ರಾಜ್ಯಸಭೆ ಚುನಾವಣೆ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೌಪ್ಯ ಮಾತುಕತೆ
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ ಅವರ ಗೆಲುವಿಗೆ ಸಂಬಂಧಿಸಿದಂತೆ ರಣತಂತ್ರ ಎಣೆಯಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುರುವಾರ ಪ್ರತ್ಯೇಕವಾಗಿ ಚರ್ಚೆ ನಡೆಸಿದರು.
ಮಾಜಿ ರಾಜ್ಯಸಭಾ ಸ್ಪೀಕರ್ ಸಹ ಆಗಿದ್ದ, ಕಾಂಗ್ರೆಸ್ ಹಿರಿಯ ನಾಯಕ ಕೆ. ರಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಆಲಿ ಖಾನ್ ಅವರು ಕಾಂಗ್ರೆಸ್ ಎರಡನೇ ಅಭ್ಯರ್ಥಿ ಆಗಿದ್ದಾರೆ. ಮೊದಲ ಅಭ್ಯರ್ಥಿ ಜಯರಾಮ್ ರಮೇಶ್ ಗೆಲುವು ನಿಶ್ಚಿತ. ಆದರೆ, ಸಾಕಷ್ಟು ಪರ ವಿರೋಧಗಳ ಮಧ್ಯೆಯೂ ಮನ್ಸೂರ್ ಖಾನ್ಗೆ ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ಬಿ ಫಾರಂ ವಿತರಿಸಿ ನಾಮಪತ್ರ ಸಲ್ಲಿಸುವಂತೆ ನೋಡಿಕೊಂಡಿತು.
ರಾಜ್ಯಸಭಾ ಚುನಾವಣೆಗೆ ಒಟ್ಟು ಆರು ಅರ್ಜಿಗಳು ಸಲ್ಲಿಕೆಯಾಗಿದ್ದು, ಗುರುವಾರ ನಡೆದ ನಾಮಪತ್ರ ಪರಿಶೀಲನೆಯಲ್ಲಿ ಆರೂ ಸಹ ಮಾನ್ಯವಾಗಿವೆ. ನಾಮಪತ್ರ ಹಿಂಪಡೆಯಲು ಶುಕ್ರವಾರ (ಜೂ.3) ಕೊನೆಯ ದಿನ. ಚುನಾವಣೆ ಅನಿವಾರ್ಯವಾದಲ್ಲಿ ಜೂ. 10ರಂದು ಮತದಾನ ನಡೆಯುತ್ತದೆ.
ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪ್ರಯತ್ನ:
ಸಿದ್ದರಾಮಯ್ಯ ಅವರ ಒತ್ತಾಸೆಯ ಮೇರೆಗೆ ಕಾಂಗ್ರೆಸ್ ಮನ್ಸೂರ್ ಆಲಿ ಖಾನ್ ಅವರಿಗೆ ಬಿ-ಫಾರಂ ನೀಡಲು ನಿರ್ಧರಿಸಿತು. ಹೀಗಾಗಿ ಮನ್ಸೂರ್ ಅವರನ್ನು ಗೆಲ್ಲಿಸುವ ಸಂಬಂಧ ಸಿದ್ದರಾಮಯ್ಯ ಪ್ರಯತ್ನ ಆರಂಭಿಸಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ರಾಜ್ಯ ಚಿಂತನ ಶಿಬಿರದ ನಡುವೆಯೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ರಾಜ್ಯಸಭೆಗೆ ಜೆಡಿಎಸ್ ಅಭ್ಯರ್ಥಿಯಾಗಿರುವ ಕುಪೇಂದ್ರ ರೆಡ್ಡಿ ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕದೆ ತಮ್ಮ ಗೆಲುವಿಗೆ ಸಹಕಾರ ನೀಡುವಂತೆ ಕೋರಿದ್ದರು. ಆದರೂ ಸಹ ಕಾಂಗ್ರೆಸ್ ಎರಡನೆ ಅಭ್ಯರ್ಥಿಯನ್ನು ಘೋಷಿಸಿತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸದ್ಯ ವಿದೇಶ ಪ್ರವಾಸದಲ್ಲಿದ್ದು, ಇತರೆ ನಾಯಕರು ಕಾಂಗ್ರೆಸ್ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಸಿದ್ದರಾಮಯ್ಯ ಮುಂದಿಟ್ಟ ಬೇಡಿಕೆ:
"ಕಳೆದ ಬಾರಿಯೂ ಸಹ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಸಿದೆ ಕುಪೇಂದ್ರ ರೆಡ್ಡಿ ಅವರಿಗೆ ಬೆಂಬಲ ನೀಡಿತ್ತು. ಈಗ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಜೆಡಿಎಸ್ ಸಹಕಾರ ನೀಡಲಿ," ಎಂದು ಸಿದ್ದರಾಮಯ್ಯ ಬೇಡಿಕೆ ಮುಂದಿಟ್ಟಿದ್ದಾರೆ. ಇದಕ್ಕೆ ಜೆಡಿಎಸ್ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡಬೇಕು.
ರಾಜ್ಯಸಭೆ ಚುನಾವಣೆಗೆ ನಾಮಪತ್ರ ಹಿಂತೆಗೆತಕ್ಕೆ ಜೂ.3 ಕೊನೆಯ ದಿನವಾಗಿರುವುದರಿಂದ ಮನ್ಸೂರ್ ಆಲಿ ಖಾನ್ ಅವರನ್ನು ಕಣದಲ್ಲಿ ಉಳಿಸಬೇಕೆ ಅಥವಾ ಸೋತು ಮುಖಭಂಗ ಮಾಡಿಕೊಳ್ಳದೆ ನಾಮಪತ್ರ ವಾಪಸ್ ಪಡೆಯುವುದು ಉತ್ತಮವೇ, ಒಂದು ವೇಳೆ ಉಳಿಸುವುದೇ ಆದರೆ ಗೆಲುವಿಗೆ ಯಾವ ತಂತ್ರಗಳನ್ನು ಅನುಸರಿಸಬೇಕು ಎಂಬಂತಹ ವಿಷಯಗಳನ್ನು ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.