ರಮೇಶ್ ಜಾರಕಿಹೊಳಿ ಮೊಬೈಲ್ ಬಗ್ಗೆ ಸ್ಪೋಟಕ ಹೇಳಿಕೆ ಕೊಟ್ಟ ಶಂಕಿತ ಆರೋಪಿಗಳು
ಬೆಂಗಳೂರು, ಜೂ. 15: ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಬ್ಲಾಕ್ ಮೇಲ್ ಪ್ರಕರಣ ಸಂಬಂಧ ಶಂಕಿತ ಆರೋಪಿ ಶ್ರವಣ್ ಕುಮಾರ್ ಎಸ್ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾನೆ. ಹನ್ನೊಂದು ಗಂಟೆ ಸುಮಾರಿಗೆ ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಂಟರ್ನಲ್ಲಿ ತನಿಖಾಧಿಕಾರಿ ಧರ್ಮೇಂದ್ರ ಮುಂದೆ ವಿಚಾರಣೆ ಎದುರಿಸಿದ್ದು, ಸ್ಫೋಟಕ ಅಂಶಗಳನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.
ಪ್ರತ್ಯೇಕ ವಿಚಾರಣೆ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬೆಳಕಿಗೆ ಬಂದ ನಂತರ ತಲೆ ಮರೆಸಿಕೊಂಡಿದ್ದ ಶಂಕಿತ ಆರೋಪಿಗಳಿಬ್ಬರು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಶನಿವಾರ ಇಬ್ಬರು ಶಂಕಿತರು ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಶನಿವಾರ ಜಾಮೀನು ಷರತ್ತು ಹಾಗೂ ಇತರೆ ದಾಖಲಾತಿ ಪ್ರಕ್ರಿಯೆ ಮುಗಿಸಿದ್ದ ಎಸ್ಐಟಿ ಅಧಿಕಾರಿಗಳು ಇಬ್ಬರಿಗೂ ಭಾನುವಾರ ವಿಶ್ರಾಂತಿ ನೀಡಿದ್ದರು. ಸೋಮವಾರ ನರೇಶ್ ಪ್ರತ್ಯೇಕ ವಿಚಾರಣೆ ನಡೆಸಿದ್ದ ಎಸ್ಐಟಿ ಅಧಿಕಾರಿಗಳು ಇಂದು ಶ್ರವಣ್ನನ್ನು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ಬಾಯಿಬಿಟ್ಟ ಸಂಗತಿ
ಶನಿವಾರ ಎಸ್ಐಟಿ ಅಧಿಕಾರಿ ಧರ್ಮೇಂದ್ರ ವಿಚಾರಣೆ ನಡೆಸಿದ್ದು, ಸಿಡಿ ಯುವತಿ ಹಾಗೂ ತನಗೂ ಇರುವ ಸಂಬಂಧದ ಬಗ್ಗೆ ಶ್ರವಣ್ ಹೇಳಿಕೆ ನೀಡಿದ್ದಾನೆ. ಈತನ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಅಸಲಿ ವಿಚಾರಣೆ ಇಂದಿನಿಂದ ಆರಂಭವಾಗಲಿದೆ. ಬ್ಲಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿಂತೆ ಈವರೆಗೂ ಎಸ್ಐಟಿ ಅಧಿಕಾರಿಗಳು ಸಂಗ್ರಹಿಸಿರುವ ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ಎಸ್ಐಟಿ ವಿಚಾರಣೆ ಆರಂಭಿಸಿದ್ದು, ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಶ್ರವಣ್ ಕಕ್ಕಾಬಿಕ್ಕಿಯಾಗಿದ್ದಾನೆ ಎನ್ನಲಾಗಿದೆ. ಮೊದಲು ಏನು ಹೇಳಿಕೆ ನೀಡುತ್ತಾರೋ ಅದನ್ನು ದಾಖಲಿಸಿಕೊಳ್ಳುವುದು, ಆನಂತರ ಸಾಕ್ಷಗಳನ್ನು ಮುಂದಿಟ್ಟು, ಉತ್ತರ ಪಡೆಯಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಸಿಬಿಐ ಮಾದರಿಯ ತನಿಖಾ ಶೈಲಿಯಿಂದ ಪ್ರಕರಣದ ಅಸಲಿ ಸತ್ಯಾಂಶಗಳು ಶೀಘ್ರದಲ್ಲಿ ಹೊರ ಬೀಳಲಿದೆ.
