವಿರುದ್ಧ ಮಸಲತ್ತು ಹಾಗೂ ಮೋಸ ಮಾಡಿ ನಕಲಿ 'ಸಿಡಿ' ಸೃಷ್ಟಿ ಮಾಡಿದ್ದಾರೆ ಎಂದು ಮಾಜಿ ಸಚಿವ ದೂರಿನಲ್ಲಿ ದಾಖಲಿಸಿದ್ದರು. ಜೊತೆಗೆ ನಕಲಿ ಸಿಡಿ ಸೃಷ್ಟಿಸಿ ನನಗೆ ಮಾನಸಿಕ ಹಿಂಸೆಯನ್ನು ಮಾಡಿ ರಾಜಕೀಯವಾಗಿ ಮಾನಹಾನಿ ಮಾಡಿ ನನ್ನಿಂದ ಹಣ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದರು.
ಈ ಪ್ರಕರಣದ ಹಿಂದೆ ಹಲವಾರು ಜನರಿದ್ದಾರೆ. ಕೆಲವರು ಷಡ್ಯಂತ್ರ ಮಾಡಿ, ಇನ್ನೂ ಕೆಲವರು ನಕಲಿ ಸಿಡಿ ತಯಾರಿಸಲು ಭಾಗಿಯಾಗಿದ್ದಾರೆ. ಜೊತೆಗೆ ಮತ್ತಿತರರನ್ನು ಬಳಸಿಕೊಂಡು ಅಂತರ್ಜಾಲ ವಾಹಿನಿಯಲ್ಲಿ ಬಿಡುಗಡೆ ಮಾಡಿ ರಾಜಕೀಯ ಅಸ್ಥಿರತೆಯನ್ನು ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಕಾನೂನು ಕ್ರಮವನ್ನು ದಾಖಲಿಸುವಂತೆ ರಮೇಶ್ ಜಾರಕಿಹೊಳಿ ದೂರಿನಲ್ಲಿ ಮನವಿ ಮಾಡಿದ್ದರು.