ರಮೇಶ್ ಜಾರಕಿಹೊಳಿ ರಾಜೀನಾಮೆ : ಯಾರು, ಏನು ಹೇಳಿದರು?
Recommended Video
ಬೆಂಗಳೂರು, ಏಪ್ರಿಲ್ 24 : ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರು ಮತ್ತೆ ರಾಜೀನಾಮೆ ಮಾತನಾಡಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಹೊರ ರಾಜಕೀಯ ಬೆಳವಣಿಗೆ ಆರಂಭವಾಗಿದೆ.
ಬುಧವಾರ ರಮೇಶ್ ಜಾರಕಿಹೊಳಿ ಅವರು ಬೆಂಗಳೂರಿಗೆ ಆಗಮಿಸಿದರು. 'ಒಬ್ಬನೇ ರಾಜೀನಾಮೆ ನೀಡಿದರೆ ಏನು ಅರ್ಥವಿದೆ, ಒಂದು ವಾರ ಕಾಯಿರಿ. ಎಲ್ಲಾ ನಾಯಕರು ಒಟ್ಟಾಗಿ ಸೇರಿ ತೀರ್ಮಾನವನ್ನು ಕೈಗೊಳ್ಳುತ್ತೇವೆ' ಎಂದು ಹೇಳಿದರು.
ಸ್ವಲ್ಪ ದಿನದಲ್ಲೇ ಒಳ್ಳೆಯ ಸುದ್ದಿ ಕೊಡ್ತೀನಿ ಎಂದ ರಮೇಶ್ ಜಾರಕಿಹೊಳಿ
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ನಾಯಕರು ರಮೇಶ್ ಜಾರಕಿಹೊಳಿ ಮನವೊಲಿಕೆಗೆ ಮುಂದಾಗಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ತನಕ ಅವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳದಿರಲು ಕಾಂಗ್ರೆಸ್ ನಿರ್ಧರಿಸಿದೆ.
ರಮೇಶ್ ಜಾರಕಿಹೊಳಿ ರಾಜೀನಾಮೆ ಧಮ್ಕಿ: ಡಿಕೆಶಿ ಡೋಂಟ್ ಕೇರ್
ರಮೇಶ್ ಜಾರಕಿಹೊಳಿ ಅವರ ಜೊತೆ ಯಾವ-ಯಾವ ಶಾಸಕರು ರಾಜೀನಾಮೆ ನೀಡಬಹುದು. ಇದರಿಂದಾಗಿ ಮೈತ್ರಿ ಸರ್ಕಾರಕ್ಕೆ ಅಪಾಯ ಉಂಟಾಗಲಿದೆಯೇ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಬಗ್ಗೆ ಯಾರು, ಏನು ಹೇಳಿದರು? ನೋಡೋಣ....
ರಮೇಶ್ ಜಾರಕಿಹೊಳಿ ಹೇಳಿದ್ದೇನು?
'ನಾನಿನ್ನೂ ಕಾಂಗ್ರೆಸ್ನಲ್ಲಿಯೇ ಇದ್ದೇನೆ. ಯಾವಾಗ ರಾಜೀನಾಮೆ ನೀಡಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಬೆಂಬಲಿಗರ ಜೊತೆ ಚರ್ಚಿಸಿ ತೀರ್ಮಾನ ಬಹಿರಂಗಪಡಿಸುತ್ತೇನೆ' ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಅವರು ಸ್ವತಂತ್ರರು
'ರಮೇಶ್ ಅವರು ಇವತ್ತು ಒಂದು ನಾಳೆ ಮತ್ತೊಂದು ಹೇಳಿಕೆ ಕೊಡುತ್ತಾರೆ. ವೈಯಕ್ತಿಕವಾಗಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲು ಅವರು ಸ್ವತಂತ್ರರು. ಅವರನ್ನು ಭೇಟಿ ಮಾಡಲು ನಾವು ಸಾಕಷ್ಟು ಬಾರಿ ಪ್ರಯತ್ನಿಸಿದೆವು. ಆದರೆ, ಭೇಟಿ ಸಾಧ್ಯವಾಗಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ರಾಜೀನಾಮೆಗೆ ಕಾರಣ ಸ್ಪಷ್ಟವಾಗಿಲ್ಲ
'ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ, ಜಿಲ್ಲಾ ಉಸ್ತುವಾರಿ ಹೊಣೆ ಎಲ್ಲವನ್ನೂ ಪಕ್ಷ ನೀಡಿತ್ತು. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣ ಸ್ಪಷ್ಟವಾಗಿಲ್ಲ' ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.
ಸರ್ಕಾರ ಪತನಗೊಳಿಸುವ ಸಂಚು
'ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಸಂಚು ನಡೆಸುತ್ತಲೇ ಇದ್ದಾರೆ' ಎಂದು ಮಾಜಿ ಸಚಿವ, ಬಿಟಿಎಂ ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ.
ತೋಳ ಬಂತು ತೋಳ ಎನ್ನುವ ಹಾಗಿದೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಕುರಿತು ಮಾತನಾಡಿದ್ದು, 'ಇವತ್ತು ರಾಜೀನಾಮೆ ಕೊಡ್ತಿನಿ, ನಾಳೆ ಕೊಡ್ತಿನಿ ಅಂತಿದ್ದಾರೆ. ಕಳೆದ ಆರು ತಿಂಗಳಿನಿಂದ ಹೇಳುತ್ತಿದ್ದಾರೆ. ತೋಳ ಬಂತು ತೋಳ ಎನ್ನುವ ಹಾಗೆ ಮಾಡುತ್ತಿದ್ದಾರೆ' ಎಂದು ಹೇಳಿದರು.