ಸಿಡಿ ಪ್ರಕರಣ; ಸರ್ಕಾರದ ಮುಂದೆ 3 ಬೇಡಿಕೆ ಇಟ್ಟ ಕಾಂಗ್ರೆಸ್
ಬೆಂಗಳೂರು, ಮೇ 27; ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಮುಂದೆ ಮೂರು ಬೇಡಿಕೆಯನ್ನು ಇಟ್ಟಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು. ರಮೇಶ್ ಜಾರಕಿಹೊಳಿ ಬಂಧನವಾಗಬೇಕು. ಪ್ರಕರಣದ ಹಿಂದಿರುವ ಎಲ್ಲರ ಪತ್ತೆಗಾಗಿ ಸ್ವತಂತ್ರ ತನಿಖಾ ಸಂಸ್ಥೆಯಿಂದ ಇದರ ತನಿಖೆಯಾಗಬೇಕು ಎಂದು ಒತ್ತಾಯಿಸಿದೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ವಿವರವಾಗಿ ಮಾತನಾಡಿದರು.
ಸಿದ್ಧರಾಮಯ್ಯ ಮಾತನಾಡಿ, "ಮಾರ್ಚ್ 3ರಂದು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತಾರೆ. ಮಾರ್ಚ್ 9ರಂದು ಗೃಹ ಸಚಿವರಿಗೆ ಪತ್ರ ಬರೆಯುತ್ತಾರೆ ನಾನು ನಿರಪರಾಧಿ, ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳುತ್ತಾರೆ. ಮಾರ್ಚ್ 10ರಂದು ಗೃಹ ಸಚಿವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುತ್ತಾರೆ ಎಸ್ಐಟಿ ಮಾಡಿ ಎಂದು ಸೂಚಿಸುತ್ತಾರೆ" ಎಂದರು.
Breaking News: ಸಿಡಿ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ರಮೇಶ್ ಜಾರಕಿಹೊಳಿ
"ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲು ಸೂಚಿಸುತ್ತಾರೆ. ವಿಚಾರಣೆ ಮಾಡಿ ವರದಿ ನೀಡಲಿ ಎಂದು ಸೂಚಿಸುತ್ತಾರೆ. ದೂರು ನೀಡಿದ ಮೇಲೆ ಎಫ್ಐಆರ್ ದಾಖಲಿಸಬೇಕು, ತನಿಖೆ ನಡೆಸ ಬೇಕು. ಆ ಬಳಿಕ ಚಾರ್ಜ್ಶೀಟ್ ದಾಖಲಿಸಬೇಕು, ಇದು ಕಾನೂನಿನ ಪದ್ಧತಿ. ಆದರೆ ಗೃಹ ಸಚಿವರು ವಿಚಾರಣೆ ಮಾಡಿ ವರದಿ ನೀಡಿ ಅಂತಾರೆ" ಎಂದು ಗೃಹ ಸಚಿವ ವಿರುದ್ಧ ಆರೋಪಿಸಿದರು.
ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಆರ್ಟಿ ನಗರದ ಪಿಜಿಯಲ್ಲಿ ಎಸ್ಐಟಿ ಮಹಜರು
"ಮಾರ್ಚ್ 13 ರಂದು ರಮೇಶ್ ಜಾರಕಿಹೊಳಿ ನಾಗರಾಜ್ ಎಂಬ ಮಾಜಿ ಶಾಸಕರ ಮೂಲಕ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಅದರಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದರ ಯಾವುದೇ ಮಾಹಿತಿ ಇರುವುದಿಲ್ಲ. ಯಾರ ಹೆಸರನ್ನು ಕೂಡ ಉಲ್ಲೇಖಿಸುವುದಿಲ್ಲ. ಪೊಲೀಸರು ಮಾರ್ಚ್ 13ರಂದು ಶ್ರವಣ್ ಮತ್ತು ನರೇಶ್ ಎಂಬುವವರ ಮನೆ ಮೇಲೆ ದಾಳಿ ಮಾಡುತ್ತಾರೆ ಮಾರ್ಚ್ 13ಕ್ಕೆ ಸಂತ್ರಸ್ತೆ ಮಹಿಳೆ ವಿಡಿಯೋ ರೆಕಾರ್ಡ್ ಮಾಡುತ್ತಾರೆ. ನಾನು ರಮೇಶ್ ಜಾರಕಿಹೊಳಿ ಬಳಿ ಕೆಲಸ ಕೇಳಿ ಹೋಗಿದ್ದೆ. ಅವರು ನನ್ನ ಲೈಂಗಿಕವಾಗಿ ದೂರುಪಯೋಗ ಮಾಡಿಕೊಂಡರು ಎಂದು ಸಿಡಿಯಲ್ಲಿ ಹೇಳಿದ್ದಾರೆ" ಎಂದು ಸಿದ್ದರಾಮಯ್ಯ ವಿವರಿಸಿದರು.
"ರಮೇಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ವಿಧಾನಸಭೆಯಲ್ಲಿ ನಾನು, ರಮೇಶ್ ಕುಮಾರ್ ಡಿ. ಕೆ. ಶಿವಕುಮಾರ್ ಆಗ್ರಹಿಸಿದ್ದೆವು. ಚರ್ಚೆ ಮಾಡಲು ಅವಕಾಶ ಕೇಳಿದರೆ ಸ್ಪೀಕರ್ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಚರ್ಚೆ ಕೈಗೆತ್ತಿಕೊಳ್ಳಲು ಆಗುವುದಿಲ್ಲ ಎಂದರು. ಇದಾದ ಬಳಿಕ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐ ಆರ್ ದಾಖಲಾಗುತ್ತದೆ ಐಪಿಸಿ 376 ಸಿ ಅಡಿ ಕೇಸ್ ದಾಖಲಾಗುತ್ತದೆ. ನನ್ನ ಪ್ರಕಾರ 376 ಅಡಿ ಪ್ರಕರಣ ದಾಖಲಾಗಬೇಕಿತ್ತು. ಇದರ ಅಡಿ 10 ವರ್ಷದ ವರೆಗೆ ಶಿಕ್ಷೆಗೆ ಅವಕಾಶ ಇದೆ. ತನಿಖೆ ಸರಿಯಾಗಿ ನಡೆಯಲೇ ಇಲ್ಲ" ಎಂದು ಆರೋಪಿಸಿದರು.
"60 ದಿನಗಳ ಒಳಗೆ ತನಿಖೆ ಮುಗಿಸುವುದು ಕಡ್ಡಾಯ. ಆಮೇಲೆ ಸ್ವತಂತ್ರ ತನಿಖೆ ಕೋರಿ ಹೈಕೋರ್ಟ್ನಲ್ಲಿ ಪಿಐಎಲ್ ದಾಖಲಾಗುತ್ತದೆ ನಾನು ಕೂಡ ಸತ್ಯ ಹೊರಗೆ ಬರಲು ಸ್ವತಂತ್ರ ತನಿಖೆ ಸಂಸ್ಥೆಯಿಂದ ತನಿಖೆ ಆಗ ಬೇಕು ಎಂದು ಒತ್ತಾಯಿಸಿದ್ದೆ. ಹೈಕೋರ್ಟ್ ನಿಗಾದಲ್ಲಿಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದೆ. ಪಿಐಎಲ್ ಕೂಡ ಇದೇ ಮನವಿ ಮಾಡಿತ್ತು. ಎಫ್ಐಆರ್ ದಾಖಲಾದ ಬಳಿಕ ಮಾರ್ಚ್ 26ನೇ ರಂದು ಸಂತ್ರಸ್ತ ಮಹಿಳೆ ಲಿಖಿತ ದೂರನ್ನು ಕೂಡ ನೀಡುತ್ತಾಳೆ. ಆಕೆಯ ಹೇಳಿಕೆ ದಾಖಲಾಗುತ್ತದೆ. ರಮೇಶ್ ಜಾರಕಿಹೊಳಿ ಮಹಿಳೆಯ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡಿರುವುದನ್ನು ಸೂಚಿಸುತ್ತದೆ. ಕಾನೂನು ಪ್ರಕಾರ ರಮೇಶ್ ಜಾರಕಿಹೊಳಿ ಬಂಧನವಾಗಬೇಕಿತ್ತು. ಭಾರತ ದೇಶದಲ್ಲಿ ರೇಪ್ ಕೇಸ್ಗೆ ಸಂಬಂಧಿಸಿದಂತೆ ಬಂಧನ ಮಾಡದೇ ಇರುವುದು ಈ ಕೇಸ್ನಲ್ಲಿ ಮಾತ್ರ" ಎಂದು ಸಿದ್ದರಾಮಯ್ಯ ಹೇಳಿದರು.
