IMPACT STORY: ಕೊನೆಗೂ ವಿಧಾನಸಭೆಯಲ್ಲಿ 'ಸಿಡಿ' ಪ್ರಕರಣದ ಚರ್ಚೆಗೆ ಮುಂದಾದ ಕಾಂಗ್ರೆಸ್!
ಬೆಂಗಳೂರು, ಮಾ. 19: 'ಸಿಡಿ' ಪ್ರಕರಣದ ಕುರಿತು 'ಒನ್ಇಂಡಿಯಾ ಕನ್ನಡ' ವರದಿ ಪ್ರಕಟಿಸುತ್ತಿದ್ದಂತೆಯೆ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ನಾಯಕರು, ವಿಧಾನಸಭೆಯಲ್ಲಿ ಪ್ರಕರಣದ ಕುರಿತು ಚರ್ಚೆ ನಡೆಸಲು ಅವಕಾಶ ಕೋರಿ ನೋಟಿಸ್ ಕೊಟ್ಟಿದ್ದಾರೆ.
ರಮೇಶ್ ಜಾರಕಿಹೊಳಿ 'ಸಿಡಿ' ಬಿಡುಗಡೆಯಾಗಿ 18 ದಿನಗಳ ಬಳಿಕ, ವಿಧಾನಸಭೆಯಲ್ಲಿ ಚರ್ಚೆ ಮಾಡಲು ಅವಕಾಶ ಕೊಡುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅನುಮತಿ ಕೇಳಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ 'ಸಿಡಿ' ಪ್ರಕರಣ: ಅಧಿವೇಶನದಲ್ಲಿ ಅಚ್ಚರಿ ಮೂಡಿಸಿದ ಕಾಂಗ್ರೆಸ್ ನಾಯಕರ ನಡೆ!
ಇಷ್ಟೊಂದು ಮಹತ್ವದ 'ಸಿಡಿ' ಪ್ರಕರಣವಾಗಿದ್ದರೂ ಕಾಂಗ್ರೆಸ್ ಪಕ್ಷದ ನಾಯಕರು ಮುಗುಮ್ಮಾಗಿರುವುದರ ಕುರಿತು "'ಸಿಡಿ' ಪ್ರಕರಣ: ಅಧಿವೇಶನದಲ್ಲಿ ಅಚ್ಚರಿ ಮೂಡಿಸಿದ 'ಕೈ' ನಾಯಕರ ನಡೆ" ಎಂದು ವರದಿ ಪ್ರಕಟಿಸಿತ್ತು.
ಕೊನೆಗೂ ಚರ್ಚೆಗೆ ಮುಂದಾದ ಕಾಂಗ್ರೆಸ್!
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇದ್ದಾರೆ ಎನ್ನಲಾದ 'ಸಿಡಿ' ಕುರಿತು ಅಧಿವೇಶನದಲ್ಲಿ ಚರ್ಚಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನಿಲುವಳಿ ಸೂಚನೆ ಕೊಟ್ಟಿದ್ದಾರೆ.
ಪ್ರಶ್ನೋತ್ತರ ಕಲಾಪ ಹಾಗೂ ಶೂನ್ಯವೇಳೆಯ ಬಳಿಕ ನಿಯಮ 60 ರಡಿ 'ಸಿಡಿ' ವಿಚಾರ ಚರ್ಚೆ ಮಾಡಲು ಅವಕಾಶ ಕೋರಿ ಸ್ಪೀಕರ್ ಕಾಗೇರಿ ಅವರಿಗೆ ನೋಟಿಸ್ ನೀಡಿದ್ದಾರೆ. ಹೀಗಾಗಿ ಅಧಿವೇಶನ ಆರಂಭವಾಗಿ 16 ದಿನಗಳ ಬಳಿಕ ಕಾಂಗ್ರೆಸ್ 'ಸಿಡಿ' ಪ್ರಕರಣದ ಚರ್ಚೆಗೆ ಮುಂದಾಗಿದೆ.
ಸಂತ್ರಸ್ತೆ ಪರವಾಗಿ ಧ್ವನಿ ಎತ್ತಿದ ಕಾಂಗ್ರೆಸ್
ಇದೀಗ ಇಡೀ 'ಸಿಡಿ' ಪ್ರಕರಣದ ಕುರಿತು ಚರ್ಚೆಗೆ ಕಾಂಗ್ರೆಸ್ ಅವಕಾಶ ಕೇಳಿದೆ. ಆ ಮೂಲಕ ರಮೇಶ್ ಜಾರಕಿಹೊಳಿ ಅವರು ಆರೋಪಿಸಿದ್ದ 'ಮಹಾನ್ ನಾಯಕ' ಕಾಂಗ್ರೆಸ್ ಪಕ್ಷದವರಲ್ಲ ಎಂಬುದು ಸಾಬೀತು ಮಾಡುವುದು ಕಾಂಗ್ರೆಸ್ ನಾಯಕರ ಉದ್ದೇಶ ಎಂಬ ಮಾಹಿತಿ ಬಂದಿದೆ.
