ರಮೇಶ್ ಅಸಹಜ ಸಾವು; ಕೊನೆ ಎರಡು ಕರೆ, ಡೈರಿಯಲ್ಲಿ ಏನಿದೆ?
ಬೆಂಗಳೂರು, ಅಕ್ಟೋಬರ್ 15 : ಡಾ. ಜಿ. ಪರಮೇಶ್ವರ ಆಪ್ತ ಸಹಾಯಕ ರಮೇಶ್ ನಿಗೂಢ ಸಾವಿನ ಕುರಿತು ಪೊಲೀಸರ ತನಿಖೆ ಮುಂದುವರೆದಿದೆ. ರಮೇಶ್ಗೆ ಸೇರಿದ ಡೈರಿ ಮತ್ತು ಅವರ ಕೊನೆಯ ಎರಡು ದೂರವಾಣಿ ಕರೆಗಳ ಬಗ್ಗೆ ಪೊಲೀಸರು ಚುರುಕುಗೊಳಿಸಿದ್ದಾರೆ.
ರಾಮನಗರದ ಮೆಳೇಹಳ್ಳಿಯಲ್ಲಿ ಮೂಲದ ರಮೇಶ್ ಸಾವು ಅಸಹಜ ಎಂದು ಬೆಂಗಳೂರಿನ ಜ್ಞಾನ ಭಾರತಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸಾವಿನ ಕುರಿತು ತನಿಖೆ ಮಾಡಲು ಎರಡು ತಂಡಗಳನ್ನು ರಚನೆ ಮಾಡಲಾಗಿದೆ.
ರಮೇಶ್ ಸಾವು ಅಸಹಜ, ಮೊಬೈಲ್ ಕರೆ ಜಾಡು ಹಿಡಿದ ಪೊಲೀಸರು
ಶನಿವಾರ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ರಮೇಶ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಡಾ. ಜಿ. ಪರಮೇಶ್ವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ರಮೇಶ್ ಸಾವನ್ನಪ್ಪಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.
ರಮೇಶ್ ಆತ್ಮಹತ್ಯೆ ಪ್ರಕರಣ; ಇಬ್ಬರು ಎಸಿಪಿಗಳಿಂದ ತನಿಖೆ
ರಮೇಶ್ ಮನೆಯಲ್ಲಿ ಸಿಕ್ಕಿದೆ ಎನ್ನಲಾದ ಡೈರಿ ಕುತೂಹಲಕ್ಕೆ ಕಾರಣವಾಗಿದೆ. ಪೊಲೀಸರು ಮನೆಯನ್ನು ಪರಿಶೀಲನೆ ನಡೆಸುವಾಗ ಡೈರಿ ವಶಕ್ಕೆ ಪಡೆದಿದ್ದಾರೆ. ರಮೇಶ್ ಕೊನೆಯದಾಗಿ ಇಬ್ಬರಿಗೆ ಕರೆ ಮಾಡಿದ್ದರು. ಅದರಲ್ಲಿ ಒಬ್ಬರು ಖಾಸಗಿ ಮಾಧ್ಯಮದ ವರದಿಗಾರ ಎಂದು ತಿಳಿದುಬಂದಿದೆ.
ಪರಮೇಶ್ವರ್ ಆಪ್ತ ರಮೇಶ್ ಸಾವಿನ ಮುಂಚಿನ ಕ್ಷಣಗಳು ದಾಖಲು
ಮೊಬೈಲ್ ಕರೆಯ ಜಾಡು
ಶನಿವಾರ ಬೆಳಗ್ಗೆ ರಮೇಶ್ ಪರಮೇಶ್ವರ ಕಾರು ಚಾಲಕ ಅನಿಲ್, ಇಬ್ಬರು ಸ್ನೇಹಿತರಿಗೆ ಕರೆ ಮಾಡಿದ್ದರು. ಕೊನೆಯದಾಗ ಖಾಸಗಿ ಸುದ್ದಿವಾಹಿನಿಯ ವರದಿಗಾರನಿಗೆ ಕರೆ ಮಾಡಿದ್ದರು. ಸ್ನೇಹಿತರೊಬ್ಬರು ಪರಮೇಶ್ವರ ಅಂಗರಕ್ಷಕನಿಗೆ ಕರೆ ಮಾಡಿ ರಮೇಶ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ವಿಷಯ ತಿಳಿಸಿದ್ದರು. ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಿಸ್ ಆಗಿ ಕರೆ ಬಂತು
ಶನಿವಾರ ಮುಂಜಾನೆ ತನಕ ಪರಮೇಶ್ವರ ಕಾರು ಚಾಲಕ ಅನಿಲ್ ಮತ್ತು ರಮೇಶ್ ಪರಮೇಶ್ವರ ನಿವಾಸದಲ್ಲಿಯೇ ಇದ್ದರು. ಶನಿವಾರ ಬೆಳಗ್ಗೆ ಅನಿಲ್ಗೆ ರಮೇಶ್ ಕರೆ ಮಾಡಿದ್ದರು. "ಮಿಸ್ ಆಗಿ ಬಂತು" ಎಂದು ಮಾತ್ರ ಹೇಳಿ ಕರೆ ಕಟ್ ಮಾಡಿದ್ದರು. ಆದ್ದರಿಂದ, ಅನಿಲ್ರನ್ನು ಮತ್ತೊಮ್ಮೆ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ರಮೇಶ್ ಡೈರಿಯಲ್ಲಿ ಏನಿದೆ?
ರಮೇಶ್ ಡೈರಿ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದರು. ಅವರ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸುವಾಗ ಡೈರಿ ಸಿಕ್ಕಿದೆ. ವ್ಯವಹಾರ ಮತ್ತು ಕೆಲಸಗಳ ಬಗ್ಗೆ ಡೈರಿಯಲ್ಲಿ ಮಾಹಿತಿ ಇದೆ ಎಂದು ತಿಳಿದುಬಂದಿದೆ. ಪರಮೇಶ್ವರ ಗೃಹ ಸಚಿವರು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಪಾಲ್ಗೊಂಡಿದ್ದ ಕಾರ್ಯಕ್ರಮಗಳು, ಭೇಟಿ ಮಾಡಿದ ವ್ಯಕ್ತಿಗಳ ಬಗ್ಗೆಯೂ ಅದರಲ್ಲಿ ಮಾಹಿತಿ ಇದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಡೆತ್ ನೋಟ್ ಆಧಾರ
ರಮೇಶ್ ಕಾರಿನಲ್ಲಿ ಸಿಕ್ಕ ಡೆತ್ ನೋಟ್ನಲ್ಲಿ "ಐಟಿ ದಾಳಿಯಿಂದ ನಾನು ದಿಗ್ಭ್ರಾಂತನಾಗಿದ್ದೇನೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ಬರೆದಿದ್ದಾರೆ. ಆದ್ದರಿಂದ, ಪೊಲೀಸರು ರಮೇಶ್ ಸಾವಿನ ಪ್ರಕರಣದಲ್ಲಿ ಐಟಿ ಪಾತ್ರದ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ.