ರಾಜ್ಯಸಭೆ ಚುನಾವಣೆ : ಜೆಡಿಎಸ್ನಿಂದ ಶಾಸಕರಿಗೆ ವಿಪ್ ಜಾರಿ
ಬೆಂಗಳೂರು, ಮಾರ್ಚ್ 19 : ರಾಜ್ಯಸಭೆ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಪಕ್ಷದಿಂದ ಅಮಾನತುಗೊಂಡಿರುವ 7 ಶಾಸಕರಿಗೂ ವಿಪ್ ಜಾರಿ ಮಾಡಲಾಗಿದೆ.
ಕರ್ನಾಟಕ ವಿಧಾನಸಭೆಯಿಂದ 4 ಸದಸ್ಯರನ್ನು ರಾಜ್ಯಸಭೆಗೆ ಆರಿಸಲು ಮಾರ್ಚ್ 23ರಂದು ಚುನಾವಣೆ ನಡೆಯಲಿದೆ. ಜೆಡಿಎಸ್ ಪಕ್ಷದಿಂದ ಉದ್ಯಮಿ ಬಿ.ಎಂ.ಫಾರೂಕ್ ಅವರು ಅಭ್ಯರ್ಥಿಯಾಗಿದ್ದಾರೆ.
ರಾಜ್ಯಸಭಾ ಚುನಾವಣೆ: ಇಲ್ಲಿದೆ ಅಭ್ಯರ್ಥಿಗಳ ಅಂತಿಮ ಪಟ್ಟಿ
ಸೋಮವಾರ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರಿಗೆ ವಿಪ್ ಜಾರಿಗೊಳಿಸಿದೆ. ಪಕ್ಷದಿಂದ ಅಮಾನತುಗೊಂಡು ಕಾಂಗ್ರೆಸ್ ಸೇರಲು ಸಿದ್ಧವಾಗಿರುವ 7 ಶಾಸಕರಿಗೂ ಪಕ್ಷ ವಿಪ್ ಜಾರಿ ಮಾಡಿದೆ.
ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ಅವರು ಗೆಲುವು ಸಾಧಿಸಲು ಪಕ್ಷೇತರ ಮತ್ತು ಇತರ ಪಕ್ಷದ ಶಾಸಕರ ಮತಗಳು ಅಗತ್ಯವಾಗಿವೆ. ಚುನಾವಣೆಯ ದಿನ ಎಲ್ಲರೂ ಮತದಾನ ಮಾಡಬೇಕು ಎಂದು ಪಕ್ಷ ವಿಪ್ ಜಾರಿ ಮಾಡಿದೆ.
ರಾಜ್ಯಸಭೆಗೆ ಸದಸ್ಯರ ಆಯ್ಕೆ ಹೇಗೆ? ಮತ ಲೆಕ್ಕಾಚಾರ ಹೇಗಿರುತ್ತೆ?
ಬಿಜೆಪಿ ಸಹ ಒಬ್ಬರು ಅಭ್ಯರ್ಥಿಯನ್ನು ಗೆಲ್ಲಿಸಬಹುದಾಗಿದೆ. ರಾಜೀವ್ ಚಂದ್ರಶೇಖರ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮೂರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಎಲ್.ಹನುಮಂತಯ್ಯ, ಡಾ.ಸೈಯದ್ ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್ ಅವರು ಅಭ್ಯರ್ಥಿಗಳಾಗಿದ್ದಾರೆ. ಕಾಂಗ್ರೆಸ್ ಶಾಸಕರು 3ನೇ ಅಭ್ಯರ್ಥಿಯನ್ನು ಬೆಂಬಲಿಸದಿದ್ದರೆ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಬಹುದಾಗಿದೆ.