'ಸಿಡಿ ಸ್ಫೋಟ': ಈಗ ಎಲ್ಲಿದ್ದಾರೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ?
ಬೆಂಗಳೂರು, ಫೆ. 02: ರಾಜ್ಯ ಬಿಜೆಪಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಿದ್ದ 'ಸಿಡಿ ಬಾಂಬ್' ಇವತ್ತು ಸ್ಫೋಟವಾಗಿದೆ. ರಾಜ್ಯದ ಪ್ರಭಾವಿ ಸಚಿವರು ಸಿಡಿ ಬಾಂಬ್ ಸ್ಫೋಟದಲ್ಲಿ ಸಿಲುಕಿಕೊಂಡಿದ್ದಾರೆ. ಸಹಾಯ ಕೇಳಿ ಬಂದಿದ್ದ ಯುವತಿಯನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ದುರ್ಬಳಕೆ ಮಾಡಿಕೊಂಡಿರುವ ಆರೋಪವನ್ನು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಮಾಡಿದ್ದಾರೆ.
Recommended Video
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು, ಯುವತಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ 'ಸಿಡಿ'ಯಲ್ಲಿಯಲ್ಲಿನ ದೃಶ್ಯಗಳು ಹಾಗೂ ಸಚಿವರೊಂದಿಗೆ ಯುವತಿ ಮಾತನಾಡಿದ್ದಾಳೆ ಎನ್ನಲಾಗುತ್ತಿರುವ ದೂರವಾಣಿ ಸಂಭಾಷಣೆ ಕರೆ ಸೇರಿದಂತೆ ಎಲ್ಲವೂ ಕೂಡ ಅದು ಒಪ್ಪಿತ ಸಂಬಂಧ ಎಂಬಂತಿದೆ ಎಂಬ ವಿಶ್ಲೇಷಣೆಯನ್ನೂ ಮಾಡಲಾಗುತ್ತಿದೆ. ಆದರೆ ಈ ಬಗ್ಗೆ ಪೊಲೀಸ್ ತನಿಖೆಯಿಂದ ಮಾತ್ರ ಹೆಚ್ಚಿನ ವಿವರಗಳು ತಿಳಿದು ಬರಬೇಕಿದೆ.
ರಾಜ್ಯ ರಾಜಕೀಯದಲ್ಲಿ ಸಿಡಿ ಸ್ಫೋಟ; ರಮೇಶ್ ಜಾರಕಿಹೊಳಿ ವಿರುದ್ಧ ದೂರು
ಈ ಮಧ್ಯೆ ಸಂತ್ರಸ್ತ ಯುವತಿಯ ಪರವಾಗಿ ದಿನೇಶ್ ಕಲ್ಲಹಳ್ಳಿ ಅವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಬಗ್ಗೆ ಎಲ್ಲ ರೀತಿಯ ತನಿಖೆ ಸಹಕಾರ ಕೊಡಲು ನಾನು ಸಿದ್ಧನಿದ್ದೇನೆ. ಆದರೆ ಸಮರ್ಪಕ ತನಿಖೆ ಆಗಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಲಸಂಪನ್ಮೂಲ ಸಚಿವರಿಗೆ ಕೆಲಸದ ದುರ್ಬಳಕೆ
ಬೆಂಗಳೂರಿನ ಆರ್ಟಿ ನಗರದ ಯುವತಿಗೆ ಕೆಲಸ ಕೊಡಿಸುವ ಭರವಸೆಯನ್ನು ನೀಡಿ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಯುವತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ. ಆದರೆ ಸದ್ಯದಲ್ಲಿ ರಮೇಶ್ ಜಾರಕಿಹೊಳಿ ಅವರು ಜಲಸಂಪನ್ಮೂಲ ಇಲಾಖೆಯನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಈ ವಿಡಿಯೋ ಯಾವಾಗ ಮಾಡಿದ್ದು ಎಂಬ ಗೊಂದಲವೂ ಇದೆ. ಯಾಕೆಂದರೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಇಂಧನ ಇಲಾಖೆ, ಅದರಲ್ಲಿಯೂ ಕೆಪಿಟಿಸಿಎಲ್ನಲ್ಲಿ ಕೆಲಸ ಕೊಡಿಸುವ ಭರವಸೆಯನ್ನು ಸಂತ್ರಸ್ತ ಯುವತಿಗೆ ಯಾಕೆ ಕೊಟ್ಟರು? ಎಂಬುದು ಸಂಶಯ ಮೂಡಿಸುತ್ತಿದೆ.
