ಅಶ್ಲೀಲ ಸಿಡಿ: ಮಾನ ಹರಾಜು ಆಗಿದ್ದು ಜಾರಕಿಹೊಳಿಯದ್ದೋ, ಸದನದ್ದೋ
ರಾಜ್ಯ ಜಲಸಂಪನ್ಮೂಲ ಖಾತೆಯ ಸಚಿವರಾಗಿದ್ದ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾಗುತ್ತಿರುವ ಅಶ್ಲೀಲ ಸಿಡಿ ಪ್ರಕರಣ, ಕೊರೊನಾ ಎರಡನೇ ಅಲೆಯ ಸುದ್ದಿಯನ್ನೂ ಮೀರಿಸುವಂತೆ ದೇಶಾದ್ಯಂತ ಸದ್ದು ಮಾಡಿತು.
ಈ ಸಿಡಿ ಬಹಿರಂಗವಾದ 21 ದಿನಗಳ ನಂತರ ವಿರೋಧ ಪಕ್ಷ ಕಾಂಗ್ರೆಸ್, ನಿಯಮ 60ರಡಿ ಸದನದಲ್ಲಿ ಚರ್ಚೆ ಮಾಡಲು ನಿಲುವಳಿ ಸೂಚನೆ ನೋಟಿಸನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡುವ ಮೂಲಕ, ಜಾರಕಿಹೊಳಿ ಸಿಡಿ ಪ್ರಕರಣ ಸದನದಲ್ಲಿ ಭಾರೀ ಗದ್ದಲವನ್ನು ಮಾಡಲಾರಂಭಿಸಿತು.
ಸಚಿವ ಸುಧಾಕರ್ ಹೇಳಿದ 'ಅನೈತಿಕ ಸಂಬಂಧ': ಕುಮಾರಸ್ವಾಮಿ ಕೊಟ್ಟ ಮುತ್ತಿನಂತಹ ಪ್ರತಿಕ್ರಿಯೆ
ಇದರ ಜೊತೆಗೆ, ಆರು ಸಚಿವರು ಕೋರ್ಟ್ ನಿಂದ ಸ್ಟೇ ತಂದಿರುವ ವಿಚಾರವನ್ನೂ ಕಾಂಗ್ರೆಸ್ ಕೆದಕಲು ಆರಂಭಿಸಿತು. ಈ ಎರಡು ವಿಚಾರಗಳನ್ನು ಇಟ್ಟುಕೊಂಡು ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದರೆ, ಸಚಿವ ಡಾ.ಸುಧಾಕರ್ ನೀಡಿದ ಹೇಳಿಕೆ ಪರಿಸ್ಥಿತಿಯನ್ನು ಇನ್ನಷ್ಟು ಕದಡಿ ಹಾಕಿತು.
ಬಿಜೆಪಿ ಬಟ್ಟೆ ಕಳಚುತ್ತಿರುವ ಕಾಂಗ್ರೆಸ್: ಅಂದು ಜೈಶ್ರೀರಾಮ್, ಈಗ ಜೈ 'ಸಿಡಿ' ರಾಮ್
ಸುಧಾಕರ್ ಅವರ ಓಪನ್ ಚಾಲೆಂಜ್ ಅನ್ನು ಪಕ್ಷಾತೀತವಾಗಿ ಎಲ್ಲರೂ ವಿರೋಧಿಸಲು ಆರಂಭಿಸಿದಾಗ, ತಮ್ಮ ಚೇಂಬರ್ ಗೆ ಸಚಿವರನ್ನು ಕರೆಸಿ ಸಿಎಂ ಯಡಿಯೂರಪ್ಪ ಕ್ಷಮೆಯಾಚಿಸುವಂತೆ ಸೂಚಿಸಿದರು. ಆದರೂ ಸದನದಲ್ಲಿ ಗದ್ದಲ ಹೆಚ್ಚಾದಾಗ, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಮಾರ್ಚ್ ನಾಲ್ಕರಂದು ಬಜೆಟ್ ಅಧಿವೇಶನ ಆರಂಭ
ಮಾರ್ಚ್ ನಾಲ್ಕರಂದು ಬಜೆಟ್ ಅಧಿವೇಶನ ಆರಂಭವಾಗಿದ್ದರೂ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸದನದಲ್ಲಿ ಕಾಂಗ್ರೆಸ್ ಚರ್ಚೆಗೆ ಎತ್ತಿಕೊಂಡಿದ್ದದ್ದು ಮಾರ್ಚ್ 22ರಂದು. ಅಲ್ಲಿಂದ ಮೂರು ದಿನ ಈ ವಿಚಾರ ಮತ್ತು ಆರು ಸಚಿವರು ಕೋರ್ಟ್ ಮೊರೆ ಹೋಗಿದ್ದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿದ್ದ ಕಾರಣದಿಂದ ಮೂರು ದಿನದ ಕಲಾಪ, ಯಾವುದೇ ಉಪಯುಕ್ತ ಚರ್ಚೆ ನಡೆಯದೇ ಬಲಿಯಾಯಿತು.