ಶ್ರವಣ್ ಹೇಳಿಕೆ ವಿವರ
ಇನ್ನು ಸಂತ್ರಸ್ತ ಯುವತಿ ನನಗೆ ಮೊದಲಿನಿಂದಲೂ ಪರಿಚಯವಿದ್ದಳು. ನಾನು ಇಂಜಿನಿಯರಿಂಗ್ ಪದವಿ ಮಾಡುವಾಗ ವಿಟಿಯುಗೆ ಸಂಬಂಧಿಸಿದಂತೆ ದೊಡ್ಡ ಪ್ರತಿಭಟನೆ ನಡೆಯುತ್ತಿತ್ತು. ಅದರಲ್ಲಿ ನಾನು ಮುಂದಾಳತ್ವ ವಹಿಸಿದ್ದು, ಈ ವೇಳೆ ನನಗೆ ಸಂತ್ರಸ್ತ ಯುವತಿ ಪರಿಚಯವಾಗಿದ್ದಳು. ನಾನು ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದು, ನನ್ನನ್ನು ಯುವತಿ ಭೇಟಿ ಮಾಡಿ ಅನ್ಯಾಯವಾಗಿದೆ ಎಂದು ಹೇಳಿದ್ದಳು. ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ನನಗೆ ಕೆಲಸದ ಅಮಿಷ ಒಡ್ಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಹೀಗಾಗಿ ಆಕೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಾನು ನರೇಶ್ ಅವರನ್ನು ಯುವತಿಗೆ ಪರಿಚಯಿಸಿದೆ. ಸ್ಟಿಂಗ್ ಕ್ಯಾಮರಾದಲ್ಲಿ ಅಶ್ಲೀಲ ವಿಡಿಯೋ ರೆಕಾರ್ಡ್ ಆಗುವ ಮೊದಲೇ ಜಾರಕಿಹೊಳಿ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಆಗಿತ್ತು. ಬೇಕಾದರೆ ಹೋಗಿ ಪರಿಶೀಲಿಸಿ ಎಂದು ಶ್ರವಣ್ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಸಂತ್ರಸ್ತ ಯುವತಿ ಹೇಳಿಕೆಗೆ ತದ್ವಿರುದ್ಧ ಹೇಳಿಕೆ
ಇನ್ನು ನರೇಶ್ ಕೂಡ ಶ್ರವಣ್ ಹೇಳಿಕೆ ಪುಸ್ಟೀಕರಿಸುವ ರೀತಿಯೇ ಹೇಳಿದ್ದಾರೆ ಎನ್ನಲಾಗಿದೆ. ನನಗೆ ಶ್ರವಣ್ನಿಂದ ಪರಿಚಯವಾಗಿದ್ದ ಯುವತಿ ಅನ್ಯಾಯ ಆಗಿದೆ ಎಂದು ಹೇಳಿದಳು. ಮಾಧ್ಯಮದಲ್ಲಿದ್ದ ಕಾರಣಕ್ಕೆ ನನ್ನನ್ನು ಆಕೆ ಭೇಟಿ ಮಾಡಿದ್ದು ನಿಜ. ನನ್ನನ್ನು ಅಣ್ಣ ಅಂತಲೇ ಕರೆಯುತ್ತಿದ್ದಳು. ಪ್ರಭಾವಿ ವ್ಯಕ್ತಿಯಾಗಿರುವ ಕಾರಣ ದೂರು ನೀಡದರು. ಇನ್ನು ಸಂತ್ರಸ್ತ ಯುವತಿ ನಮ್ಮ ನೆರವು ಕೇಳಿದಾಗ ರಹಸ್ಯ ಕ್ಯಾಮರಾ ಒದಗಿಸಿದ್ದೇವೆ. ಯುವತಿಗೆ ನೆರವು ನೀಡಿದ್ದರಿಂದ ನಮಗೂ ಜೀವ ಬೆದರಿಕೆ ಇತ್ತು. ಹೀಗಾಗಿ ತಲೆಮರೆಸಿಕೊಂಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಬ್ಲಾಕ್ ಮೇಲ್ ವಿಚಾರವಾಗಿ ನಮಗೇನೂ ಗೊತ್ತಿಲ್ಲ. ಯಾರಿಂದಲೂ ಹಣ ಪಡೆದಿಲ್ಲ ಎಂದು ಪ್ರಾಥಮಿಕ ಹೇಳಿಕೆ ದಾಖಲಿಸಿದ್ದಾರೆ ಎಂದು ಗೊತ್ತಾಗಿದೆ.