ಜಾರಕಿಹೊಳಿ ಸಿಡಿ ಕೇಸ್: ಸಂತ್ರಸ್ತ ಯುವತಿಯ BE ಬ್ಯಾಕ್ ಲಾಗ್ ಕಹಾನಿ!
ಸಂಪೂರ್ಣ ಸರ್ಕಾರದ ರಕ್ಷಣೆ; "ಸರ್ಕಾರದ ಸಂಪೂರ್ಣ ರಕ್ಷಣೆ ಇದ್ದ ಹಿನ್ನಲೆಯಲ್ಲಿ ರಮೇಶ್ ಜಾರಕಿಹೊಳಿ ಬಂಧಿಸಲಾಗಿಲ್ಲ. ಇಂದು ಕೂಡಾ ಅವರು ಆರಾಮವಾಗಿ ಓಡಾಡಿಕೊಂಡಿದ್ದಾರೆ. ಸರ್ಕಾರ ರಕ್ಷಣೆ ನೀಡುತ್ತಿದೆ. ಪೊಲೀಸರಿಗೆ ಬಂಧಿಸಬೇಡಿ ಎಂದು ಒತ್ತಡ ಹಾಕಿದ್ದಾರೆ. ಇತ್ತಿಚೆಗೆ ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿಯನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಈ ಮೂಲಕ ಎಸ್ಐಟಿ ನಿಷ್ಕ್ರಿಯಗೊಳಿಸಿದ್ದಾರೆ" ಎಂದು ಗಂಭೀರ ಆರೋಪವನ್ನು ಸಿದ್ದರಾಮಯ್ಯ ಮಾಡಿದರು.
"ನನಗಿರುವ ಮಾಹಿತಿ ಪ್ರಕಾರ ರಮೇಶ್ ಜಾರಕಿಹೊಳಿ ಗೃಹ ಸಚಿವರನ್ನು ಕಳೆದ ಶನಿವಾರ ಹುಬ್ಬಳಿಯಲ್ಲಿ ಭೇಟಿಯಾಗಿ 2 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಇವರ ಜೊತೆ ಇಬ್ಬರೂ ಸಚಿವರು ಕೂಡ ಇದ್ದರು. ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿಯನ್ನು ಕೂಡ ಭೇಟಿಯಾಗಿದ್ದಾರೆ. ಮೇಲ್ನೋಟಕ್ಕೆ ಸರ್ಕಾರ ಆರೋಪಿಯನ್ನು ರಕ್ಷಣೆ ಮಾಡುತ್ತಿದೆ ಎಂಬುದು ತಿಳಿಯುತ್ತಿದೆ" ಎಂದು ಸಿದ್ದರಾಮಯ್ಯ ತಿಳಿಸಿದರು.
