ಅಂದು ರಥಯಾತ್ರೆ, ಚುನಾವಣಾ ಹೊಸ್ತಿಲಲ್ಲಿ ಇಂದು RSS ರಾಮರಾಜ್ಯ ಯಾತ್ರೆ
Recommended Video
ಪಕ್ಷೇತರರಿಗಿಂತಲೂ ಕಮ್ಮಿ ಎರಡು ಸೀಟು ಹೊಂದಿದ್ದ ಬಿಜೆಪಿಗೆ ಲಾಲ್ ಕೃಷ್ಣ ಅಡ್ವಾಣಿಯವರ ರಥಯಾತ್ರೆ ದೇಶದಲ್ಲಿ ಅಧಿಕಾರದ ಬಾಗಿಲನ್ನೇ ತೆರೆಯಲಾರಂಭಿಸಿತು. ಎಲ್ಲೋ ಇದ್ದ ಬಿಜೆಪಿ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಮೇಲ್ಪಂಕ್ತಿಗೆ ಬರಲಾರಂಭಿಸಿತು.
ಕಾಂಗ್ರೆಸ್ ಮುಕ್ತ್ ಭಾರತ್ ಎಂದು ಪ್ರಧಾನಿ ಮೋದಿ, ಅಮಿತ್ ಶಾ ಆದಿಯಾಗಿ ಬಿಜೆಪಿ ಮುಖಂಡರು ಇಂದು ಏನು ಉದ್ಘರಿಸುತ್ತಿದ್ದಾರೋ, ಅದಕ್ಕೆ ಮೂಲ ಬೇರು ಅಡ್ವಾಣಿ ರಥಯಾತ್ರೆ ಅನ್ನುವುದನ್ನು ಯಾರೂ ಮರೆತಿರಲಾರರು, ಮರೆಯಲೂ ಬಾರದು..
ವಿಚಾರಕ್ಕೆ ಬರುವುದಾದರೆ, ಬಿಜೆಪಿಯ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಬೆಂಬಲದೊಂದಿಗೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು 39 ದಿನಗಳ 'ರಾಮರಾಜ್ಯ ರಥಯಾತ್ರೆ' ಯನ್ನು ಆರಂಭಿಸಲು ರಾಮದಾಸ ಸೊಸೈಟಿ ಸಜ್ಜಾಗಿದೆ.
ಉತ್ತರಪ್ರದೇಶದ ಕರಸೇವಕಪುರಂ (ಅಯೋಧ್ಯ) ನಿಂದ ಆರಂಭವಾಗಲಿರುವ ಈ ರಥಯಾತ್ರೆಗೆ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಚಾಲನೆ ನೀಡಲಿದ್ದು, ತಮಿಳುನಾಡಿನ ರಾಮೇಶ್ವರಂನಲ್ಲಿ ಯಾತ್ರೆ ಸಂಪನ್ನಗೊಳ್ಳಲಿದೆ. ಮಹಾರಾಷ್ಟ್ರದ ಶ್ರೀರಾಮದಾಸ ಯುನಿವರ್ಸಲ್ ಸೊಸೈಟಿ ಈ ಯತ್ರೆ ಆಯೋಜಿಸಿದ್ದು, RSS , ವಿಎಚ್ಪಿ ಮತ್ತು ಬಿಜೆಪಿಯ ಮುಖಂಡರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಮಾಹಿತಿಯಿದೆ.
ಸರಕಾರದ ಸುಪರ್ದಿಗಿಲ್ಲ ಮಠ ಮಾನ್ಯ, ನಿರ್ಧಾರ ಕೈ ಬಿಟ್ಟ ಸಿದ್ದರಾಮಯ್ಯ
ಹಿಂದುತ್ವದ ವಿಚಾರದಲ್ಲೇ ಚುನಾವಣೆ ಎದುರಿಸಬೇಕು ಎನ್ನುವ ಬಿಜೆಪಿ ವರಿಷ್ಟರ ಸ್ಪಷ್ಟ ಫರ್ಮಾನು ಇದೆ ಸುದ್ದಿಯ ನಡುವೆ, ಈ ಯಾತ್ರೆ, ಕರ್ನಾಟಕದಲ್ಲೂ ಹಾದುಹೋಗಲಿದ್ದು, ಬಿಜೆಪಿಯವರು ಇದರ ಲಾಭವನ್ನು ಯಾವರೀತಿ ಪಡೆದುಕೊಳ್ಳಲಿದ್ದಾರೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ. ಮುಂದೆ ಓದಿ
ಯಾವ ದಿನಾಂಕದಂದು ರಥಯಾತ್ರೆ ಸಾಗಲಿದೆ ಎನ್ನುವ ಮಾಹಿತಿಯಿಲ್ಲ
25ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರಾಮರಥ ಮತ್ತು ಈ ಯಾತ್ರೆ, ವಾರಣಾಸಿ, ಪ್ರಯಾಗ, ಚಿತ್ರಕೂಟ, ಉಜ್ಜೈನಿ, ನಾಸಿಕ್, ಬದ್ಲಾಪುರ, ಬೆಂಗಳೂರು ಮೂಲಕ ಸಾಗಿ ರಾಮೇಶ್ವರಂನಲ್ಲಿ ಕೊನೆಗೊಳ್ಳಲಿದೆ. ಯಾವ ನಗರದಲ್ಲಿ, ಯಾವ ದಿನಾಂಕದಂದು ರಥಯಾತ್ರೆ ಸಾಗಲಿದೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.