ಪ್ರತ್ಯೇಕ ಡ್ರಿಲ್ಲಿಂಗ್
ಇನ್ನು ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಈ ಮೊದಲೇ ಸಂಗ್ರಹಿಸಿದ್ದರು. ಮಾತ್ರವಲ್ಲದೇ ಸಂತ್ರಸ್ತ ಯುವತಿ ನ್ಯಾಯಾಲಯದ ಮುಂದೆ ಹಾಜರಾಗಿ ಸ್ವ ಇಚ್ಛಾ ಹೇಳಿಕೆಯನ್ನು ದಾಖಲಿಸಿದ್ದಳು. ಆನಂತರ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದ ಸಂತ್ರಸ್ತ ಯುವತಿ ಕೆಲವು ಸ್ಫೋಟಕ ಸಂಗತಿಗಳನ್ನು ಬಾಯಿಬಿಟ್ಟಿದ್ದರು. ಆ ಸ್ಪೋಟಕ ಸತ್ಯಾಂಶಗಳನ್ನು ಎಸ್ಐಟಿ ಅಧಿಕಾರಿಗಳು ಇನ್ನೂ ಬಹಿರಂಗ ಪಡಿಸಿಲ್ಲ. ಶಂಕಿತರು ಮೊದಲು ಹೇಳುವ ಹೇಳಿಕೆ ದಾಖಲಿಸಿಕೊಂಡು, ಆನಂತರ ಸಂತ್ರಸ್ತ ಯುವತಿ ನೀಡಿರುವ ಹೇಳಿಕೆ ಹಾಗೂ ಸಾಕ್ಷ್ಯಗಳನ್ನು ಮುಂದಿಟ್ಟು ಪ್ರಶ್ನಿಸಲು ಮುಂದಾಗಿದ್ದಾರೆ. ಇದಕ್ಕೆ ಪೂರ್ವ ತಯಾರಿ ನಡೆಸಿಕೊಂಡು ಮೊದಲ ಹಂತದಲ್ಲಿಯೇ ಪ್ರತ್ಯೇಕ ವಿಚಾರಣೆ ಆರಂಭಿಸಿದ್ದಾರೆ.
ಆ ದಿನ ನಡೆದ ಬಗ್ಗೆ ಯುವತಿ ಹೇಳಿಕೆ
ಸಂತ್ರಸ್ತ ಯುವತಿ ಘಟನೆಗೆ ಸಂಬಂಧಿಸಿದಂತೆ ಸಾಕಷ್ಟು ವಾಸ್ತವಾಂಶಗಳನ್ನು ತೆರೆದಿಟ್ಟಿದ್ದಾಳೆ. ಆದರೆ ಆಕೆ ನೀಡುವ ಹೇಳಿಕೆಗೂ ಶಂಕಿತ ಆರೋಪಿಗಳಾದ ನರೇಶ್ ಹಾಗೂ ಶ್ರವಣ್ ನೀಡುವ ಹೇಳಿಕೆಗಳಿಗೆ ಸಾಮ್ಯತೆ ಇರಬೇಕು. ಇದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪ್ರಕರಣಕ್ಕೆ ಹೊಸ ಆಯಾಮ ಪಡೆದುಕೊಳ್ಳಲದೆ. ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿದಂತೆ "ಹನಿಟ್ರ್ಯಾಪ್ "ಎಂಬುದಕ್ಕೆ ಪೂರಕ ಸಾಕ್ಷಾಧಾರಗಳನ್ನು ಸಂತ್ರಸ್ತ ಯುವತಿ ವಿಚಾರಣೆ ವೇಳೆ ಬಿಟ್ಟುಕೊಟ್ಟಿದ್ದಾಳೆ ಎಂದು ಗೊತ್ತಾಗಿದೆ. ರಮೇಶ್ ಜಾರಕಿಹೊಳಿಯನ್ನು ಡ್ರೋನ್ ಪ್ರಾಜೆಕ್ಟ್ ಭಾಗವಾಗಿ ಭೇಟಿ ಮಾಡಿದ್ದಾಳೆ. ಆನಂತರ ಡ್ಯಾಮ್ಗಳ ಮೇಲೆ ಡ್ರೋನ್ ಹಾರಿಸುವ ಬಗ್ಗೆ ಸಂತ್ರಸ್ತ ಯುವತಿಯ ಪ್ರಸ್ತಾವನೆ ಬಗ್ಗೆ ಪರಿಶೀಲಿಸಿಲು ರಮೇಶ್ ಜಾರಕಿಹೊಳಿ ಆಪ್ತ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಸಂತ್ರಸ್ತ ಯುವತಿಯನ್ನು ಡ್ರೋನ್ ಬಗ್ಗೆ ಪ್ರಶ್ನಿಸಿದಾಗ ಸಂತ್ರಸ್ತ ಯುವತಿ ಕಕ್ಕಾಬಿಕ್ಕಿಯಾಗಿದ್ದಾಳೆ. ಆನಂತರ ಇಬ್ಬರು ಸ್ವತಃ ಹೋಗಿ ಡ್ರೋನ್ ಬಗ್ಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
Recommended Video
ಮಹತ್ವದ ಸುಳಿವು
ಸಂತ್ರಸ್ತ ಯುವತಿ ನಮ್ಮ ಸಂಪರ್ಕಕ್ಕೆ ಬರುವ ಮೊದಲೇ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿಯನ್ನು ಯುವತಿ ರೆಕಾರ್ಡ್ ಮಾಡಿದ್ದಳು. ಆನಂತರ ಯುವತಿಗೆ ರಹಸ್ಯ ಕ್ಯಾಮರಾ ಒದಗಿಸಿಕೊಟ್ಟಿದ್ದೆವು ಎಂಬ ಹೇಳಿಕೆಯನ್ನು ಶ್ರವಣ್ ದಾಖಲಿದ್ದಾನೆ ಎನ್ನಲಾಗಿದೆ. ಆದರೆ, ಸಂತ್ರಸ್ತ ಯುವತಿಯನ್ನು ಶ್ರವಣ್ ಸಂಪರ್ಕಿಸಿದ ಬಳಿಕವಷ್ಟೇ ಆಕೆ ಡ್ರೋನ್ ಪ್ರಾಜೆಕ್ಟ್ ಹೆಸರಿನಲ್ಲಿ ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಿದ್ದಾಳೆ. ಅದಕ್ಕಿಂತಲೂ ಮೊದಲು ರಮೇಶ್ ಜಾರಕಿಹೊಳಿಗೂ- ಸಂತ್ರಸ್ತ ಯುವತಿಗೂ ಯಾವುದೇ ಸಂಪರ್ಕ ಇರಲಿಲ್ಲ. ಡ್ರೋನ್ ಪ್ರಾಜೆಕ್ಟ್ ವಿಫಲವಾದಾಗ ಸಂತ್ರಸ್ತ ಯುವತಿ ಸರ್ಕಾರಿ ಕೆಲಸ ಪಡೆಯುವ ನೆಪದಲ್ಲಿ ಸಂಪರ್ಕ ಮುಂದುವರೆಸಿದ್ದಳು. ಆನಂತರ ಆಕೆಯೇ ಸ್ವತಃ ರಹಸ್ಯ ಕ್ಯಾಮರಾವನ್ನು ಇಟ್ಟ ಜಾಗವನ್ನು ಕೂಡ ತೋರಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಕೆಲವು ಸತ್ಯಾಂಶಗಳನ್ನು ಈ ಹಿಂದೆ ದಾಖಲಿಸಿದ್ದಳು. ಆಕೆ ನೀಡಿರುವ ಹೇಳಿಕೆಗೆ ತದ್ವಿರುದ್ಧವಾಗಿ ಶ್ರವಣ್ ಹೇಳಿಕೆ ನೀಡಿದ್ದಾನೆ. ಎಸ್ಐಟಿ ಉನ್ನತ ತನಿಖಾಧಿಕಾರಿಗಳ ತಂಡ ಶಂಕಿತರು ಹೇಳಿರುವ ಹೇಳಿಕೆ, ಎಸ್ಐಟಿ ಬಳಿ ಇರುವ ಸಾಕ್ಷಿಗಳನ್ನು ಮುಂದಿಟ್ಟು ವಿಚಾರಣೆ ನಡೆಸಲು ತೀರ್ಮಾನಿಸಿದೆ ಎಂದು ಗೊತ್ತಾಗಿದೆ.