ರಮೇಶ್ ನಿವಾಸದಲ್ಲಿಯೂ ಶೋಧಕ್ಕೆ ಐಟಿ ವಾರೆಂಟ್ ಪಡೆದಿತ್ತು
ಬೆಂಗಳೂರು, ಅಕ್ಟೋಬರ್ 16 : ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಆಪ್ತ ಸಹಾಯಕ ರಮೇಶ್ ನಿಗೂಢ ಸಾವಿನಿಂದಾಗಿ ಐಟಿ ತನಿಖೆ ವಿಳಂಬವಾಗಿದೆ. ರಾಮನಗರದ ಮೆಳೇಹಳ್ಳಿಯಲ್ಲಿ ಮೂಲದ ರಮೇಶ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿತ್ತು.
ರಮೇಶ್ ನಿಗೂಢ ಸಾವಿನ ಬಳಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತನಿಖೆ ವಿಳಂಬವಾಗಿದೆ. ಡಾ. ಜಿ. ಪರಮೇಶ್ವರ ಮಂಗಳವಾರ ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಸುಮಾರು 1 ಗಂಟೆ ಅವರ ವಿಚಾರಣೆ ನಡೆಸಲಾಗಿದೆ.
ರಮೇಶ್ ಅಸಹಜ ಸಾವು; ಕೊನೆ ಎರಡು ಕರೆ, ಡೈರಿಯಲ್ಲಿ ಏನಿದೆ?
ಪರಮೇಶ್ವರ ನಿವಾಸ, ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ರಮೇಶ್ ಸಾವಿನ ಬಳಿಕ ಶೋಧ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ. ವೈದ್ಯಕೀಯ ಸೀಟುಗಳ ಅಕ್ರಮ ಮಾರಾಟದ ಬಗ್ಗೆ ಜಾರಿ ನಿರ್ದೇಶನಾಲಯಕ್ಕೂ ಐಟಿ ಮಾಹಿತಿ ನೀಡಿದೆ.
ರಮೇಶ್ ಸಾವು ಅಸಹಜ, ಮೊಬೈಲ್ ಕರೆ ಜಾಡು ಹಿಡಿದ ಪೊಲೀಸರು
ಐಟಿ ಅಧಿಕಾರಿಗಳು ರಮೇಶ್ ಮನೆ ಶೋಧ ನಡೆಸಲು ವಾರೆಂಟ್ ಪಡೆದಿದ್ದರು. ಆದರೆ, ಅವರ ಮನೆಯಲ್ಲಿ ಶೋಧ ನಡೆಸಿಲ್ಲ ಎಂದು ಇಲಾಖೆ ಹೇಳುತ್ತಿದೆ. ಐಟಿ ಅಧಿಕಾರಿಗಳು ರಮೇಶ್ ಮನೆಗೆ ತೆರಳಿರುವ ಸಿಸಿಟಿವಿ ದೃಶ್ಯಾವಳಿಗಳು ಖಾಸಗಿ ಚಾನೆಲ್ಗಳಲ್ಲಿ ಪ್ರಸಾರವಾಗುತ್ತಿದೆ.
ರಮೇಶ್ ಆತ್ಮಹತ್ಯೆ ಪ್ರಕರಣ; ಇಬ್ಬರು ಎಸಿಪಿಗಳಿಂದ ತನಿಖೆ
ರಮೇಶ್ ಒತ್ತಡದಲ್ಲಿ ಇರಲಿಲ್ಲ
ಡಾ. ಜಿ. ಪರಮೇಶ್ವರ ನಿವಾಸದ ಮೇಲೆ ಅಕ್ಟೋಬರ್ 10ರಂದು ಐಟಿ ದಾಳಿ ಆಗಿತ್ತು. ಅಧಿಕಾರಿಗಳು ಮನೆಯಲ್ಲಿ ಶೋಧ ಕಾರ್ಯ ನಡೆಸುವಾಗ ರಮೇಶ್ ಅಲ್ಲೇ ಇದ್ದರು. ಅಕ್ಟೋಬರ್ 12ರಂದು ಶೋಧ ಕಾರ್ಯ ಮುಗಿಯುವಾಗಲೂ ರಮೇಶ್ ಹಾಜರಿದ್ದರು. ಅಧಿಕಾರಿಗಳ ಜೊತೆ ಚೆನ್ನಾಗಿ ಮಾತನಾಡಿದ್ದರು. ಅವರು ಒತ್ತಡದಲ್ಲಿ ಇರುವಂತೆ ಕಂಡುಬಂದಿಲ್ಲ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.
