ಸಾಹುಕಾರ್ ಸಿಡಿ ಪ್ರಕರಣ: ಅಂತಿಮ ವರದಿ ಸಲ್ಲಿಕೆಗೆ ಇನ್ನೊಂದೆ ಕೆಲಸ ಬಾಕಿ !
ಬೆಂಗಳೂರು, ನ. 30: ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಎದುರಾಗಿದ್ದ ಸಮಸ್ಯೆಗಳು ತಾರ್ಕಿಕ ಅಂತ್ಯ ಕಂಡಿವೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಅಂತಿಮ ವರದಿ ಸಲ್ಲಿಕೆಗೆ ತಡೆ ನೀಡಿ ಕೊಟ್ಟಿದ್ದ ಮಧ್ಯಂತರ ಆದೇಶ ತೆರವಿಗೆ ಮಧ್ಯಂತರ ಅರ್ಜಿ ಸಲ್ಲಿಸಲು ಎಸ್ಐಟಿ ಮುಂದಾಗಿದೆ. ಈ ಮಧ್ಯಂತರ ಅರ್ಜಿ ವಿಚಾರಣೆ ಬಳಿಕ ಸಿಡಿ ಪ್ರಕರಣದ ಅಂತಿಮ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿದೆ.
ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಸಂಬಂಧ ಎಸ್ಐಟಿ ರಚನೆಯೇ ಕಾನೂನು ಬಾಹಿರ ಎಂದು ಕೋರಿ ಯುವತಿ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಿತು. ಅಶ್ಲೀಲ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ನಡೆಸಿರುವ ತನಿಖಾ ವರದಿಗೆ ಎಸ್ಐಟಿ ಮುಖ್ಯಸ್ಥರ ಸಹಿಯೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಸಲಾಯಿತು. ಹೈಕೋರ್ಟ್ ಸೂಚನೆ ಮೇರೆಗೆ ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ವರದಿ ಪರಿಶೀಲಿಸಿದ್ದು ತನಿಖಾ ವರದಿಗೆ ಸಹಿ ಹಾಕಿದ್ದಾರೆ. ಎಸ್ಐಟಿ ಮುಖ್ಯಸ್ಥರು ಸಲ್ಲಿಸಿದ ಅಂತಿಮ ವರದಿಯನ್ನು ಪರಿಶೀಲಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಎಸ್ಐಟಿ ತನಿಖಾ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದೇನೆ. ತನಿಖಾ ವರದಿ ಸಲ್ಲಿಸಲು ನ್ಯಾಯಾಲಯದ ಸಮ್ಮತಿಯಿದೆ. ಅಂತಿಮ ವರದಿ ಸಲ್ಲಿಸಲು ತಕರಾರು ಏಕೆ? ಎಂದು ಯುವತಿ ಪರ ವಕೀಲರಾದ ಇಂದಿರಾ ಜೈಸಿಂಗ್ ಅವರನ್ನು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಅಂತಿಮ ವರದಿ ಬಗ್ಗೆ ಆಕ್ಷೇಪಗಳಿದ್ದರೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಯುವತಿ ಪ್ರಶ್ನಿಸಲಿ. ಅಲ್ಲಿ ಕಾನೂನು ಸಮರ ಮಾಡಲಿಕ್ಕೆ ಅವಕಾಶವಿದೆ. ಅಂತಿಮ ವರದಿ ಬಗ್ಗೆ ಸಮಸ್ಯೆ ಇದ್ದರೆ ಅಧೀನ ನ್ಯಾಯಾಲಯದಲ್ಲಿಯೇ ಪ್ರಶ್ನಿಸಲಿ. ಅಂತಿಮ ವರದಿ ಸಲ್ಲಿಸಲು ಆಕ್ಷೇಪಣೆ ಮಾಡುವುದಲ್ಲಿ ಅರ್ಥವೇನಿದೆ? ಎಂದು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿಗಳು, ಅಶ್ಲೀಲ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಂತಿಮ ವರದಿ ಸಲ್ಲಿಸಲಿ. ಅಂತಿಮ ವರದಿ ಸಲ್ಲಿಕೆ ಸಂಬಂಧ ಈ ಹಿಂದಿನ ಮುಖ್ಯ ನ್ಯಾಯಮೂರ್ತಿಗಳು ಕಳೆದ ಜುಲೈ ನಲ್ಲಿ ನೀಡಿದ್ದ " ಕೋರ್ಟ್ ಗಮನಕ್ಕೆ ತಂದು ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಸಬೇಕು" ಎಂಬ ಮಧ್ಯಂತರ ಆದೇಶ ವಿಲೇವಾರಿಗೆ ಮಧ್ಯಂತರ ಅರ್ಜಿ ಸಲ್ಲಿಸಲು ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದರು.
