ಸಿಎಂ ಸಿದ್ದರಾಮಯ್ಯನವರಿಗೆ ರಾಮಚಂದ್ರಾಪುರ ಮಠದ ಓಪನ್ ಲೆಟರ್
ಬೆಂಗಳೂರು, ಅ 10: ಭಾನುವಾರ (ಅ 9) ದಕ್ಷಿಣಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮಚಂದ್ರಾಪುರ ಮಠವನ್ನಾಗಲಿ, ಗೋಕರ್ಣ ದೇವಾಲಯವನ್ನಾಗಲಿ ಸರಕಾರದ ವಶಕ್ಕೆ ತೆಗೆದುಕೊಳ್ಳುವ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ.
ಆದರೆ, ಸರಕಾರದ ನಿಲುವೇನು ಎನ್ನುವುದನ್ನು ಮುಖ್ಯಮಂತ್ರಿಗಳು ತಿಳಿಸದೇ, ಸರಕಾರಿ ವಕೀಲರು ಈ ಬಗ್ಗೆ ಹೇಳಿಕೆ ನೀಡುತ್ತಾರೆಂದು ಅಸಮರ್ಪಕ ಉತ್ತರ ನೀಡಿದ್ದರು. ಸಿಎಂ ಹೇಳಿಕೆಯನ್ನಾಧರಿಸಿ, ರಾಮಚಂದ್ರಾಪುರ ಮಠ 'ನಮ್ಮ ಗೊಂದಲವನ್ನು ನಿವಾರಿಸಿ' ಎಂದು ತೆರೆದ ಪತ್ರವನ್ನು ಸಿಎಂಗೆ ಬರೆದಿದೆ. (ಆಡಳಿತ ಕಲಿಯಲು ರಾಮಚಂದ್ರಾಪುರ ಮಠಕ್ಕೆ ಬನ್ನಿ)
ಮಠದ ಪರವಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿರುವ ಕೆ ಜಿ ಭಟ್ ಬರೆದಿರುವ ಪತ್ರದ ಸಾರಾಂಶ ಇಂತಿದೆ:
"ಶ್ರೀರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕದ ಪ್ರಸ್ತಾಪ ಇಲ್ಲ" ಮತ್ತು "ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನವನ್ನು ಮರಳಿ ಪಡೆಯುವ ಪ್ರಸ್ತಾಪವಿಲ್ಲ" ಎಂದು ತಾವು ಮಾಧ್ಯಮದ ಸಮ್ಮುಖದಲ್ಲಿ ಹೇಳಿರುವುದನ್ನು ಗಮನಿಸಿದೆವು.
ತಮ್ಮ ಹೇಳಿಕೆಯನ್ನು ಸ್ವಾಗತಿಸುತ್ತಾ, ಇವೆರಡೂ ಪ್ರಸ್ತಾಪಗಳು ಸರ್ಕಾರದ ಮುಂದೆ ಇರುವುದನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ. (ರಾಘವೇಶ್ವರ ಶ್ರೀಗಳ ಸಂದರ್ಶನ)
. ಶ್ರೀರಾಮಚಂದ್ರಾಪುರಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ವಿಚಾರದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಶ್ರೀಮಠಕ್ಕೆ ಐದು ಬಾರಿ ನೋಟೀಸುಗಳು ಬಂದಿವೆ.
. ಎರಡು ಬಾರಿ ಮುಖ್ಯ ಕಾರ್ಯದರ್ಶಿಗಳ ಸಮ್ಮುಖದಲ್ಲಿ ವಿಚಾರಣೆಗಳೂ ನಡೆದಿವೆ. ಮುಂದಕ್ಕೆ ಓದಿ..
ಕಾವೇರಿ ಕಾವಿನ ಮಧ್ಯೆ
ಈ ಪ್ರಕರಣದಲ್ಲಿ ಶ್ರೀಮಠಕ್ಕೆ ಪ್ರತಿಕೂಲವಾದ ಪ್ರಾಥಮಿಕ ಆದೇಶವೂ ಹೊರಬಿದ್ದಿದೆ. (ನೊಟೀಸ್ ಮತ್ತು ಆದೇಶದ ಮುಂದೆ 'ಪ್ರತಿಗಳು ನಮ್ಮಲ್ಲಿ ಲಭ್ಯವಿದೆ')
ಸೆಪ್ಟೆಂಬರ್ 30ಕ್ಕೆ ನಿವೃತ್ತರಾಗಲಿರುವ ಮುಖ್ಯಕಾರ್ಯದರ್ಶಿಗಳು, ಕಾವೇರಿಯ ಕಾವಿನ ಮಧ್ಯೆಯೂ ಸೆಪ್ಟೆಂಬರ್ 28ಕ್ಕೆ ವಿಚಾರಣೆಯನ್ನು ನಿಗದಿಪಡಿಸಿ, ಸೆಪ್ಟೆಂಬರ್ 26ಕ್ಕೆ ನೋಟೀಸ್ ನೀಡಿದರೆ ಭಕ್ತರಿಗೆ ಶಂಕೆ ಬಾರದಿರುತ್ತದೆಯೇ?
