ಇದೇನು ರಾವಣ ರಾಜ್ಯನಾ? RSS ಪಥಸಂಚಲನಕ್ಕೆ ಎಚ್ಡಿಕೆ ಫುಲ್ ಗರಂ
Recommended Video
ಬೆಂಗಳೂರು, ಫೆ 17: ರಾಮನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಇತ್ತೀಚೆಗೆ ನಡೆಸಿದ ಪಥಸಂಚಲನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಫುಲ್ ಗರಂ ಆಗಿದ್ದಾರೆ.
"ನನ್ನ ರಾಜಕೀಯ ಕರ್ಮಭೂಮಿ ರಾಮನಗರ, ರಾಮರಾಜ್ಯ ಆಗಬೇಕೇ ಹೊರತು ರಾವಣ ರಾಜ್ಯವಲ್ಲ. ಅದೇನೋ ದೊಣ್ಣೆ ಹಿಡ್ಕೊಂಡು ಓಡಾಡೋಕೆ ಅವರಿಗೆ ಅನುಮತಿ ನೀಡಿದವರು ಯಾರು" ಎಂದು ಕುಮಾರಸ್ವಾಮಿ, ಬಿಎಸ್ವೈ ಸರಕಾರವನ್ನು ಪ್ರಶ್ನಿಸಿದ್ದಾರೆ.
ಪಕ್ಷದ ನಿಯಮ ಮೀರಿದ ಶಾಸಕ ಜಿ.ಟಿ.ದೇವೇಗೌಡ: ಕುಮಾರಸ್ವಾಮಿ ಆಕ್ರೋಶ
"ಪ್ಯಾಂಟ್ ಹಾಕಿಕೊಂಡು, ದೊಣ್ಣೆ ಹಿಡಿದುಕೊಂಡು, ಮುಸ್ಲಿಂ ಬೀದಿಯಲ್ಲಿ ಇವರಿಗೆ ಪಥಸಂಚಲನ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದ್ದು ತಪ್ಪಲ್ಲವೇ" ಎಂದು ಕಿಡಿಕಾರಿದ ಕುಮಾರಸ್ವಾಮಿ, "ದೊಣ್ಣೆ ಮಾರಕಾಸ್ತ್ರವಲ್ಲವೇ" ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ರಾಮನಗರಕ್ಕೂ ಕಲ್ಲಡ್ಕ ಪ್ರಭಾಕರ್ ಭಟ್ ಗೂ ಏನು ಸಂಬಂಧ. ಜಿಲ್ಲೆಗೆ ಅವರ ಕೊಡುಗೆ ಏನು. ಕಪಾಲಿ ಬೆಟ್ಟದ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಲು ಹೊರಟಿದೆ. ಇಲ್ಲಿ, ಅದೆಲ್ಲಾ ನಡೆಯೋಲ್ಲ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಫೆಬ್ರವರಿ ಒಂಬತ್ತರಂದು ರಾಮನಗರದಲ್ಲಿ ಆರ್ ಎಸ್ ಎಸ್ ಪಥಸಂಚಲನ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಅದ್ದೂರಿಯಾಗಿ ನಡೆದಿತ್ತು. ಕಲ್ಲಡ್ಕ ಪ್ರಭಾಕರ ಭಟ್, ಸಿ.ಪಿ,ಯೋಗೀಶ್ವರ್, ಜಿಲ್ಲಾ ಬಿಜೆಪಿ ಮುಖಂಡ ರುದ್ರೇಶ್, ಇದರಲ್ಲಿ ಭಾಗವಹಿಸಿದ್ದರು.
"ಅವರು ಪಥಸಂಚಲನ ಬೇಕಾದರೂ ಮಾಡಿಕೊಳ್ಳಲಿ, ಏನಾದರೂ ಮಾಡಿಕೊಳ್ಳಲಿ. ಸ್ವಯಂಸೇವಕರಿಗೆ ಬೇಕಾದರೆ ಊಟದ ವ್ಯವಸ್ಥೆಯನ್ನು ನಾನೇ ಮಾಡುತ್ತೇನೆ" ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಹೇಳಿದ್ದರು.
"ನಿಮ್ಮಿಂದ ಊಟ ಹಾಕಿಸಿಕೊಳ್ಳುವ ದರಿದ್ರ ನಮಗೆ ಬಂದಿಲ್ಲ. ಕಾಂಗ್ರೆಸ್ಸಿನಲ್ಲಿರುವ ನಿರ್ಗತಿಕರಿಗೆ ಬೇಕಾದರೆ ಡಿ.ಕೆ.ಶಿವಕುಮಾರ್ ಊಟ ಹಾಕಲಿ" ಎಂದು ಬಿಜೆಪಿ ಮುಖಂಡರು ಇದಕ್ಕೆ ತಿರುಗೇಟು ನೀಡಿದ್ದರು.