ಗೋಣಿ ಚೀಲದಲ್ಲಿ ಬಾಲಕಿ ಶವ, ನಿಧಿಗಾಗಿ ಬಲಿ ನೀಡಿದರೆ?
ಮಾಗಡಿಯ ಹತ್ತು ವರ್ಷದ ಬಾಲಕಿ ಆಯೇಷಾ ಮಾರ್ಚ್ 1ರಂದು ಮನೆಯಿಂದ ಹೊರಹೋದವಳು ವಾಪಸ್ ಬಂದಿರಲಿಲ್ಲ. ಶುಕ್ರವಾರ ಆಕೆಯ ಶವ ಗೋಣಿಚೀಲದಲ್ಲಿ ಪತ್ತೆಯಾಗಿದೆ. ನಿಧಿಯಾಸೆಗಾಗಿ ಬಲಿ ಕೊಡಲಾಗಿದೆ ಎಂಬುದು ಸಂಬಂಧಿಕರ ಆರೋಪ
ರಾಮನಗರ, ಮಾರ್ಚ್ 4: ಗೋಣಿಚೀಲವೊಂದರಲ್ಲಿ ಹಾಕಿದ್ದ ಬಾಲಕಿ ಶವ ಪೊಲೀಸರಿಗೆ ಶುಕ್ರವಾರ ದೊರೆತಿದೆ. ಮಾರ್ಚ್ 1ರಂದು ಮಾಗಡಿಯಲ್ಲಿರುವ ತನ್ನ ತಂದೆ ಅಂಗಡಿಗೆ ಹೋಗಿಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದ ಹತ್ತು ವರ್ಷದ ಬಾಲಕಿ ಆಯೇಷಾ ಶವ ಗೋಣಿಚೀಲದಲ್ಲಿ ದೊರೆತಿದೆ.
ಅಯೇಷಾಳ ತಂದೆ ಮೊಹ್ಮದ್ ನೂರುಲ್ಲಾ ಮಾಗಡಿಯಲಿ ಅಂಗಡಿ ನಡೆಸುತ್ತಾರೆ. ಅಲ್ಲಿಗೆ ತೆರಳುವುದಾಗಿ ಹೇಳಿದ್ದ ಅಯೇಷಾಳನ್ನು ನೆರೆಮನೆಯ ರೆಹಮತ್ ಉಲ್ಲಾ ಖಾನ್ ಕೊನೆ ಬಾರಿಗೆ ನೋಡಿದ್ದು ಸಹ ಮಾರ್ಚ್ 1ರಂದೇ. ಆಕೆ ಅಂದು ಊಟಕ್ಕೆ ಮನೆಗೆ ಮರಳದಿದ್ದಾಗ ಬಾಲಕಿಯ ಸ್ನೇಹಿತೆಯರು-ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದರು. ಆ ನಂತರ ಪೊಲೀಸರಿಗೆ ದೂರು ನೀಡಿದ್ದರು.[ಕೊಳ್ಳೇಗಾಲದ ಮಾಟಳ್ಳಿಯಲ್ಲಿ ಕೇಳುವುದು ಬರೀ ಸಾವಿನ ಸದ್ದು!]
ಬಾಲಕಿಯ ಕತ್ತು ಸೀಳಲಾಗಿದೆ. ಆ ಬಾಲಕಿಯ ಕತ್ತರಿಸಿದ ಕೂದಲು, ನಿಂಬೆಹಣ್ಣು-ಮೊಟ್ಟೆ ಶವ ದೊರೆತ ಬಳಿಯಲ್ಲಿ ಸಿಕ್ಕಿದ್ದು, ಪೂಜೆ ಮಾಡಿದ ಕುರುಹು ಇದೆ. ಆ ಬಾಲಕಿ ತನ್ನ ಸಹೋದರನ ಟೀ ಷರ್ಟ್ ಧರಿಸಿದ್ದಳು. ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ ಎಂದು ತನಿಖಾಧಿಕಾರಿ ಮಾಹಿತಿ ನೀಡಿದ್ದರು.
ನಮ್ಮ ಹುಡುಗಿಯನ್ನು ನಿಧಿಯಾಸೆಗೆ ಮಾಡುವ ವಾಮಾಚಾರಕ್ಕೆ ಬಲಿ ನೀಡಲಾಗಿದೆ ಎಂದು ಬಾಲಕಿಯ ಸಂಬಂಧಿ ಆರೋಪಿಸಿದ್ದಾರೆ. ನಾವು ದೂರು ನೀಡಿದ ತಕ್ಷಣ ಪೊಲೀಸರು ಹುಡುಕಾಟ ಆರಂಭಿಸಿದ್ದರೆ ಆಕೆ ಸಾಯುತ್ತಿರಲಿಲ್ಲ ಎಂದು ಕೂಡ ಹೇಳಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.[ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮೇಲೆ ವಾಮಾಚಾರ?]
ಹಳೇ ಮಸೀದಿ ಪ್ರದೇಶದ ನೂರುಲ್ಲಾ ಹಾಗೂ ಜಮೀಲಾ ಬಾನು ದಂಪತಿಯ ಕಿರಿಯ ಪುತ್ರಿ ಆಯೇಷಾ ಮಾಗಡಿ ಪಟ್ಟಣದ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಳು.