ಪುತ್ರಿ ಮೇಲೆ FIR: ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಹೇಳಿಕೆ!
ಬೆಂಗಳೂರು, ಜ. 24: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ರಾಷ್ಟ್ರಾದ್ಯಂತ ರೈತರು ಬೀದಿಗಳಿಸಿದ್ದಾರೆ. ಬಿಜೆಪಿ ಮಿತ್ರ ಪಕ್ಷಗಳನ್ನು ಹೊರತುಪಡಿಸಿ ರಾಜಕೀಯ ಪಕ್ಷಗಳು ರೈತರಿಗೆ ಬೆಂಬಲ ಕೊಟ್ಟಿವೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿಯೂ ಕೂಡ ಕೇಂದ್ರ ಸರ್ಕಾರದ ವಿರುದ್ಧ ರೈತರು ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ರೈತರಿಗೆ ಬೆಂಬಲ ಕೊಟ್ಟು ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜಭವನಕ್ಕೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಪ್ರತಿಭಟನೆ ಸಂದರ್ಭದಲ್ಲಿ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ಬಂದೊಬಸ್ತ್ ಕರ್ತವ್ಯದಲ್ಲಿದ್ದ ಗೃಹ ರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಅದೇ ವಿಚಾರವೀಗ ವಿವಾದಕ್ಕೀಡಾಗಿದ್ದು ಶಾಸಕಿ ಸೌಮ್ಯ ರೆಡ್ಡಿ ಅವರ ಮೇಲೆ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಎಫ್ಐಆರ್ಗೆ ಸಂಬಂಧಿಸಿದಂತೆ ಶಾಸಕಿ ಸೌಮ್ಯಾ ರೆಡ್ಡಿ ಅವರ ತಂದೆ ಹಾಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.
ಪುತ್ರಿ ಮೇಲೆ ಎಫ್ಐಆರ್
ಶಾಸಕಿ ಸೌಮ್ಯಾ ರೆಡ್ಡಿ ಅವರ ವಿರುದ್ಧ ಎಫ್ಐಆರ್ ದಾಖಲಾದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿರುವ ಶಾಸಕ ರಾಮಲಿಂಗಾರೆಡ್ಡಿ ಅವರು, ಸೌಮ್ಯಾ ರೆಡ್ಡಿ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲಿ. ಆದರೆ ನಮ್ಮ ಶಾಸಕರಾದ ಅಂಜಲಿ ನಿಂಬಾಳ್ಕರ್ ಹಾಗೂ ಸೌಮ್ಯಾ ರೆಡ್ಡಿ ಕೆಳಗೆ ಬಿದ್ದಿದ್ದು ಹೇಗೆ? ಅದರ ಬಗ್ಗೆ ಸರ್ಕಾರ ಮೊದಲು ಹೇಳಿಕೆ ಕೊಡಲಿ ಎಂದು ಸವಾಲು ಹಾಕಿದ್ದಾರೆ.
ಸರ್ಕಾರ ಸ್ಪಷ್ಟನೆ ಕೊಡಲಿ
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಶಾಸಕರಾದ ಅಂಜಲಿ ನಿಂಬಾಳ್ಕರ್ ಹಾಗೂ ಸೌಮ್ಯಾ ರೆಡ್ಡಿ ಅವರು ಕೆಳಗೆ ಬಿದ್ದಿದ್ದರ ಬಗ್ಗೆ ಸ್ಪಷ್ಟನೆ ಕೊಡಲಿ. ಹೀಗೆ ಕೆಳಗೆ ಬಿದ್ದಿದ್ದರಿಂದ ಅಂಜಲಿ ನಿಂಬಾಳ್ಕರ್ ಅವರು ಅಸ್ವಸ್ಥರಾಗಿದ್ದರು. ಅವರಿಬ್ಬರೂ ಶಾಸಕರು, ಅವರನ್ನ ಕೆಳಗೆ ಬೀಳಿಸಿದ್ದು ಯಾರು? ಇವತ್ತು ರಾಜ್ಯ ಕೇಸರಿ ಮಯವಾಗುತ್ತಿದೆ. ಕಾಂಗ್ರೆಸ್ ಪಕ್ಷದವರು ಕೊಡುವ ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂಬ ಗಂಭೀರ ಆರೋಪವನ್ನು ರಾಮಲಿಂಗಾರೆಡ್ಡಿ ಅವರು ಮಾಡಿದ್ದಾರೆ.
ನಮ್ಮ ದೂರು ದಾಖಲಿಸುತ್ತಿಲ್ಲ
ನಾವು ದೂರು ಕೊಟ್ಟರೆ ದಾಖಲಿಸಿಕೊಳ್ಳಬೇಡಿ ಎಂದು ಬಿಜೆಪಿ ನಾಯಕರು ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದಾರಂತೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೂ ಈ ಬಗ್ಗೆ ಹೇಳಿದ್ದರು. ಸರ್ಕಾರ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ. ಇದು ಸರಿಯಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದ್ದರೆ ಹೀಗೆಲ್ಲ ಆಗುವುದಿಲ್ಲ. ನಾವು ಕಾಂಗ್ರೆಸ್ ಪಕ್ಷದವರು ಕೊಡುವ ದೂರುಗಳನ್ನು ಯಾಕೆ ದಾಖಲು ಮಾಡಿಕೊಳ್ಳುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ರಾಮಲಿಂಗಾರೆಡ್ಡಿ ಅವರು ಆಕ್ರೋಶ ವ್ಯಕ್ತಡಿಸಿದ್ದಾರೆ.
Recommended Video
ಘಟನೆಯ ವಿವರ
ಮೊನ್ನೆ ಜ.20ರಂದು ಕೇಂದ್ರದ ಕೃಷಿ ಕಾಯಿದೆಗಳ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ಆಯೋಜಿಸಲಾಗಿತ್ತು. ಸ್ವಾತಂತ್ರ್ಯ ಉದ್ಯಾನದ ಬಳಿ ಸೇರಿದ್ದ ಕಾಂಗ್ರೆಸ್ ಮುಖಂಡರು ರಾಜಭವನ ಕಡೆ ತೆರಳಲು ಯೋಚಿಸಿದ್ದರು. ಈ ವೇಳೆ ಶಾಸಕಿ ಸೌಮ್ಯಾರೆಡ್ಡಿ ಅವರನ್ನು ಪೊಲೀಸರು ಮತ್ತು ಕರ್ತವ್ಯದಲ್ಲಿದ್ದ ಗೃಹರಕ್ಷಕ ಸಿಬ್ಬಂದಿ ತಡೆದಿದ್ದರು. ಈ ವೇಳೆ ಕೋಪಗೊಂಡ ಸೌಮ್ಯಾರೆಡ್ಡಿ, ಗೃಹರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಹೀಗಾಗಿ ಶಾಸಕಿ ಸೌಮ್ಯಾ ರೆಡ್ಡಿ ಅವರ ವಿರುದ್ಧ ಐಪಿಸಿ ಕಲಂ 323, ಉದ್ದೇಶಪೂರ್ವಕವಾಗಿ ಹಲ್ಲೆ, ಕಲಂ 353 ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಆರೋಪದ ಮೇರೆಗೆ ಶುಕ್ರವಾರ ಎಫ್ಐಆರ್ ದಾಖಲಾಗಿದೆ. ಹಲ್ಲೆಗೊಳಗಾಗಿದ್ದ ಗೃಹ ರಕ್ಷಕ ಸಿಬ್ಬಂದಿ ದೂರು ನೀಡಿದ್ದರು.