"ಕೂಡಲೇ ರಮೇಶ್ ಜಾರಕಿಹೊಳಿ ಬಂಧಿಸಬೇಕು. ರೇಪ್ ಆರೋಪ ಇರುವ ವ್ಯಕ್ತಿ ಗೃಹ ಸಚಿವರನ್ನು ಭೇಟಿಯಾಗಿ ಚರ್ಚೆ ಮಾಡಿರುವುದು ಇದೇ ಮೊದಲು. ಎಸ್ಐಟಿ ಮುಂದೆ ಸಿಡಿಯಲ್ಲಿರುವುದು ನಾನೇ. ಮಹಿಳೆಯ ಜತೆ ಒಪ್ಪಿಗೆ ಲೈಂಗಿಕಕ್ರಿಯೆ ಮಾಡಿರುವುದಾಗಿ ಹೇಳಿದ್ದಾರೆ. ಆದರೂ ಇದುವರೆಗೆ ಕೂಡ ರಮೇಶ್ ಜಾರಕಿಹೊಳಿಯ ವೈದ್ಯಕೀಯ ಪರೀಕ್ಷೆ ಮಾಡಿಲ್ಲ. ಕೇವಲ ಬಿಪಿ, ಶುಗರ್ ಪರೀಕ್ಷೆ ಮಾಡಿಸಿದ್ದಾರೆ" ಎಂದು ಸಿದ್ದರಾಮಯ್ಯ ದೂರಿದರು.
"53ಎ ಸಿಆರ್ಪಿಸಿ ಪ್ರಕಾರ ಮೆಡಿಕಲ್ ಪರೀಕ್ಷೆ ಕಡ್ಡಾಯ ಎಂದು ಕಾನೂನು ಹೇಳುತ್ತದೆ. ಆದರೆ ಇದುವರೆಗೆ ಕೂಡ ರಮೇಶ್ ಜಾರಕಿಹೊಳಿ ವೈದ್ಯಕೀಯ ಪರೀಕ್ಷೆ ಮಾಡಿಲ್ಲ. ಉದ್ದೇಶಪೂರ್ವಕವಾಗಿ ತನಿಖೆ ವಿಳಂಬ ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ರಮೇಶ್ ಜಾರಕಿಹೊಳಿಯನ್ನು ಕಾಪಾಡುತ್ತಿದ್ದಾರೆ ಎಂಬುದು ಕಾಣಿಸುತ್ತಿದೆ. ಅದಕ್ಕಾಗಿಯೇ ರಮೇಶ್ ಜಾರಕಿಹೊಳಿಯನ್ನ ಬಂಧಿಸಿಲ್ಲ. ಗೃಹ ಸಚಿವರಾಗಿ ಮುಂದುವರಿಯಲು ಬಸವರಾಜ ಬೊಮ್ಮಾಯಿಗೆ ಯಾವುೇ ನೈತಿಕತೆ ಇಲ್ಲ. ಹೀಗಾಗಿ ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ನಾನು ಆಗ್ರಹಿಸುತ್ತೇನೆ. ಈ ಕಾರಣಕ್ಕಾಗಿಯೇ ಸ್ವತಂತ್ರ ಸಂಸ್ಥೆ ಮೂಲಕ ಹೈಕೋರ್ಟ್ ಪರಿವೀಕ್ಷಣೆಯಲ್ಲಿ ತನಿಖೆ ನಡೆಸ ಬೇಕು. ಆರೋಪಿ ರಮೇಶ್ ಜಾರಕಿಹೊಳಿ ಕೂಡಲೇ ಬಂಧಿಸ ಬೇಕು" ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ, "ಇದು ಕರ್ನಾಟಕ ಪೊಲೀಸರ ಗೌರವದ ವಿಷಯ. ಈ ರೀತಿ ಆದರೆ ಮುಂದಿನ ದಿನಗಳಲ್ಲಿ ಯಾವ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಾಗಲ್ಲ. ಇಂತಹ ಸರ್ಕಾರದಲ್ಲಿ ಈ ರೀತಿ ಆಗಿತ್ತು ಎಂದು ತಿಳಿಯುತ್ತದೆ. ಇನ್ಮುಂದೆ ಯಾವುದೇ ದೂರು ಬಂದರೆ ಈ ಪ್ರಕರಣವನ್ನು ಹೇಳುತ್ತಾರೆ. ಎಸ್ಐಟಿ ತಂಡದಲ್ಲಿರುವ ಅಧಿಕಾರಿಗಳು ಇನ್ನು ಹತ್ತು,ಇಪ್ಪತ್ತು ವರ್ಷ ಕೆಲಸ ಮಾಡಬೇಕಾಗುತ್ತೆ. ಈ ರೀತಿ ತನಿಖೆಯಾದರೆ ಮುಂದೆ ಏನಾಗಲಿದೆ ಎಂದು ಗೊತ್ತಿಲ್ವಾ?" ಎಂದು ಪ್ರಶ್ನಿಸಿದರು.