ಇದಕ್ಕೂ ಮುನ್ನ ಯುವತಿ ಪರ ವಾದ ಮಂಡಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಸಚಿವರ ಮನವಿ ಮೇರೆಗೆ ಎಸ್ಐಟಿ ರಚನೆ ಮಾಡಲಾಗಿದೆ. ಸಚಿವರ ವಿರುದ್ಧ ಮೊದಲು ದೂರು ನೀಡಿದರೂ ಸ್ವೀಕರಿಸಿಲ್ಲ. ಸಚಿವರ ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದಾರೆ. ಎಸ್ಐಟಿ ರಚನೆಯೇ ಕಾನೂನು ಬಾಹಿರ. ಹೀಗಾಗಿ ಎಸ್ಐಟಿ ನಡೆಸಿರುವ ತನಿಖಾ ವರದಿಗೆ ಮಾನ್ಯತೆ ನೀಡಬಾರದು ಎಂದು ವಾದ ಮಂಡಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್, ಹೈಕೋರ್ಟ್ ನಿರ್ದೇಶನದಂತೆ ಎಸ್ಐಟಿ ತನಿಖೆ ನಡೆಸಿದೆ. ತನಿಖಾ ತಂಡದ ಮುಖ್ಯಸ್ಥರೆ ವರದಿ ಪರಿಶೀಲಿಸಿದ್ದಾರೆ. ವರದಿ ಸಲ್ಲಿಸಲು ಸಮ್ಮಿತಿ ನೀಡಿದ್ದಾರೆ. ಅಶ್ಲೀಲ ಸಿಡಿ ಸ್ಫೋಟ ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಪ್ರಸನ್ನ ಕುಮಾರ್ ಅವರ ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿಗಳು, ಹೈಕೋರ್ಟ್ ಈ ಹಿಂದೆ ನೀಡಿರುವ ಮಧ್ಯಂತರ ಆದೇಶ ತೆರವಿಗೆ ಮಧ್ಯಂತರ ಅರ್ಜಿ ಸಲ್ಲಿಸಲು ಸೂಚಿಸಿದ್ದಾರೆ. ಉಳಿದಂತೆ ಎಸ್ಐಟಿ ರಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸೇರಿದಂತೆ ಇತರೆ ಅರ್ಜಿಗಳ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಲಿವೆ.
Recommended Video
ಮಧ್ಯಂತರ ಅರ್ಜಿ ಸಲ್ಲಿಕೆಗೆ ಸಿದ್ಧತೆ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸೂಚನೆ ಹಿನ್ನೆಲೆಯಲ್ಲಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲು ಎಸ್ಐಟಿ ಸಿದ್ಧತೆ ನಡೆಸಿದೆ. ಮುಂದಿನ ಎರಡು ದಿನದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲಿದ್ದು, ಅರ್ಜಿ ಇತ್ಯರ್ಥವಾದ ಕೂಡಲೇ ಸಿಡಿ ಪ್ರಕರಣದ ತನಿಖಾ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಎಸ್ಐಟಿ ಸಲ್ಲಿಸಲಿದೆ.