ರಮೇಶ್ ಜಾರಕಿಹೊಳಿ ಸಿಡಿ: ಸಹೋದರ ಸತೀಶ್ ಸಿಡಿಸಿದ ಹೊಸ ಬಾಂಬ್
ಸಾಹುಕಾರ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗಗೊಂಡ ವಿಚಾರದಲ್ಲಿ ಬೇರೆ ಏನಾದರೂ ರಾಜಕೀಯವಿದೆಯೇ? ಅವರನ್ನು ಹಣೆಯಲು ಸ್ವಪಕ್ಷೀಯರೇ ಕಾರ್ಯತಂತ್ರ ಹಣೆದಿದ್ದರೇ ಅಥವಾ ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣವಾಗಿದ್ದಕ್ಕೆ ಇತರ ಎರಡು ಪಕ್ಷಗಳ ಹುನ್ನಾರ ಇದೆಯೇ?
ಈ ರೀತಿಯ ಪ್ರಶ್ನೆಗಳು ಆ ಸಿಡಿಯನ್ನು ಅವಲೋಕಿಸಿದ ನಂತರ ಎದುರಾಗುವುದು ಸಹಜ. ಯಾಕೆಂದರೆ, ಆ ಯುವತಿಯ ಜೊತೆಗಿನ ಸಂಭಾಷಣೆಯ ವೇಳೆ ರಮೇಶ್ ಜಾರಕಿಹೊಳಿ ಹೊಂದಿದ್ದ ಆತ್ಮೀಯತೆ.
ಜಾರಕಿಹೊಳಿ ಕಾಮಪುರಾಣದ ನಡುವೆ ಈ ಸೂಕ್ಷ್ಮ ವಿಚಾರ ಸತ್ತು ಹೋಗದಿರಲಿ!
ಸಿಡಿಯ ಸತ್ಯಾಸತ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ, ದೂರು ನೀಡಿದ್ದ ದಿನೇಶ್ ಕಲ್ಲಹಳ್ಳಿಯ ವಿರುದ್ದ ದೂರು ದಾಖಲಾಗಿದೆ. "ರಾಜ್ಯದಲ್ಲಿ ಪ್ರಸ್ತುತ ಸಿಡಿಗಳ ಸರ್ಕಾರ ಅಸ್ತಿತ್ವದಲ್ಲಿದ್ದು, ಸೆಕ್ಸ್ ಸಿಡಿ, ಭ್ರಷ್ಟಾಚಾರದ ಸಿಡಿಗಳಿಂದ ಈ ಸರ್ಕಾರ ನಡೆಯುತ್ತಿದೆ" ಎಂದು ಕೆಪಿಸಿಸಿ ವ್ಯಂಗ್ಯವಾಡಿದೆ.
ಇವೆಲ್ಲದರ ನಡುವೆ, ರಮೇಶ್ ಜಾರಕಿಹೊಳಿ ಸಹೋದರ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಈ ವಿಚಾರದಲ್ಲಿ ಆಡಿರುವ ಮಾತು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಾಜ್ಯ ಸರ್ಕಾರ ಸಿಡಿಗಳ ಅಸ್ತಿತ್ವದಲ್ಲಿ ನಡೆಯುತ್ತಿದೆ: ಕೆಪಿಸಿಸಿ ಲೇವಡಿ
ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಮೈಸೂರಿನಲ್ಲಿ ನೀಡಿದ ಹೇಳಿಕೆ
"ಜಾರಕಿಹೊಳಿ ರಾಜೀನಾಮೆ ನೀಡಿದರೆ ಸಾಲದು, ಬದಲಾಗಿ ಅವರ ಮೇಲೆ FIR ದಾಖಲು ಮಾಡಬೇಕು. ಸಂತ್ರಸ್ಥೆ ದೂರು ನೀಡಿದ್ದರೂ ಮತ್ತೊಬ್ಬರು ದೂರು ನೀಡಬಹುದು. ಇದನ್ನು ಸುಪ್ರೀಂ ಕೋರ್ಟ್ ಸಹ ಹೇಳಿದೆ. ಯಾರು ಯಾರ ಮೇಲಾದರೂ ದೂರು ನೀಡಬಹುದು"ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿದ್ದಾರೆ.