ಕಾಂಗ್ರೆಸ್ಸಿನ ಹೋರಾಟಕ್ಕೆ ಮತ್ತಷ್ಟು ಸರಕು ನೀಡಿದ್ದು ಸುಧಾಕರ್ ಹೇಳಿಕೆ
ಕಾಂಗ್ರೆಸ್ಸಿನ ಈ ಹೋರಾಟಕ್ಕೆ ಮತ್ತಷ್ಟು ಸರಕು ನೀಡಿದ್ದು ಡಾ.ಸುಧಾಕರ್ ಅವರ ಹೇಳಿಕೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಏನು ಏಕಪತ್ನಿವ್ರತಸ್ಥರೇ ಎನ್ನುವ ಇವರ ಹೇಳಿಕೆಯಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಸಚಿವರ ರಾಜೀನಾಮೆಗೆ ಪಟ್ಟು ಹಿಡಿದರು. ಇದರಿಂದ ಬುಧವಾರ (ಮಾ 24) ಭೋಜನ ವಿರಾಮದ ನಂತರ ಕಲಾಪ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು. ಇದರ ಬೆನ್ನಲೇ, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಕಾಂಗ್ರೆಸ್ ಸದಸ್ಯರು ಕೈ ಬೆರಳಲ್ಲಿ ಸಿಡಿ ಹಿಡಿದುಕೊಂಡು ಬಿಜೆಪಿ ವಿರುದ್ದ ಪ್ರತಿಭಟನೆ
ಕಳೆದ ಮೂರು ದಿನಗಳಿಂದ ಸದನದಲ್ಲಿ ಸದ್ದು ಮಾಡಿದ್ದು ಜಾರಕಿಹೊಳಿ ಸಿಡಿ ಪ್ರಕರಣ ಮತ್ತು ಇದರ ಸುತ್ತಮುತ್ತ ನಡೆದ ವಿದ್ಯಮಾನಗಳು. ಮೂರು ದಿನಗಳಿಂದ ಕಾಂಗ್ರೆಸ್ ಸದಸ್ಯರು ಕೈ ಬೆರಳಲ್ಲಿ ಸುದರ್ಶನ ಚಕ್ರ ಹಿಡಿದುಕೊಂಡಂತೆ ಸಿಡಿ ಹಿಡಿದುಕೊಂಡು ಬಿಜೆಪಿ ವಿರುದ್ದ ಸದನದಲ್ಲಿ ಪ್ರತಿಭಟನೆ ನಡೆಸಿದರು. ಇದೆಲ್ಲಾ ಅನಾವಶ್ಯಕ, ರಾಜ್ಯದ ಗಂಭೀರ ಸಮಸ್ಯೆಗಳು ಚರ್ಚೆಯಾಗ ಬೇಕಾದ ಸಮಯದಲ್ಲಿ ಸಿಡಿ ವಿಚಾರದಲ್ಲಿ ಗದ್ದಲ ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.
Recommended Video
ಅಶ್ಲೀಲ ಸಿಡಿ: ಮಾನ ಹರಾಜು ಆಗಿದ್ದು ಜಾರಕಿಹೊಳಿಯದ್ದೋ, ಸದನದ್ದೋ
ಈ ಸಿಡಿ ಪ್ರಕರಣ ರಾಜ್ಯದ ಹೆಸರಿಗೆ ಕಪ್ಪುಚುಕ್ಕೆ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯಿಸಿದರು. ಕಳೆದ ಮೂರು ದಿನಗಳಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ನಡೆದುಕೊಂಡ ರೀತಿಯನ್ನು ಗಮನಿಸುವುದಾದರೆ, ಸಿಡಿ ಪ್ರಕರಣ ಮತ್ತು ಅದರ ಹಿಂದೆಮುಂದಿನ ವಿದ್ಯಮಾನಗಳಿಂದ ಮಾನ ಹರಾಜು ಆಗಿದ್ದು ರಮೇಶ್ ಜಾರಕಿಹೊಳಿಯದ್ದೋ ಅಥವಾ ಸದನದ್ದೋ ಎನ್ನುವ ಸಂಶಯ ಪಡುವಂತಾಗಿದೆ.