"ಅವರು ಕೊರೊನಾ ಬಂದು ಆಸ್ಪತ್ರೆಯಲ್ಲಿ ಮಲಗಿದ್ದರು. ಸೋಂಕಿತರು ಪಿಪಿಇ ಕಿಟ್ ಹಾಕಿದ್ದನ್ನು ಎಲ್ಲದರೂ ನೋಡಿದ್ದೀರಾ?. ನಾನು ಆಸ್ಪತ್ರೆಯಲ್ಲಿದ್ದೆ, ಸಿದ್ದರಾಮಯ್ಯ ಆಸ್ಪತ್ರೆಯಲ್ಲಿದ್ದರು ನಾವು ಪಿಪಿಇ ಕಿಟ್ ಹಾಕಿಲ್ಲ. ಎಲ್ಲಿ ಕೊರೊನಾ ಬಂತು ದಾಖಲೆ ತೋರಿಸಲಿ?. ಆ ಯುವತಿ ನಮ್ಮ ಬಳಿ ನ್ಯಾಯ ಕೇಳೋದು ತಪ್ಪಾ, ಸಿದ್ದರಾಮಯ್ಯ, ರಮೇಶ್ ಕುಮಾರ್, ನನ್ನ ಹೆಸರು ಆ ಯುವತಿ ಹೇಳಿದ್ದಳು. ಒಂದು ರಾಜಕೀಯ ಪಕ್ಷವಾಗಿ ಸಹಾಯ ಮಾಡುತ್ತೇವೆ. ನಮ್ಮ ವಕೀಲರು ಪೋಷಕರನ್ನು ಭೇಟಿ ಮಾಡಲು ತಡೆ ಹಾಕುತ್ತಾರೆ" ಎಂದು ಡಿ. ಕೆ. ಶಿವಕುಮಾರ್ ಆರೋಪಿಸಿದರು.
Recommended Video
"ಕಳೆದ ಚುನಾವಣೆಯಲ್ಲಿ ಒಂದು ಸಿಡಿ ಬಂದಿತ್ತು. ಪೊಲೀಸ್ ಅಧಿಕಾರಿ ಅನುಚೇತ್ ಏನ್ ಮಾಡಿದ್ದೀರಾ?. ನೀವು ಒಬ್ಬ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ. ಬೇರೆ ಪ್ರಕರಣಗಳಿಗೆ ಈ ಪ್ರಕರಣ ಎಕ್ಸಾಂಪಲ್ ಸೆಟ್ ಮಾಡುತ್ತಿದ್ದೀರಾ?. ಯುವತಿ ಹಾಗು ಆ ಯುವತಿ ಪೋಷಕರು ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ಒಂದು ಪ್ರತಿಪಕ್ಷವಾಗಿ ಆ ಯುವತಿ ಪರ ನಾವು ನಿಲ್ಲುತ್ತೇವೆ. ಕೂಡಲೇ ರಮೇಶ್ ಜಾರಕಿಹೊಳಿ ಬಂಧಿಸಬೇಕು" ಎಂದು ಒತ್ತಾಯಿಸಿದರು.