ಬಿಜೆಪಿ ಮುಖಂಡರು ಪೂರ್ಣಕುಂಭ ಸ್ವಾಗತ ಕೋರುವುದು ದಟ್ಟ
ಹಿಂದೂ ಮಠಗಳನ್ನು ಮುಜರಾಯಿ ಸುಪರ್ದಿಗೆ ತರಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು, ನಂತರ ತೀವ್ರ ವಿರೋಧದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಸರಕಾರ ಅದನ್ನು ಕೈಬಿಟ್ಟಿದೆ. ಆದರೆ ಈ ವಿಷಯವನ್ನು ಬಿಜೆಪಿ ಕೈಬಿಡುವ ಸಾಧ್ಯತೆ ಮಾತ್ರ ಕಮ್ಮಿ. ಹಾಗಾಗಿ, ರಾಮರಾಜ್ಯ ರಥಯಾತ್ರೆಗೆ ಕರ್ನಾಟಕ ಬಿಜೆಪಿ ಮುಖಂಡರು ಪೂರ್ಣಕುಂಭ ಸ್ವಾಗತ ಕೋರುವುದು ದಟ್ಟವಾಗಿದೆ.
ಮಾ.25ರ ರಾಮನವಮಿಯಂದು ಯಾತ್ರೆ ಸಂಪನ್ನ
ಮಹಾಶಿವರಾತ್ರಿಯ ಶುಭದಿನವಾದ ಫೆ.13ರಂದು ಈ ಯಾತ್ರೆ ಆರಂಭವಾಗಲಿದ್ದು, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯದಲ್ಲಿ ಸಾಗಲಿದೆ. ಫೆ 13ರಿಂದ ಮಾ.25ರ (ರಾಮನವಮಿ) ವರೆಗೆ ಈ ಯಾತ್ರೆ ಸಾಗಲಿದ್ದು, ಸುಮಾರು ನಲವತ್ತು ಕಡೆ ಸಾರ್ವಜನಿಕ ಸಭೆ ನಡೆಸಲು ನಿರ್ಧರಿಸಲಾಗಿದೆ.
ಸಾರ್ವತ್ರಿಕ ಚುನಾವಣೆಯ ವೇಳೆ ಬಿಜೆಪಿಗೆ ಅಯೋಧ್ಯ ವಿಷಯ ಅತ್ಯಂತ ನಿರ್ಣಾಯಕ
ಮುಂಬರುವ ಕರ್ನಾಟಕ ಚುನಾವಣೆ, ಇದಾದ ನಂತರ ಹಲವು ರಾಜ್ಯಗಳ ಅಸೆಂಬ್ಲಿ ಚುನಾವಣೆ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಅಯೋಧ್ಯ ವಿಷಯ ಅತ್ಯಂತ ನಿರ್ಣಾಯಕವಾಗಿರುವುದರಿಂದ, ಬಿಜೆಪಿ 'ರಾಮರಾಜ್ಯ ಯಾತ್ರೆ'ಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಸಾಧ್ಯತೆ ಹೆಚ್ಚು.
ಆರು ರಾಜ್ಯಗಳ ಪೊಲೀಸ್ ವರಿಷ್ಠರಿಗೆ ಕೇಂದ್ರ ಗೃಹ ಇಲಾಖೆ ಪತ್ರ
ಯಾತ್ರೆಯ ವೇಳೆ ಯಾವುದೇ ಗೊಂದಲ ಮತು ಕಾನೂನು ಸುವ್ಯವಸ್ಥೆಗೆ ತೊಂದರೆ ಬರದಂತೆ ನೋಡಿಕೊಳ್ಳಲು ಆರು ರಾಜ್ಯಗಳ ಪೊಲೀಸ್ ವರಿಷ್ಠರಿಗೆ ಕೇಂದ್ರ ಗೃಹ ಇಲಾಖೆ ಪತ್ರ ಬರೆದಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಅಯೋಧ್ಯೆ ವಿಚಾರಣೆ ಆರಂಭವಾದ ಮರುದಿನವೇ ಈ ಯಾತ್ರೆಯ ಬಗ್ಗೆ ಪ್ರಕಟಣೆ ಹೊರಬಿದ್ದಿದೆ.
ರಥಯಾತ್ರೆಗೆ ಯೋಗಿ ಆದಿತ್ಯನಾಥ್ ಚಾಲನೆ
ಫೆಬ್ರವರಿ ಹದಿಮೂರರಂದು ಸಂತ ಸಮ್ಮೇಳನ ನಡೆಯಲಿದೆ,ಇದಾದ ನಂತರ ರಥಯಾತ್ರೆಗೆ ಯೋಗಿ ಆದಿತ್ಯನಾಥ್ ಚಾಲನೆ ನೀಡಲಿದ್ದಾರೆ. RSS ಸಂಘಟನೆಯ ಸಹಸಂಘಟನೆಗಳಾದ ವಿಶ್ವಹಿಂದೂ ಪರಿಷತ್ ಮತ್ತು ಮುಸ್ಲಿಂ ರಾಷ್ಟ್ರೀಯ ಮಂಚ್, ಯಾತ್ರೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.