ಸಹೋದರ ರಮೇಶ್ ವಿಚಾರದಲ್ಲಿ ಸತೀಶ್ ಜಾರಕಿಹೊಳಿ
ಸಹೋದರ ರಮೇಶ್ ವಿಚಾರದಲ್ಲಿ ಬಾಗಲಕೋಟೆಯಲ್ಲಿ ಮಾತನಾಡುತ್ತಿದ್ದ ಸತೀಶ್ ಜಾರಕಿಹೊಳಿ, "ಇಂತಹ ವಿಚಾರಗಳು ಇಂದು ನಿನ್ನೆಯದಲ್ಲ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಮೇಲೂ ಇಂತಹ ಆರೋಪಗಳು ಕೇಳಿ ಬಂದಿದ್ದವು. ರಾಜೀನಾಮೆ ನೀಡುವುದೆಲ್ಲಾ ಸಾಮಾನ್ಯ ಪ್ರಕ್ರಿಯೆ, ಆದರೆ, ಆರೋಪ ಕೇಳಿ ಬಂದ ಕೂಡಲೇ ರಾಜೀನಾಮೆ ನೀಡಬೇಕಾಗಿತ್ತು"ಎಂದು ಸತೀಶ್ ಅಭಿಪ್ರಾಯ ಪಟ್ಟಿದ್ದಾರೆ.
ರಮೇಶ್ ಸಾಗುತ್ತಿದ್ದ ವೇಗಕ್ಕೆ ಬ್ರೇಕ್ ಹಾಕಲು ಬಿಜೆಪಿಯವರ ಷಡ್ಯಂತ್ರ?
ಬಿಜೆಪಿಯವರೇ ರಮೇಶ್ ಸಾಗುತ್ತಿದ್ದ ವೇಗಕ್ಕೆ ಬ್ರೇಕ್ ಹಾಕಲು ಈ ರೀತಿ ಮಾಡಿರಬಹುದಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, "ನಾನು ಕಾಂಗ್ರೆಸ್ಸಿನಲ್ಲಿ ಇದ್ದು ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ. ಆ ಪಕ್ಷದ ವಿಚಾರ ಅದನ್ನು ಅವರು ನೋಡಿಕೊಳ್ಳುತ್ತಾರೆ"ಎಂದು ಹೇಳುವ ಮೂಲಕ, ಬಿಜೆಪಿಯವರ ಷಡ್ಯಂತ್ರ ಏನಾದರೂ ಇರಬಹುದಾ ಎನ್ನುವ ಪ್ರಶ್ನೆಗೆ ಸತೀಶ್ ನೇರ ಉತ್ತರವನ್ನು ನೀಡಲಿಲ್ಲ.
Recommended Video
ರಾಜಕೀಯವಾಗಿ ಟಾರ್ಗೆಟ್ ಮಾಡುವುದು ಎಲ್ಲಾ ಪಕ್ಷದಲ್ಲಿ ಇದ್ದಿದ್ದೇ
"ಒಂದು ದಿನದ ಹಿಂದೆನೇ ಅವನು ರಾಜೀನಾಮೆ ನೀಡಿದ್ದರೆ ಸಮಾಜದಲ್ಲಿ ಇನ್ನೂ ಗೌರವ ಬರುತ್ತಿತ್ತು. ರಮೇಶ್ ರಾಜಕೀಯವಾಗಿ ಎಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎನ್ನುವುದು ನಮಗೆ ಗೊತ್ತಿಲ್ಲ, ಸತ್ಯಾಂಶ ಹೊರಬರಲಿ. ರಾಜಕೀಯವಾಗಿ ಟಾರ್ಗೆಟ್ ಮಾಡುವುದು ಎಲ್ಲಾ ಪಕ್ಷದಲ್ಲಿ ಇದ್ದಿದ್ದೇ"ಎಂದು ಸತೀಶ್ ಜಾರಕಿಹೊಳಿ ಹೇಳುವ ಮೂಲಕ, ರಮೇಶ್ ಜಾರಕಿಹೊಳಿ ಟಾರ್ಗೆಟ್ ಆದರೆ ಎನ್ನುವ ಪ್ರಶ್ನೆ, ಸದ್ಯದ ಮಟ್ಟಿಗೆ ಪ್ರಶ್ನೆಯಾಗಿಯೇ ಉಳಿದಿದೆ.