Video: ಕನ್ನಡದಲ್ಲಿ ರಾಜ್ಯಸಭೆ ಸದಸ್ಯರಾಗಿ ಜಗ್ಗೇಶ್ ಪ್ರಮಾಣ ವಚನ
ನವದೆಹಲಿ, ಜುಲೈ 8: ರಾಜ್ಯಸಭೆ ಸದಸ್ಯರಾಗಿ ಕನ್ನಡ ಚಿತ್ರನಟ ಜಗ್ಗೇಶ್ ಪ್ರಮಾಣವಚನ ಸ್ವೀಕರಿಸಿದರು. ರಾಘವೇಂದ್ರ ಸ್ವಾಮಿ ದೇವರ ಹೆಸರಿನಲ್ಲಿ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸುವ ಮೂಲಕ ಜಗ್ಗೇಶ್ ಗಮನ ಸೆಳೆದರು. ಮೇಲ್ಮನೆಯಲ್ಲಿ ಜಗ್ಗೇಶ್ ಪ್ರಮಾಣವಚನ ಸ್ವೀಕಾರದ ಪರಿ ಹೇಗಿತ್ತು ಎಂಬುದನ್ನು ಈ ವರದಿಯಲ್ಲಿ ತಿಳಿಯಿರಿ.
Recommended Video
"ಜಗ್ಗೇಶ್ ಎಂಬ ಹೆಸರಿನವನಾದ ನಾನು, ರಾಜ್ಯಸಭೆಯ ಸದಸ್ಯನಾಗಿ ಚುನಾಯಿತನಾದವನಾಗಿ ಕಾನೂನು ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನಕ್ಕೆ ಸತ್ಯ, ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆ ಎಂದು ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು ಮತ್ತು ನಾನು ಈಗ ಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆ ಎಂದು ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ" ಎಂದು ರಾಜ್ಯಸಭೆ ಸದಸ್ಯ ಜಗ್ಗೇಶ್ ಹೇಳಿದರು.
Explainer: ರಾಜ್ಯಸಭೆ ಚುನಾವಣೆ ಹೇಗಾಯ್ತು, ಫಲಿತಾಂಶ ಏನಾಯ್ತು?
ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ವಿಡಿಯೋವನ್ನು ನಟ ಹಾಗೂ ಮೇಲ್ಮನೆ ಸದಸ್ಯ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. "ರಾಜ್ಯಸಭೆಯಲ್ಲಿ ಶ್ರದ್ಧೆಯಿಂದ ಪ್ರಮಾಣ ವಚನ ಸಿರಿಗನ್ನಡದಲ್ಲಿ ರಾಯರ ಹೆಸರಲ್ಲಿ ಸ್ವೀಕರಿಸಿದ ನನ್ನ ಬದುಕಿನ ಶ್ರೇಷ್ಠಕ್ಷಣ," ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
ರಾಜ್ಯಸಭೆಯಲ್ಲಿ ಶ್ರದ್ಧೆಯಿಂದ
— ನವರಸನಾಯಕ ಜಗ್ಗೇಶ್ (@Jaggesh2) July 8, 2022
ಪ್ರಮಾಣವಚನ ಸಿರಿಗನ್ನಡದಲ್ಲಿ
ರಾಯರ ಹೆಸರಲ್ಲಿ ಸ್ವೀಕರಿಸಿದ ನನ್ನ ಬದುಕಿನ ಶ್ರೇಷ್ಠಕ್ಷಣ...
ಹೃದಯಪೂರ್ವಕ ಧನ್ಯವಾದ @narendramodi@BJP4Karnataka @BSBommai @blsanthosh @nalinkateel @arunbpbjp ರವರಿಗೆ🙏 pic.twitter.com/CCppTvZrmD
ಜೂನ್ ತಿಂಗಳಿನಲ್ಲಿ ನಡೆದಿದ್ದ ಮೇಲ್ಮನೆ ಚುನಾವಣೆ: ಕಳೆದ ಜೂನ್ 10ರಂದು ಭಾರತದ 15 ರಾಜ್ಯಗಳ 57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅದೇ ದಿನ ಫಲಿತಾಂಶ ಹೊರ ಬಿದ್ದಿತು. ಮತದಾನಕ್ಕೂ ಪೂರ್ವದಲ್ಲಿಯೇ 11 ರಾಜ್ಯಗಳ 41 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿತ್ತು. ಇದರ ಹೊರತಾಗಿ ಬಾಕಿ ಉಳಿದ 4 ರಾಜ್ಯಗಳ 16 ಸದಸ್ಯರ ಸ್ಥಾನಗಳಿಗೆ ಚುನಾವಣೆಯನ್ನು ನಡೆಸಲಾಗಿತ್ತು.
ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆ: ಕರ್ನಾಟಕದಲ್ಲಿ ಬಿಜೆಪಿ ಮೂರು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷ ಮತ್ತೊಮ್ಮೆ ಹಿನ್ನಡೆ ಅನುಭವಿಸಿದೆ.
ನಾಲ್ಕು ಸ್ಥಾನಗಳ ಪೈಕಿ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಮತ್ತು ಲೆಹರ್ ಸಿಂಗ್ ಸಿರೋಯಾ ಮೂರು ಸ್ಥಾನಗಳನ್ನು ಪಡೆದುಕೊಂಡರೆ, ಕಾಂಗ್ರೆಸ್ನ ಜೈರಾಮ್ ರಮೇಶ್ ಉಳಿದ ಒಂದು ಸ್ಥಾನದಲ್ಲಿ ಗೆಲುವಿನ ನಗೆ ಬೀರಿದ್ದರು.