ರಾಮ ಮಂದಿರ ನಿರ್ಮಾಣ: ಭಕ್ತರಲ್ಲಿ ಪೇಜಾವರ ಶ್ರೀಗಳು ಮಾಡಿದ ಮನವಿ
ಹಾಸನ, ಮಂಗಳೂರು, ಫೆ 20: ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಭಕ್ತಾದಿಗಳ ಧನ ಸಹಾಯದ ಜೊತೆ, ಸಾತ್ವಿಕ ಬೆಂಬಲವೂ ಬೇಕಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದರು.
ಹಾಸನದ ರಾಘವೇಂದ್ರಸ್ವಾಮಿ ಮಠಕ್ಕೆ ಭೇಟಿ ನೀಡಿ ಮಾತನಾಡುತ್ತಿದ್ದ ಶ್ರೀಗಳು, "ರಾಮ ಮಂದಿರ ನಿರ್ಮಾಣ ಸಂಬಂಧ ಮೊದಲ ಸಭೆ ನಡೆದಿದೆ. ಅಯೋಧ್ಯೆಯ ಸ್ಟೇಟ್ ಬ್ಯಾಂಕ್ ನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗುವುದು" ಎಂದು ಪೇಜಾವರ ಶ್ರೀಗಳು ಹೇಳಿದರು.
ಪೇಜಾವರ ಮಠದಿಂದ ರಾಮಮಂದಿರ ನಿರ್ಮಾಣಕ್ಕೆ 5 ಲಕ್ಷ ಆರಂಭಿಕ ದೇಣಿಗೆ
"ನಮ್ಮ ಗುರುಗಳ ಹೆಸರಿನಲ್ಲಿ ಮೊದಲ ದೇಣಿಗೆಯಾಗಿ ಐದು ಲಕ್ಷ ರೂಪಾಯಿಯನ್ನು ನೀಡಲಾಗಿದೆ. ಭಕ್ತಾದಿಗಳು ಈ ಧಾರ್ಮಿಕ ಕೆಲಸಕ್ಕೆ ಅವರವರ ಶಕ್ತ್ಯಾನುಸಾರ ದೇಣಿಗೆಯನ್ನು ನೀಡಬಹುದು. ಮುಂದಿನ ದಿನಗಳಲ್ಲಿ ಈ ಬಗ್ಗೆ ಸವಿವರವಾಗಿ ವಿವರಣೆಯನ್ನು ನೀಡಲಾಗುವುದು" ಎಂದು ವಿಶ್ವಪ್ರಸನ್ನ ಶ್ರೀಗಳು ತಿಳಿಸಿದರು.
ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಮೊದಲ ಸಭೆ, ದೆಹಲಿಯಲ್ಲಿ, ಬುಧವಾರ (ಫೆ 19) ನಡೆದಿತ್ತು. ಟ್ರಸ್ಟಿನ ಸದಸ್ಯರಲ್ಲಿ ಒಬ್ಬರನ್ನಾಗಿ ವಿಶ್ವಪ್ರಸನ್ನ ತೀರ್ಥರನ್ನು ಕೇಂದ್ರ ಸರಕಾರ ನೇಮಿಸಿತ್ತು. ಮಹಾಂತ ನೃತ್ಯ ಗೋಪಾಲದಾಸ ಟ್ರಸ್ಟಿನ ಅಧ್ಯಕ್ಷರಾಗಿ, ಚಂಪತ್ ರೈ, ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ರಾಮ ಮಂದಿರ ಟ್ರಸ್ಟ್ ಸದಸ್ಯರಿಂದ ಪ್ರಧಾನಿ ಮೋದಿ ಭೇಟಿ
ಮಂಗಳೂರು ವರದಿ: ಮಧ್ವಾಚಾರ್ಯರು ಸ್ಥಾಪಿಸಿದ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಮೂಲ ಮಠ, ದಕ್ಷಿಣಕನ್ನಡ ಜಿಲ್ಲೆಯ ಪಡೀಲು ಮತ್ತು ತೊಕೂರು ನಡುವೆ ನಿರ್ಮಾಣವಾಗಲಿರುವ ರೈಲ್ವೆ ನಿಲ್ದಾಣದ ಸಮೀಪದಲ್ಲಿದೆ.
ಸದ್ರಿ ರೈಲ್ವೇ ನಿಲ್ದಾಣಕ್ಕೆ 'ಪೇಜಾವರ ರೈಲ್ವೆ ನಿಲ್ದಾಣ' ಎಂದು ನಾಮಕರಣ ಮಾಡುವಂತೆ, ಭಾರತ ಸರಕಾರ, ರೈಲ್ವೆ ಇಲಾಖೆ ಮತ್ತು ರಾಜ್ಯ ಸರಕಾರಕ್ಕೆ ಒತ್ತಡ ತರುವಂತೆ, ಪೇಜಾವರ ಮಾಗಣಿಯ ಹತ್ತು ಸಮಸ್ತರ ಪರವಾಗಿ, ವಿಶ್ವಪ್ರಸನ್ನ ತೀರ್ಥರಿಗೆ ಮನವಿ ಸಲ್ಲಿಸಲಾಗಿದೆ.