'ಸಿಡಿ' ಬಿಡುಗಡೆಯಾಗಿ 12 ದಿನಗಳ ನಂತರ ಮಾಜಿ ಸಚಿವರ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ಎಫ್ಐಆರ್ ದಾಖಲಿಸುವ ಮೊದಲು ಎಸ್ಐಟಿ ರಚನೆ ಮಾಡಲಾಗಿದೆ. ಜೊತೆಗೆ ಸಂತ್ರಸ್ತ ಯುವತಿಯು ಗೃಹ ಸಚಿವರಿಗೆ ಸಾಮಾಜಿಕ ಜಾಲತಾಣದ ಮೂಲಕ ಮಾಡಿಕೊಂಡ ಮನವಿ ಕುರಿತು ಎಫ್ಐಆರ್ ದಾಖಲಾಗಿಲ್ಲ. ರಾಜ್ಯ ಮಹಿಳಾ ಆಯೋಗವು ಸಂತ್ರಸ್ತ ಯುವತಿಗೆ ಸೂಕ್ತ ಭದ್ರತೆ ಕೊಡುವಂತೆ ಸರ್ಕಾರಕ್ಕೆ ಸೂಚಿಸಿದ್ದರೂ ಅವರನ್ನು ಹುಡುಕಿ ರಕ್ಷಣೆ ಕೊಡಲು ರಾಜ್ಯ ಸರ್ಕಾರ ಮುಂದಾಗಿಲ್ಲ ಎಂದು ನಿಲುವಳಿ ಸೂಚನೆಯಲ್ಲಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.
ನಾಡಿದ ಜನತೆಯ ಘನತೆಗೆ ಕುಂದು ತಂದ ಸರ್ಕಾರ
ಇದುವರೆಗಿನ ಎಸ್ಐಟಿ ತನಿಖೆಯನ್ನು ನೋಡಿದರೆ ಸಂತ್ರಸ್ತ ಯುವತಿಗೆ ರಕ್ಷಣೆ ಕೊಡುವ ಬದಲು, ಸಿಡಿ ಪ್ರಚಾರಕರು ಯಾರು ಎಂಬುದನ್ನು ಹುಡುಕುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಸರ್ಕಾರ ಮಹಿಳೆಯ ರಕ್ಷಣೆ ವಿಚಾರದಲ್ಲಿ ಗಂಭೀರ ಲೋಪ ಎಸಗುತ್ತಿದೆ. ಸರ್ಕಾರದ ಒಟ್ಟಾರೆ ವರ್ತನೆ ಪಾರದರ್ಶಕವಾಗಿಲ್ಲ, ಮತ್ತು ನ್ಯಾಯಸಮ್ಮತವೂ ಆಗಿಲ್ಲ. ರಾಜ್ಯದ ಜನತೆಯ ಘನತೆಗೆ ಕುಂದು ತರುತ್ತಿರುವ ಸರ್ಕಾರದ ಈ ನಿಲುವುಗಳ ವಿರುದ್ಧ ಸದಸನದಲ್ಲಿ ಚರ್ಚೆ ಮಾಡಲು ಅವಕಾಶ ಕೊಡಬೇಕು ಎಂದು ಸಿದ್ದರಾಮಯ್ಯ ಕೋರಿದ್ದಾರೆ.
Recommended Video
'ಸಿಡಿ' ಬಿಡುಗಡೆ ಹಿಂದೆ 'ಮಹಾನ್ ನಾಯಕ'?
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇದ್ದಾರೆ ಎನ್ನಲಾದ 'ಸಿಡಿ' ಬಿಡುಗಡೆಯಾದ ಬಳಿಕ ರಾಜ್ಯ ಬಜೆಟ್ ಅಧಿವೇಶನ ಶುರುವಾಗಿತ್ತು. ಇಡೀ ರಾಜ್ಯಾದ್ಯಂತ ಕುರಿತು 'ಸಿಡಿ' ಕುರಿತು ಭರ್ಜರಿ ಚರ್ಚೆ ನಡೆಯುತ್ತಿದ್ದರೂ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸಲು ಮುಂದಾಗಿರಲಿಲ್ಲ. ಅದೇ ಸಂದರ್ಭದಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು 'ಸಿಡಿ' ಬಿಡುಗಡೆ ಹಿಂದೆ ರಾಜ್ಯದ 'ಮಹಾನ್ ನಾಯಕ'ರೊಬ್ಬರ 'ಕೈ'ವಾಡವಿದೆ ಎಂದು ಆರೋಪಿಸಿದ್ದರು.