ಇಂಧನ ಇಲಾಖೆಗೆ ರಮೇಶ್ ಜಾರಕಿಹೊಳಿ ಬೇಡಿಕೆ
ಹಿಂದಿನ ಮೈತ್ರಿ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ ಅವರು ಇಂಧನ ಇಲಾಖೆಗೆ ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿಯೂ ಹಿಂದೆ ಕೇಳಿ ಬಂದಿತ್ತು. ಆಗ ಇಂಧನ ಇಲಾಖೆಯನ್ನು ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಿರ್ವಹಿಸುತ್ತಿದ್ದರು. ಹೀಗಾಗಿ ಆ ಸಂದರ್ಭದಲ್ಲಿ ತಮಗೆ ಇಂಧನ ಇಲಾಖೆ ಸಿಗಬಹುದು ಎಂದು ಭರವಸೆಯನ್ನು ರಮೇಶ್ ಜಾರಕಿಹೊಳಿ ಹೊಂದಿರಬಹುದು. ಹೀಗಾಗಿ ಸಂತ್ರಸ್ತ ಯುವತಿಗೆ ಇಂಧನ ಇಲಾಖೆಯಲ್ಲಿ ಕೆಲಸ ಕೊಡಿಸುವ ಭರವೆಯನ್ನು ರಮೇಶ್ ಜಾರಕಿಹೊಳಿ ಕೊಟ್ಟಿರಲೂ ಬಹುದು ಎಂಬ ಚರ್ಚೆಗಳೂ ನಡೆಯುತ್ತಿವೆ.
ಅಜ್ಞಾತ ಸ್ಥಳಕ್ಕೆ ತೆರಳಿದ ರಮೇಶ್ ಜಾರಕಿಹೊಳಿ
'ಸಿಡಿ' ಸ್ಫೋಟದ ಬಳಿಕ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಬಂದಿದೆ. ಮೈಸೂರಿನ ಬಿಜೆಪಿ ಮುಖಂಡರೊಬ್ಬರ ಪುತ್ರನ ವಿವಾಹ ಆರತಕ್ಷತೆಯಲ್ಲಿ ರಮೇಶ್ ಜಾರಕಿಹೊಳಿ ಮೈಸೂರಿಗೆ ತೆರಳಿದ್ದರು. ಈ ಮಧ್ಯೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ರಮೇಶ್ ಜಾರಕಿಹೊಳಿ ಅವರು ಅಲ್ಲಿ ದೇವಿಯ ದರ್ಶನ ಮಾಡಿದ್ದರು ಎಂಬ ಮಾಹಿತಿಯಿದೆ.
ಗೋಕಾಕ್ ತಾಲೂಕಿನಲ್ಲಿ ಪವರ್ ಕಟ್
ಬೆಂಗಳೂರಿನಲ್ಲಿ ರಾಸಲೀಲೆ ವಿಡಿಯೋ ಬಹಿರಂಗವಾಗುತ್ತಿದ್ದಂತೆಯೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಪ್ರತಿನಿಧಿಸುವ ಗೋಕಾಕ್ ತಾಲೂಕಿನಾದ್ಯಂತ ವಿದ್ಯುತ್ ಕಡಿತಗೊಳಿಸಲಾಗಿದೆ ಎಂಬ ಮಾಹಿತಿ ಬಂದಿದೆ. ಗೋಕಾಕ್ ವಿಧಾನಸಭಾ ಕ್ಷೇತ್ರದ ಮತದಾರರು ಮಾಧ್ಯಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಯನ್ನು ಗಮನಿಸಬಾರದು ಎಂದು ಹೀಗೆ ಮಾಡಲಾಗಿದೆ ಎಂಬ ಆರೋಪವನ್ನು ಗೋಕಾಕ್ನ ಸ್ಥಳೀಯರು ಮಾಡುತ್ತಿದ್ದಾರೆ.
ಆದರೆ ಇಡೀ ಸಿಡಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಸಿಬಿಸಿ ದೃಶ್ಯಾವಳಿಗಳು ಹರಿದಾಡುತ್ತಿವೆ. ಇದೇ ಸಂದರ್ಭದಲ್ಲಿ ಯುವತಿಯ ಪರವಾಗಿ ದೂರು ಕೊಟ್ಟಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಸಿಡಿಯನ್ನು ಸಂತ್ರಸ್ತ ಯುವತಿ ಹಾಗು ಅವರ ಕುಟುಂಬಸ್ಥರು ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.