ರಾಜ್ಯಸಭೆಗೆ ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್ ಅಭ್ಯರ್ಥಿ
ಬೆಂಗಳೂರು, ಮಾರ್ಚ್ 11: ರಾಜ್ಯಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಭಾನುವಾರ ರಾತ್ರಿ ಬಿಡುಗಡೆ ಮಾಡಿದೆ. ಕೇರಳ ಮೂಲದ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಮಾರ್ಚ್ 23ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ.
ಕಾಂಗ್ರೆಸ್ ಕನ್ನಡಿಗರನ್ನೇ ರಾಜ್ಯಸಭೆಗೆ ಅಭ್ಯರ್ಥಿಗಳಾಗಿ ಆಯ್ಕೆ ಮಾಡಿದೆ. ನಾಸಿರ್ ಹುಸೇನ್, ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್ ಅವರುಗಳನ್ನು ಕಾಂಗ್ರೆಸ್ ಪಕ್ಷವು ರಾಜ್ಯಸಭೆ ಚುನಾವಣಾ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.
ಕಾಂಗ್ರೆಸ್ ಪಕ್ಷದ ಸಂಖ್ಯಾ ಬಲದಿಂದ ಇಬ್ಬರು ಸದಸ್ಯರನ್ನು ಅದು ರಾಜ್ಯಸಭೆಗೆ ಕಳುಹಿಸಬಹುದಾಗಿದೆ. ಬಿಜೆಪಿಯು ಒಬ್ಬರನ್ನು ಕಳಿಸಬಹುದಾಗಿದೆ ಇನ್ನೊಂದು ಸ್ಥಾನಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತಿಕ್ಕಾಟ ನಡೆಯಲಿದೆ. ಜೆಡಿಎಸ್ ನಿಂದ ಈಗಾಗಲೇ ಫಾರುಕ್ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಟ, ಕನ್ನಡಿಗರೇ ಕಣಕ್ಕೆ
ಬಿಜೆಪಿ ಅಭ್ಯರ್ಥಿಯ ಆಯ್ಕೆ ಭಾರಿ ಕುತೂಹಲ ಮೂಡಿಸಿತ್ತು. ಮೊದಲಿಗೆ ರೇಸಿನಲ್ಲಿ ಉದ್ಯಮಿ ರಾಜೀವ್ ಚಂದ್ರಶೇಖರ್ ಮತ್ತು ವಿ.ಆರ್.ಎಲ್ ಮುಖ್ಯಸ್ಥ ವಿಜಯ ಸಂಕೇಶ್ವರ್ ಅವರ ಹೆಸರು ಕೇಳಿ ಬಂದಿತ್ತು.
ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ರಾಜೀವ್ ಚಂದ್ರಶೇಖರ್ ಬದಲಿಗೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ ಅವರನ್ನು ರಾಜ್ಯಸಭೆಗೆ ಕಳಿಸುವಂತೆ ಹೈಕಮಾಂಡ್ ಗೆ ಕೇಳಿಕೊಂಡಿದ್ದರು.
ಜೊತೆಗೆ ರಾಯಚೂರಿನ ಎನ್.ಶಂಕರಪ್ಪ ಅವರ ಹೆಸರೂ ಸಹ ಕೇಳಿ ಬಂದಿತ್ತು. ಆದರೆ, ಅಂತಿಮವಾಗಿ ರಾಜೀವ್ ಚಂದ್ರಶೇಖರ್ ಹೆಸರು ಸೇರಿದಂತೆ ವಿವಿಧ ರಾಜ್ಯಗಳಿಂದ 12 ಅಭ್ಯರ್ಥಿಗಳ ಹೆಸರುಳ್ಳ ಪಟ್ಟಿಯನ್ನು ಜಗತ್ ಪ್ರಕಾಶ್ ನಡ್ಡಾ ಅವರು ಘೋಷಿಸಿದ್ದಾರೆ.