ವಿಚಲಿತರಾದ ಅಧಿಕಾರಿಗಳು
ಶನಿವಾರ ರಮೇಶ್ ನಿಗೂಢ ಸಾವಿನ ಸುದ್ದಿ ಬಳಿಕ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ವಿಚಲಿತರಾಗಿದ್ದಾರೆ. ಆದ್ದರಿಂದ, ವೈದ್ಯಕೀಯ ಸೀಟು ಅಕ್ರಮ ಮಾರಾಟದ ಆರೋಪದ ತನಿಖೆಯನ್ನು ಮುಂದುವರೆಸಿಲ್ಲ. ಇನ್ನೂ ಕೆಲವು ಕಡೆ ಶೋಧ ಕಾರ್ಯ ನಡೆಸಲು ವಾರೆಂಟ್ ಪಡೆದಿದ್ದು, ಅದು ಸಹ ಸ್ಥಗಿತವಾಗಿದೆ.
ದಾಖಲೆ ಕೇಳಿದ ಪೊಲೀಸರು
ರಮೇಶ್ ಶವ ಸಿಕ್ಕ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿರುವ ಕೈ ಬರಹ ರಮೇಶ್ ಅವರದ್ದೇ ಎಂಬುದನ್ನು ಪರೀಕ್ಷೆ ಮಾಡಲು ಪೊಲೀಸರು ಕುಟುಂಬಸ್ಥರ ಬಳಿ ದಾಖಲೆ ಕೇಳಿದ್ದಾರೆ. ರಮೇಶ್ ಕೈ ಬರಹವಿರುವ ಡೈರಿ, ಬೇರೆ ಯಾವುದೇ ದಾಖಲೆಗಳನ್ನು ನೀಡಿದರೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗುತ್ತದೆ.
ವಾರೆಂಟ್ ಪಡೆದಿದ್ದ ಐಟಿ
ಡಾ. ಜಿ. ಪರಮೇಶ್ವರ ಆಪ್ತ ಸಹಾಯಕರಾಗಿದ್ದ ರಮೇಶ್ ನಿವಾಸವನ್ನು ಶೋಧಿಸಲು ಐಟಿ ಅಧಿಕಾರಿಗಳು ವಾರೆಂಟ್ ಪಡೆದಿದ್ದರು. ಆದರೆ, ರಮೇಶ್ ಸಾವಿನ ಹಿನ್ನಲೆಯಲ್ಲಿ ಶೋಧ ಸ್ಥಗಿತಗೊಂಡಿದೆ. ರಮೇಶ್ರಿಂದ ಸಣ್ಣ ಹೇಳಿಕೆಯೂ ಪಡೆದಿಲ್ಲ ಎಂದು ಐಟಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಉನ್ನತ ಮಟ್ಟದ ತನಿಖೆ ಆಗಲಿ
"ರಮೇಶ್ ಸಾವಿನ ಕುರಿತು ಇಲ್ಲಸಲ್ಲದ ಕಥೆಗಳು ಹುಟ್ಟಿಕೊಳ್ಳುತ್ತಿವೆ. ಸತ್ಯಾಸತ್ಯತೆ ಹೊರಬರಲು ಉನ್ನತ ಮಟ್ಟದ ತನಿಖೆ ನಡೆಸಬೇಕು. ನಾನೇ ಕೊಲೆ ಮಾಡಿಸಿದ್ದೇನೆ. ರಮೇಶ್ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದೇನೆ ಎಂದು ಪ್ರಚಾರ ಮಾಡಲಾಗುತ್ತಿದೆ. ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು" ಎಂದು ಡಾ. ಜಿ. ಪರಮೇಶ್ವರ ಒತ್ತಾಯಿಸಿದ್ದಾರೆ.