ಶ್ರೀಮಹಾಬಲೇಶ್ವರ ದೇವಸ್ಥಾನ
ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನದ ಕುರಿತಾಗಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಸುಬ್ರೋ ಕಮಲ್ ಮುಖರ್ಜಿ ಮತ್ತು ನ್ಯಾಯಮೂರ್ತಿ ಬೂದಿಹಾಳ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ.
ಯಾವುದನ್ನು ನಂಬಬೇಕು
ಈ ವೇಳೆಯಲ್ಲಿ ರಾಜ್ಯಸರ್ಕಾರದ ಮಾನ್ಯ ಅಡ್ವೋಕೇಟ್ ಜನರಲ್ ರವರು ಕರ್ನಾಟಕ ಸರ್ಕಾರಕ್ಕೆ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನವನ್ನು ಹಿಂದೆ ಪಡೆಯುವ ಇರಾದೆಯಿರುವುದಾಗಿ ಉಲ್ಲೇಖಿಸಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿಗಳು "ಅಂತಹ ಪ್ರಸ್ತಾಪವೇ ಇಲ್ಲ" ಎಂದರೆ ಯಾವುದನ್ನು ನಂಬಬೇಕು ಎನ್ನುವ ತಿಳಿಯದ ಸ್ಥಿತಿ ನಮ್ಮದಾಗಿದೆ!
ಮಠದ ಭಕ್ತರ ಪ್ರಶ್ನೆ
ಮಾನ್ಯ ಮುಖ್ಯಮಂತ್ರಿಗಳ ಮತ್ತು ಮಾನ್ಯ ಮುಜರಾಯಿ ಸಚಿವರ ಗಮನಕ್ಕೆ ತಾರದೇ ಮುಖ್ಯ ಕಾರ್ಯದರ್ಶಿಗಳವರು ಮತ್ತು ಅಡ್ವೋಕೇಟ್ ಜನರಲ್ ರವರು ಈ ಬಗೆಯ ಮಹತ್ವದ ಹೆಜ್ಜೆಗಳನ್ನು ತೆಗೆದುಕೊಳ್ಳುವರೇ? ಎಂಬುದೂ ಶ್ರೀಮಠದ ಭಕ್ತರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಮಂಡಿಸಲು ಸಿದ್ದ
ಈ ಮೇಲಿನ ಗೊಂದಲವಲ್ಲದೇ, ಶ್ರೀಗಳಿಗೆ ಮತ್ತು ಶ್ರೀಮಠಕ್ಕೆ ಬೇರೆ ಇಲಾಖೆಗಳಿಂದ ಕ್ಲೇಷ ಉಂಟಾಗುತ್ತಿರುವ ಹಲವಾರು ಸಂಗತಿಗಳಿವೆ. ತಾವು ಬಯಸಿದಲ್ಲಿ ಅವುಗಳನ್ನು ತಮ್ಮ ಮುಂದೆ ಮಂಡಿಸಲು ಸಿದ್ಧರಿದ್ದೇವೆ.
ಮನದ ಭಾರ ಇಳಿಸಿ
ಕೊನೆಯದಾಗಿ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸ್ವಾಗತಿಸುತ್ತಾ, ಹೇಳಿಕೆಯ ಕಾಳಜಿಯು ಮಾನ್ಯ ಮುಖ್ಯ ಕಾರ್ಯದರ್ಶಿಗಳವರು ಮತ್ತು ಮಾನ್ಯ ಅಡ್ವೋಕೇಟ್ ಜನರಲ್ ರ ಮೂಲಕ ಕೃತಿಗಿಳಿದಾಗ ಮಾತ್ರ ಮಠದ ಭಕ್ತರ ಮನದ ಭಾರವು ಇಳಿಯುವುದೆಂಬುದನ್ನು ಹಾಗೂ 30,000 ಜನರ ಉಪವಾಸ-ಮೌನಗಳಿಗೆ ತಾವು ಸ್ಪಂದಿಸಿದಂತಾಗುವುದೆಂಬುದನ್ನೂ ತಮ್ಮ ಗಮನಕ್ಕೆ ತರಬಯಸುತ್ತೇವೆ.